Advertisement

Puttige Matha Paryaya; ಪುರಪ್ರವೇಶ ಮಾಡಿದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು

08:20 PM Jan 08, 2024 | Team Udayavani |

ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪರ್ಯಾಯಪೂರ್ವ ತೀರ್ಥಕ್ಷೇತ್ರಗಳ ಸಂದರ್ಶನ ಮುಗಿಸಿ ಸೋಮವಾರ ಸಂಜೆ (ಜ. 8) ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಜತೆಯಲ್ಲಿ ಉಡುಪಿ ಪುರಪ್ರವೇಶ ಮಾಡಿದ್ದಾರೆ.

Advertisement

ಶ್ರೀಪಾದರು ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದರು. ಊರ ಪರವೂರ ಗಣ್ಯರು ಸ್ವಾಗತಿಸಿದ ನಂತರ ಜೋಡುಕಟ್ಟೆಯಿಂದ ಅಲಂಕೃತ ವಾಹನದಲ್ಲಿ ವೈಭವದ ಮೆರವಣಿಗೆಯಿಂದ ಶ್ರೀ ಕೃಷ್ಣಮಠದವರೆಗೆ ಬರಮಾಡಿಕೊಳ್ಳಲಾಯಿತು. ಕೆ. ಎಂ. ಮಾರ್ಗ, ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆ ಮೂಲಕ ಮೆರವಣಿಗೆ ರಥಬೀದಿ ಪ್ರವೇಶಿಸಿತು.

ಜಾನಪದ, ಸಾಂಸ್ಕೃತಿಕ, ವೇದ ವಾದ್ಯ ಘೋಷ, ವಿವಿಧ ಭಜನ ತಂಡಗಳು, ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರುಗು ಹೆಚ್ಚಿಸಿದವು. ಶ್ರೀಪಾದರು ಅನಂತೇಶ್ವರ, ಚಂದ್ರಮೌಳೀಶ್ವರ, ಶ್ರೀ ಕೃಷ್ಣ ಮುಖ್ಯಪ್ರಾಣ ದರ್ಶನ ಪಡೆದ ಅನಂತರ ಪುತ್ತಿಗೆ ಮಠ ಪ್ರವೇಶಿಸಿದರು.

Advertisement

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್‌. ಎಸ್‌. ಬಲ್ಲಾಳ್‌, ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್‌ ಸೇರಿ ನೂರಾರು ಗಣ್ಯರು ಉಪಸ್ಥಿತರಿದ್ದರು.

ಆಕರ್ಷಕ ದೀಪಾಲಂಕಾರ
ಪರ್ಯಾಯ ಮಹೋತ್ಸವ ಪ್ರಯುಕ್ತ ಪ್ರಥಮ ಬಾರಿಗೆ ಕಾಪು ದಂಡತೀರ್ಥದಿಂದ ಉಡುಪಿ ಕಿನ್ನಿಮೂಲ್ಕಿ ಸ್ವಾಗತ ಗೋಪುರದವರೆಗೆ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಹೊರೆ ಕಾಣಿಕೆ ಮೆರವಣಿಗೆ ಜ. 9ರಿಂದ ಆರಂಭಗೊಳ್ಳಲಿದ್ದು, ವಿವಿಧ ಸಂಘ ಸಂಸ್ಥೆಗಳು, ದೇವಾಲಯಗಳು, ಸಾರ್ವಜನಿಕರಿಂದ ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ದೇವಿಪ್ರಸಾದ ಶೆಟ್ಟಿ ಬೆಳಪು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next