Advertisement

ದೊಡ್ಮನೆ ಹುಡುಗನ ದಿಢೀರ್‌ ನಿರ್ಗಮನ

10:52 PM Oct 29, 2021 | Team Udayavani |

ಕನ್ನಡಿಗರ ಪಾಲಿಗೆ “ಮನೆಮಗ’ನಂತಿದ್ದ ನಟ ಪುನೀತ್‌ ರಾಜ್‌ ಕುಮಾರ್‌ ಈ ಲೋಕದಿಂದ ದಿಢೀರ್‌ ನಿರ್ಗಮಿಸಿದ್ದಾರೆ. ಅವರು ನಮ್ಮೊಂದಿಗಿಲ್ಲ ಎಂಬುದೇ ಈ ಕ್ಷಣದ ಸತ್ಯ. ಆದರೆ ಅದನ್ನು ನಂಬಲು ಚಿತ್ರರಂಗದವರು ಮಾತ್ರವಲ್ಲ, ಜನಸಾಮಾನ್ಯರೂ ತಯಾರಿಲ್ಲ. ಅಷ್ಟರಮಟ್ಟಿಗೆ ಪುನೀತ್‌ ತಮ್ಮ ಆಪ್ತ ನಡವಳಿಕೆಯಿಂದ ಎಲ್ಲರಿಗೂ ಮೋಡಿ ಮಾಡಿದ್ದರು. ಚಿತ್ರನಟನಾಗಿ ಮಾತ್ರವಲ್ಲ, ಮಕ್ಕಳು ಮತ್ತು ಯುವಕರ ಪಾಲಿನ ಅಚ್ಚುಮೆಚ್ಚಿನ ವ್ಯಕ್ತಿ ಯಾಗಿಯೂ ಎಲ್ಲ ವಯೋಮಾನದವರ ಮನಗೆದ್ದಿದ್ದರು. ನಾಡಿನ ಮನೆ-ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದರು.

Advertisement

ಚಿನ್ನದ ಚಮಚವನ್ನೇ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದವರು ಪುನೀತ್‌. ವರನಟ ರಾಜ್‌ ಕುಮಾರ್‌ ಅವರ ಸುಪುತ್ರ ಎಂಬ ಹಿರಿಮೆ ಮತ್ತು ಹಿನ್ನೆಲೆ ಅವರಿಗಿತ್ತು. ಬೆಳ್ಳಿತೆರೆಯಲ್ಲಿ ಆರಂಭಿಸಿದ ಎರಡೂ ಇನ್ನಿಂಗ್ಸ್‌ಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕೈ ಹಿಡಿದಿತ್ತು. ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ನೋಡನೋಡುತ್ತಲೇ ಅಭಿಮಾನಿಗಳ ಹಿಂಡೂ ಬೆಳೆಯಿತು. ಸಾಮಾನ್ಯವಾಗಿ, ಗೆಲುವು ಮತ್ತು ಶ್ರೀಮಂತಿಕೆಯನ್ನೇ ಉಸಿರಾಡಿ ಕೊಂಡು ಬೆಳೆಯುವ ಮಕ್ಕಳು ಉಡಾಫೆಯಿಂದ ಮಾತನಾಡುವುದನ್ನು ಕಲಿತುಬಿಡುತ್ತಾರೆ. ಸಾಮಾನ್ಯ ಜನರಿಂದ ಆದಷ್ಟೂ ದೂರವೇ ಉಳಿಯುತ್ತಾರೆ. ಈ ಮಾತಿಗೆ ಅಪವಾದವಾಗಿದ್ದುದು ಪುನೀತ್‌ ಅವರ ಹೆಚ್ಚುಗಾರಿಕೆ. ಯಾವ ಸಂದರ್ಭದಲ್ಲಿಯೂ ಅವರು ಮೈಮರೆಯಲಿಲ್ಲ.

ತಾನು ‘ಸ್ಟಾರ್‌’ ಎಂದು ತೋರಿಸಿಕೊಳ್ಳಲಿಲ್ಲ. ಐದು ನಿಮಿಷಗಳ ಮಾತುಕತೆಯಲ್ಲಿಯೇ ಇವನು ನಮ್ಮ ಪಕ್ಕದ್ಮನೆ ಹುಡುಗ ಎಂದುಕೊಳ್ಳುವಷ್ಟು ಆಪ್ತವಾಗಿ ಬೆರೆಯುತ್ತಿದ್ದರು. ತಮಗೆ ಗೊತ್ತಿಲ್ಲದ ಸಂಗತಿಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ತಮಾಷೆ ಮಾಡುತ್ತಿದ್ದರು. ಮಗುವಿನಂತೆ ನಗುತ್ತಿದ್ದರು.

ಸರಳತೆ ಮತ್ತು ವಿನಯವಂತಿಕೆಗೆ ಹೆಸರಾಗಿದ್ದವರು ರಾಜ್‌ಕುಮಾರ್‌. ತಂದೆಯ ಈ ಗುಣಗಳನ್ನು ತಮ್ಮ ಬದುಕಿಗೂ ಅಳವಡಿಸಿಕೊಂಡಿದ್ದುದು ಪುನೀತ್‌ ಅವರ ಹೆಗ್ಗಳಿಕೆ. ನಿರ್ದೇಶಕರ ಕಾಲಿಗೆರಗಿದ ಅನಂತರವೇ ಅವರು ಶಾಟ್‌ಗೆ ರೆಡಿಯಾಗುತ್ತಿದ್ದುದನ್ನು ಕಂಡು, ಅಪ್ಪು ಥೇಟ್‌ ರಾಜ್‌ ಕುಮಾರ್‌ ಥರಾನೇ ಎಂದು ಹೇಳುತ್ತಿದ್ದ ಜನರುಂಟು. ರಿಯಾಲಿಟಿ ಶೋಗಳಲ್ಲಿ, ಸಿನೆಮಾದ ಮುಹೂರ್ತಗಳಲ್ಲಿ, ಇತರ ಕಾರ್ಯಕ್ರಮಗಳಲ್ಲಿ ಪುನೀತ್‌ ಅವರನ್ನು ಕಂಡವರೆಲ್ಲ- ಅಯ್ಯೋ, ಸೂಪರ್‌ ಸ್ಟಾರ್‌ ಅನ್ನಿಸಿಕೊಂಡಿದ್ರೂ ಅಪ್ಪು ಎಷ್ಟೊಂದು ಸಿಂಪಲ್‌ ಆಗಿ ಇದ್ದಾರಲ್ವಾ? ಎಂದು ಬೆರಗಾಗುತ್ತಿದ್ದುದು, ಅಪ್ಪು ವಿಪರೀತ ಸರ ಳಾತಿ ಸರಳ ವ್ಯಕ್ತಿ ಎಂದು ಮೆಚ್ಚಿಕೊಳ್ಳುತ್ತಿದ್ದುದು ಈ ಕಾರಣಕ್ಕೇ.

ಇದನ್ನೂ ಓದಿ:ಶ್ರೀಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ನಮನ

Advertisement

ಚಿತ್ರನಟ ಅಂದಮೇಲೆ ಆಗೊಮ್ಮೆ ಈಗೊಮ್ಮೆ ವಿವಾದಗಳಿಗೆ ಆಹಾರವಾಗ ಬೇಕು ಎನ್ನುವುದು ಚಿತ್ರರಂಗದಲ್ಲಿಯೇ ಚಾಲ್ತಿಯಲ್ಲಿರುವ ನಂಬಿಕೆ. ಆದರೆ ಈ ನಂಬಿಕೆಯನ್ನೂ ಸುಳ್ಳು ಮಾಡಿದ್ದರು ಪುನೀತ್‌. ವಿವಾದಗಳಿಲ್ಲದೆ ಶ್ರದ್ಧೆಯಿಂದ ತನ್ನ ವೃತ್ತಿಯನ್ನು ನಿರ್ವಹಿಸಿದ ಪುನೀತ್‌ ಕನ್ನಡ ಚಿತ್ರರಂಗದ ಅಜಾತಶತ್ರು ಎಂದರೆ ಖಂಡಿತ ಅತಿಶಯೋಕ್ತಿಯಲ್ಲ. ನಿಜ ಹೇಳಬೇಕೆಂದರೆ, ಈತನಿಗೆ ವಿರೋ ಧಿಗಳೇ ಇರಲಿಲ್ಲ. ಬೆರಗಿನ ನೃತ್ಯ, ಭಾವಪೂರ್ಣ ಅಭಿನಯ, ಮಧುರ ಗಾಯನ ಮತ್ತು ಮಗುವಿನಂಥ ನಗೆಯ ಈ ದೊಡ್ಮನೆ ಹುಡುಗ, ತನಗೆ ಗೊತ್ತಿಲ್ಲದಂತೆಯೇ ಎಲ್ಲರ ಮನೆ ಮತ್ತು ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದ. ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿದಾಕ್ಷಣ ಅವರ ಅಭಿನಯದ ಸಿನೆ ಮಾಗಳನ್ನು ನೋಡದ ಜನರೂ ಭಾವುಕರಾಗಿ ಕಂಬನಿ ಮಿಡಿಯುತ್ತಿರುವುದು ಈ ಕಾರಣಕ್ಕೇ.

ಕುಟುಂಬದ ಜನರೆಲ್ಲ ಒಟ್ಟಾಗಿ ಕೂತು ನೋಡುವಂಥ ಚಿತ್ರಗಳಲ್ಲಿ ನಟಿಸಬೇಕು, ಅಂಥ ಚಿತ್ರಗಳನ್ನು ನಿರ್ಮಿಸಬೇಕು, ಆ ಮೂಲಕ ಒಂದು ಬದಲಾವಣೆಗೆ ಕಾರಣನಾಗಬೇಕು ಎಂದು ಆಸೆಪಡುತ್ತಿದ್ದ ಪುನೀತ್‌, ಹಲವು ಬಗೆಯ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ದಿಢೀರ್‌ ನಿರ್ಗಮನದ ನೋವು ಕನ್ನಡ ಚಿತ್ರರಂಗ ಮತ್ತು ಚಿತ್ರಪ್ರೇಮಿಗಳನ್ನು ದೀರ್ಘ‌ ಅವಧಿಯವರೆಗೆ ಕಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next