Advertisement

PU ಪ್ರಾಯೋಗಿಕ ಪರೀಕ್ಷೆ ದಿನಕ್ಕೊಂದು ಆದೇಶದ ಗೊಂದಲ

01:44 AM Oct 11, 2024 | Team Udayavani |

ರಾಜ್ಯ ಶಿಕ್ಷಣ ಇಲಾಖೆ ಇನ್ನೂ ಗೊಂದಲದ ಮಡುವಿನಿಂದ ಹೊರಬಂದಂತೆ ಕಾಣಿಸುತ್ತಿಲ್ಲ. ಇಲಾಖೆ ಕೈಗೊಳ್ಳುವ ಪ್ರತಿಯೊಂದು ನಿರ್ಣಯ ಕೂಡ ಒಂದಲ್ಲ ಒಂದು ಗೊಂದಲಕ್ಕೆ ಕಾರಣವಾಗುತ್ತಿದ್ದು ಅಧಿಕಾರಿಗಳು, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಮತ್ತವರ ಹೆತ್ತವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದೆ. ವಿದ್ಯಾರ್ಥಿಗಳಿಗೆ ಅನ್ಯ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್‌ಇಎಬಿ)ಯ ನಿರ್ಧಾರ ಈಗ ಈ ಗೊಂದಲದ ಗೂಡಿಗೆ ಹೊಸ ಸೇರ್ಪಡೆ.

Advertisement

ಆರಂಭದಲ್ಲಿ ಕೆಎಸ್‌ಇಎಬಿ, ಈ ಬಾರಿ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳನ್ನು ಯಾದೃಚ್ಛಿàಕರಿಸಿ ನಡೆಸುವ ಮತ್ತು ವಿದ್ಯಾರ್ಥಿಗಳು ತಾವು ಓದುತ್ತಿರುವ ಕಾಲೇಜಿನಲ್ಲಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡದಿರಲು ನಿರ್ಧರಿಸಿ, ಆದೇಶ ಹೊರಡಿಸಿತ್ತು. ಆದರೆ ಈ ಬಗ್ಗೆ ಖಾಸಗಿ ಮತ್ತು ಅನುದಾನಿತ ಕಾಲೇಜುಗಳ ಆಡಳಿತ ಮಂಡಳಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಎಸ್‌ಇಎಬಿ ಸೋಮವಾರದಂದು ಪರಿಷ್ಕೃತ ಆದೇಶ ಹೊರಡಿಸಿ, ಗ್ರಾಮೀಣ ಭಾಗದಲ್ಲಿ ಏಕೈಕ ಪದವಿ ಪೂರ್ವ ಕಾಲೇಜು ಇದ್ದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಹಾಲಿ ವ್ಯವಸ್ಥೆಯಂತೆ ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಕಾಲೇಜುಗಳ ವಿದ್ಯಾರ್ಥಿಗಳನ್ನು ಅಲ್ಲಿಗೆ ಸಮೀಪದ ಕಾಲೇಜುಗಳಿಗೆ ಸಂಯೋಜಿಸುವಂತೆ ಸೂಚನೆ ನೀಡಿತ್ತು. ಅಷ್ಟು ಮಾತ್ರವಲ್ಲದೆ ಪರೀಕ್ಷಾ ಕೇಂದ್ರಗಳ ನಿಗದಿ, ಪ್ರಯೋಗಾಲಯಗಳಿಗೆ ಅಗತ್ಯ ಪ್ರಾಯೋಗಿಕ ಉಪಕರಣ ಮತ್ತು ಮೂಲಸೌಕರ್ಯ ಒದಗಿಸುವುದು, ಉಪನ್ಯಾಸಕರ ನೋಂದಣಿ ಮತ್ತಿತರ ವಿಷಯಗಳ ಬಗೆಗೆ ಈ ಆದೇಶದಲ್ಲಿ ಕೆಲವು ಮಾರ್ಗಸೂಚಿಯನ್ನು ಕೆಎಸ್‌ಇಎಬಿ ಕಾಲೇಜುಗಳಿಗೆ ನೀಡಿತ್ತು.
ಬುಧವಾರದಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಸೂಚನೆ ಮೇರೆಗೆ ಪರಿಷ್ಕೃತ ಸುತ್ತೋಲೆಯನ್ನು ಕೂಡ ಕೆಎಸ್‌ಇಎಬಿ ತಡೆ ಹಿಡಿದಿದೆ. ಈ ಬಾರಿಯೂ ಹಾಲಿ ಜಾರಿಯಲ್ಲಿರುವ ವ್ಯವಸ್ಥೆಯಂತೆ ಆಯಾಯ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಒಂದು ವೇಳೆ ಅಗತ್ಯ ವ್ಯವಸ್ಥೆ ಇಲ್ಲದಿದ್ದರೆ ಸಮೀಪದ ಕಾಲೇಜಿಗೆ ತೆರಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದು ಮತ್ತೂಮ್ಮೆ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೆಎಸ್‌ಇಎಬಿ ಪದೇಪದೆ ತನ್ನ ನಿರ್ಧಾರಗಳನ್ನು ಬದಲಾಯಿಸುತ್ತಿರುವುದರಿಂದಾಗಿ ವಿದ್ಯಾರ್ಥಿಗಳ ಮೇಲೆ ಇನ್ನಿಲ್ಲದ ಮಾನಸಿಕ ಒತ್ತಡ ಸೃಷ್ಟಿಯಾಗುತ್ತಿದೆ. ಇಂತಹ ಸೂಕ್ಷ್ಮ ಮತ್ತು ಮಹತ್ವದ ವಿಷಯಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗಲೂ ಇಲಾಖೆ ಮತ್ತು ಕೆಎಸ್‌ಇಎಬಿ ಸಂಬಂಧಪಟ್ಟ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡದಿರುವುದು ವಿಪರ್ಯಾಸವೇ ಸರಿ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಥವಾ ಕೊನೆಯ ಹಂತದಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಇಡೀ ವ್ಯವಸ್ಥೆಯನ್ನು ನಗೆಪಾಟಲಿಗೀಡು ಮಾಡುತ್ತದೆ. ಇದರ ಬದಲಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಆ ವರ್ಷಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳುವ ಸಂಪ್ರದಾಯಕ್ಕೆ ಇಲಾಖೆ ನಾಂದಿ ಹಾಡಬೇಕಿದೆ. ಅವರಿವರ ತಾಳಕ್ಕೆ ಕುಣಿಯುವ ಬದಲಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮತ್ತು ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವುದೇ ಶಿಕ್ಷಣ ಇಲಾಖೆಯ ಪ್ರಥಮ ಆದ್ಯತೆಯಾಗಬೇಕೇ ವಿನಾ ಈ ತೆರನಾದ ದ್ವಂದ್ವ ಮತ್ತು ತರಾತುರಿಯ ನೀತಿ-ನಿರೂಪಣೆಗಳಲ್ಲ. ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಭರದಲ್ಲಿ ಇಂತಹ ಧಾವಂತದ ನಿರ್ಧಾರಗಳು ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಗೋಜಲುಮಯವನ್ನಾಗಿಸುತ್ತವೆ ಎಂಬ ಪ್ರಾಥಮಿಕ ಜ್ಞಾನ ನಮ್ಮನ್ನಾಳುವವರು ಮತ್ತು ಅಧಿಕಾರಿಗಳಲ್ಲಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next