Advertisement

ಸೇವಾ ಭದ್ರತೆಗೆ ಆಗ್ರಹಿಸಿ ಧರಣಿ

08:47 PM Jan 12, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಗ್ರಾಮೀಣ ದಿವ್ಯಾಂಗರ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಸರ್ಕಾರ ಕನಿಷ್ಠ ವೇತನ ಜಾರಿಗೊಳಿಸಿ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಜ.16ರಿಂದ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವದಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಸ್‌.ಕೃಷ್ಣಪ್ಪ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸತತ 11 ವರ್ಷಗಳಿಂದ ಜಾರಿಯಲ್ಲಿರುವ ಯೋಜನೆಯಡಿ ವಿಕಲಚೇತನರ ಪುನರ್ವಸತಿಗಾಗಿ ಕಾರ್ಯಕರ್ತರು ಅಲ್ಪ ಗೌರವ ಧನ ಪಡೆದು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ಇದುವರೆಗೂ ನಮ್ಮ ಸೇವೆಗೆ ಭದ್ರತೆ ಒದಗಿಸದೇ ಕನಿಷ್ಠ ವೇತನ ಜಾರಿಗೊಳಿಸದೇ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಹ ದಿವ್ಯಾಂಗರಿಗೆ ಸೌಕರ್ಯ: ಸರ್ಕಾರದ ಶೇ.5 ರಷ್ಟು ಅನುದಾನ ಎಲ್ಲಾ ಇಲಾಖೆಗಳಲ್ಲಿ ನಿಗದಿಪಡಿಸಿರುವ ಅನುದಾನಗಳ ಬಳಕೆ, ಗ್ರಾಪಂ, ತಾಪಂನ, ನಗರಸಭೆ, ಶಾಸಕರ ಹಾಗೂ ಸಂಸದರ ಅನುದಾನಗಳ ಬಳಕೆ ಕುರಿತು ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಾ ಸರ್ಕಾರದ ನಿರಾಮಯ, ನಿರುದ್ಯೋಗ ಭತ್ಯೆ, ಸ್ಪರ್ಧಾಚೇತನ, ಇಂಧನ ಚಾಲಿತ ವಾಹನ, ಪ್ರತಿಭಾ ಪುರಸ್ಕಾರ, ಶಿಶುಪಾಲನಾ ಭತ್ಯೆ, ವಿದ್ಯಾರ್ಥಿ ವೇತನ, ಬಸ್‌ಪಾಸ್‌ ಮತ್ತಿತರ ಸೌಲಭ್ಯಗಳನ್ನು ಅರ್ಹ ದಿವ್ಯಾಂಗರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಒಕ್ಕೂಟ ನಿರ್ಧಾರ: ಸರ್ಕಾರ ಪುನರ್ವಸತಿ ಕಾರ್ಯಕರ್ತರಿಗೆ ಇದುವರೆಗೂ ಯಾವುದೇ ರೀತಿಯ ಮೂಲ ಸೌಕರ್ಯ ಕಲ್ಪಿಸಿಲ್ಲ. ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಒದಗಿಸಿಲ್ಲ. ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗದ ಕಾರಣ ಜ.16 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ರಾಜ್ಯ ಒಕ್ಕೂಟ ನಿರ್ಧರಿಸಿದೆ ಎಂದರು.

ಕಾಯಂಗೊಳಿಸಲು ಆಗ್ರಹ: ತಾಲೂಕು ಮಟ್ಟದಲ್ಲಿ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಕರ್ತರು ಪ್ರಾಮಾಣಿಕವಾಗಿ ದಿವ್ಯಾಂಗರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದು, ಕೂಡಲೇ ಸರ್ಕಾರ ಎಲ್ಲಾ ಎಂಆರ್‌ಡಬ್ಲೂé ಹಾಗೂ ವಿಆರ್‌ಡಬ್ಲೂé ಕಾರ್ಯಕರ್ತರನ್ನು ಕಾಯಂಗೊಳಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು, ಎಲ್ಲ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಪುನರ್ವಸತಿ ಕಾರ್ಯಕರ್ತರಿಗೂ ಕಲ್ಪಿಸಬೇಕೆಂದು ಆಗ್ರಹಿಸಿದರು.

Advertisement

ರಾಜ್ಯದಲ್ಲಿ 6500 ಕ್ಕೂ ಹೆಚ್ಚು ಪುನರ್ವಸತಿ ಕಾರ್ಯಕರ್ತರು ಇದ್ದು ಜಿಲ್ಲೆಯಲ್ಲಿ ಒಟ್ಟು 150 ಮಂದಿ ಇದ್ದಾರೆ. ಸರ್ಕಾರ ನಮ್ಮ ನ್ಯಾಯುತವಾದ ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ಕೈ ಬಿಡುವುದಿಲ್ಲ. ಜಿಲ್ಲೆಯ ದಿವ್ಯಾಂಗರ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಟಿ.ರಾಮಲಿಂಗಪ್ಪ, ಪದಾಧಿಕಾರಿಗಳಾದ ಗುಡಿಬಂಡೆ ಕೆ.ಸಿ.ರಮೇಶ್‌, ಚಿಕ್ಕಬಳ್ಳಾಪುರದ ನರಸಿಂಹಮೂರ್ತಿ, ಬಾಗೇಪಲ್ಲಿ ಎ.ವಿ.ರಾಮಪ್ಪ, ಚಿಂತಾಮಣಿಯ ಎಸ್‌.ಮಂಜುನಾಥ, ಚಿಕ್ಕಬಳ್ಳಾಪುರದ ಎಸ್‌.ಸುನೀಲ್‌, ಲಕ್ಷ್ಮೀನಾರಾಯಣ, ಶಿವ ವರ‌್ಲಕೊಂಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಬೇಡಿಕೆಗಳೇನು?: 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಗ್ರಾಮೀಣ ಪುನರ್ವಸತಿ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ತಾಲೂಕು ದಿವ್ಯಾಂಗ ಅಧಿಕಾರಿಗಳನ್ನಾಗಿ ಹಾಗೂ ಗ್ರಾಪಂ ಮಟ್ಟದಲ್ಲಿ ಕಾರ್ಯ ನಿರ್ವಹಿಸುವರನ್ನು ಗ್ರಾಮೀಣ ವಿಕಲಚೇತನರ ಅಭಿವೃದ್ದಿ ಸಹಾಯಕರನ್ನಾಗಿ ಹುದ್ದೆಯನ್ನು ಕಾಯಂಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next