Advertisement

Government;ಇನ್ನು ಜಿಲ್ಲೆಯ ಒಳಗೆ ಎಲ್ಲಿ ಬೇಕಾದರೂ ಆಸ್ತಿ ನೋಂದಣಿ : ಏನಿದು ಯೋಜನೆ?

12:07 AM Aug 27, 2024 | Team Udayavani |

ಬೆಂಗಳೂರು: ಇನ್ನು ಮುಂದೆ ಜಿಲ್ಲೆಯ ಯಾವುದೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆ ಜಿಲ್ಲೆ ವ್ಯಾಪ್ತಿಯ ಯಾವುದೇ ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆ ಮಾಡಬಹುದು. ಜತೆಗೆ ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ವೈಯಕ್ತಿಕ ಗುರುತಾಗಿ ಆಧಾರ್‌ ಅಥವಾ ಪಾನ್‌ ಕಾರ್ಡ್‌ ಅಥವಾ ಪಾಸ್‌ಪೋರ್ಟ್‌ ನೀಡುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆ ರಾಜ್ಯಾದ್ಯಂತ ಸೆ. 2ರಿಂದ ಜಾರಿಗೆ ಬರಲಿದೆ.

Advertisement

ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಯಾರಿಗೋ ಸೇರಿದ ಜಮೀನನ್ನು ಇನ್ಯಾ ರಿಗೋ ಪರಭಾರೆ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಇದನ್ನು ಸರಿಪಡಿಸುವ ಸಲುವಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದರು.
ಕಾವೇರಿ 2.0 ತಂತ್ರಾಂಶದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು, ಅದರ ಭಾಗವಾಗಿ ನೋಂದಣಿ ವ್ಯವಸ್ಥೆ ಯನ್ನೂ ಸುಧಾರಿಸುತ್ತಿದ್ದೇವೆ ಎಂದು ಕೃಷ್ಣಬೈರೇಗೌಡ ಅವರು ಹೇಳಿದರು.

ಮೂಲ ವಾರಸುದಾರರಿಗೆ ಮಾಹಿತಿ ಇಲ್ಲದೆ, ಸತ್ತವರ ಹೆಸರಿನಲ್ಲಿದ್ದ ಜಮೀನನ್ನೆಲ್ಲ ನೋಂದಣಿ ಮಾಡಿಸಲಾಗಿದೆ. ವ್ಯವಸ್ಥಿತವಾಗಿ ಜಮೀನು ದೋಚುವ, ದರೋಡೆ ಮಾಡುವ ಕೆಲಸ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಎಲ್ಲೆಡೆ ಇವುಗಳು ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆರ್‌ಟಿಸಿಗೆ ಆಧಾರ್‌ ಜೋಡಣೆ
ಈ ಅಕ್ರಮಗಳನ್ನು ತಪ್ಪಿಸುವ ಸಲುವಾಗಿಯೇ ಒಂದೆಡೆ ಆರ್‌ಟಿಸಿ (ಪಹಣಿ)ಗೆ ವಾರಸುದಾರರ ಆಧಾರ್‌ ಜೋಡಣೆ ಮಾಡಲಾಗುತ್ತಿದೆ. ಇನ್ನೊಂದೆಡೆ ಯಾವುದೇ ಸ್ಥಿರಾಸ್ತಿಗಳ ನೋಂದಣಿ ಸಂದರ್ಭ ಸಾರ್ವಜನಿಕರು ತಮ್ಮ ವೈಯಕ್ತಿಕ ಗುರುತಾಗಿ ಆಧಾರ್‌ ಕಾರ್ಡ್‌/ಪಾನ್‌ಕಾರ್ಡ್‌ ಅಥವಾ ಪಾಸ್‌ಪೋರ್ಟ್‌ ಸಲ್ಲಿಸಬೇಕು ಎಂಬುದನ್ನು ಕಡ್ಡಾಯ ಗೊಳಿಸಲಾಗಿದೆ. 3 ತಾಲೂಕುಗಳಲ್ಲಿ ಪ್ರಯೋಗ ಯಶಸ್ವಿಯಾದ ಅನಂತರ ರಾಜ್ಯಾದ್ಯಂತ ವಿಸ್ತರಣೆ ಮಾಡುತ್ತಿದ್ದೇವೆ. ಜಮೀನಿನ ಮಾಲಕತ್ವದ ಸುರಕ್ಷೆ, ಸುಭದ್ರತೆ ದೃಷ್ಟಿಯಿಂದ ಹಾಗೂ ವಂಚನೆ ತಪ್ಪಿಸುವ ಉದ್ದೇಶದಿಂದ ಆಧಾರ್‌ ವಿಲೀನಕ್ಕೆ ಜನರು ಒಪ್ಪಿ ಸಹಕರಿಸಬೇಕು. ಇದು ವ್ಯವಸ್ಥೆ ಮೇಲೆ ನಂಬಿಕೆ ತರುವ ಪ್ರಯತ್ನ. ಇದನ್ನು ಅನಾನುಕೂಲ ಎಂದು ಭಾವಿಸದೆ, ಸಕಾರಾತ್ಮಕವಾಗಿ ಸ್ಪಂದಿಸಿ ಎಂದು ಮನವಿ ಮಾಡಿದರು. ಕೇಂದ್ರ ಸರಕಾರ ಆಧಾರ್‌ ಕಡ್ಡಾಯಗೊಳಿಸಿದರೂ ಅನುಕೂಲ ಆಗಲಿದೆ ಎಂದೂ ಒತ್ತಾಯಿಸಿದರು.

ಬಹು ನೋಂದಣಿ ತಪ್ಪಿಸಲು ಕ್ರಮ
ಇದಲ್ಲದೆ ಅಕ್ರಮ ಲೇಔಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತಲೆ ಎತ್ತುತ್ತಿದ್ದು, ಪಹಣಿಯಲ್ಲಿ ಕೃಷಿ ಭೂಮಿ ಎಂದಿ ರುವ ಜಾಗಗಳಲ್ಲಿ ಭೌತಿಕವಾಗಿ ಬಡಾವಣೆಗಳು ನಿರ್ಮಾಣ ವಾಗಿರುತ್ತವೆ. ಅದನ್ನು ಮತ್ತೂಬ್ಬರಿಗೆ ಮಾರಾಟ ಮಾಡ ಲಾಗಿರುತ್ತದೆ. 4 ಲಕ್ಷ ಪಹಣಿಗಳ ಪೈಕಿ 40 ಲಕ್ಷ ಇಂತಹ ಪ್ರಕರಣಗಳಿವೆ. ಪಹಣಿ ಒಬ್ಬರ ಹೆಸರಿನಲ್ಲಿ, ಬಡಾವಣೆ ಇನ್ನೊಬ್ಬರ ಹೆಸರಿನಲ್ಲಿ, ನಿವೇಶನ ಮತ್ತೂಬ್ಬರ ಹೆಸರಿನಲ್ಲಿ ಇರುವ ಪ್ರಕರಣ ಗಳಿವೆ. ಅದರ ಮೇಲೆ ದಾಖಲೆಗಳನ್ನು ಅಡವಿಟ್ಟು ಸಾಲ ಪಡೆದವರೂ ಇದ್ದಾರೆ. ಈ ಗೊಂದಲ ಗಳನ್ನು ತಡೆಯಲು ಸರಕಾರ ಕೈಗೊಂಡಿರುವ ಕ್ರಮ ಅನುಕೂಲಕರ ವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ರಾಜ್ಯಾದ್ಯಂತ 257 ಸಬ್‌ ರಿಜಿಸ್ಟ್ರರ್‌ ಕಚೇರಿಗಳಿದ್ದು, ಅಂದಾಜು 50 ಕಚೇರಿಗಳಲ್ಲಿ ಹೆಚ್ಚು ಕಾರ್ಯಭಾರ, ಜನಜಂಗುಳಿ ಇರುತ್ತದೆ. ಕೆಲವು ಕಚೇರಿಗಳಲ್ಲಿ ದಿನಕ್ಕೆ ಸರಾಸರಿ 50-60 ನೋಂದಣಿ ವ್ಯವಹಾರ ನಡೆದರೆ ಇನ್ನು ಕೆಲವೆಡೆ 15-20 ವ್ಯವಹಾರವೂ ನಡೆಯುವುದಿಲ್ಲ. ನಗರ ಪ್ರದೇಶದಲ್ಲಂತೂ ಕಟ್ಟಡ ಸಿಗದೆ ಸಣ್ಣ ಸ್ಥಳದಲ್ಲೇ ಉಪನೋಂದಣಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಶೌಚಾಲಯ ಸಹಿತ ಮೂಲಸೌಕರ್ಯವೂ ಇರುವುದಿಲ್ಲ. ಹೀಗಾಗಿ ಒತ್ತಡ ಹೆಚ್ಚಿರುವಲ್ಲಿ ಕಾಯುವಿಕೆ, ಅವಲಂಬನೆ, ಮಧ್ಯವರ್ತಿಗಳ ಮೂಲಕ ಹೋಗಬೇಕು ಇತ್ಯಾದಿ ದೂರುಗಳಿವೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಕೆಲ ನಿಯಮ ರೂಪಿಸಲಾಗಿದೆ ಎಂದರು.

ಏನಿದು ಯೋಜನೆ?
ಇಷ್ಟು ದಿನ ತಾಲೂಕು ವ್ಯಾಪ್ತಿಯಲ್ಲಿನ ಉಪನೋಂದ ಣಾಧಿಕಾರಿ ಕಚೇರಿಗಳಲ್ಲೇ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆ ನಡೆಸಬೇಕಿತ್ತು. ಈಗ ನೋಂದಣಿ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ “ಎನಿವೇರ್‌ ನೋಂದಣಿ ಯೋಜನೆ’ ಜಾರಿ ಮಾಡಲಾಗುತ್ತಿದೆ. ಅದರಂತೆ ಇನ್ನು ಮುಂದೆ ಜಿಲ್ಲೆಯ ಯಾವುದೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆ ಜಿಲ್ಲೆ ವ್ಯಾಪ್ತಿಯ ಯಾವುದೇ ಸ್ಥಿರಾಸ್ತಿಗಳ ನೋಂದಣಿ ಮಾಡಬಹುದಾಗಿದೆ.

ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಎನಿವೇರ್‌ ನೋಂದಣಿ ಯೋಜನೆ ಅನುಷ್ಠಾನಗೊಳಿಸಿ ಯಶಸ್ವಿಯಾಗಿದ್ದು, ಸೆ. 2ರಿಂದ ಜಿಲ್ಲೆಯ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಅವಕಾಶ ಕೊಡಲಾಗಿದೆ.-ಕೃಷ್ಣ ಬೈರೇಗೌಡ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next