Advertisement

ಪತ್ರಿಕೋದ್ಯಮದವರ ಬಳಿ ಇರುವ ಆಯುಧ ರಾಜಕೀಯದವರ ಬಳಿ ಇರುವುದಿಲ್ಲ:ಆರಗ ಜ್ಞಾನೇಂದ್ರ

08:18 PM Jul 29, 2023 | Shreeram Nayak |

ತೀರ್ಥಹಳ್ಳಿ : ಸಂವಿಧಾನದ ನಾಲ್ಕನೇ ಅಂಗ ಅಂತ ಮಾಧ್ಯಮಗಳನ್ನು ಗುರುತಿಸುತ್ತೇವೆ. ಬೆಳಗಿನ ಪತ್ರಿಕೆಗಳು ಜನರ ಮನಸಿನಲ್ಲಿ ಹಾಸು ಹೊಕ್ಕಾಗಿದೆ. ಪತ್ರಿಕೆ ಇಲ್ಲದಿದ್ದರೆ ಏನೋ ಕಳೆದು ಕೊಂಡ ರೀತಿ ಅನಿಸುತ್ತದೆ. ನಾವು ಕೊಡುವ ಹೇಳಿಕೆಗಳು ಪತ್ರಿಕೆಗಳಲ್ಲಿ ಬಂದು ಆ ವಿಚಾರ ಜನರ ಬಾಯಲ್ಲಿ ಬಂದರೆ ಅದೇನೋ ಒಂದು ರೀತಿಯಲ್ಲಿ ಸಂತೋಷ ಕೊಡುತ್ತದೆ ಎಂದು ಮಾಜಿ ಗೃಹಸಚಿವರು, ಹಾಲಿ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು ಪತ್ರಿಕೋದ್ಯಮ ಈಗ ಬಹಳ ದೊಡ್ಡದಾಗಿ ಬೆಳೆದಿದೆ. ಒಬ್ಬನ ಚಾರಿತ್ರ್ಯ ಹರಣ ಮಾಡಲು ಪತ್ರಿಕೆಯೊಂದು ಸಾಕು. ಭ್ರಷ್ಟಾಚಾರ ಮಾಡಿದವನನ್ನು ತೋರಿಸುವುದಕ್ಕೂ ಮಾಡದೇ ಇರುವನನ್ನು ತೋರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಪತ್ರಿಕೋದ್ಯಮದವರ ಬಳಿ ಇರುವ ಆಯುಧ ರಾಜಕೀಯದವರ ಬಳಿ ಇರುವುದಿಲ್ಲ.ಪತ್ರಿಕಾರಂಗ ಲಾಭದಾಯಕ ಮಾಡುವ ಕೆಲಸವಲ್ಲ. ಪತ್ರಿಕಾರಂಗದಲ್ಲಿ ಅಡ್ಡದಾರಿಯನ್ನು ಹಿಡಿದು ಕೆಲಸ ಮಾಡುವ ಅವಶ್ಯಕತೆ ಇಲ್ಲ. ಎಷ್ಟೋ ಪತ್ರಿಕೆಗಳು ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಇತ್ತೀಚಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಬಂದ ಮೇಲೆ ಪ್ರಿಂಟ್ ಮೀಡಿಯಾಗಳಿಗೆ ಸಂಕಷ್ಟ ಬಂದಿದೆ ಎಂದರು.

ವಿಶೇಷ ರೀತಿಯಲ್ಲಿ ಉದ್ಘಾಟನೆ ಮಾಡಿದ ಆರಗ ಜ್ಞಾನೇಂದ್ರ
ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶೇಷ ರೀತಿಯಲ್ಲಿ ಉದ್ಘಾಟನೆ ಮಾಡಿಸಲಾಯಿತು. ಸಾಮಾನ್ಯವಾಗಿ ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿಸಲಾಗುತ್ತದೆ. ಆದರೆ ತೀರ್ಥಹಳ್ಳಿ ಪತ್ರಕರ್ತರು ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವುದರಿಂದ ವಿಶ್ವ ಮಾನವ ತತ್ವವನ್ನು ಸಾರಿದ ಕುವೆಂಪು ಅವರ ಮಾತಿನಂತೆ ಜಾದು ಮಾಡಿಸಿ ಪಕ್ಷಿಯನ್ನು ಹೊರ ತಂದು ಹಾರಿಸುವ ಮೂಲಕ ಮೂಲಕ ವಿಶೇಷ ರೀತಿಯಲ್ಲಿ ಉದ್ಘಾಟನೆ ಮಾಡಲಾಯಿತು.

ಓದಿದವರಿಂದಲೇ ಸಮಾಜ ಹಾಳಾಗುತ್ತಿದೆ ಎಂದರೆ ತಪ್ಪಾಗಲ್ಲ: ಕಿಮ್ಮನೆ ರತ್ನಾಕರ್
ಪ್ರತಿಯೊಬ್ಬ ಮಕ್ಕಳು ಪತ್ರಿಕೆ ಓದಬೇಕು ಅಂತ ಹೇಳುತ್ತಿದ್ದರು ಈಗ ಓದುವುದೇ ಬೇಡ ಅನಿಸುತ್ತದೆ, ಮುಖಪುಟದಲ್ಲಿ ಸುದ್ದಿಗಿಂತ ಜಾಹಿರಾತುಗಳೇ ಇರುತ್ತದೆ. ದೃಶ್ಯ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಮಾಧ್ಯಮಗಳು ಕೆಲಸ ನಿರ್ವಹಿಸಿಸುವಾಗ ಮತ್ತೊಬ್ಬರಿಗೆ ಪಾಠ ಮಾಡುವಂತೆ ಇರಬೇಕು. ಇವತ್ತು ಇರುವ ಭ್ರಷ್ಟಾಚಾರ, ಅಂಧಕಾರ, ಜಾತಿ ತರುವುದು ಇದ್ಯಾವುದು ಆಗಿನ ಕಾಲದಲ್ಲಿ ಇರಲಿಲ್ಲ. ಓದಿದವರಿಂದಲೇ ಸಮಾಜ ಹಾಳಾಗುತ್ತಿದೆ ಎಂದರೆ ತಪ್ಪಾಗಲ್ಲ. ಸಮಾಜವನ್ನು ಸರಿಪಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಮಾದ್ಯಮದಲ್ಲಿ ಕೆಲಸ ನಿರ್ವಹಿಸುವವರು ರಾಜಕಾರಣದ ಜೊತೆ ಸಂಬಂಧ ಇಟ್ಟುಕೊಳ್ಳಬಾರದು ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

ಮೊದಲು ಪತ್ರಿಕೆ ಒಳ್ಳೆಯದನ್ನು ಹುಡುಕುತ್ತಿತ್ತು ಜನರು ಕೆಟ್ಟದನ್ನು ಹರಡುತ್ತಿದ್ದರು ಆದರೆ ಈಗ ಪತ್ರಿಕೆ ಕೆಟ್ಟದನ್ನು ಹರಡುತ್ತಿದ್ದರೆ ಜನರು ಒಳ್ಳೆಯದನ್ನು ಹುಡುಕುತ್ತಿದ್ದಾರೆ. ಪತ್ರಕರ್ತರು ಓದುವ ಹವ್ಯಾಸ ಹೆಚ್ಚು ಮಾಡಿಕೊಳ್ಳಬೇಕು ಎಂದರು.

Advertisement

ಸಮಾಜದ ಸ್ವಾಸ್ತ್ಯವನ್ನು ಕೆದಡುವ ಕೆಲಸ ಪತ್ರಿಕಾರಂಗ ಮಾಡಬಾರದು:  ಆರ್ ಎಂ ಮಂಜುನಾಥ್ ಗೌಡ್ರು
ಪತ್ರಿಕಾರಂಗ ಎಂಬುವುದು ಅತ್ಯಂತ ಬಲ ಶಾಲಿಯಾಗಿ ರಾಜ್ಯದ ದಿಕ್ಕನ್ನೇ ಬದಲಾಯಿಸುವ ವ್ಯವಸ್ಥೆ ಆಗಿದೆ. ಸಮಾಜದ ಸ್ವಾಸ್ತ್ಯವನ್ನು ಕೆದಡುವ ಕೆಲಸ ಪತ್ರಿಕಾರಂಗ ಮಾಡಬಾರದು.ಅನ್ನ ಇರದೆ ಇರುವಷ್ಟು ಬಡವನಾಗದೆ ಅನ್ನ ಬಿಡುವಷ್ಟು ಶ್ರೀಮಂತನಾಗದೇ ಇರುವ ಹಾಗೆ ಪತ್ರಕರ್ತರು ಇರಬೇಕು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾದ್ಯಮದವರು ಮಾಡಬೇಕು. ಹಾಗೆ ಅವರು ಬರೆಯುವ ಭಾಷೆಯ ಬಗ್ಗೆ ಹಿಡಿತ ಇರಬೇಕು ಎಂದರು.

ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ತೀರ್ಥಹಳ್ಳಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೋಹನ್ ಶೆಟ್ಟಿ ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ನಿರ್ವಹಿಸುತ್ತಿದೆ. ಪತ್ರಿಕೋದ್ಯಮ ಈಗ ಒಳ್ಳೆಯ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ತೀರ್ಥಹಳ್ಳಿ ಪತ್ರಕರ್ತರಿಗಾಗಿ ಪತ್ರಿಕಾಭವನ ನಿರ್ಮಿಸಿ ಎಂದು ಮನವಿ ಮಾಡಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ತೀರ್ಥಹಳ್ಳಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಜಿ.ಎಸ್. ನಾರಾಯಣರಾವ್ ( ಅಧ್ಯಕ್ಷರು, ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಶಿವಮೊಗ್ಗ), ಮಹಮ್ಮದ್ ಶಫಿ ( ಆಜಾದ್ ಫ್ಲೈ ವುಡ್, ನಿರ್ದೇಶಕರು , ಆಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತೀರ್ಥಹಳ್ಳಿ), ಕುಮಾರ್ ಮಾಸ್ಟರ್ ( ಶಿಕ್ಷಕರು ಹಾಗೂ ವಿಶೇಷ ಚೇತನ ಮಕ್ಕಳ ಟ್ರೈನರ್, ತೀರ್ಥಹಳ್ಳಿ), ಬಿ.ಮಂಜುನಾಥ ಶೆಟ್ಟಿ ( ವಾಹನ ಚಾಲನಾ ಕ್ಷೇತ್ರ), ಮ್ಯಾಥ್ಯೂ ಸುರಾನಿ ( ರಂಗ ನಟ, ನಿರ್ದೇಶಕ), ಕೊಕ್ಕೊಡ್ತಿ ಕೃಷ್ಣಮೂರ್ತಿ ( ಕೊಕ್ಕೊಡ್ತಿ ಕೃಷ್ಣಾಚಾರ್), (ಹಿರಿಯ ಯಕ್ಷಗಾನ ಕಲಾವಿದ), ಗೋಪಾಲ ಪೂಜಾರಿ ( ಸಮಾಜ ಸೇವಕರು, ಮೇಲಿನ ಕುರುವಳ್ಳಿ , ತೀರ್ಥಹಳ್ಳಿ), ಶ್ರೀಮತಿ ಡಾ.ಅನುಪಮ ಡಿ.ಎಸ್. ( ಆರೋಗ್ಯ ಕ್ಷೇತ್ರ), ರಮೇಶ್ ಗಾಂವಸ್ಕರ್ ( ಗಾಯಕರು) ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ತೀರ್ಥಹಳ್ಳಿಯ ಶ್ರೀಮತಿ ಭಾಗ್ಯ ಅನಿಲ್ ( ಸಂಪಾದಕರು, ಬೆಳಗಿನ ವಿಧಾತ ದೈನಿಕ , ತೀರ್ಥಹಳ್ಳಿ), ಪ್ರವೀಣ್ ಭಟ್ ( ಹಿರಿಯ ಪತ್ರಕರ್ತ ಮತ್ತು ಮುದ್ರಕ), ರಾಮಚಂದ್ರ ಕೊಪ್ಪಲು ( ಪತ್ರಕರ್ತ, ಪ್ರಸಿದ್ದ ವ್ಯಂಗ್ಯಚಿತ್ರಕಾರ), ತ.ರ. ರಾಘವೇಂದ್ರ ( ಪ್ರಧಾನ ಸಂಪಾದಕರು, ನಮ್ಮೂರ್ ಎಕ್ಸ್‌ಪ್ರೆಸ್‌ ಮೀಡಿಯಾ, ತೀರ್ಥಹಳ್ಳಿ), ಪಾರ್ಥಿಬನ್ ( ಮುದ್ರಣ ಕ್ಷೇತ್ರ) ಮತ್ತು ಕು. ಸಿಂಚನ ಮುರುಘರಾಜ್ ( ಕುವೆಂಪು ವಿ.ವಿ. ಬಯೋ ಕೆಮಿಸ್ಟ್ರಿ ಎಂ.ಎಸ್.ಸಿ. 4 ನೇ ರಾಂಕ್), ಕು.ಪ್ರಣತಿ ಸಿ.ಎಸ್. ( ಪಿಯುಸಿ 92%), ಸಂದೇಶ್ ( ಪತ್ರಿಕಾ ವಿತರಕ), ನವ ಎಸ್.ನಾಯಕ್ , ಉದಯೋನ್ಮುಖ ಬಾಲ ಕಲಾವಿದ) ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾ ಪ ಸಂಘದ ಅಧ್ಯಕ್ಷ ಮುನ್ನೂರು ಮೊಹನ್ ಶೆಟ್ಟಿ, ಜಿಲ್ಲಾ ಕಾ.ಪ.ಸಂ.ನ ಅಧ್ಯಕ್ಷ ಶಿವಕುಮಾರ್, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ, ತೀರ್ಥಹಳ್ಳಿ ಪೋಲಿಸ್ ಉಪ ಅಧೀಕ್ಷಕ ಗಜಾನನ ವಾಮನ ಸುತಾರ, ಪ.ಪಂ.ಅಧ್ಯಕ್ಷೆ ಸುಶೀಲಾ ಶೆಟ್ಟಿ, ಯುವ ಮುಖಂಡ ಮುಡುಬ ರಾಘವೇಂದ್ರ, ಜಿಲ್ಲಾ ಕಾ.ಪ.ಸಂ.ದ ಉಪಾಧ್ಯಕ್ಷ ಹಾಲಸ್ವಾಮಿ ಮುರುಘರಾಜ್ ಸೇರಿದಂತೆ ತಾಲೂಕು ಘಟಕದ ಎಲ್ಲಾ ಪತ್ರಕರ್ತರು ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next