Advertisement
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಬೀದರ ಜಿಲ್ಲೆಯ ಹಲವೆಡೆ ಬರ ಪರಿಶೀಲನೆ ನಡೆಸಿತು. ಈ ಮಧ್ಯೆ, ಹುಮನಾಬಾದನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, ಡಿ.10ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ರಾಜ್ಯದ ರೈತರ ಪರ ಉಗ್ರ ಹೋರಾಟ ನಡೆಸಲಾಗುತ್ತದೆ. ಸಾಲ ಮನ್ನಾ, ಬೆಳೆ ವಿಮೆ, ಕಬ್ಬಿನ ಬಾಕಿ ಹಣ, ಕಬ್ಬಿನ ಬೆಲೆ ನಿಗದಿ ಮೊದಲಾದ ವಿಷಯ ಮುಂದಿಟ್ಟುಕೊಂಡು ಸದನದ ಒಳಗೆ ಮತ್ತು ಹೊರಗೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯ ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.
ರೈತರಿಗೆ ಬೆಳೆ ನಷ್ಟ ಪರಿಹಾರ ಎಷ್ಟು ಕೊಡಬೇಕಿದೆ? ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ? ಬರ ಪರಿಹಾರಕ್ಕೆ ಎಷ್ಟು ಹಣ ಬೇಕು ಎಂಬುದರ ಬಗ್ಗೆ ಇದುವರೆಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಯಾವುದೇ ರೀತಿಯ ವರದಿಯನ್ನು ಸಲ್ಲಿಸಿಲ್ಲ. ಬಾಯಿ ಮಾತಿನಲ್ಲಿ ಬರ ಪರಿಹಾರ ಕೊಡಿ ಎಂದರೆ ಹೇಗೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು. ಮುಂದಿನ ಬೆಳಗಾವಿ ಅಧಿವೇಶದಲ್ಲಿ ಪಕ್ಷದ ನಾಯ ಕರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದಾರೆ. ಕುಡಿಯುವ ನೀರಿಗಾಗಿ ಜನ, ಜಾನುವಾರು ಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕನಿಷ್ಠ ಗೋಶಾಲೆಗಳನ್ನು ಇದುವರೆಗೂ ಆರಂಭಿಸಿಲ್ಲ.
ಬರದ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ತಂಡ, ಕೊಪ್ಪಳದಲ್ಲಿ ಬರ ಅಧ್ಯಯನ ನಡೆಸಿತು. ಯಲಬುರ್ಗಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶೆಟ್ಟರ್, ಸಿಎಂ ಕುಮಾರ ಸ್ವಾಮಿ ಅವರು ಸಾಲ ಮನ್ನಾ ವಿಚಾರದಲ್ಲಿ ಬೋಗಸ್ ಘೋಷಣೆ ಮಾಡಿದ್ದಾರೆ. ಇಲ್ಲಿಯ ವರೆಗೂ ಒಬ್ಬ ರೈತನ ಸಾಲವೂ ಮನ್ನಾ ಆಗಿಲ್ಲ. ಇದಕ್ಕೆ ಸಿಎಂ ಸ್ಪಷ್ಟನೆ ನೀಡುವುದು ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟು ಕೊಂಡು ಡಿ.10ರಂದು ಸುವರ್ಣಸೌಧ ಮುತ್ತಿಗೆ
ಹಾಕಲಿದ್ದೇವೆ ಎಂದು ಹೇಳಿದರು.
Related Articles
ಸರ್ಕಾರ ಸಾಲ ಮನ್ನಾಕ್ಕೆ ಹತ್ತಾರು ನಿಯಮಗಳನ್ನು ವಿಧಿಸುವ ಮೂಲಕ ರೈತರನ್ನು ವಂಚಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
Advertisement