Advertisement

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಣಬ್‌ ಮುಖರ್ಜಿ

06:15 PM Aug 31, 2020 | Karthik A |

ಮಣಿಪಾಲ: ʼಭಾರತದ ಆತ್ಮ ನೆಲೆಸಿರುವುದೇ ಬಹುತ್ವದಲ್ಲಿ.ʼ ದ್ವೇಷ ಮತ್ತು ಅಸಹನೆಯಿಂದ ಭಾರತದ ರಾಷ್ಟ್ರೀಯತೆ ನಾಶವಾಗಬಹುದು’ ಎಂದು ಸಂಘದ ಕಾರ್ಯಕ್ರಮದಲ್ಲಿ ಈ ಸೂಚ್ಯ ಎಚ್ಚರಿಕೆ ನೀಡಿದ್ದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು.

Advertisement

ನಾಗಪುರದ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ 3ನೇ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮಕ್ಕೆ ಸಂಘ ಅವರನ್ನು ಮುಖ್ಯ ಅಥಿತಿಯಾಗಿ ಆಹ್ವಾನಿಸಲಾಗಿತ್ತು. ಇದಕ್ಕೆ ಪರ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್‌ನಲ್ಲಿ ಬೆರಳೆನಿಕೆ ಮಂದಿ ಇದಕ್ಕೆ ಆಕ್ಷೇಪ ಎತ್ತಿದ್ದರು.

ಸ್ವತಃ ಪ್ರಣಬ್‌ ಮುಖರ್ಜಿ ಅವರ ಮಗಳೇ ಈ ಕಾರ್ಯಕ್ರಮಕ್ಕೆ ತಮ್ಮ ತಂದೆಯವರನ್ನು ಆಹ್ವಾನಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪರ-ವಿರೋಧದ ನಡುವೆ ಪ್ರಣಬ್‌ ಮುಖರ್ಜಿ ಅವರು ಕಾರ್ಯಕ್ರಮಕ್ಕೆ ಆಹ್ವಾನವನ್ನು ಗೌರವಿಸಿ ತೆರಳಿದ್ದರು. ಈ ಸಂದರ್ಭ ಅವರ ಭಾಷಣ ಕೇಳಲು ಇಡೀ ದೇಶದ ಕುತೂಹಲದಿಂದ ಕಾಯುತ್ತಿತ್ತು.

ಐದು ದಶಕಗಳ ರಾಜಕೀಯ ಜೀವನದಲ್ಲಿ ಆರೆಸ್ಸೆಸ್‌ ನಿಲುವಿಗೆ ವ್ಯತಿರಿಕ್ತವಾದ ಧೋರಣೆ ಹೊಂದಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಆರ್‌ಎಸ್‌ಎಸ್‌ನ ಸಂಸ್ಥಾಪಕ ಮತ್ತು ಮೊದಲ ಸರಸಂಘ ಚಾಲಕ ಡಾ| ಕೇಶವ ಬಲಿರಾಮ್‌ ಹೆಡಗೇವಾರ್‌ ಅವರನ್ನು ʼಭಾರತ ಮಾತೆಯ ಶ್ರೇಷ್ಠ ಪುತ್ರ’ ಎಂದು ವ್ಯಾಖ್ಯಾನಿಸಿದ್ದರು.

ʼದೇಶಪ್ರೇಮ, ರಾಷ್ಟ್ರೀಯತೆ ಮತ್ತು ಬಹುತ್ವದ ಕುರಿತು ತಮ್ಮ ಅಭಿಪ್ರಾಯ ವಿವರಿಸಿದ್ದ ಅವರು, ಆಧುನಿಕ ಭಾರತದ ತಮ್ಮ ಪರಿಕಲ್ಪನೆಯನ್ನು ಹರಿಯ ಬಿಟ್ಟಿದ್ದರು. ಭಾರತದ ಬಹುತ್ವವನ್ನು ಸಂಭ್ರಮಿಸಬೇಕು’ ರಾಷ್ಟ್ರೀಯತೆ ಎಲ್ಲವನ್ನೂ ಒಳಗೊಳ್ಳಬೇಕು. ವಿಶ್ವವೇ ಕುಟುಂಬ ಎಂಬ ಪರಿಕಲ್ಪನೆಯಂತೆ ರಾಷ್ಟ್ರೀಯತೆಯಲ್ಲಿ ವಿಶ್ವಾತ್ಮಕ ಮನೋಭಾವ ಅಡಕವಾಗಿರಬೇಕು. ರಾಷ್ಟ್ರೀಯತೆ ಒಂದು ಭಾಷೆ ಒಂದು ಧರ್ಮಕ್ಕೆ ಸೀಮಿತವಾಗಬಾರದು ಎಂದು ಆರ್‌ಎಸ್‌ಎಸ್‌ ಸಭೆಯಲ್ಲಿಯೇ ಅವರು ಹೇಳಿದ್ದರು.

Advertisement

ಆರಂಭದಲ್ಲಿ ಭಾರತ ಮುಕ್ತ ಸಮಾಜ ಹೊಂದಿತ್ತು. ಸಿಲ್ಕ್ ರೂಟ್‌ ಸಹಿತ ಎಲ್ಲ ಪ್ರಮುಖ ದಾರಿಗಳ ಮೂಲಕ ದೇಶಕ್ಕೆ ಸಂಪರ್ಕವಿತ್ತು. ವ್ಯಾಪಾರಿಗಳು ಮತ್ತು ಹಲವಾರು ಮಂದಿ ವಿದೇಶಿ ದಾಳಿಕೋರರು ಇಲ್ಲಿಗೆ ಆಗಮಿಸಿದ್ದರು. ಶತಮಾನಗಳ ಹಿಂದೆ ಆಗಮಿಸಿದ್ದ ವಿದೇಶಿ ಪ್ರವಾಸಿಗರು, ವಿವಿಧ ರೀತಿಯ ಆಡಳಿತ ವ್ಯವಸ್ಥೆ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದ್ದ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ ಎಂದು ಪ್ರಣಬ್‌ ಮುಖರ್ಜಿ ನೆನಪಿಸಿದ್ದರು.

ಈಗಿನ ಪರಿಸ್ಥಿತಿಯಲ್ಲಿ ಹಿಂಸೆಗೆ ವಿದಾಯ ಹೇಳಿ ಎಲ್ಲರನ್ನೂ ಒಳಗೊಳ್ಳುವಂಥ ವ್ಯವಸ್ಥೆಯತ್ತ ಹೊರಳಿಕೊಳ್ಳಬೇಕಾಗಿದೆ. ಎಲ್ಲ ರೀತಿಯ ಹಿಂಸೆ ಮತ್ತು ಭೀತಿಯ ವಾತಾವರಣದಿಂದ ನಮ್ಮ ಸಾರ್ವಜನಿಕ ವ್ಯವಸ್ಥೆಯನ್ನು ದೂರ ಇರಿಸಿಕೊಳ್ಳಬೇಕಾಗಿದೆ. ದ್ವೇಷದ ಮನೋಭಾವನೆ ರಾಷ್ಟ್ರೀಯತೆಯ ನಾಶಕ್ಕೆ ಕಾರಣವಾಗುತ್ತದೆ. ಅಸಹಿಷ್ಣುತೆ ನಮ್ಮ ರಾಷ್ಟ್ರೀಯ ಏಕತೆಗೆ ಧಕ್ಕೆ ತರುತ್ತದೆ. ಹಲವು ರಾಜವಂಶಗಳು, ಪ್ರಭಾವ ಶಾಲಿಯಾಗಿದ್ದ ರಾಜಕುಟುಂಬಗಳು ಭಾರತದ ಉತ್ತರ ಮತ್ತು ದಕ್ಷಿಣ ಭಾಗವನ್ನು ಆಳಿದ್ದವು.

ನಮ್ಮ ದೇಶದ ರಾಷ್ಟ್ರೀಯ ಏಕತೆ ವಿಚಾರ ಹಲವು ರೀತಿಯ ಸಮೀಕರಣ ಮತ್ತು ಸಮ್ಮಿಲನದ ಬಳಿಕ ರೂಪುಗೊಂಡಿದೆ. ಹಲವು ರೀತಿಯ ಸಂಸ್ಕೃತಿಗಳು ಮತ್ತು ನಂಬಿಕೆ ನಮ್ಮ ವ್ಯವಸ್ಥೆಯ ವಿಶೇಷವೇ ಆಗಿದೆ. ರಾಷ್ಟ್ರೀಯತೆಯ ಬಗ್ಗೆ ದೇಶದ ಮೊತ್ತ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಬರೆದ ʼಡಿಸ್ಕವರಿ ಆಫ್ ಇಂಡಿಯಾ‘ ಪುಸ್ತಕದಲ್ಲಿ ಉಲ್ಲೇಖವಾಗಿರುವ ಅಂಶವನ್ನು ಮುಖರ್ಜಿ ಅವರು ಉಲ್ಲೇಖೀಸುತ್ತಾ….
“ಹಿಂದೂ, ಮುಸ್ಲಿಂ, ಸಿಕ್ಖ್ ಮತ್ತು ಭಾರತದ ಇತರ ಯಾವುದೇ ಗುಂಪಿಗೆ ಸೇರ್ಪಡೆಗೊಂಡವನು ʼತಾನುʼ ಎಂಬ ಭಾವನೆಯಿಂದ ಹೊರಗೆ ಬಂದಾಗ ಮಾತ್ರ ರಾಷ್ಟ್ರೀಯತೆ ಎಂಬ ವಿಚಾರ ನಮ್ಮೆಲ್ಲರಲ್ಲಿ ಮೈಗೂಡುತ್ತದೆ’ ಎಂದು ನೆಹರೂ ಬರೆದಿದ್ದನ್ನು ನೆನಪಿಸಿ ಭಾಷಣ ಮುಂದುವರಿಸಿದ್ದರು.

ವಸುಧೈವ ಕುಟುಂಬಕಂ 
1,800 ವರ್ಷಗಳ ಕಾಲ ತಕ್ಷಶಿಲಾ, ನಲಂದಾ ಸೇರಿದಂತೆ ವಿಶ್ವಮಾನ್ಯ ವಿವಿಗಳು ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಮತ್ತು ಸಂಶೋಧಕರನ್ನು ಆಹ್ವಾನಿಸುತ್ತಿದ್ದವು. ನಮ್ಮ ದೇಶದ ರಾಷ್ಟ್ರೀಯತೆ ಎಂಬ ವಿಚಾರ ಏಕತೆಯಿಂದ ಉಂಟಾಗಿದೆ. ಶತಮಾನಗಳಿಂದಲೂ ಕೂಡ “ವಸುಧೈವ ಕುಟುಂಬಕಂʼ ಎಂಬ ತತ್ತ್ವದಲ್ಲಿ ನಂಬಿಕೆಯನ್ನು ಇರಿಸಿಕೊಂಡು ಬಂದಿದ್ದೇವೆ.

ಕ್ರಿಸ್ತಪೂರ್ವ ಆರನೇ ಶತಮಾನದಿಂದ 600 ವರ್ಷಗಳ ಕಾಲ ಮುಸ್ಲಿಂ ಅರಸರ ಆಳ್ವಿಕೆ ದೇಶದಲ್ಲಿತ್ತು. ಬಳಿಕ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತದ ನೇತೃತ್ವ ವಹಿಸಿಕೊಂಡಿತು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ದೇಶದ ಆಡಳಿತ ರಾಣಿಯ ನೇತೃತ್ವಕ್ಕೆ ಸಿಕ್ಕಿತ್ತು. ಹಲವಾರು ಆಡಳಿತಗಾರರು ಆಡಳಿತ ನಡೆಸಿದರೂ 5 ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇರುವ ನಮ್ಮ ನಾಗರಿಕತೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು ಎಂದು ಭರತ ಖಂಡದ ಐಹಿತ್ಯವನ್ನು ಸಭೆಯ ಮುಂದಿಟ್ಟಿದ್ದರು.

ಯಾರು ಪರಿಪೂರ್ಣ ಭಾರತೀಯ
ತ್ರಿಪುರಾದಿಂದ ದ್ವಾರಕೆಯವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ನಮ್ಮ ದೇಶದಲ್ಲಿ ಹಲವಾರು ಧರ್ಮಗಳಿವೆ ಎಂದು ಹೇಳುವುದೇ ರೋಮಾಂಚನ. ಲೆಕ್ಕವಿಲ್ಲದಷ್ಟು ಧರ್ಮಗಳು, ಜಾತಿಗಳು ಒಂದೇ ಸಂವಿಧಾನದ ಅಡಿಯಲ್ಲಿವೆ ಎಂದು ಹೇಳಿಕೊಳ್ಳುವುದೇ ಹೆಗ್ಗಳಿಕೆ. 122 ಭಾಷೆಗಳು, 1,600 ನುಡಿಕಟ್ಟು, 7 ಪ್ರಮುಖ ಧರ್ಮಗಳು, ಮೂರು ಪ್ರಮುಖ ಜನಾಂಗಗಳು ಒಂದೇ ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿಯೇ ಭಾರತೀಯ ಎಂದು ಕರೆಯಿಸಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ವಿವಿಧ ಅಭಿಪ್ರಾಯಗಳು ಇರುತ್ತವೆ. ಅದನ್ನು ನಿರಾಕರಿಸಲಾಗದು ಎನ್ನುವ ಮೂಲಕ ಬಹುತ್ವವನ್ನು ಸಾರಿದ್ದರು.

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ನೀಡಿದ ಭೇಟಿ ಹಾಗೂ ಅಲ್ಲಿ ಅವರು ಮಾಡಿದ ಭಾಷಣ ಭಾರತದ ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು.

Advertisement

Udayavani is now on Telegram. Click here to join our channel and stay updated with the latest news.

Next