Advertisement

ಪೊಲೀಸರು ಶಬರಿಮಲೆಯಲ್ಲಿ ಬೂಟು ಧರಿಸಬೇಕಂತೆ

12:30 AM Nov 28, 2018 | |

ಶಬರಿಮಲೆ ವಿವಾದದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮೊಂಡುತನ ಮಾಡಿ ಭಕ್ತರ ಮನ ನೋಯಿಸುತ್ತಿದ್ದಾರೆ ಎನ್ನುತ್ತಾರೆ ಕೇರಳದ ಮಾಜಿ ಗೃಹಸಚಿವ, ಕಾಂಗ್ರೆಸ್‌ ನಾಯಕ “ತಿರುವಂಚೂರ್‌ ರಾಧಾಕೃಷ್ಣನ್‌’. ಕೇರಳದ ಪ್ರವಾಹ ಪೀಡಿತರಿಗೆ ಪಿಣರಾಯಿ ಸರ್ಕಾರ ಒಂದಿನಿತೂ ಸಹಾಯ ಮಾಡಲಿಲ್ಲ. ಈ ವೈಫ‌ಲ್ಯವನ್ನು ಮುಚ್ಚಿಕೊಳ್ಳಲು ಶಬರಿಮಲೆ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎಂದೂ ಆರೋಪಿಸುವ ರಾಧಾಕೃಷ್ಣನ್‌, ಮಹಿಳೆಯರ ಮಂದಿರ ಪ್ರವೇಶ ವಿಚಾರದಲ್ಲಿ ಕೇರಳ ಕಾಂಗ್ರೆಸ್‌ನ ನಿಲುವೇನು ಎನ್ನುವುದನ್ನೂ ರೆಡಿಫ್ ಜಾಲತಾಣಕ್ಕೆ ನೀಡಿದ ಈ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ…

Advertisement

ಶಬರಿಮಲೆಯ ಸದ್ಯದ ಸ್ಥಿತಿಯ ಬಗ್ಗೆ ಕಾಂಗ್ರೆಸ್‌ ಮತ್ತು ವೈಯಕ್ತಿಕವಾಗಿ ನಿಮ್ಮ ನಿಲುವೇನು?
2016ರಲ್ಲಿ ನಾವು ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದೆವು. ನಮ್ಮ ಆಗಿನ ಮತ್ತು ಈಗಿನ ನಿಲುವು ಒಂದೇ ರೀತಿಯಿದೆ. 10-50ರ ವಯೋಮಾನದ ನಡುವಿನ ಮಹಿಳೆಯರಿಗೆ ಮಂದಿರ ಪ್ರವೇಶ ನಿಷಿದ್ಧ ಎನ್ನುವ 1991ರ ಹೈಕೋರ್ಟ್‌ ತೀರ್ಪನ್ನು ನಾವು ಬೆಂಬಲಿಸುತ್ತೇವೆ. ಈ ವಯೋಮಾನದ ಮಹಿಳೆಯರ ಮೇಲಿನ ನಿಷೇಧ ಮುಂದುವರಿಯಬೇಕು ಎಂಬುದೇ ನಮ್ಮ ನಿಲುವು.

ಈಗಷ್ಟೇ ನೀವು ಶಬರಿಮಲೆಯಿಂದ ಹಿಂದಿರುಗಿದ್ದೀರಿ. ಈಗ ಅಯ್ಯಪ್ಪನ ಸನ್ನಿಧಾನ ಯುದ್ಧಭೂಮಿಯಂತಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. ನಿಜಾನಾ?
 ಈಗ ಕೇರಳ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಹಠಮಾರಿ ನಿರ್ಧಾರಗಳು. ಇದಷ್ಟೇ ಅಲ್ಲ, ಅವರ ಕ್ಯಾಬಿನೆಟ್‌ನಲ್ಲೇ ಕೆಲ ಸಚಿವರಿಗೆ, ಉದಾಹರಣೆಗೆ, ಕಡಕಂಪಳ್ಳಿ ಸುರೇಂದ್ರನ್‌ ಮತ್ತು ಎ.ಕೆ.ಬಾಲನ್‌ ಶಬರಿಮಲೆ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದರು. ಆದರೆ ಒತ್ತಾಯಪೂರ್ವಕವಾಗಿ ಅವರ ನಿಲುವನ್ನು ಬದಲಿಸಲಾಗಿದೆ. ಆದರೆ ವಿಷಯ ಅದಲ್ಲ, ಪಿಣರಾಯಿ ವಿಜಯನ್‌ “ಎಲ್ಲಾ ವಯೋಮಾನದ ಹೆಣ್ಣುಮಕ್ಕಳ ದೇಗುಲ ಪ್ರವೇಶವನ್ನು ಬೆಂಬಲಿಸುತ್ತೇವೆ’ ಎಂದಾಗ ಕೇರಳದ ಮಹಿಳಾ ಭಕ್ತರು ರಸ್ತೆಗಿಳಿದು ಪ್ರತಿಭಟಿಸಲಿಲ್ಲ. ಕೇರಳದ ಹೆಣ್ಣುಮಕ್ಕಳು ತಾವು “ಕಾಯುವುದಕ್ಕೆ ಸಿದ್ಧವಿದ್ದೇವೆ’ ಎಂದು ಹೇಳಿದಾಗ ಪಿಣರಾಯಿ, ಬೇರೆ ಕಡೆಯಿಂದ ಮಹಿಳೆಯರನ್ನು ಶಬರಿಮಲೆಗೆ ಕರೆತಂದರು. ಆಗಲೇ ಪರಿಸ್ಥಿತಿ ಹದಗೆಟ್ಟದ್ದು. ಆತಂಕದ ವಿಚಾರವೆಂದರೆ, ಪೊಲೀಸರ ಮೂಲಕ ಕೆಲ ಮಹಿಳೆಯರನ್ನು ಶಬರಿಮಲೆಗೆ ಕರೆತಂದದ್ದು. ಹದಿನೈದಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ರೇಹಾನಾ ಫಾತಿಮಾ ಎನ್ನುವ ಹೆಣ್ಣುಮಗಳಿಗೆ 1000 ಪೊಲೀಸರ ಭದ್ರತೆ ಕೊಡಲಾಯಿತು. ಈ ಘಟನೆಯ ನಂತರವೇ ಪರಿಸ್ಥಿತಿ ಕೈಮೀರಿದ್ದು. 

ಪಿಣರಾಯಿ ವಿಜಯನ್‌ ಯಾವ ಪರಿ ಮೊಂಡುತನ ಮಾಡುತ್ತಿದ್ದಾರೆಂದರೆ, ತಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ. ರೇಹಾನಾ ಫಾತಿಮಾ ಬಂದ ನಂತರದಿಂದಲೇ ಕೇರಳದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ರಸ್ತೆಗಿಳಿದು “ಸ್ವಾಮಿಯೇ ಅಯ್ಯಪ್ಪ’ ಎಂದು ಪ್ರತಿಭಟಿಸಿದ್ದು. ಒಂದು ವೇಳೆ ಮುಖ್ಯಮಂತ್ರಿಗಳೇನಾದರೂ ಈ ವಿಷಯದಲ್ಲಿ ಹಠಮಾರಿತನ ಬಿಟ್ಟು ಸ್ವಲ್ಪ ಪ್ರಬುದ್ಧತೆ ತೋರಿದ್ದರೆ ಕೇರಳ ಈ ರೀತಿ ಕುದಿಯುತ್ತಲೇ ಇರಲಿಲ್ಲ. ಒಂದು ವೇಳೆ ಪಿಣರಾಯಿ ವಿಜಯನ್‌ ಇಂಥ ಏಕಪಕ್ಷೀಯ ನಿರಂಕುಶ ನಿರ್ಧಾರಗಳನ್ನು ಇತರೆ ಸಮುದಾಯಗಳ ವಿಚಾರದಲ್ಲಿ ತೆಗೆದುಕೊಂಡಿದ್ದರೆ, ಆ ಸಮುದಾಯದವರು ಒಪ್ಪಿಕೊಳ್ಳುತ್ತಿದ್ದರೇ? ಪಿಣರಾಯಿ ಇಂಥ ಪ್ರಯತ್ನ ಎಂದಾದರೂ ಮಾಡಿದ್ದಾರಾ? ಇಲ್ಲ, ಖಂಡಿತ ಮಾಡುವುದಿಲ್ಲ. ಸತ್ಯವೇನೆಂದರೆ, ಪ್ರತಿ ಸಮುದಾಯದಲ್ಲೂ ಅದರ ಸದಸ್ಯರು ಶತಮಾನಗಳಿಂದ ಆಚರಿಸುತ್ತಾ ಬಂದ ಆಚರಣೆಗಳು- ಸಂಪ್ರದಾಯಗಳು ಇರುತ್ತವೆ. ಹಿಂದೂ ಸಮುದಾಯದಲ್ಲಿನ ಈ ಶತಮಾನಗಳ ಆಚರಣೆಯನ್ನು ಕೊನೆಗೊಳಿಸಬೇಕು ಎಂಬ ಹಠವೇಕೆ ಪಿಣರಾಯಿ ವಿಜಯನ್‌ಗೆ?

ಈ ಘಟನೆಗಳು ಕೆಟ್ಟ ರಾಜಕೀಯಕ್ಕೆ ನಾಂದಿ ಹಾಡಿವೆ ಅನಿಸುತ್ತದಲ್ಲವೇ? 
ಹೌದು, ಮಾರ್ಕಿಸ್ಟ್‌ ಪಕ್ಷವನ್ನು ಟೀಕಿಸಿದರೆ, ಅವರು, ನಾವು ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ ಎನ್ನುತ್ತಾರೆ. ಅತ್ತ ಬಿಜೆಪಿ ಪಿಣರಾಯಿ ಸರ್ಕಾರವನ್ನು ಟೀಕಿಸಿದರೆ, “ಬಿಜೆಪಿ-ಕಾಂಗ್ರೆಸ್‌ ಜೊತೆಯಾಗಿವೆ’ ಎನ್ನುತ್ತಾರೆ. ಪಿಣರಾಯಿ ಹಳ್ಳಿಯ ಚಹಾದ ಅಂಗಡಿಯ ಮುಂದೆ ನಡೆಯುತ್ತದಲ್ಲ, ಅಂಥ ರಾಜಕೀಯ ಮಾಡುತ್ತಿದ್ದಾರೆ. ಯಾವಾಗಿಂದ  ಶಬರಿಮಲೆ ವಿವಾದ ಆರಂಭವಾಯಿತೋ, ಅಂದಿನಿಂದ ಕೇರಳದ ಒಂದೇ ಒಂದು ಕುಟುಂಬವೂ ಶಾಂತಿಯಿಂದ ನಿದ್ರೆ ಮಾಡಿಲ್ಲ. ನನ್ನ ಕ್ಷೇತ್ರದಿಂದಲೇ ನೂರಾರು ಹಿರಿಯ ಮಹಿಳೆಯರು ಫೋನ್‌ ಮಾಡಿ, ಪಿಣರಾಯಿ ಸರ್ಕಾರವನ್ನು ಬೆಂಬಲಿಸಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. 

Advertisement

ಮಹಿಳೆಯರಿಂದ ಇಂಥ ಪ್ರತಿಕ್ರಿಯೆಯನ್ನು ನೋಡಿ ನಿಮಗೆ ಆಶ್ಚರ್ಯವಾಯಿತೇ?
ನನಗಿಂತಲೂ ಹೆಚ್ಚಾಗಿ,  ಮಹಿಳಾ ಸಬಲೀಕರಣದ ಹೆಸರಲ್ಲಿ ಶಬರಿಮಲೆ ವಿಷಯವನ್ನು ನೋಡುತ್ತಿದ್ದವರಿಗೆ ಆಶ್ಚರ್ಯವಾಗಿದೆ. ಕೇರಳದ ಮಹಿಳೆಯರಿಂದ ಈ ರೀತಿಯ ಪ್ರತಿರೋಧ ಎದುರಾಗುತ್ತದೆ ಎಂದು ಇವರೆಲ್ಲ ನಿರೀಕ್ಷಿಸಿಯೇ ಇರಲಿಲ್ಲ. ಕಮ್ಯುನಿಸ್ಟ್‌ ಪಕ್ಷದ ಹಿರಿಯ ನಾಯಕಿ, ಕಣ್ಣೂರು ಸಂಸದೆ ಪಿ.ಕೆ. ಶ್ರೀಮತಿ ಕೇರಳದ ಮಹಿಳೆಯರಿಗೆ ಏನೆ‌ಂದು ಹೇಳಿದರೋ ಗಮನಿಸಿ: “ಮಹಿಳೆಯರು ತಮ್ಮ ಸಂಕೋಲೆಗಳಿಂದ ಬಂಧಮುಕ್ತಗೊಳ್ಳಲು ನಾವು(ಸಿಪಿಐ-ಎಂ) ನಿಮಗೆ ಅವಕಾಶ ಕೊಟ್ಟೆವು. ಆದರೆ ನಿಮಗೆ ಇದು ಬೇಕಿಲ್ಲ. ಕೇರಳದ ಮಹಿಳೆಯರಲ್ಲಿ ಜಾಗೃತಿ ಮೂಡಿಲ್ಲ ಎನ್ನುವುದು ನನಗೆ ಬೇಸರ ತರಿಸುತ್ತಿದೆ’ ಎಂದರು. ಇದೆಲ್ಲ ಏನನ್ನು ಸೂಚಿಸುತ್ತದೆ? ಕಮ್ಯುನಿಸ್ಟರು ಕೇರಳದ ಹೆಣ್ಣುಮಕ್ಕಳಿಂದ ಇಂಥದ್ದೊಂದು ಹಠಾತ್‌ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಅವರಿಗೆ ನಿಜಕ್ಕೂ ಶಾಕ್‌ ಆಗಿರಬೇಕು.  

ಯುಡಿಎಫ್ ಅಧಿಕಾರದಲ್ಲಿದ್ದಾಗ ನೀವು ಕೇರಳದ ಗೃಹ ಸಚಿವರಾಗಿದ್ದವರು. ಈಗ ನಾವು ಶಬರಿಮಲೆಯಲ್ಲಿ ಭಕ್ತರಿಗಿಂತಲೂ ಹೆಚ್ಚು ಪೊಲೀಸರಿರುವುದನ್ನು ನೋಡುತ್ತಿದ್ದೇವೆ. ಈಗ ಪೊಲೀಸರು ದೇವರ ಸನ್ನಿಧಾನದಲ್ಲಿ(ದೇಗುಲದ ಹೊರಗೆ) ಬೂಟು ಧರಿಸಿ ಓಡಾಡುತ್ತಿದ್ದಾರಂತೆ. ಹಿಂದೆ ಹೀಗೆಂದೂ ಆಗಿರಲಿಲ್ಲ. 
ಹಿಂದೆ ಪೊಲೀಸರಿದ್ದದ್ದು ಭಕ್ತಾದಿಗಳಿಗೆ ಸಹಾಯ ಮಾಡುವುದಕ್ಕೇ ಹೊರತು ಅವರನ್ನು ಹತ್ತಿಕ್ಕಲೋ ಅಥವಾ ಅವರ ಮೇಲೆ ದಾಳಿ ಮಾಡಲೋ ಅಲ್ಲ. ಶಬರಿಮಲೆಯ ವಿಶೇಷತೆಯೆಂದರೆ, ಅಲ್ಲಿಗೆ ಹೋಗುವವರೆಲ್ಲರನ್ನೂ “ಅಯ್ಯಪ್ಪ ಭಕ್ತರು’ ಎಂದೇ ಪರಿಗಣಿಸಲಾಗುತ್ತದೆ. ಅಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಸ್ವಾಮಿ ಎಂದು ಸಂಬೋಧಿಸುತ್ತಾರೆ. ಜನರು ಪೊಲೀಸರನ್ನು “ಸ್ವಾಮಿ’ ಎನ್ನುತ್ತಾರೆ. ಇನ್ನು ಪೊಲೀಸರೂ ಕೂಡ ಪರಸ್ಪರರನ್ನು “ಸ್ವಾಮಿ’ ಎಂದು ಕರೆದುಕೊಳುತ್ತಿದ್ದರು. ಕಿರಿಯ ಅಧಿಕಾರಿ ಅಥವಾ ಕಾನ್ಸ್‌ಟೆಬಲ್‌ ಒಬ್ಬ ಉನ್ನತ ದರ್ಜೆಯ ಪೊಲೀಸ್‌ ಅಧಿಕಾರಿಗೆ “ಸ್ವಾಮಿ’ ಎನ್ನುತ್ತಿದ್ದ. ಅಲ್ಲಿ ಪೊಲೀಸರೆಂದಿಗೂ ಬೂಟು ಅಥವಾ ಕ್ಯಾಪ್‌ ಧರಿಸುತ್ತಿರಲಿಲ್ಲ. ಇನ್‌ಶರ್ಟ್‌ ಮಾಡುತ್ತಿರಲಿಲ್ಲ. ಕಿರಿಯ ಅಧಿಕಾರಿಗಳು 
ಹಿರಿಯ ಅಧಿಕಾರಿಗಳಿಗೆ ಸಲ್ಯೂಟ್‌ ಮಾಡುತ್ತಿರಲಿಲ್ಲ. ಏಕೆಂದರೆ ಅಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ “ಸ್ವಾಮಿ ಅಯ್ಯಪ್ಪನ್‌’ ಆಗಿರುತ್ತಿದ್ದ. 

ಆದರೆ  ಈಗ ಪೊಲೀಸರಿಗೆ ಕಳುಹಿಸಲಾದ ಹೊಸ ಸುತ್ತೋಲೆಯಲ್ಲಿ  ಎಲ್ಲರೂ ಕ್ಯಾಪ್‌ ಮತ್ತು ಬೂಟು ಧರಿಸಬೇಕು ಮತ್ತು ಕಿರಿಯರು ಸೀನಿಯರ್‌ ಅಧಿಕಾರಿಗಳಿಗೆ ಸರ್‌ ಅನ್ನಬೇಕು, ಸ್ವಾಮಿ ಅನ್ನಬಾರದು’ ಎಂದು ಹೇಳಲಾಗಿದೆ. ಹಿಂದೆ ಪೊಲೀಸರು ಅಯ್ಯಪ್ಪನ ಪರವಾಗಿದ್ದರು, ಈಗ ಅಯ್ಯಪ್ಪ ವಿರೋಧಿಗಳೇ ತುಂಬಿದ್ದಾರೆ. ಭಕ್ತರ ಪರವಾಗಿ ಇರಬೇಕಿದ್ದ ಪೊಲೀಸರು ಇಂದು “ಇರುಮುಡಿ’ ಕಟ್ಟಿಕೊಂಡವರನ್ನು ಕ್ರಿಮಿನಲ್‌ಗ‌ಳಂತೆ ನೋಡುತ್ತಿದ್ದಾರೆ. ಈ ರೀತಿಯ ವರ್ತನೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. 

ಮಕರ ವಿಳಕ್ಕು ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸೇರುವ ಧಾರ್ಮಿಕ ಪ್ರದೇಶದಲ್ಲಿ ಸೆಕ್ಷನ್‌ 144ನ್ನು ಘೋಷಿಸಬಹುದೇ?
ಶಬರಿಮಲೆ ಹುಲಿ ರಕ್ಷಿತಾರಣ್ಯ ಪ್ರದೇಶ. ದೇವರ ಸನ್ನಿಧಾನ ಕೇವಲ ಹನ್ನೆರಡೂವರೆ ಎಕರೆಗಳಷ್ಟೇ ಇದೆ. ಈ ಚಿಕ್ಕಜಾಗದಲ್ಲೇ 15,500 ಪೊಲೀಸರನ್ನು ನಿಯೋಜಿಸಲಾಗಿದೆ. ಉಳಿದ ಬೃಹತ್‌ ಸಂರಕ್ಷಿತ ಪ್ರದೇಶದ ತುಂಬೆಲ್ಲ ಕಾಡುಪ್ರಾಣಿಗಳಿವೆ. ಪ್ರಪಂಚದಲ್ಲೇ ವನ್ಯಜೀವಿ ಅಭಯಾರಣ್ಯವೊಂದರಲ್ಲಿ ಸೆಕ್ಷನ್‌ 144ನ್ನು ಹೇರಿದ ಮೊದಲ ಸರ್ಕಾರವಿದು. ಹುಲಿಗಳಿಗೆ ಸೆಕ್ಷನ್‌ 144 ಅಂದರೆ ಏನು ಅಂತ ಗೊತ್ತು ಎಂದು ಭಾವಿಸಿದೆಯೇ ಪಿಣರಾಯಿ ಸರ್ಕಾರ? ಶಬರಿಮಲೆ ವಿಚಾರದಲ್ಲಿ ಈ ಸರ್ಕಾರಕ್ಕೆ ಯಾವ ಪರಿ ದ್ವೇಷವಿದೆ ಎನ್ನುವುದನ್ನು ಇದು ತೋರಿಸುತ್ತದೆ. 

ಯಾಕೆ ಪಿಣರಾಯಿ ಈ ತೀರ್ಪನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ? 
ನನಗಿಲ್ಲಿ ಎರಡು ಕಾರಣಗಳು ಗೋಚರಿಸುತ್ತಿವೆ. ಮೊದಲನೆಯದಾಗಿ, ಇತ್ತೀಚಿನ ಪ್ರವಾಹದಲ್ಲಿ ಕೇರಳದಲ್ಲಿ 6 ಲಕ್ಷ ಜನರು ಮನೆ ಕಳೆದುಕೊಂಡಿದ್ದಾರೆ. ಪ್ರವಾಹದ ಸಮಯದಲ್ಲಿ, ಮನೆ ಕಳೆದುಕೊಂಡವರಿಗೆ ತಲಾ 10 ಸಾವಿರ ರೂಪಾಯಿ ಕೊಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಕೆಲವೇ ಕೆಲವರಿಗೆ ತುಸು ಹಣ ಸಿಕ್ಕಿತು. ಅದೂ ಕೂಡ, ಕಮ್ಯುನಿಸ್ಟ್‌ ಪಕ್ಷಕ್ಕೆ ಸಂಬಂಧಿಸಿದವರಿಗೆ ಮಾತ್ರ ಸಹಾಯ ದೊರೆತದ್ದು.  ಪುನರ್ವಸತಿ ಎನ್ನುವುದು ನಾಟಕವಾಗಿ ಬದಲಾಗಿದೆ. ಈಗ ಹಠಾತ್ತಾಗಿ, ಶಬರಿಮಲೆ ವಿಷಯ ಮುನ್ನೆಲೆಗೆ ಬಂದದ್ದೇ ಯಾರೂ ಕೂಡ ಸರ್ಕಾರ ನೆರೆಯ ಸಮಯದಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಮಾತನಾಡುತ್ತಿಲ್ಲ. ಶಬರಿಮಲೆ ವಿಚಾರ ಬಳಸಿಕೊಂಡು ಪಕ್ಷದ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಪಿಣರಾಯಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಇತರೆ ನಾಯಕರೊಂದಿಗೆ ನಾನು 138 ಕಿಲೋಮೀಟರ್‌ ಕಾಲ್ನಡಿಗೆ ಮಾಡಿ, ಸಾವಿರಾರು ಜನರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಬೇರೆ ಎಲ್ಲೂ ಯಾವೊಬ್ಬ ಪ್ರಖ್ಯಾತ ನಾಯಕ ಕೂಡ ಇಂಥ ಕುಖ್ಯಾತ ನಿರ್ಧಾರ ತೆಗೆದುಕೊಳ್ಳಲಾರ. 

ಕೇಂದ್ರ ಸರ್ಕಾರ “ಕಾನೂನು ಮತ್ತು ಸುವ್ಯವಸ್ಥೆ’ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ಈ ವಿಷಯದಲ್ಲಿ ತಾನು ಹಸ್ತಕ್ಷೇಪ ಮಾಡುವಂತಿಲ್ಲ ಎನ್ನುತ್ತಿದೆಯಲ್ಲ? 
ಧರ್ಮವೆನ್ನುವುದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ವಿಷಯವಲ್ಲ. ಕೇಂದ್ರ ಸರ್ಕಾರದ “ರೆಶಿಡುವರಿ ಪವರ್‌’ ಮತ್ತು “ಕನ್ಕರೆಂಟ್‌ ಲಿಸ್ಟ್‌’ಗೆ ಒಳಪಟ್ಟ ವಿಷಯ. ನಮ್ಮ ಸಂವಿಧಾನದ ಪ್ರಕಾರ, ಆರ್ಟಿಕಲ್‌ 248ರ ಅಡಿಯಲ್ಲಿ ಭಾರತ ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಬ ಹುದು.  ಹೀಗಾಗಿ, ಹಿಂದಿನ ಹೈಕೋರ್ಟ್‌ ಆದೇಶದ ಆಧಾರದ ಮೇಲೆ ಆಧ್ಯಾದೇಶ ಹೊರಡಿಸಿ, ಮಂದಿರವನ್ನು ಮತ್ತು ಭಕ್ತರನ್ನು ಪ್ರಸಕ್ತ ಸಮಸ್ಯೆಯಿಂದ ಕಾಪಾಡಬಹುದು. ಸಂಸತ್‌ ಅಧಿವೇಶನದಲ್ಲಿ ಇದನ್ನು ಕಾನೂನಾಗಿ ಬದಲಿಸಬಹುದು. ಒಂದು ವೇಳೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಏನೂ ಮಾಡುವುದಿಲ್ಲ ಎಂದರೆ, ನಮಗೆ ಪ್ರತಿಭಟಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ.  ಆದರೆ ನಮ್ಮ ಸರ್ಕಾರ ಕೇರಳದಲ್ಲಿ ಅಧಿಕಾರಕ್ಕೆ ಬಂದಿತೆಂದರೆ, ನಾವು ಈ ಕೆಲಸ ಮಾಡುತ್ತೇವೆ. ಕಮ್ಯುನಿಸ್ಟರು ಈ ಭೂಮಿ ಇರುವವರೆಗೂ ಕೇರಳವನ್ನು ಆಳುತ್ತಾರೆ ಎಂದೇನೂ ಇಲ್ಲವಲ್ಲ?!

Advertisement

Udayavani is now on Telegram. Click here to join our channel and stay updated with the latest news.

Next