Advertisement

‘Nafrat Ki Dukaan..; ಅಮೆರಿಕ ಘಟನೆ ಕುರಿತು ರಾಹುಲ್ ವಿರುದ್ಧ ಮೋದಿ ಆಕ್ರೋಶ

11:55 PM Sep 14, 2024 | Team Udayavani |

ದೋಡಾ/ ಕುರುಕ್ಷೇತ್ರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರದ ದೋಡಾ ಮತ್ತು ಹರಿಯಾಣದ ಕುರುಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

Advertisement

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಆಕ್ರೋಶ ಹೊರ ಹಾಕಿದರು.

ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ತಂಡದಿಂದ ಭಾರತೀಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆದ ಘಟನೆಯನ್ನು ಪ್ರಧಾನಿ ಮೋದಿ ನೆನಪಿಸಿಕೊಂಡು ”ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ)ನಲ್ಲಿ ನಫ್ರತ್ (ದ್ವೇಷ) ಮಾರಾಟ ಮಾಡಿದ್ದಾರೆ” ಎಂದು ತಿರುಗೇಟು ನೀಡಿದರು.

ಪತ್ರಕರ್ತನ ಮೇಲೆ ಆಗಿದ್ದೇನು?
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರನ್ನು ಪ್ರಶ್ನಿಸಿದ ನಂತರ ರಾಹುಲ್ ಗಾಂಧಿ ತಂಡ ತನ್ನನ್ನು ಅಮಾನುಷವಾಗಿ ನಡೆಸಿಕೊಂಡಿದೆ ಎಂದು ಭಾರತೀಯ ಮೂಲದ ಪತ್ರಕರ್ತ ರೋಹಿತ್ ಶರ್ಮ ಹೇಳಿದ್ದಾರೆ. ಪಿತ್ರೋಡಾ ಅವರೊಂದಿಗಿನ ಯಶಸ್ವಿ ಸಂದರ್ಶನದ ನಂತರ, ಕಾಂಗ್ರೆಸ್ ಬೆಂಬಲಿಗರ ಗುಂಪು ರೋಹಿತ್ ಶರ್ಮ ಅವರ ಫೋನ್ ಬಲವಂತವಾಗಿ ತೆಗೆದುಕೊಂಡು ಕೋಣೆಯಲ್ಲಿ ಅಕ್ರಮ ಬಂಧನದಲ್ಲಿಟ್ಟಿತ್ತು. ರಾಹುಲ್ ಗಾಂಧಿಯವರು ಡಲ್ಲಾಸ್‌ಗೆ ಆಗಮಿಸುವ ಮೊದಲು ಸಂದರ್ಶನವನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದರು ಎಂದು ಶರ್ಮಾ ಹೇಳಿಕೊಂಡಿದ್ದಾರೆ.ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಖರ್ಗೆ ಹೇಳಿಕೆಗೆ ಪ್ರಧಾನಿ ತಿರುಗೇಟು
ಜಮ್ಮು ಮತ್ತು ಕಾಶ್ಮೀರದಲ್ಲಿ ದೋಡಾ ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರಧಾನಿ ತಿರುಗೇಟು ನೀಡಿದರು. ಜನರನ್ನು ಜೈಲಿಗೆ ಹಾಕಲೋ ಅಥವಾ ಜನರಿಗಾಗಿ ಕೆಲಸ ಮಾಡಲು ಕೇಂದ್ರದಲ್ಲಿ ಸರಕಾರ ರಚಿಸಲು ಬಯಸುತ್ತೀರಾ ಎಂದು ಪ್ರಧಾನಿ ಕಾಂಗ್ರೆಸ್‌ಗೆ ಪ್ರಶ್ನಿಸಿದರು. “ನಾವು ಜನರ ಕಲ್ಯಾಣಕ್ಕಾಗಿ ಸರ್ಕಾರವನ್ನು ನಡೆಸುತ್ತೇವೆ. ಅವರು (ಕಾಂಗ್ರೆಸ್) ಯಾವುದೇ ಅಜೆಂಡಾ ಇಲ್ಲದಿದ್ದಾಗ ಜನರನ್ನು ಜೈಲಿಗೆ ಕಳುಹಿಸಲು ಬಯಸುತ್ತಾರೆ” ಎಂದು ಕಿಡಿ ಕಾರಿದರು.

Advertisement

ಅನಂತ್‌ನಾಗ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಖರ್ಗೆ, ‘ಕಾಂಗ್ರೆಸ್ ಇನ್ನೂ 20 ಸೀಟುಗಳನ್ನು ಹೆಚ್ಚಿಗೆ ಗೆದ್ದಿದ್ದರೆ ಅವರೆಲ್ಲ ಜೈಲು ಪಾಲಾಗುತ್ತಿದ್ದರು’ ಎಂದು ಹೇಳುವ ಮೂಲಕ ರಾಜಕೀಯ ಕಿಚ್ಚನ್ನು ಹೊತ್ತಿಸಿದ್ದರು.

ಅಭಿವೃದ್ಧಿಯ ಹೊಳೆ

”ಬಿಜೆಪಿ ಸರಕಾರ ಬಡವರಿಗಾಗಿ ಮೂರು ಕೋಟಿ ಪಕ್ಕಾ ಮನೆಗಳನ್ನೂ ಮಂಜೂರು ಮಾಡಿದೆ. ಇದು ಬಡವರ ಕನಸುಗಳ ಲಾಂಚ್ ಪ್ಯಾಡ್ ಆಗಲಿದೆ. ದೇಶದಲ್ಲಿ ಮೂರು ಕೋಟಿ ಲಖ್ ಪತಿ ದೀದಿಗಳನ್ನು ಸೃಷ್ಟಿಸಲು ನಾವು ಶ್ರಮಿಸುತ್ತಿದ್ದೇವೆ” ಎಂದು ಪ್ರಧಾನಿ ಕುರುಕ್ಷೇತ್ರದಲ್ಲಿ ಹೇಳಿದರು.

”ಕಾಂಗ್ರೆಸ್ ಸರಕಾರದ ಆ ಅವಧಿಯನ್ನು ನೋಡಿದ್ದೇವೆ.ಅಭಿವೃದ್ಧಿ ಹಣ ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿತ್ತು.ಅಷ್ಟೇ ಅಲ್ಲ, ಆ ಹಣ ಯಾರ ಜೇಬಿಗೆ ಹೋಗಿದೆ ಎಂಬುದು ಹರಿಯಾಣದ ಪ್ರತಿ ಮಗುವಿಗೆ ಗೊತ್ತು. ಬಿಜೆಪಿ ಇಡೀ ಹರಿಯಾಣವನ್ನು ಅಭಿವೃದ್ಧಿಯ ಹೊಳೆಯೊಂದಿಗೆ ಜೋಡಿಸಿದೆ” ಎಂದರು.

ಕರ್ನಾಟಕದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತ
”ರೈತರ ಪರವಾಗಿ ಕಾಂಗ್ರೆಸ್ ದೊಡ್ಡ ಮಾತುಗಳನ್ನಾಡುತ್ತದೆ.ದೊಡ್ಡ ಕನಸುಗಳನ್ನು ತೋರಿಸುತ್ತದೆ. ನಿಜ ಹೇಳಬೇಕೆಂದರೆ ಇದು ಸುಳ್ಳೇ ಹೊರತು ಬೇರೇನೂ ಅಲ್ಲ.ಕಾಂಗ್ರೆಸ್‌ಗೆ ಅಧಿಕಾರವಿದ್ದರೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ರೈತ ಯೋಜನೆಗಳನ್ನು ಏಕೆ ಜಾರಿಗೊಳಿಸುತ್ತಿಲ್ಲ? ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಅತ್ಯಂತ ಅಪ್ರಾಮಾಣಿಕ ಪಕ್ಷವಾಗಿದೆ” ಎಂದರು.

”ಕಾಂಗ್ರೆಸ್ ಪಕ್ಷವು ಒಂದೇ ನೀತಿಯನ್ನು ಹೊಂದಿದೆ. ಚುನಾವಣೆಯಲ್ಲಿ ಗೆಲ್ಲಲು ಸಾರ್ವಜನಿಕ ಖಜಾನೆಯನ್ನು ಖಾಲಿ ಮಾಡಿ.ಅದೇ ರೀತಿ ಪಂಜಾಬಿನ ಸ್ಥಿತಿ ನೋಡಿ ಏನು ಮಾಡಿದ್ದಾರೆ”ಎಂದು ಪ್ರಶ್ನಿಸಿದರು.

”ನಾನು ಕಾಂಗ್ರೆಸ್ಸಿಗರನ್ನು ಕೇಳುತ್ತೇನೆ… ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎಂಎಸ್‌ಪಿ ದರದಲ್ಲಿ ಎಷ್ಟು ಬೆಳೆಗಳನ್ನು ಖರೀದಿಸುತ್ತಿದ್ದಾರೆ? ಅಲ್ಲಿನ ರೈತರಿಗೆ ಎಂಎಸ್‌ಪಿ ಎಷ್ಟು ನೀಡಲಾಗಿದೆ? ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತನ ಹೊರೆ ಹೊರಲು ಹಲವು ಪ್ರಯತ್ನ ನಡೆಸಿದೆ” ಎಂದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಗಣಪತಿ ಮೂರ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್‌ ಆಡಳಿತದಲ್ಲಿ ಗಣಪತಿಯೂ ಜೈಲು ಸೇರುವಂತಾಗಿದೆ ಎಂದು ಪ್ರಧಾನಿ ಕಿಡಿ ಕಾರಿದರು.

”ಕಾಂಗ್ರೆಸ್ ಕೇವಲ ರೈತರಿಗೆ ಮಾತ್ರವಲ್ಲ ದೇಶವನ್ನು ರಕ್ಷಿಸುವ ಸೈನಿಕರಿಗೂ ದ್ರೋಹ ಬಗೆದಿದೆ.ಮಾಜಿ ಸೈನಿಕರಿಗೆ ಒನ್ ರ‍್ಯಾಂಕ್ ಒನ್ ಪೆನ್ಷನ್ ಜಾರಿಗೊಳಿಸಿದ್ದು ಬಿಜೆಪಿ ಸರ್ಕಾರ” ಎಂದರು.

”ಆರ್ಟಿಕಲ್ 370 ಮರುಸ್ಥಾಪನೆಯನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ.ಅದೇನೆಂದರೆ, ಕೆಲವು ವರ್ಷಗಳ ಹಿಂದೆ, ಹರಿಯಾಣದ ನಮ್ಮ ವೀರ ಸೈನಿಕರ ಮೇಲೆ ಕಲ್ಲು ಎಸೆಯಲ್ಪಟ್ಟ ಯುಗವನ್ನು ಮರಳಿ ತರಲು ಕಾಂಗ್ರೆಸ್ ಬಯಸಿದೆ. ಆ ಭಯೋತ್ಪಾದನೆ ಮತ್ತು ಪ್ರತ್ಯೇಕತೆಯ ಅವಧಿಯನ್ನು ಮರಳಿ ತರಲು ಕಾಂಗ್ರೆಸ್ ಬಯಸುತ್ತದೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next