Advertisement

ಗ್ರಾ.ಪಂಚಾಯ್ತಿ ನೌಕರರ ವೇತನ ವಿಳಂಬ

06:00 AM Jun 20, 2018 | Team Udayavani |

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ಸಾವಿರ ನೌಕರರ ವೇತನ ವಿಚಾರದಲ್ಲಿ “ದೇವರು ವರ ಕೊಟ್ಟರೂ ಪೂಜಾರಿ ಕೊಟ್ಟಿಲ್ಲ’ ಎಂಬಂತಾಗಿದೆ. ಸರ್ಕಾರದಿಂದಲೇ ವೇತನ ಕೊಡಬೇಕು ಎಂದು ತೀರ್ಮಾನವಾಗಿ, ಅಧಿಕೃತ ಆದೇಶ ಹೊರಡಿಸಿದ್ದರೂ ತಾ.ಪಂ ಮಟ್ಟದಲ್ಲಿ ಕೆಳ ಹಂತದ ಅಧಿಕಾರಿಗಳು ತಗಾದೆ ತೆಗೆಯುತ್ತಿರುವುದು ವಿಳಂಬಕ್ಕೆ ಕಾರಣವಾಗುತ್ತಿದೆ.
ಸರ್ಕಾರದಿಂದ ವೇತನ ಸಿಗಬೇಕಾದರೆ ನೌಕರರ ಮಾಹಿತಿಯನ್ನು ಪಂಚತಂತ್ರದ “ಎಲೆಕ್ಟ್ರಾನಿಕ್‌ ಫ‌ಂಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ (ಇ-ಎಫ್ಎಂಎಸ್‌) ಸಾಫ್ಟ್ ವೇರ್‌ಗೆ ಸೇರ್ಪಡೆ ಆಗಬೇಕೆನ್ನುವುದು ವೇತನ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ತಾಲೂಕ
ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇಲ್ಲದ ದಾಖಲೆಗಳನ್ನು ಕೇಳುತ್ತಿದ್ದು, ಇದರಿಂದಾಗಿ 17 ಸಾವಿರ ನೌಕರರು ಇ-ಎಫ್ಎಂಎಸ್‌ನಿಂದ ಹೊರ ಗುಳಿದಿದ್ದಾರೆ. ಹಾಗಾಗಿ ಸರ್ಕಾರದ ಮಟ್ಟದಲ್ಲಿ ಆದೇಶವಾಗಿದ್ದರೂ, ಕೆಳಮಟ್ಟದಲ್ಲಿ ನೌಕರರು 
ವೇತನದಿಂದ ವಂಚಿತರಾಗುವಂತಾಗಿದೆ.

Advertisement

ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ 51,114 ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿಸಬೇಕು ಎಂದು 2017ರ ಆಗಸ್ಟ್‌ ತಿಂಗಳಲ್ಲಿ ಆದೇಶವಾಗಿತ್ತು. ಅದಕ್ಕಾಗಿ ಎಲ್ಲ ನೌಕರರ ಸೇವಾ ಮಾಹಿತಿ ಮತ್ತು ದಾಖಲೆಗಳನ್ನು ಇ-ಎಫ್ಎಂಎಸ್‌ಗೆ
ಸೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಶೇ.65ರಷ್ಟು ಅಂದರೆ, 44,491 ನೌಕರರ ವಿವರಗಳನ್ನು ಇ-ಎಫ್ಎಂಎಸ್‌ಗೆ ಸೇರಿಸಲಾಗಿದೆ. ಆದರೆ, 17 ಸಾವಿರ ನೌಕರರ ಶೈಕ್ಷಣಿಕ ಪ್ರಮಾಣಪತ್ರ, ಜನ್ಮದಿನಾಂಕ ಪ್ರಮಾಣಪತ್ರಗಳನ್ನು
ತಾ.ಪಂ ಅಧಿಕಾರಿಗಳು ಕೇಳುತ್ತಿದ್ದಾರೆ. ಈ ದಾಖಲೆಗಳು ಸಲ್ಲಿಸದೇ ಇದ್ದ ಕಾರಣಕ್ಕೆ ಅವರನ್ನು ಇ-ಎಫ್ಎಂಎಸ್‌ನಿಂದ ಹೊರಗಿಡಲಾಗಿದೆ. 

ನ್ಯಾಯಕ್ಕಾಗಿ ನೌಕರರ ಒತ್ತಾಯ: ಈ 17 ಸಾವಿರ ನೌಕರರಲ್ಲಿ ಸ್ವತ್ಛತಾಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಲ್ಲಿ ಬಹಳಷ್ಟು ಜನ ಕನಿಷ್ಠ ವಿದ್ಯಾರ್ಹತೆ  ಹೊಂದಿಲ್ಲ. ಅಷ್ಟೇ ಅಲ್ಲ, ಜನ್ಮದಿನಾಂಕ ದಾಖಲೆಗಳು ಇಲ್ಲದವರಿದ್ದಾರೆ. ಈ ಕಾರಣದಿಂದ ಇ-ಎಫ್
ಎಂಎಸ್‌ನಿಂದ ಹೊರಗಿಟ್ಟರೆ ಆ ನೌಕರರಿಗೆ ಅನ್ಯಾಯವಾಗಲಿ ದೆ. ದಾಖಲೆಗಳನ್ನು ಸಲ್ಲಿಸದೇ ಇರುವ ನೌಕರರಿಗೆ ಗ್ರಾ.ಪಂ.ಗಳಿಂದಲೇ ವೇತನ ನೀಡುವ ಪ್ರಸ್ತಾವನೆ ನೌಕರ ವಿರೋಧಿ ಮತ್ತು ಶೋಷಣೆಯ ಅಸ್ತ್ರವಾಗಲಿದೆ. ಆದ್ದರಿಂದ 2017ರ ಅ.31ರ ಹಿಂದೆ ನೇಮಕಗೊಂಡ ಎಲ್ಲ ನೌಕರರಿಗೆ ಸರ್ಕಾರದಿಂದಲೇ ವೇತನ ಕೊಡಿಸಬೇಕು. 2018ರ ಜೂ.5ರಂದು ನಡೆದ ಸಭೆ ಬಳಿಕ ಗೊಂದಲ ನಿರ್ಮಾಣವಾಗಿದ್ದು, ತಕ್ಷಣ ಇದನ್ನು ಬಗೆಹರಿಸಿ 17 ಸಾವಿರ ನೌಕರರಿಗೆ ಆಗುವ ಅನ್ಯಾಯ ತಡೆಯಬೇಕು ಎಂದು ಗ್ರಾ.ಪಂ. ನೌಕರರು ಒತ್ತಾಯಿಸುತ್ತಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ವಿಳಂಬ: ರಾಜ್ಯದ 6,022 ಗ್ರಾಮ ಪಂಚಾಯಿತಿಗಳಲ್ಲಿ ಬಿಲ್‌ ಕಲೆಕ್ಟರ್‌, ಕ್ಲರ್ಕ್‌/ ಡಾಟಾ ಎಂಟ್ರಿ ಆಪರೇಟರ್‌, ವಾಟರ್‌ ಮೆನ್‌/ಪಂಪ್‌ ಆಪರೇಟರ್‌, ಜವಾನ ಹಾಗೂ ಸ್ವತ್ಛತಾಗಾರರು ಸೇರಿ ಒಟ್ಟು 51,114 ನೌಕರರು ಇದ್ದಾರೆ. ಈ ನೌಕರರಿಗೆ ಕಾರ್ಮಿಕ ಇಲಾಖೆ ಅಧಿಸೂಚನೆಯಂತೆ ಕನಿಷ್ಠ ವೇತನ, ಭತ್ಯೆ ನೀಡಬೇಕಾದರೆ ವಾರ್ಷಿಕ 829 ಕೋಟಿ ರೂ. ಅನುದಾನ ಬೇಕಾಗುತ್ತದೆ. ಇದರಲ್ಲಿ ಶಾಸನಬದ್ಧ ಅನುದಾನದಲ್ಲಿ ಶೇ.40ರಷ್ಟು ಅಂದರೆ, 255 ಕೋಟಿ ರೂ. ವೇತನಕ್ಕಾಗಿ ಮೀಸಲಿಡಲಾಗುತ್ತಿದೆ. ಈಗ ಹೆಚ್ಚುವರಿಯಾಗಿ 574.62 ಕೋಟಿ ರೂ. ಅನುದಾನ ಬೇಕಾಗುತ್ತದೆ. ಸರ್ಕಾರದಿಂದಲೇ ವೇತನ ನೀಡಬೇಕು ಎಂಬುದು ಗ್ರಾಮ ಪಂಚಾಯಿತಿ ನೌಕರರ 30 ವರ್ಷಗಳ ಹೋರಾಟವಾಗಿತ್ತು. ಕಳೆದ ವರ್ಷ ಇದಕ್ಕೆ ಮುಕ್ತಿ ಸಿಕ್ಕಿತು. ಸರ್ಕಾರದ ಖಜಾನೆಯಿಂದಲೇ ವೇತನ ಪಾವತಿಸಲು ಸರ್ಕಾರ ಒಪ್ಪಿಕೊಂಡಿತ್ತು. ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಸಹ ಜಮೆ ಆಗಿದೆ. ವೇತನ ಬಿಡುಗಡೆಗೆ ಆದೇಶವಾಗಬೇಕಿದೆಯಷ್ಟೆ. ಆದರೆ, ಇ-ಎಫ್ ಎಂಎಸ್‌ನಿಂದ ಹೊರಗುಳಿದಿರುವ 17 ಸಾವಿರ ನೌಕರರ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ವೇತನ ಬಟವಾಡೆ ಮಾಡಬೇಕು ಎಂದು ನೌಕರರ ಒತ್ತಾಯವಾಗಿದೆ.

ಜೂ.20ರಂದು ರಾಜ್ಯಾದ್ಯಂತ ಹೋರಾಟ
17 ಸಾವಿರ ನೌಕರರ ವೇತನದ ಗೊಂದಲ ನಿವಾರಣೆ ಮಾಡಬೇಕು. ಅದೇ ರೀತಿ ಗ್ರಾಮ ಪಂಚಾಯಿತಿಗಳು ಮತ್ತು ಅಲ್ಲಿನ ನೌಕರರ
ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಜೂ.20ರಂದು ರಾಜ್ಯದ ಎಲ್ಲ ತಾಲೂಕು ಪಂಚಾಯಿತಿ ಇಒ ಕಚೇರಿಗಳ ಮುಂದೆ ಧರಣಿ
ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ “ಉದಯವಾಣಿ’ಗೆ
ತಿಳಿಸಿದ್ದಾರೆ.

Advertisement

● ರಫಿಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next