Advertisement

Tour Circle: ಕೆಮ್ಮಣ್ಣ ಕಣಿವೆಯ ಶಿಲ್ಪಕಲಾಕೇಂದ್ರ ಪಟ್ಟದಕಲ್ಲು

11:55 AM Mar 12, 2024 | Team Udayavani |

ಭಾರತದ ಕಲಾತ್ಮಕ ಪರಂಪರೆಗೆ ಅಮೂಲ್ಯ ಕೊಡುಗೆಗಳನ್ನು ಇತ್ತವರು ಚಾಲುಕ್ಯರು. ಚಾಲುಕ್ಯರ ಶಿಲ್ಪಕಲೆಯ ಪ್ರಯೋಗಶಾಲೆಯಾದದ್ದು ಪಟ್ಟದಕಲ್ಲು. ಪಟ್ಟದ ಕಲ್ಲಿನ ದೇವಾಲಯಗಳ ಸಾಲು ಅಂತಾರಾಷ್ಟ್ರೀಯ ಸಂರಕ್ಷಣೆಗೆ ಒಳಪಟ್ಟಿವೆ. ಯುನೆಸ್ಕೋ ಪಾರಂಪರಿಕ ಕಟ್ಟಗಳ ಪಟ್ಟಿಯಲ್ಲಿ ಕರ್ನಾಟಕದಿಂದ ಸ್ಥಾನಪಡೆದ ಕೆಲವೇ ಕಟ್ಟಡ ಸಮುಚ್ಚಯಗಳಲ್ಲೊಂದು.

Advertisement

ಬಾದಾಮಿ ಚಾಲುಕ್ಯರ ಉಪನಗರ ಪಟ್ಟದಕಲ್ಲು. ಚರಿತ್ರೆಯಲ್ಲಿ ದಾಖಲಾದದ್ದು ಕಿಸುವೊಳಲ್, ಪಟ್ಟದಕಿಸುವೊಳಲ್, ಪಟ್ಟದಶಿಲಾಪುರ, ಹಮ್ಮಿರಪುರ ಎಂಬೆಲ್ಲಾ ಹೆಸರಿನಿಂದಾದರೆ, ಟಾಲೆಮಿಯು  ಪರ್ತಗಲ್‌ ಎಂದು ಬರೆದನು.

ಚಾಲುಕ್ಯರ ಈ ದೇವಾಲಯಗಳ ಸಮುತ್ಛಯವು ಒಂದೊಮ್ಮೆ ವಾಸ್ತುಶಿಲ್ಪ ಕಲಾಕೇಂದ್ರವಾಗಿತ್ತು, ಪ್ರಯೋಗಶಾಲೆಯಾಗಿತ್ತಂದರೆ ನಂಬಲೇಬೇಕು. ದೇವಾಲಯಗಳನ್ನು ನಿರ್ಮಿಸುವ ಉತ್ತರಭಾರತ ಶೈಲಿಯ ನಾಗರ ಶೈಲಿ  ಸರಳವಾದ ಎತ್ತರದ ಬಾಗಿದ ಶಿಖರಗಳನ್ನು ಹೊಂದಿದೆ.

ಪುರಿಯ ಜಗನ್ನಾಥ ದೇವಾಲಯವನ್ನು ನಾಗರ ಶೈಲಿಗೆ ನೆನಪಿಸಿಕೊಳ್ಳಿ. ಇನ್ನು, ದಕ್ಷಿಣ ಭಾರತದ ಕಡೆ ಕಣ್ಣು ಹೊರಳಿಸಿದಾಗ ಕಾಣಬರುವ ದ್ರಾವಿಡ ಶೈಲಿ ಎತ್ತರದ ವಿಮಾನ-ಗೋಪುರಗಳನ್ನು ಪಿರಮಿಡ್‌ ಆಕಾರದ ರೀತಿ ಔನ್ನತ್ಯದಲ್ಲಿ ರಚಿಸುವುದು ಸಾಮಾನ್ಯ. ಪಟ್ಟದಕಲ್ಲಿನಲ್ಲಿ ಮಿಶ್ರ ಶೈಲಿಯ “ವೇಸರ’ದ  ಪ್ರಯೋಗ ಬಹಳ ಹಿಂದೆ ನಡೆದಿದೆ.

ಎರಡೂ ಶೈಲಿಯ ರಚನೆ ನಡೆದಿರುವ ಏಕಮಾತ್ರ ಐತಿಹಾಸಿಕ ಪಟ್ಟಣ ಪಟ್ಟದಕಲ್ಲು. ಹೀಗಾಗಿ ಮಲಪ್ರಭೆಯ ತೀರದ ಐದೂವರೆ ಹೆಕ್ಟೇರಿನ ಭೂಮಿ ಆರು-ಏಳನೇ  ಶತಮಾನದ ಒಂಭತ್ತು ದೇವಾಲಯಗಳಿಗೆ ಹಾಗೂ ಜೈನ ಬಸದಿಯೊಂದಕ್ಕೆ ಸಾಕ್ಷಿಯಾಗಿತ್ತು.

Advertisement

ಬಾದಾಮಿಯಿಂದ ಅನತಿದೂರದಲ್ಲಿರುವ ಪಟ್ಟದಕಲ್ಲು ಪ್ರವೇಶಿಸಿದಂತೆ ಶಿಲ್ಪ ಶಾಲೆಗೇ ನಿಮ್ಮನ್ನು ತೆರೆದುಕೊಳ್ಳುತ್ತೀರಿ.  ದ್ರಾವಿಡ ವಿಮಾನ ಶೈಲಿಯಲ್ಲಿ ಸಂಗಮೇಶ್ವರ (ವಿಜಯೇಶ್ವರ), ವಿರೂಪಾಕ್ಷ (ಲೋಕೇಶ್ವರ), ಮಲ್ಲಿಕಾರ್ಜುನ (ತೈಲೋಕೇಶ್ವರ), ಜೈನ ದೇವಾಲಯಗಳಿವೆ.

ನಾಗರ  ಶೈಲಿಯಲ್ಲಿ ಗಳಗನಾಥ, ಪಾಪನಾಥ, ಕಾಶಿ ವಿಶ್ವೇಶ್ವರ, ಕಾಡಸಿದ್ದೇಶ್ವರ, ಜಂಬುಲಿಂಗ ದೇವಾಲಯಗಳಿವೆ. ಇಲ್ಲಿರುವ ಇಟ್ಟಿಗೆಯ ಅವಶೇಷಗಳು ಒಂದೊಮ್ಮೆ ಕಲ್ಲಿನ ದೇವಾಲಯಗಳು ನಿರ್ಮಾಣವಾಗುವ ಮೊದಲು ಇಟ್ಟಿಗೆಯ ಕಟ್ಟಡವಿದ್ದ ಗುಮಾನಿಯಿದೆ.

ಚಿತ್ತಾಕರ್ಷಕ ಗವಾಕ್ಷಗಳು, ಕಥೆ ಹೇಳುವ ಸ್ಥಂಭ ಫ‌ಲಕದ ಶಿಲ್ಪಗಳು, ಮಹಾನಂದಿ ಗುಡಿಯ ನುಣುಪಿನ ನಂದಿ, ಏಕಶಿಲಾ ಸ್ಥಂಭ ಶಾಸನ ಇಲ್ಲಿನ ಜನಾಕರ್ಷಣೆಯ ವಿಷಯಗಳು. ಚಾಲುಕ್ಯರ ದೊರೆಗಳು ಪಟ್ಟವೇರುತ್ತಿದ್ದ ಕಲ್ಲು, ಸ್ಥಾನ ಪಟ್ಟದಕಲ್ಲು. ರಾಷ್ಟ್ರದ ನವಸಂಸತ್ತಿನಲ್ಲಿ ಸ್ಥಾಪನೆಗೊಂಡ ಸೆಂಗೋಲ್‌ – ನಂದಿ ಧ್ವಜ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ದಕ್ಷಿಣ ಗೋಡೆಯ ಮೇಲೆ ಕೆತ್ತಲಾದ ಶಿವ-ನಟರಾಜ ಶಿಲ್ಪದ ಎಡಗೈಯಲ್ಲಿ ಕಂಡುಬರುತ್ತದೆ.  ಈ ವಿಷಯದಲ್ಲೂ ಮಲಪ್ರಭೆಯ ಕೆಂಪು ಮರಳಿನ ಕಲ್ಲು ವಿಶೇಷವೇ.

ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಿಳಿಸುವ ಕೇಂದ್ರಗಳು.  ಇವು ಕೌಶಲ ಕಲಾತ್ಮಕ ಸಾಧನೆಗಳ ನೆಲೆ. ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳು ಕೇವಲ ಕಲ್ಲು – ಕಟ್ಟಡಗಳಲ್ಲ, ನಮ್ಮ ಹಿಂದಿನ ಕಥೆಯನ್ನು ಹೇಳುವ ಪುಸ್ತಕಗಳಂತೆ.

ಐತಿಹಾಸಿಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ, ಇದು ಸ್ಥಳೀಯ ಆರ್ಥಿಕತೆಗೂ ಉತ್ತೇಜನ ನೀಡುತ್ತದೆ. ಅದಕ್ಕಾಗಿಯೇ ಈ ಪಾರಂಪರಿಕ ತಾಣಗಳು ಭೂತ-ವರ್ತಮಾನ-ಭವಿಷ್ಯಗಳನ್ನು ಸಂಧಿಸುವ ನಾಗರಿಕತೆಯ ಬೆಸುಗೆ-ಕೊಂಡಿಗಳು. ನಾಗರಿಕತೆಯ ಕೊಂಡಿಗಳನ್ನು ಜತನದಿಂದ ಸಂರಕ್ಷಿಸೋಣ.

ವಿಶ್ವನಾಥ ಭಟ್‌

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next