Advertisement

ಸಾಕ್ಷರರ ಕ್ಷೇತ್ರದಲ್ಲಿ ಪಾರ್ಕಿಂಗೇ ದೊಡ್ಡ ಪ್ರಾಬ್ಲಂ

11:38 AM Mar 30, 2018 | Team Udayavani |

ಬೆಂಗಳೂರು: ರಾಜಧಾನಿಯ ಹೃದಯದಂತಿರುವ ಮಲ್ಲೇಶ್ವರ, ಅತಿ ಹೆಚ್ಚು ಸಾಕ್ಷರ ಮತದಾರರನ್ನು ಹೊಂದಿರುವ ವಿಧಾನಸಭೆ ಕ್ಷೇತ್ರ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಸಮಸ್ಯೆಗಳು ಕೊಂಚ ಕಡಿಮೆ. ಆದರೆ ಪಾರ್ಕಿಂಗ್‌ ಪ್ರಾಬ್ಲಂ ಸಾರ್ವಜನಿಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

Advertisement

ವಾಹನಗಳ ನಿಲುಗಡೆಗೆ ಜಾಗವಿಲ್ಲದ ಕಾರಣ ಹೆಚ್ಚಿನ ವಾಹನಗಳು ರಸ್ತೆ ಬದಿಯೇ ನಿಲ್ಲುತ್ತವೆ. ಪರಿಣಾಮ, ಸಂಚಾರ ದಟ್ಟಣೆ ತೀವ್ರಗೊಂಡು ವಾಹನ ಚಾಲಕರು, ಸವಾರರು ಸಹನೆ ಕಳೆದುಕೆಳ್ಳುತ್ತಾರೆ. ಹಾಗೇ ಪರಿಸ್ಥಿತಿಯೊಂದಿಗೆ ರಾಜಿಯಾಗಿ, ಹೊಂದಿಕೊಂಡು ಹೋಗುವ ಗುಣವೂ ಕ್ಷೇತ್ರದ ಜನರಲ್ಲಿ ಮೈಗೂಡಿದೆ.

ಹಳೇ ಬಡಾವಣೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಲೇಶ್ವರ ಪ್ರದೇಶದ ಬಹುಭಾಗ ವಸತಿ ಪ್ರದೇಶವಿದ್ದು, ವ್ಯಾಪಾರ ವಹಿವಾಟಿಗೂ ಹೆಚ್ಚು ಖ್ಯಾತಿ ಪಡೆದಿದೆ. ಕ್ಷೇತ್ರದಲ್ಲಿನ ಪಾಲಿಕೆಯ 7 ವಾರ್ಡ್‌ಗಳ ಪೈಕಿ ಸುಬ್ರಹ್ಮಣ್ಯನಗರ ಹಾಗು ಗಾಯತ್ರಿನಗರ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌ಗಳಿದ್ದು, ಅರಮನೆ, ಮತ್ತಿಕೆರೆ, ಮಲ್ಲೇಶ್ವರ, ರಾಜಮಹಲ್‌ ಗುಟ್ಟಹಳ್ಳಿ, ಕಾಡುಮಲ್ಲೇಶ್ವರ ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ.

ಕ್ಷೇತ್ರದಲ್ಲಿ ರಸ್ತೆಗಳು ಉತ್ತಮವಾಗಿವೆಯಾದರೂ ಪಾದಚಾರಿ ಮಾರ್ಗಗಳ ಸಮಸ್ಯೆ ಬಹುವಾಗಿ ಬಾಧಿಸುತ್ತಿದೆ. ಹಲವೆಡೆ ಪಾದಚಾರಿ ಮಾರ್ಗಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಕುಡಿಯುವ ನೀರು ಪೂರೈಕೆ ಪೈಪ್‌ಗ್ಳು ತುಂಬಾ ಹಳೆಯವಾಗಿದ್ದು, ಕೆಲವು ಪ್ರದೇಶದಲ್ಲಿ ಹೊಸ ಪೈಪುಗಳನ್ನು ಅಳವಡಿಸಲಾಗಿದೆ. ಇನ್ನೂ ಹಲವೆಡೆ ಪೈಪ್‌ ಬದಲಿಸುವ ಅಗತ್ಯವಿದೆ.

ಬ್ರಾಹ್ಮಣರೇ ಹೆಚ್ಚು: ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರೇ ಹೆಚ್ಚಾಗಿದೆ, ಬ್ರಾಹ್ಮಣ ಹಾಗೂ ಒಕ್ಕಲಿಗರ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದು, ಸುಮಾರು 55 ಸಾವಿರದಷ್ಟು ಬ್ರಹ್ಮಣರು, 35 ಸಾವಿರ ಒಕ್ಕಲಿಗರು, 15 ಸಾವಿರ ಕ್ಷತ್ರಿಯರು, 30 ಸಾವಿರ ಹಿಂದುಳಿದ ವರ್ಗದವರು, 15 ಸಾವಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರಿದ್ದಾರೆ.

Advertisement

ತಾರತಮ್ಯ: ಯಶವಂತಪುರದಿಂದ ಮೆಜೆಸ್ಟಿಕ್‌ಗೆ ಸಂಪರ್ಕಿಸುವ ರೈಲು ಮಾರ್ಗ ಮಲ್ಲೇಶ್ವರ ಕ್ಷೇತ್ರದ ಎರಡು ವಾರ್ಡ್‌ಗಳನ್ನು ಪ್ರತ್ಯೇಕಿಸುತ್ತದೆ. ರೈಲು ಹಳಿಯ ಆಚೆ ಇರುವ ಸುಬ್ರಹ್ಮಣ್ಯನಗರ ಮತ್ತು ಗಾಯತ್ರಿನಗರ ವಾರ್ಡ್‌ಗಳು ಕ್ಷೇತ್ರದ ಇತರ ವಾರ್ಡ್‌ಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದುಳಿದಿವೆ.

ಈ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಕಸ ವಿಲೇವಾರಿ ಸಮಸ್ಯೆ ಹೆಚ್ಚಿದೆ. ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಅವರೂ ರೈಲು ಮಾರ್ಗದ ಆಚೆ ಇರುವ ವಾರ್ಡ್‌ಗಳ ಅಭಿವೃದ್ಧಿಗೆ ಗಮನ ನೀಡಿಲ್ಲ. ಈ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌ಗಳಿರುವುದು ಶಾಸಕರ ನಿರ್ಲಕ್ಷ್ಯಕ್ಕೆ ಕಾರಣ ಎಂಬ ಆರೋಪವಿದೆ.

ಕ್ಷೇತ್ರದ ಬೆಸ್ಟ್‌ ಏನು?: ಕ್ಷೇತ್ರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. 8 ಕೋಟಿ ರೂ. ವೆಚ್ಚದಲ್ಲಿ ಬಾಸ್ಕೆಟ್‌ ಬಾಲ್‌ ಕ್ರೀಡಾಂಗಣ, 5.60 ಕೋಟಿ ವೆಚ್ಚದಲ್ಲಿ ಹೊಸದಾಗಿ ವಾಲಿಬಾಲ್‌ ಕ್ರೀಡಾಂಗಣ ನಿರ್ಮಿಸಲಾಗಿದೆ. ಚಂದ್ರಶೇಖರ್‌ ಆಜಾದ್‌ ಆಟದ ಮೈದಾನದ ಅಭಿವೃದ್ಧಿಯೂ ನಡೆಯುತ್ತಿದೆ. ಸುಸಜ್ಜಿತ ಜಿಮ್‌ ಸಹ ಕ್ಷೇತ್ರದಲ್ಲಿದೆ. ಈ ಬಾರಿ ಶಾಸಕರು ಸ್ಟೇಡಿಯಮ್‌ ಮತ್ತು ಜಿಮ್‌ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂಬುದು ಅವರಿಗಿರುವ ಅಪವಾದವೂ ಹೌದು ಮೆಚ್ಚುಗೆಯೂ ಹೌದು.

ಕ್ಷೇತ್ರದ ದೊಡ್ಡ ಸಮಸ್ಯೆ?: ಮಲ್ಲೇಶ್ವರ ಮಾರುಕಟ್ಟೆ ಬಹಳ ಹಳೆಯದಾಗಿದ್ದು, ಹೊಸ ಮಾರುಕಟ್ಟೆ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಹೊಸ ಮಾರುಕಟ್ಟೆ ನಿರ್ಮಾಣ ಹಂತದಲ್ಲಿರುವ ಕಾರಣ 18ನೇ ಮುಖ್ಯ ರಸ್ತೆಯ ಫ‌ುಟಪಾತ್‌ ಅನ್ನು ವರ್ತಕರು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕಣ್ಣೆದುರೇ ಫ‌ುಟ್‌ಪಾತ್‌ ಮೇಲೆ ವ್ಯಾಪಾರ ನಡೆಯುತ್ತಿದ್ದರೂ ಸಂಬಂಧಪಟ್ಟವರು ಕಾನೂನು ಕ್ರಮಕ್ಕೆ ಮುಂದಾಗಿಲ್ಲ. ಇದರೊಂದಿಗೆ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಕಾಡುತ್ತಿದೆ.

ಶಾಸಕರು ಹೇಳ್ಳೋದೇನು?
ಕ್ಷೇತ್ರದಲ್ಲಿ ಈ ಬಾರಿ 150ರಿಂದ 200 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅಂಗನವಾಡಿಯಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸೌಲಭ್ಯ ಕಲ್ಪಿಸಲಾಗಿದೆ. ಸ್ಯಾಂಕಿ ಕೆರೆ ಪಾರ್ಕ್‌ ಸಂಪೂರ್ಣವಾಗಿ ಅಭಿವೃದ್ಧಿಗೊಂಡಿದೆ. ಕ್ಷೇತ್ರದಾದ್ಯಂತ ಹೊಸದಾಗಿ 25 ಸಾವಿರ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಜತೆಗೆ ಸುಮಾರು 80 ಕಿ.ಮೀ. ಉದ್ದದ ಹೊಸ ಪೈಪ್‌ಲೈನ್‌ ಅಳವಡಿಸಲಾಗಿದೆ.
-ಡಾ.ಅಶ್ವತ್ಥ ನಾರಾಯಣ

ಜನ ದನಿ
ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳೇನೂ ಇಲ್ಲ. ಆದರೆ ಫ‌ುಟ್‌ಪಾತ್‌ ಸೌಲಭ್ಯದ ಕೊರತೆ ತುಂಬಾ ಇದೆ. ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಅದನ್ನು ತೆರವುಗೊಳಿಸುವ ಕೆಲಸ ಆಗಬೇಕಾಗಿದೆ.
-ಕೃತಿಕ

ಕುಡಿಯುವ ನೀರು ಪೂರೈಸುವ ಪೈಪುಗಳು ಬಹಳ ಹಳೆಯದಾಗಿದ್ದು ಅವುಗಳನ್ನು ಬದಲಿಸಬೇಕಿದೆ. ಹಳೆಯ ಬಡಾವಣೆಯಾಗಿರುವ ಕಾರಣ ಹೆಚ್ಚಿನ ಪಾರ್ಕ್‌ಗಳು ಇಲ್ಲ. ತರಕಾರಿ ಮಾರುಕಟ್ಟೆ ಸ್ಥಳಾಂತವಾದರೆ ವ್ಯಾಪಾರ, ವಹಿವಾಟು ಸುಗಮವಾಗಲಿದೆ.
-ಪ್ರೊ.ರಾಮಕೃಷ್ಣ

ಬಾಸ್ಕೆಟ್‌ಬಾಲ್‌ ಒಳಾಂಗಣ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಿರುವುದು ಉತ್ತಮ ಕಾರ್ಯ. ಶಾಸಕರು ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. 13ನೇ ಕ್ರಾಸ್‌ನ ಅಂಗನವಾಡಿ ಕೇಂದ್ರದಲ್ಲಿನ ಶಿಕ್ಷಣ ಗುಣಮಟ್ಟದಿಂದ ಕೂಡಿದೆ.
-ಪಾರ್ಥಸಾರಥಿ

ಶಿಕ್ಷಣದ ಜತೆಗೆ ಕ್ರೀಡಾ ಸೌಲಭ್ಯ ಒದಗಿಸಲು ಸ್ಥಳೀಯ ಶಾಸಕರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ದೋಬಿ ಘಾಟ್‌ನಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಒದಗಿಸಿರುವುದು ನಮಗೆ ಹೆಚ್ಚಿನ ಸಂತಸ ತಂದಿದೆ.
-ರವಿರಾಜ್‌

ಕ್ಷೇತ್ರದ ಮಹಿಮೆ: ಹದಿನೇಳನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುವ ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಈ ಕ್ಷೇತ್ರಕ್ಕೆ ಮಲ್ಲೇಶ್ವರ ಎಂಬ ಹೆಸರು ಬಂದಿದೆ. ವಿಶ್ವವಿಖ್ಯಾತ ಐಐಎಸ್ಸಿ, ಮೈಸೂರು ಒಡೆಯರ ಕಾಲದ ಅರಮನೆ ಮತ್ತು ಅರಮನೆ ಮೈದಾನ, ಸಾಯಿಬಾಬ ದೇವಸ್ಥಾನ, ಪ್ರಸಿದ್ಧ ಸರ್ಕಲ್‌ ಮಾರಮ್ಮ ದೇವಾಲಯ, ಓರಾಯನ್‌ ಮಾಲ್‌, ಕೆಸಿ ಜನರಲ್‌ ಆಸ್ಪತ್ರೆ ಪ್ರಸಿದ್ಧ ಸ್ಥಳಗಳು.

ಹಿಂದಿನ ಫ‌ಲಿತಾಂಶ
-ಡಾ. ಅಶ್ವತ್ಥನಾರಾಯಣ (ಬಿಜೆಪಿ)  57,609
-ಬಿ.ಕೆ.ಶಿವರಾಮ್‌ (ಕಾಂಗ್ರೆಸ್‌) 36,543
-ಶ್ವೇತಾ (ಜೆಡಿಎಸ್‌) 2820

ಆಕಾಂಕ್ಷಿಗಳು
-ಬಿಜೆಪಿ-  ಡಾ. ಅಶ್ವತ್‌ನಾರಾಯಣ 
-ಕಾಂಗ್ರೆಸ್‌- ಎಂ.ಆರ್‌ ಸೀತಾರಾಮ್‌, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಮ್‌ , ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ 
-ಜೆಡಿಎಸ್‌- ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ

* ಸೋಮಶೇಖರ ಕವಚೂರು

Advertisement

Udayavani is now on Telegram. Click here to join our channel and stay updated with the latest news.

Next