Advertisement

ಪರಿಷತ್‌ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ; ಪಕ್ಷದ ವಿರುದ್ಧವೇ ಸಡ್ಡು ಹೊಡೆದು ಸ್ಪರ್ಧೆ

11:08 PM May 15, 2024 | Team Udayavani |

ಬೆಂಗಳೂರು: ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಜೂ. 3ರಂದು ನಡೆಯಲಿರುವ ದ್ವೆ„ವಾರ್ಷಿಕ ಚುನಾವಣೆ ಕಣ ರಂಗೇರುತ್ತಿರುವ ನಡುವೆಯೇ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ. ಪಕ್ಷದ ಟಿಕೆಟ್‌ಆಕಾಂಕ್ಷಿಗಳಾಗಿದ್ದವರು ಟಿಕೆಟ್‌ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

Advertisement

ನಾಮಪತ್ರ ಸಲ್ಲಿಕೆಗೆ ಇಂದು (ಮೇ 16) ಕೊನೆ ದಿನವಾಗಿದ್ದು ಈ ಬೆಳವಣಿಗೆ ಮೂರೂ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್‌ ವಂಚಿತರಾಗಿರುವ ಬಿಜೆಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರು ಬಂಡಾಯವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಉಡುಪಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ರಘುಪತಿ ಭಟ್‌ ಅವರು ಚುನಾವಣೆ ಕಚೇರಿಯನ್ನೂ ಉದ್ಘಾಟಿಸಿದ್ದಾರೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದೂ ಕೆ. ರಘುಪತಿ ಭಟ್‌ ಪುನರುಚ್ಚರಿಸಿದ್ದಾರೆ.

ಪದವೀಧರ ಕ್ಷೇತ್ರದಲ್ಲಷ್ಟೇ ಅಲ್ಲದೆ ಶಿಕ್ಷಕರ ಕ್ಷೇತ್ರದಲ್ಲೂ ಬಂಡಾಯ ಸ್ಪರ್ಧೆ ಜೋರಾಗಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಂ. ರಮೇಶ್‌ ಶೆಟ್ಟಿ ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯ ಸಾರಿದ್ದಾರೆ. 2018ರ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಅಲ್ಪ ಮತದಿಂದ ಪರಾಭವಗೊಂಡಿದ್ದರು. ಅನಂತರ ಕಾಂಗ್ರೆಸ್‌ ಸೇರಿ ಜಿಲ್ಲಾ ವಕ್ತಾರರಾಗಿದ್ದರು. ಕೊನೆ ಹಂತದವರೆಗೂ ಪಕ್ಷ ಟಿಕೆಟ್‌ ನೀಡುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದರು. ಪಕ್ಷದ ಮುಖಂಡರ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿ ಸಲು ನಿರ್ಧರಿಸಿದ್ದಾರೆ.

ಇನ್ನು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಎಸ್‌.ಪಿ. ದಿನೇಶ್‌ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಎರಡು ಬಾರಿ ಈ ಕ್ಷೇತ್ರದಲ್ಲಿ ಅಲ್ಪಮತಗಳ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಶಿಕ್ಷಕರ ಮತ್ತು ಪದವೀಧರರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮೂರನೇ ಬಾರಿಗೆ ಬಹುಮತದ ಆಯ್ಕೆ ಪದವೀಧರರಿಂದ ಬಯಸಿರುವುದಾಗಿ ತಿಳಿಸಿದ್ದಾರೆ.

Advertisement

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲೂ ಜೆಡಿಎಸ್‌-ಬಿಜೆಪಿ  ಮೈತ್ರಿ ಅಭ್ಯ ರ್ಥಿ ಆಯ್ಕೆಯ ಹಗ್ಗಜಗ್ಗಾಟ ಬಿರುಸಾಗಿದೆ. ಮೇ 11ರಂದು ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಈ.ಸಿ. ನಿಂಗ ರಾಜ್‌ ಗೌಡ ಅವ ರನ್ನು ಮೈತ್ರಿ ಅಭ್ಯರ್ಥಿ ಎಂದು ಘೋಷಿ ಸಿತ್ತು. ಇದರ ಬೆನ್ನಲ್ಲೇ ಜೆಡಿಎಸ್‌ ತನ್ನ ಅಭ್ಯರ್ಥಿ ಅಂತಿಮಗೊಳಿಸಿದ್ದು, ಮಂಡ್ಯದ ವಿವೇಕಾನಂದ ಅವರಿಗೆ ಟಿಕೆಟ್‌ ನೀಡಿದೆ. ಜತೆಗೆ ವಿವೇಕಾನಂದ ಜೆಡಿಎಸ್‌-ಬಿಜೆಪಿ ಮೈತ್ರಿ ಕೂಟದ ಅಧಿಕೃತ ಅಭ್ಯರ್ಥಿ ಎಂದು ಜೆಡಿಎಸ್‌ ನಾಯಕರು ಹೇಳಿ ದ್ದಾರೆ.

ಗೊಂದಲದ ಗೂಡಾದ
ದಕ್ಷಿಣ ಶಿಕ್ಷಕರ ಕ್ಷೇತ್ರ
ಬೆಂಗಳೂರು ದಕ್ಷಿಣ ಶಿಕ್ಷಕರ ಕ್ಷೇತ್ರ ಗೊಂದಲದ ಗೂಡಾಗಿದ್ದು ಅಭ್ಯರ್ಥಿ ಆಯ್ಕೆ ಬಗ್ಗೆ ಗುರುವಾರ ಜೆಡಿಎಸ್‌ ಸಭೆ ಕರೆದಿತ್ತು. ಅಷ್ಟರಲ್ಲಾಗಲೇ ಮೈಸೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ವಿವೇಕಾನಂದಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಬಿ.ಫಾರಂ ವಿತರಣೆ ಮಾಡಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಮೇಲ್ಮನೆಯ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಬಂಡಾಯ ಎದ್ದಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ಅವರು ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದರೆ, ಶ್ರೀಕಂಠೇಗೌಡ ಕೂಡ ಗುರುವಾರ ಬೆಳಗ್ಗೆ 11 ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿಯ ಇ.ಸಿ. ನಿಂಗರಾಜೇಗೌಡ ಬಿ ಫಾರಂ ಇಲ್ಲದಿದ್ದರೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೈತ್ರಿಯೊಳಗೇ ಗೊಂದಲ ಸೃಷ್ಟಿಯಾಗಿದೆ.

ನಾನೇ ಮೈತ್ರಿ ಪಕ್ಷದ ಅಭ್ಯರ್ಥಿ: ನಿಂಗರಾಜ್‌
ಇತ್ತ ಬಿಜೆಪಿಯಿಂದ ಹೆಸರು ಘೋಷಿಸಲ್ಪಟ್ಟಿದ್ದ ಈ.ಸಿ. ನಿಂಗರಾಜ್‌ಗೌಡ ಬುಧವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದ್ದು ನಾನೇ ಮೈತ್ರಿ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿಕೊಂಡಿರು ವುದು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ. ಈ ಎಲ್ಲ ಬೆಳವಣಿಗೆಗಳು ಎರಡೂ ಪಕ್ಷದ ನಾಯಕ ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ನಡುವೆಯೇ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್‌ಸಿ ಕೆ.ಟಿ. ಶ್ರೀಕಂಠೇಗೌಡ ಅವರು ವಿವೇಕಾನಂದ ಅವರಿಗೆ ಬಿ ಫಾರಂ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ತಮಗೇ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಬಂಡಾಯಗಾರರ ಮನವೊಲಿಕೆಗೆ ಮಾತುಕತೆ
ಕಲಬುರಗಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್‌ ಅಮರನಾಥ ಪಾಟೀಲ್‌ಗೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಶ ಸಜ್ಜನ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಗುರುವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇನ್ನು ಬೆಂಗಳೂರು ಪದವೀಧರ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಎಂ. ಪುಟ್ಟಸ್ವಾಮಿ ಕಣಕ್ಕಿಳಿದಿದ್ದಾರೆ. ಬಂಡಾಯದ ಬಿಸಿ ಮೂರೂ ಪಕ್ಷಗಳ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಮಾತುಕತೆ ಮೂಲಕ ಅಭ್ಯರ್ಥಿಗಳ ಮನವೊಲಿಕೆಯ ಕಾರ್ಯಕ್ಕೂ ಮುಂದಾಗಿದ್ದಾರೆ ಎನ್ನಲಾಗಿದೆ.

ಎಲ್ಲಿ, ಯಾವ ಪಕ್ಷದಲ್ಲಿ ಬಂಡಾಯ?
-ನೈಋತ್ಯ ಪದವೀಧರ ಕ್ಷೇತ್ರ-ಕೆ. ರಘುಪತಿ ಭಟ್‌ (ಬಿಜೆಪಿ)
-ನೈಋತ್ಯ ಶಿಕ್ಷಕರ ಕ್ಷೇತ್ರ-ಎಂ. ರಮೇಶ್‌ ಶೆಟ್ಟಿ (ಕಾಂಗ್ರೆಸ್‌)
-ನೈಋತ್ಯ ಪದವೀಧರ ಕ್ಷೇತ್ರ- ಎಸ್‌.ಪಿ. ದಿನೇಶ್‌ (ಕಾಂಗ್ರೆಸ್‌)
-ದಕ್ಷಿಣ ಶಿಕ್ಷಕರ ಕ್ಷೇತ್ರ-ಕೆ.ಟಿ .ಶ್ರೀಕಂಠೇಗೌಡ (ಜೆಡಿಎಸ್‌)
-ದಕ್ಷಿಣ ಶಿಕ್ಷಕರ ಕ್ಷೇತ್ರ-ಈ.ಸಿ. ನಿಂಗರಾಜೇಗೌಡ (ಬಿಜೆಪಿ)
-ಈಶಾನ್ಯ ಪದವೀಧರ ಕ್ಷೇತ್ರ-ಸುರೇಶ ಸಜ್ಜನ್‌ (ಬಿಜೆಪಿ)
-ಬೆಂಗಳೂರು ಪದವೀಧರ ಕ್ಷೇತ್ರ-ಎಂ. ಪುಟ್ಟಸ್ವಾಮಿ (ಬಿಜೆಪಿ)

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ ವಿವೇಕಾನಂದಗೆ ಬಿ ಫಾರಂ ನೀಡಿದ್ದು, ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಎಲ್ಲ ಮುಖಂಡರೂ ಒಪ್ಪಿ ವಿವೇಕ್‌ ಹೆಸರು ಹೇಳಿದ್ದರು. ಅದರಂತೆ ನಿರ್ಣಯ ಆಗಿದೆ.
– ಜಿ.ಟಿ. ದೇವೇಗೌಡ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ

ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದಿಂದ ಬಂಡಾಯ ಸ್ಪರ್ಧೆ ನಡೆಯದಂತೆ ತಡೆಯಲು ಪ್ರಯತ್ನಿಸಲಾಗುತ್ತಿದೆ. ನಾನೇ ಖುದ್ದಾಗಿ ರಘುಪತಿ ಭಟ್‌ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದೇನೆ. ಪಕ್ಷದ ವಿರುದ್ಧ ಹೋಗುವ ನಿಲುವನ್ನು ಅವರು ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ.
– ವಿ. ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next