Advertisement

ಕಾಸರಗೋಡು ಡಿಪಿಸಿ ಕಚೇರಿ ಕಾಗದ ರಹಿತ ಘೋಷಣೆ

10:10 AM Mar 15, 2018 | Karthik A |

ಕಾಸರಗೋಡು: ಕಾಸರಗೋಡು ಜಿಲ್ಲಾ ಮಟ್ಟದ ಪಂಚಾಯತ್‌ ಸಹಾಯಕ ನಿರ್ದೇಶಕರ ಕಚೇರಿಯು ಕಾಗದರಹಿತ ಇಲೆಕ್ಟ್ರಾನಿಕ್‌ ಕಚೇರಿಯಾಗಿ ಕಾರ್ಯನಿರ್ವಹಣೆ ಆರಂಭಿಸಿದೆ. ಕೇರಳ ಪಂಚಾಯತ್‌ ನಿರ್ದೇಶಕಿ ಪಿ. ಮೇರಿ ಕುಟ್ಟಿ  ಅವರು ಕಾಗದರಹಿತ ಇಲೆಕ್ಟ್ರಾನಿಕ್‌ ಕಚೇರಿಯ ಘೋಷಣೆ ಮಾಡಿದರು. ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಅವರು ನವೀಕರಿಸಿದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸಹನಿರ್ದೇಶಕ (ಅಭಿವೃದ್ಧಿ ಹಾಗೂ ಆಡಳಿತ) ಎಂ.ಎಸ್‌. ನಾರಾಯಣನ್‌ ನಂಬೂದಿರಿ, ಪರ್ಫಾಮೆನ್ಸ್‌  ಆಡಿಟ್‌ ಸೂಪರ್‌ವೈಸರ್‌ ಎಂ. ಕಣ್ಣನ್‌ ನಾಯರ್‌, ಸೀನಿಯರ್‌ ಸೂಪರಿಂಟೆಂಡೆಂಟ್‌ ಕೆ. ವಿನೋದ್‌ಕುಮಾರ್‌ ಮುಂತಾದವರು ಮಾತನಾಡಿದರು. ಪಂಚಾಯತ್‌ ಸಹಾಯಕ ನಿರ್ದೇಶಕಿ ಕೆ.ಆರ್‌. ಪ್ರಭಾ ಸ್ವಾಗತಿಸಿದರು. ಜ್ಯೂನಿಯರ್‌ ಸೂಪರಿಂಟೆಂಡೆಂಟ್‌ ಕೆ. ಮೋಹನನ್‌ ವಂದಿಸಿದರು.

Advertisement

ಸ್ಥಳೀಯಾಡಳಿತ ಸಂಸ್ಥೆಗಳ ಪಂಚಾಯತ್‌ ಇಲಾಖೆಗಳ ಎಲ್ಲಾ  ಸೇವೆಗಳು ಬೆರಳ ತುದಿಯಲ್ಲಿ  ಎಂಬ ಗುರಿಯೊಂದಿಗೆ ಸಮಗ್ರ ಇ-ಗವರ್ನೆನ್ಸ್‌  ವ್ಯವಸ್ಥೆ  ಏರ್ಪಡಿಸುವುದು ರಾಜ್ಯ ಸರಕಾರದ ಯೋಜನೆಯಾಗಿದೆ. ಇದರ ಅಂಗವಾಗಿ ಜಿಲ್ಲಾ  ಮಟ್ಟದ ಪಂಚಾಯತ್‌ ಉಪನಿರ್ದೇಶಕರ ಕಚೇರಿ ಕಾಗದರಹಿತವಾಗಿದೆ. ಆಡಳಿತ ಸೇವೆಯಲ್ಲಿ  ಇ-ಗವರ್ನೆನ್ಸ್‌  ವ್ಯವಸ್ಥೆಯೊಂದಿಗೆ ಮತ್ತು  ಕಾರ್ಯದಕ್ಷತೆಯೊಂದಿಗೆ ಪ್ರಯೋಜನ ಒದಗಿಸುವ ಸಲುವಾಗಿ ಪಂಚಾಯತ್‌ ಇಲಾಖೆಯು ಈ ಯೋಜನೆಗೆ ಚಾಲನೆ ನೀಡಿತು.

ಕೇರಳದ ಗ್ರಾಮ ಪಂಚಾಯತ್‌ಗಳು ನಾಗರಿಕ ಸೇವೆಯನ್ನು  ಫಲಪ್ರದವಾಗಿ ನೀಡುವುದಕ್ಕಾಗಿರುವ ಶ್ರಮ ನಡೆಯುತ್ತಿದೆ. ಜನರಿಗೆ ನೀಡುವ ವಿವಿಧ ಸೇವೆಗಳು ಆನ್‌ಲೈನ್‌ಗೆ ಬದಲಾಯಿಸುವುದಕ್ಕೆ ಈಗಾಗಲೇ ಸಾಧ್ಯವಾಗಿದೆ. ಜನನ – ಮರಣ, ವಿವಾಹ ನೋಂದಣಿಗಳು, ಸಾಮಾಜಿಕ ಸುರಕ್ಷಾ ಪಿಂಚಣಿ ಅಲ್ಲದೆ ಸಂಬಂಧಪಟ್ಟ  ಮಾಹಿತಿಗಳು ಆನ್‌ಲೈನ್‌ ಆಗಿ ದೊರಕಲಿವೆ. ಕಟ್ಟಡ ಮಾಲಕರ ದೃಢೀಕರಣ ಪತ್ರ, ತೆರಿಗೆ ಪಾವತಿಸುವ ವ್ಯವಸ್ಥೆ, ಯೋಜನೆಗಳ ವಿವಿಧ ಮಾಹಿತಿಗಳು ಆನ್‌ಲೈನ್‌ ಮೂಲಕ ಲಭ್ಯವಿದೆ.

ಸ್ಥಳೀಯಾಡಳಿತ ಸಂಸ್ಥೆಗಳ ಇಲೆಕ್ಟ್ರಾನಿಕ್‌ ಚಟುವಟಿಕೆಗಳಿಗೆ ಕಾಸರಗೋಡು ಜಿಲ್ಲೆಯು ಪ್ರಮುಖ ಕೊಡುಗೆ ನೀಡಿದೆ. ಮ್ಯಾನುವಲ್‌ ಅಕೌಂಟಿಂಗ್‌ ವ್ಯವಸ್ಥೆಯಿಂದ ಸಂಖ್ಯಾ ಡಿಜಿಟಲ್‌ ವ್ಯವಸ್ಥೆಗೆ ಕಾಸರಗೋಡು ಜಿಲ್ಲೆಯು ಮೊದಲು ಬದಲಾಯಿಸಿದ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ. ಸ್ಥಳೀಯಾಡಳಿತ ಸಂಸ್ಥೆಗಳು ನಡೆಸುವುದಕ್ಕಾಗಿರುವ ಸಕರ್ಮ ಪದ್ಧತಿ, ಕಟ್ಟಡ ನಿರ್ಮಾಣ ಅನುಮತಿಗಳಿಗಾಗಿರುವ ಸಂಕೇತಾ ಎಂಬ ಅಪ್ಲಿಕೇಶನ್‌ಗಳು ಎಲ್ಲಾ  ಗ್ರಾಮ ಪಂಚಾಯತ್‌ಗಳಲ್ಲಿ  ಅಳವಡಿಸಿರುವುದರಲ್ಲಿ  ಕೂಡ ಕಾಸರಗೋಡು ಜಿಲ್ಲೆಯು ಮೊದಲ ಸ್ಥಾನ ಅಲಂಕರಿಸಿದೆ.

ಸಕರ್ಮ ಪದ್ಧತಿ ರಾಜ್ಯದಲ್ಲಿಯೇ ಮೊದಲು ಆರಂಭಿಸುವ ಮೂಲಕ ಕಾಸರಗೋಡು ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ. ಇದರ ಮುಂದುವರಿದ ಭಾಗವಾಗಿ “ಇನ್ಫರ್ಮೇಶನ್‌ ಕೇರಳ ಮಿಶನ್‌ ಸೂಚಿಕ’ ಎಂಬ ಹೆಸರಿನಲ್ಲಿ ತಯಾರಿಸಿದ ವೆಬ್‌ ಅಪ್ಲಿಕೇಶನ್‌ ಕೂಡ ಕಾಸರಗೋಡು ಪಂಚಾಯತ್‌ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ  ಟ್ರಯಲ್‌ ರನ್‌ ನಡೆಸಲಾಗಿದೆ. ಮಾರ್ಚ್‌ 1ರಿಂದಲೇ ಪಂಚಾಯತ್‌ ಸಹಾಯಕ ನಿರ್ದೇಶಕರ ಕಚೇರಿ ಸೇರಿದಂತೆ ಇಡೀ ಕಾರ್ಯಾಲಯವು ಪೂರ್ಣ ಪ್ರಮಾಣದಲ್ಲಿ  ಇಲೆಕ್ಟ್ರಾನಿಕ್‌ ಫೈಲ್‌ ಮೆನೇಜ್‌ಮೆಂಟ್‌ ಆಗಿ ಕಾರ್ಯವೆಸಗುತ್ತಿದೆ.

Advertisement

ಪ್ರಥಮಗಳ ಜಿಲ್ಲೆ ಉದ್ದೇಶ 
ಇದೇ ವೇಳೆ ಲಭಿಸುವ ಎಲ್ಲ ಅರ್ಜಿಗಳಿಗೆ ರಶೀದಿ ನೀಡುವುದಕ್ಕಿರುವ ಪಂಚಾಯತ್‌ಗಳ ಫ್ರಂಟ್‌ ಕಚೇರಿ ವ್ಯವಸ್ಥೆಯನ್ನು ಕೂಡ ಕಾಗದರಹಿತ ಮಾಡಲಾಗುವುದು. ಸೂಚಿಕ ಎಂಬ ಅಪ್ಲಿಕೇಶನ್‌ ಬಳಸುವ ಮೂಲಕ ಯಾವ ಫೈಲ್‌ಗ‌ಳನ್ನು ಸಹ ವೆಬ್‌ಸೈಟ್‌ಗಳಲ್ಲಿ  ನೋಡಲು ಮತ್ತು  ಫೈಲ್‌ ಟ್ರ್ಯಾಕ್‌ ಮಾಡಲು ಸಾಧ್ಯವಾಗಲಿದೆ. ಇನ್ನೊಂದೆಡೆ ಕಂಪ್ಯೂಟರ್‌, ವೆಬ್‌ಸೈಟ್‌ ಇತ್ಯಾದಿಗಳಿಗೆ ಸಂಬಂಧಿಸಿ ಅತ್ಯಾಧುನಿಕ ಮಾದರಿಯ ಇನ್ನಷ್ಟು ಯೋಜನೆಗಳನ್ನು ಕೂಡ ಕಾಸರಗೋಡಿನಲ್ಲಿ  ಕಾರ್ಯಗತಗೊಳಿಸಿ ಆ ನಿಟ್ಟಿನಲ್ಲೂ  ಜಿಲ್ಲೆಯು ಪ್ರಥಮ ಸ್ಥಾನ ಗಳಿಸುವ ಉದ್ದೇಶ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next