Advertisement

ಪಾಕ್‌ನದ್ದು ಚಾತುರ್ಯವಲ್ಲ, ಅನಿವಾರ್ಯತೆ: ರಾಜತಾಂತ್ರಿಕ ಗೆಲುವು

12:30 AM Mar 01, 2019 | |

ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲ ಭಾರತದ ಪರ ನಿಂತಿವೆ. ಭಾರತದ ಪರ ವಹಿಸಿಕೊಳ್ಳದ ರಾಷ್ಟ್ರಗಳೂ ಪಾಕಿಸ್ಥಾನದಿಂದ ಅಂತರ ಕಾಯ್ದುಕೊಳ್ಳುತ್ತಿವೆ‌. 

Advertisement

ಭಾರತದ ರಾಜತಾಂತ್ರಿಕ ಶಕ್ತಿಯೀಗ ಅನಾವರಣಗೊಂಡಿದೆ. ಪಾಕಿಸ್ಥಾನವು ಅಭಿನಂದನ್‌ರನ್ನು ಬೇಷರತ್ತಾಗಿ ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿಕೊಂಡಿದೆ. ಆದಾಗ್ಯೂ ಪಾಕಿಸ್ಥಾನ ತಾನು ಶಾಂತಿ ಸೌಹಾರ್ದದ ದೃಷ್ಟಿಕೋನದಿಂದ ಅಭಿನಂದನ್‌ರನ್ನು ಕಳುಹಿಸಿಕೊಡುತ್ತಿರುವುದಾಗಿ ಹೇಳಿದೆಯಾದರೂ, ಸತ್ಯವೇನೆಂದರೆ ಇಲ್ಲಿ ನಿಜಕ್ಕೂ ಕೆಲಸ ಮಾಡಿರುವುದು ಭಾರತದ ರಾಜತಾಂತ್ರಿಕ ಒತ್ತಡ.

ಇದನ್ನು ಪಾಕಿಸ್ಥಾನದ ಚತುರ ನಡೆ ಎನ್ನುವ ವಾದವಿದೆ. ಆದರೆ ಚತುರ ಎನ್ನುವುದಕ್ಕಿಂತ ಅನಿವಾರ್ಯ ನಡೆ ಎನ್ನುವುದೇ ಸೂಕ್ತ.  ಇಮ್ರಾನ್‌ ಖಾನ್‌ ಶಾಂತಿಯ ಮಾತನಾಡಿ ಜಗತ್ತಿನೆದುರು ಭಾರತವನ್ನೇ ಖಳನಾಯಕನನ್ನಾಗಿ ಚಿತ್ರಿಸಲು ಸಫ‌ಲವಾಗುತ್ತಿದ್ದಾರೆ ಎಂಬ ವಾದದಲ್ಲಿ ಅರ್ಥವಿಲ್ಲ. ಏಕೆಂದರೆ ಪಾಕಿಸ್ಥಾನ  ಉಗ್ರ ತಯ್ನಾರಿಕೆ ಕಾರ್ಖಾನೆಯಾಗಿದೆ, ಅದು ತನ್ನ ರಣತಂತ್ರದಲ್ಲಿ ಉಗ್ರವಾದಕ್ಕೆ ಪ್ರಮುಖ ಸ್ಥಾನ ಕೊಟ್ಟಿದೆ ಎನ್ನುವುದು ಈಗ ಜಗತ್ತಿಗೆ ತಿಳಿಯದ ವಿಷಯವೇನೂ ಅಲ್ಲ. ಇದೇ ಕಾರಣಕ್ಕಾಗಿಯೇ ಈ ಬಾರಿ ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲ ಭಾರತದ ಪರವಾಗಿಯೇ ನಿಂತಿವೆ. ಭಾರತದ ಪರ ವಹಿಸಿಕೊಳ್ಳದ ರಾಷ್ಟ್ರಗಳೂ ಪಾಕಿಸ್ಥಾನ ದಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ವಿಶೇಷ. ಇದಷ್ಟೇ ಅಲ್ಲದೆ ಜೈಶ್‌ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂದು ಫ್ರಾನ್ಸ್‌, ಅಮೆರಿಕ ಮತ್ತು ಬ್ರಿಟನ್‌ ವಿಶ್ವಸಂಸ್ಥೆಯ ಭದ್ರತಾಮಂಡಳಿಗೆ ಪ್ರಸ್ತಾಪ ಕಳುಹಿಸಿ ಭಾರತದ ಪರವಾಗಿ ನಿಂತಿವೆ. ಆಸ್ಟ್ರೇಲಿಯಾ, ಜಪಾನ್‌ ಭಾರತದ ಪರ ದನಿ ಎತ್ತಿವೆ. ಇವೆಲ್ಲದರ ನಡುವೆ ಈ ಬಾರಿ ಮಸೂದ್‌ನ ವಿಷಯದಲ್ಲಿ ಚೀನದ ನಿಲುವು ಏನಿರುತ್ತದೋ ನೋಡಬೇಕಿದೆ. ಇದುವರೆಗೂ ಚೀನ ತನ್ನ ವಿಟೋ ಶಕ್ತಿಯಿಂದ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾಪಗಳಿಗೆ ಅಡ್ಡಗಾಲಾಗುತ್ತಾ ಬಂದಿತ್ತು. ಆದರೆ ಈ ಬಾರಿ ಅದರ ಸ್ಥಿತಿ ಭಿನ್ನವಾಗಿದೆ. ಅಮೆರಿಕದೊಂದಿಗಿನ ವ್ಯಾಪಾರ ಯುದ್ಧದಿಂದ ಅದು ತೀವ್ರ ಪೆಟ್ಟು ತಿನ್ನುತ್ತಿದೆ. ಇನ್ನು ಡೋಕ್ಲಾಂ ಬಿಕ್ಕಟ್ಟಿನ ಅನಂತರ ಭಾರತ “ಬದಲಾಗಿದೆ’ ಎನ್ನುವ ಸಂಗತಿಯೂ ಅದಕ್ಕೆ ಅರ್ಥವಾಗಿದೆ.

ಪುಲ್ವಾಮಾ ಘಟನೆಯನ್ನು ಖಂಡಿಸುವ ವಿಚಾರದಲ್ಲಿ ಚೀನ ಬಳಸಿದ ಪದಗಳು ಇದಕ್ಕೆ ಸಾಕ್ಷಿಯಾದವು. ಅದು ಘಟನೆಯನ್ನು ಖಂಡಿಸುತ್ತಾ ಜೈಶ್‌-ಎ-ಮೊಹಮ್ಮದ್‌ ಹೆಸರನ್ನು ಉಲ್ಲೇಖೀಸಿದ್ದಷ್ಟೇ ಅಲ್ಲದೇ, “ಜಮ್ಮು ಮತ್ತು ಕಾಶ್ಮೀರ’ದ  ಹೆಸರನ್ನೂ ಬಳಸಿತು. ಇಲ್ಲಿಯವರೆಗೂ ಅದು ಜಮ್ಮು ಮತ್ತು ಕಾಶ್ಮೀರವನ್ನು “ಇಂಡಿಯನ್‌ ಅಡ್ಮಿನಿಸ್ಟರ್ಡ್‌ ಕಾಶ್ಮೀರ’ ಎಂದು ಕರೆಯುತ್ತಿತ್ತು. ಇದೇ ಮೊದಲ ಬಾರಿಗೆ ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಒತ್ತಡಕ್ಕೆ ಮಣಿದು ಪಾಕಿಸ್ಥಾನ ವನ್ನು ಖಂಡಿಸಿದ್ದಷ್ಟೇ ಅಲ್ಲದೆ, “ಜಮ್ಮು-ಕಾಶ್ಮೀರ’ ಎಂಬ ಪದ ಬಳಸಿದೆ. ಈ ಸಂಗತಿ ಪಾಕಿಸ್ಥಾನ ಕ್ಕೆ ತೀವ್ರ ನಿರಾಸೆ ಮತ್ತು ಕಳವಳ ಉಂಟುಮಾಡಿದೆ. ಹಿಂದೆಲ್ಲ ಪಾಕಿಸ್ಥಾನ ದ ಉಗ್ರಪರ ನಿಲುವನ್ನು ನೋಡಿಯೂ ಸುಮ್ಮನಿರುತ್ತಿದ್ದ ಪಶ್ಚಿಮ ರಾಷ್ಟ್ರಗಳು ಈಗ ಕೆಲ ವರ್ಷಗಳಿಂದ ಉಗ್ರವಾದದ ನಿಜ ರೂಪವನ್ನು, ಅದರ ಪರಿಣಾಮಗಳನ್ನು ಅನುಭವಿಸುತ್ತಿವೆ. ಹೀಗಾಗಿ ಅವೂ ಕೂಡ ಭಾರತದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಾಕಿಸ್ಥಾನ ಕ್ಕೆ ಎಚ್ಚರಿಕೆ ನೀಡಲಾರಂಭಿಸಿವೆ. ಭಾರತದ ರಾಜತಾಂತ್ರಿಕರು ವಿದೇಶಗಳಲ್ಲೆಲ್ಲ ಈಗ ಪಾಕ್‌ನ ನಿಜ ಚಹರೆಯನ್ನು ಅನಾವರಣಗೊಳಿಸುವಲ್ಲಿ ನಿರತರಾಗಿದ್ದಾರೆ. ಪಾಕಿಸ್ಥಾನ ವೀಗ ಏಕಾಂಗಿಯಾಗಿದೆ. ಅದನ್ನು ಮೂಲೆಗೆ ತಳ್ಳುವಲ್ಲಿ ಭಾರತ ಸಫ‌ಲವಾಗಿದೆ. ಇದರ ಶ್ರೇಯಸ್ಸು ಸಲ್ಲಬೇಕಾದದ್ದು, ಕೇಂದ್ರ ಸರಕಾರಕ್ಕೆ ಮತ್ತು ಭಾರತದ ರಾಜತಾಂತ್ರಿಕ ಚತುರತೆಗೆ.

Advertisement

Udayavani is now on Telegram. Click here to join our channel and stay updated with the latest news.

Next