Advertisement

ಕಾಶ್ಮೀರ ಸ್ವಾಯತ್ತೆಗೆ ಜನಮತಗಣನೆ ನಡೆಯಬೇಕು: ಇಮ್ರಾನ್‌ ಖಾನ್‌

11:28 AM Dec 17, 2018 | udayavani editorial |

ಇಸ್ಲಾಮಾಬಾದ್‌ : ಕಾಶ್ಮೀರ ಕಣಿವೆಯ ಸ್ವಾಯತ್ತೆಯನ್ನು ತೀರ್ಮಾನಿಸಲು ಜನಮತಗಣನೆ ನಡೆಯಬೇಕು ಎಂದು ಕರೆ ನೀಡುವ ಮೂಲಕ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತೆ ಕಾಶ್ಮೀರ ವಿಷಯದಲ್ಲಿ ಭಾರತವನ್ನು ಕೆಣಕಿದ್ದಾರೆ.

Advertisement

ಈ ವಿಷಯವನ್ನು ಪಾಕಿಸ್ಥಾನ ವಿಶ್ವಸಂಸ್ಥೆಯಲ್ಲೂ ಎತ್ತಲಿದೆ; ಮಾತ್ರವಲ್ಲ ಕಾಶ್ಮೀರದಲ್ಲಿ ಭಾರತದ ಸೇನೆಯಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನೂ ಎತ್ತಲಿದೆ ಎಂದು ಇಮ್ರಾನ್‌ ಖಾನ್‌ ಟ್ವಿಟರ್‌ನಲ್ಲಿ  ಹಾಕಿರುವ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ  ನಡೆದ ಎನ್‌ಕೌಂಟರ್‌ ವೇಳೆ ಭಾರತೀಯ ಸೇನೆಯ ಮೇಲೆ ಕಲ್ಲೆಸೆದರೆಂಬ ಕಾರಣಕ್ಕೆ ಸೈನಿಕರು ಅಮಾಯಕ ನಾಗರಿಕರನ್ನು ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಆರೋಪಿಸಿದ ಇಮ್ರಾನ್‌ ಖಾನ್‌, ವಿಶ್ವಸಂಸ್ಥೆಯು ಜಮ್ಮು ಕಾಶ್ಮೀರ ಜನರ ರಾಜಕೀಯ ಆಶೋತ್ತರಗಳನ್ನು ಈಡೇರಿಸಲು ಅಲ್ಲಿ ಜನಮತಗಣನೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು. 

ಭಾರತ ಆಕ್ರಮಿತ ಕಾಶ್ಮೀರದಲ್ಲಿನ ಪುಲ್ವಾಮಾದಲ್ಲಿ ಭಾರತೀಯ ಸೇನೆಯಿಂದ ನಡೆದಿರುವ ಅಮಾಯಕ ಕಾಶ್ಮೀರಿಗಳ ಹತ್ಯೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ವಿಷಯವನ್ನು ನಾವು ವಿಶ್ವಸಂಸ್ಥೆಯಲ್ಲಿ ಎತ್ತುತ್ತೇವೆ ಮತ್ತು ಕಾಶ್ಮೀರಿಗಳ ಸ್ವಾಯತ್ತೆಯ ಹಕ್ಕನ್ನು ಗೌರವಿಸಲು ಅಲ್ಲಿ ಜನಮತಗಣನೆ ನಡೆಯಬೇಕೆಂದು ಕೂಡ ವಿಶ್ವಸಂಸ್ಥೆಯಲ್ಲಿ ಆಗ್ರಹಿಸುತ್ತೇವೆ ಎಂದು ಇಮ್ರಾನ್‌ ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next