ನವದೆಹಲಿ: ಕಳೆದ ವಾರ ನಡೆದ ಸಂಸತ್ ಭದ್ರತಾ ಲೋಪದ ಘಟನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿರೋಧಪಕ್ಷದ ಕನಿಷ್ಠ 30 ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ:Varanasi;ಜ್ಞಾನವಾಪಿ ಮಸೀದಿ ಆವರಣ-ವೈಜ್ಞಾನಿಕ ಸಮೀಕ್ಷಾ ವರದಿ ವಾರಣಾಸಿ ಕೋರ್ಟ್ ಗೆ ಸಲ್ಲಿಕೆ
ಕಳೆದ ವಾರ ಸಂಸತ್ ಚಳಿಗಾಲ ಅಧಿವೇಶನದಲ್ಲಿ ಗೃಹಸಚಿವ ಶಾ ಅವರ ಉತ್ತರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷದ 14 ಸಂಸದರನ್ನು ಅಮಾನತು ಮಾಡಲಾಗಿತ್ತು.
ಸೋಮವಾರ ಸಂಸತ್ ನಲ್ಲಿ ಗೃಹ ಸಚಿವರ ಪ್ರತಿಕ್ರಿಯೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ, ಡಿಎಂಕೆಯ ಟಿಆರ್ ಬಾಲು, ದಯಾನಿಧಿ ಮಾರನ್, ಟಿಎಂಸಿಯ ಸುಗತ ರಾಯ್ ಸೇರಿದಂತೆ 30 ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಇದನ್ನು ಹೊರತುಪಡಿಸಿ ವಿಶೇಷಾಧಿಕಾರ ಸಮಿತಿಯ ವರದಿಯ ಬರುವವರೆಗೆ ಇನ್ನೂ ಮೂವರು ಸಂಸದರ ಅಮಾನತು ಬಾಕಿ ಇದ್ದಿರುವುದಾಗಿ ತಿಳಿಸಿದೆ.
ಈ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 46 ಸಂಸದರನ್ನು ಅಮಾನತು ಮಾಡಿದಂತಾಗಿದೆ. ಅಮಾನತು ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅಧೀರ್ ರಂಜನ್, ಈ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಲೋಕಸಭೆಯನ್ನು ಬಿಜೆಪಿ ಕೇಂದ್ರ ಕಚೇರಿಯಂತೆ ಮಾಡಿಕೊಂಡಿದೆ. ಅಧಿವೇಶನ ಆರಂಭವಾದಾಗಿನಿಂದಲೂ ವಿರೋಧ ಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಿದೆ. ಆದರೆ ಬಿಜೆಪಿ ಲೋಕಸಭೆಯನ್ನು ಪಕ್ಷದ ಕಚೇರಿ ರೀತಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.