Advertisement

ಖಾಸಗಿ ಆಸ್ಪತ್ರೆಗಳ ವಿರುದ್ಧದ ವಿದೇಯಕಕ್ಕೆ ಆಕ್ರೋಶ 

12:42 PM Jun 17, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕವನ್ನು ಪುನರ್‌ ಪರಿಶೀಲಿಸುವಂತೆ ಆಗ್ರಹಿಸಿ ಖಾಸಗಿ ಆಸ್ಪತ್ರೆಗಳ ಸಂಘ ಹಾಗೂ ಮೆಡಿಕಲ್‌ ಅಸೋಸಿಯೇಷನ್‌ ವತಿಯಿಂದ ಖಾಸಗಿ ಆಸ್ಪತ್ರೆಯ ವೈದ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

Advertisement

ಈ ಕಾಯ್ದೆಯು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯರಿಗೂ ಅನ್ವಯಿಸುವಂತೆ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆಗೆ ಸರ್ಕಾರ ಶುಲ್ಕ ನಿಗದಿ ಮಾಡ ಕೂಡದು. ವೈದ್ಯರ ವಿರುದ್ಧ ದೂರು ದಾಖಲಿಸುವ ಅವಕಾಶ ಹಿಂಪಡೆಯುವ ನಿಟ್ಟಿನಲ್ಲಿ ವಿಧೇಯಕವನ್ನು ಇನ್ನೊಮ್ಮೆ ಪುನರ್‌ ಪರಿಶೀಲಿಸಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿಧ ಭಾಗದ 15 ಸಾವಿರಕ್ಕೂ ಅಧಿಕ ವೈದ್ಯರು ಶುಕ್ರವಾರ ಬೆಳಗ್ಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ ತನಕ ಕಾಲ್ನಡಿಗೆ ಜಾಥ ನಡೆಸಿ, ಸರ್ಕಾರ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸರ್ಕಾರ ನಿಗದಿಪಡಿಸುವಷ್ಟೇ ಶುಲ್ಕ ಪಡೆಯಬೇಕು, ವೈದ್ಯರು ನೀಡುವ ಚಿಕಿತ್ಸೆಯಲ್ಲಿ ತೃಪ್ತಿಕಾಣದ ರೋಗಿ ಅಥವಾ ಅವರ ಕುಟುಂಬ ಜಿಲ್ಲಾಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ಸಲ್ಲಿಸಬಹುದು ಹಾಗೂ ಹೆಚ್ಚು ದರ ವಿಧಿಸುವ ಆಸ್ಪತ್ರೆಗಳ ವಿರುದ್ಧ 5 ಲಕ್ಷ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ನೀಡಬಹುದಾದ ನಿರ್ಬಂಧನೆಗಳನ್ನು ಹಿಂದಕ್ಕೆ ಪಡೆಯಬೇಕು ಅಥವಾ ಕರ್ನಾಟಕ ಕ್ಲಿನಿಕ್‌ ಎಸ್ಟಾಬ್ಲಿಷ್ಮೆಂಟ್‌ ಕಾಯ್ದೆ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರ ಆಸ್ಪತ್ರೆ ಸುಸಜ್ಜಿತಗೊಳಿಸಿ: ನಂತರ ಫ್ರೀಂ ಪಾರ್ಕ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ, “ಶಿಕ್ಷಣ ಮತ್ತು ಆರೋಗ್ಯ ಮೂಲಭೂತ ಅವಶ್ಯಕತೆ. ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲೂ ಚರ್ಚೆ ನಡೆಸದೇ ಖಾಸಗಿ ಆರೋಗ್ಯ ಸೇವೆಯನ್ನು ನಿಯಂತ್ರಿಸುವ ಈ ವಿಧೇಯಕ ಮಂಡನೆ ಮಾಡಿರುವುದು ವಿಪರ್ಯಾಸ. ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನೊಮ್ಮೆ ಅಧಿಕಾರಿಗಳು ಹಾಗೂ ಮಂತ್ರಿಗಳು ಪರಿಶೀಲನೆ ಮಾಡಬೇಕು. ಉತ್ತಮ ಆರೋಗ್ಯ ಸೇವೆ ನೀಡುವ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ಈ ರೀತಿಯಲ್ಲಿ ಹಕ್ಕು ಸೌಮ್ಯ ಸಾಧಿಸುವುದು ಸರಿಯಲ್ಲ ಎಂದರು.

“ಶಾಸಕರು, ಮಂತ್ರಿಗಳು, ಸಂಸದರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ. ಅವರೆಲ್ಲರಿಗೂ ಖಾಸಗಿ ಆಸ್ಪತ್ರೆಯೇ ಆಗಬೇಕು.  ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದರೆ. ಅವರಿಗೆ ಎಲ್ಲವೂ ಒಮ್ಮೆಗೆ ಅರ್ಥವಾಗುತ್ತದೆ. ಭ್ರಷ್ಟಾಚಾರದಲ್ಲಿ ತೊಡಗಿರುವುದು ರಾಜಕಾರಣಿಗಳ್ಳೋ ಅಥವಾ ವೈದ್ಯರೋ ಎಂಬುದು ನಾಡಿನ ಜನರಿಗೆ ತಿಳಿದಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಮಾತನಾಡಿ, “ಸರ್ಕಾರಿ ಆಸ್ಪತ್ರೆ ಸರಿಯಿದ್ದರೆ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಬರುತ್ತಿರಲಿಲ್ಲ. ಸರ್ಕಾರಿ ಆಸ್ಪತ್ರೆಯನ್ನೇ ಸರಿಯಾಗಿಟ್ಟುಕೊಳ್ಳದ ಸರ್ಕಾರ ನಮ್ಮ ಮೇಲೆ ಸವಾರಿ ಮಾಡಲು ಹೊರಟಿದೆ. ಈ ವಿಧೇಯಕದಿಂದ ಖಾಸಗಿ ಆಸ್ಪತ್ರೆಗಳಿಗೆ ಬಹಳ ತೊಂದರೆ ಇದೆ. ಸರ್ಕಾರ ಮಂಡಿಸಿರುವ ವಿಧೇಯಕವನ್ನು ಹಿಂಪಡೆದು ಮರು ಪರಿಶೀಲನೆ ಮಾಡದೇ ಇದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ,’ ಎಂದು ಎಚ್ಚರಿಕೆ ನೀಡಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿ, “ಈ ವಿಧೇಯಕದ ಅವಶ್ಯಕತೆ ಏನಿತ್ತು. ರಾಜ್ಯದಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ ಎಲ್ಲಾ ವೈದ್ಯರು ಬೀದಿಗಿಳಿಯುವ ದಿನಗಳು ಬರಲಿದೆ. ವೈದ್ಯರು ಮಾನವೀಯತೆ ಇಟ್ಟುಕೊಂಡೇ ಈ ವೃತ್ತಿಗೆ ಬಂದಿದ್ದಾರೆ. ಖಾಸಗಿ ಆಸ್ಪತ್ರೆ ಮತ್ತು ವೈದ್ಯರ ಮೇಲೆ ಸರ್ಕಾರ ಈ ರೀತಿ ದಬ್ಟಾಳಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ,’ ಎಂದರು.

ಕೌÉಡ್‌ ನೈನ್‌ ಆಸ್ಪತ್ರೆಯ ನಿರ್ದೇಶಕ ಡಾ.ಕಿಶೋರ್‌ ಕುಮಾರ್‌, ಮಣಿಪಾಲ್‌ ಆಸ್ಪತ್ರೆ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್‌, ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ಅಲೆಕ್ಸಾಂಡರ್‌ ಥಾಮಸ್‌, ಡಾ.ಪ್ರಸನ್ನ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯ ಬಹುತೇಕ ಎಲ್ಲಾ ವ್ಯದ್ಯರು ಪ್ರತಿಭಟನೆಯಲ್ಲಿದ್ದರು.

ಸೇವೆಯಲ್ಲಿ ವ್ಯತ್ಯಯ: ಬಹುತೇಕ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಕೆಲವು ಖಾಸಗಿ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳ ವಿಭಾಗದಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಾಗಿರಲಿಲ್ಲ. ಸಂಜೆಯ ನಂತರ ಕೆಲವು ವೈದ್ಯರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳನ್ನು ವಿಚಾರಿಸಿದ್ದಾರೆ. ವೈದ್ಯರ ಸೇವೆ ಹೊರತುಪಡಿಸಿ ಬೇರೆಲ್ಲ ಸೌಲಭ್ಯ ಎಂದಿನಂತೆ ಆಸ್ಪತ್ರೆಗಳಲ್ಲಿ ಲಭ್ಯವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next