Advertisement

ಸಿಇಒ ವಿರುದ್ಧ  ಕೂಲಿಕಾರರ ಆಕ್ರೋಶ

03:10 PM Aug 05, 2017 | |

ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಆಗಮಿಸಿದ್ದ ಕೂಲಿ ಕಾರ್ಮಿಕರ ಮನವಿ ಸ್ವೀಕರಿಸಲು ವಿಳಂಬ ಮಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಅಶ್ವತಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು, ಶೌಚಾಲಯ ಪ್ರಗತಿ ಪರಿಶೀಲನಾ ಸಭೆಯೊಳಗೆ ನುಗ್ಗಲು ಯತ್ನಿಸಿದ ಘಟನೆ ಶುಕ್ರವಾರ ನಡೆಯಿತು.

Advertisement

ಪಟ್ಟಣದ ತಾಪಂ ಆವರಣದ ರಾಜೀವ್‌ ಗಾಂಧಿ  ಸಭಾಂಗಣದಲ್ಲಿ ಸಿಇಒ ಎಸ್‌.ಅಶ್ವತಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು, ಪಿಡಿಒಗಳನ್ನು ಒಳಗೊಂಡ ಶೌಚಾಲಯ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಮಧ್ಯಾಹ್ನ 1 ಗಂಟೆ ಸಮಯಕ್ಕೆ ಮೈದೂರು ಗ್ರಾಪಂ ವ್ಯಾಪ್ತಿಯ ಗೌರಿಪುರ ಗ್ರಾಮಸ್ಥರು ಅಖೀಲ ಭಾರತ ಕಿಸಾನ್‌ ಸಭಾ ಸಂಘಟನೆ ನೇತೃತ್ವದಲ್ಲಿ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ, ಶೌಚಾಲಯ ಬಿಲ್‌ ಪಾವತಿ, ಕುಡಿಯುವ ನೀರು ಕೊಡಬೇಕೆಂದು ಒತ್ತಾಯಿಸಿ ತಾಪಂ ಕಚೇರಿಯ ಎದುರು ಪ್ರತಿಭಟನೆ ಆರಂಭಿಸಿದರು. ಆಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ತಿಪ್ಪೇಸ್ವಾಮಿ, ಮೈದೂರು ಪಿಡಿಒ ಮಂಜುನಾಥ್‌ ಆಗಮಿಸಿ ಮನವಿ ಸ್ವೀಕರಿಸಲು ಮುಂದಾದಾಗ ಸಿಇಒ ಬರಲಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. 

ಮನವಿ ಸ್ವೀಕರಿಸದೇ ಬರೀಗೈಯಲ್ಲಿ ತೆರಳಿದ ಅ ಧಿಕಾರಿಗಳು ಸಭೆಯಲ್ಲಿ ಕುಳಿತು ಸಭೆ ಮುಂದುವರಿಸಿದ್ದರು. ಸುಮಾರು 2 ಗಂಟೆ ಕಾದರೂ ಸಿಇಒ ಕೂಲಿ ಕಾರ್ಮಿಕರ ಮನವಿ ಸ್ವೀಕರಿಸಲು ಸ್ಥಳಕ್ಕೆ ಆಗಮಿಸಲಿಲ್ಲ. ಇದರಿಂದ ಸಿಟಿಗೆದ್ದ ಕೂಲಿಕಾರರು ಪ್ರತಿಭಟನಾ ಸ್ಥಳದಿಂದ ತಾಪಂ ಕಚೇರಿಯ
ಮೊದಲನೆ ಮಹಡಿಯಲ್ಲಿ ನಡೆಯುತ್ತಿದ್ದ ಪ್ರಗತಿ ಪರಿಶೀಲನಾ ಸಭೆಯೊಳಗೆ ನುಗ್ಗಲು ಯತ್ನಿಸಿದರು. ಪ್ರತಿಭಟನಾಕಾರರನ್ನು ತಡೆದ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇಷ್ಟಾದರೂ ಸಿಇಒ ಸಭೆಯಿಂದ ಹೊರಗೆ ಬರಲಿಲ್ಲ. ಆಗ ಸಭೆಯೊಳಗೆ ಅಧಿಕಾರಿಗಳ ಮಾತು ಕೇಳಿಸದಂತೆ ಜೋರಾಗಿ ಧಿಕ್ಕಾರದ ಘೋಷಣೆ  ಕೂಗಲು ಆರಂಭಿಸಿದರು.

ಗೊಂದಲ ವಾತಾವರಣ ಸೃಷ್ಟಿಯಾದ್ದರಿಂದ ಸಿಇಒ ಎಸ್‌.ಅಶ್ವತಿ ಅವರು ಸಭೆಯಿಂದ ಹೊರಗೆ ಆಗಮಿಸಿದರು. ಜನರ ಸಮಸ್ಯೆ ಆಲಿಸಲು ಆಗಮಿಸಿರುವ ತಾವು ಜನರ ಸಮಸ್ಯೆ ಆಲಿಸಲು ನಿರ್ಲಕ್ಷ ವಹಿಸುತ್ತೀರಿ, ಪ್ರತಿಭಟನಾಕಾರರ ಬಳಿಗೆ ಬಂದು ಮನವಿ ಸ್ವೀಕರಿಸುವ ಸೌಜನ್ಯವೂ ತಮ್ಮಲ್ಲಿ ಇಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದಾಗ, ಸಭೆ ನಡೆಯುತ್ತಿದ್ದರಿಂದ ಮನವಿ ಸ್ವೀಕರಿಸಲು ಬರಲಿಲ್ಲ. ನಾನು ಯಾವಾಗಲೂ ಜನರ ಜೊತೆಗೆ ಇದ್ದೇನೆ. ಕೇರಳ ರಾಜ್ಯದಿಂದ ಇಲ್ಲಿಗೆ ಬಂದು ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಕೆಲಸ ಮಾಡುತ್ತಿದ್ದೇನೆಯೇ ಹೊರತು ನಿರ್ಲಕ್ಷ ವಹಿಸಿಲ್ಲ ಎಂದು ಸಿಇಒ ಎಸ್‌.ಅಶ್ವತಿ  ಸ್ಪಷ್ಟಪಡಿಸಿದರು. 

ಮಳೆಯ ಕೊರತೆಯಿಂದ ಬರಗಾಲ ತಾಂಡವಾಡುತ್ತಿದೆ. ಜನರು ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಹಾಗಾಗಿ ಗೌರಿಪುರ ಗ್ರಾಮಸ್ಥರಾದ ನಾವುಗಳು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಮೈದೂರು ಗ್ರಾ.ಪಂಗೆ ಅರ್ಜಿ ಸಲ್ಲಿಸಿದರೂ ಕೆಲಸ ಕೊಟ್ಟಿಲ್ಲ. ಶೌಚಾಲಯ ನಿರ್ಮಿಸಿಕೊಂಡಿದ್ದರೂ ಹಣ ಪಾವತಿಸಿಲ್ಲ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅಧಿಕಾರಿಗಳು ತಿರುಗಿ ನೋಡಿಲ್ಲ , ಸಮಸ್ಯೆ ಬಗೆಹರಿಸುವವರೆಗೂ ಇಲ್ಲಿಂದ ನಾವು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದಾಗ ಸೋಮವಾರದಿಂದ ಖಾತ್ರಿ ಕೆಲಸ ನೀಡಲಾಗುವುದು. ಶೌಚಾಲಯ ನಿರ್ಮಿಸಿಕೊಂಡಿರುವವರಿಗೆ ಇನ್ನೆರಡು ದಿನಗಳಲ್ಲಿ ಹಣ ಸಂದಾಯವಾಗಲಿದೆ. ನೀರಿನ ಸಮಸ್ಯೆಯನ್ನು ಕೂಡಲೇ ಅಧಿಕಾರಿಗಳು ಬಗೆಹರಿಸಲಿದ್ದಾರೆ ಎಂದು ಸಿಇಒ ಭರವಸೆ ನೀಡಿದರು.

Advertisement

ಸಂಘಟನೆ ಮುಖಂಡರಾದ ಗುಡಿಹಳ್ಳಿ ಹಾಲೇಶ್‌, ಎಚ್‌.ಎಂ.ಸಂತೋಷ್‌, ರಮೇಶನಾಯ್ಕ, ಗ್ರಾಮಸ್ಥರಾದ ಬಳಿಗನೂರು ಮಲ್ಲೇಶ್‌, ಅಂಜಿನಪ್ಪ, ಕೊಟ್ರೇಶ್‌, ಹನುಮಂತಪ್ಪ, ನಾಗರಾಜ್‌, ಸಿದ್ದಪ್ಪ, ವೀರಪ್ಪ, ಹುಲಿಗೆಮ್ಮ, ಮಂಜಮ್ಮ, ಶಂಕರ್‌, ಗೋಣಿಬಸಪ್ಪ, ಮಂಜು, ಕೊಟ್ರಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next