Advertisement

6 ತಿಂಗಳ ಸಂಭ್ರಮಕ್ಕೆ ಒಗ್ಗಟ್ಟು; ಸರಕಾರಕ್ಕೆ ಅರ್ಧ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿಎಂ ಮಾತು

12:24 AM Jan 29, 2022 | Team Udayavani |

ಬೆಂಗಳೂರು: “ನಾವೆಲ್ಲರೂ ಜತೆಯಾಗಿಯೇ ಕೆಲಸ ಮಾಡುತ್ತಿದ್ದೇವೆ… ಅದು ಒಂದು ರೀತಿ ಫ‌ುಟ್ಬಾಲ್‌ ತಂಡದಂತೆ. ಎಲ್ಲರೂ ಸಕ್ರಿಯವಾಗಿದ್ದು, ಚೆಂಡನ್ನು ಪರಸ್ಪರ ಪಾಸ್‌ ಮಾಡುತ್ತಾ ಗೋಲ್‌ ತಲುಪಿಸುವ ಕೆಲಸ ಮಾಡುತ್ತಿದ್ದೇವೆ…’

Advertisement

ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತುಗಳು. ತಮ್ಮ ನೇತೃತ್ವದ ಸರಕಾರಕ್ಕೆ ಆರು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ 20 ಸಚಿವರ ಜತೆ ಪಾಲ್ಗೊಂಡಿದ್ದ ಅವರು, ಒಗ್ಗಟ್ಟು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಜತೆಗೆ ಸರಕಾರದ ಸಾಧನೆಯ ಪುಸ್ತಕವನ್ನು ಬಿಡುಗಡೆ ಮಾಡಿ, ರಾಜ್ಯದ ಸಮೃದ್ಧತೆ ಬಗ್ಗೆ ಮಾತನಾಡಿದರು. ವಿಶೇಷವೆಂದರೆ ಎಲ್ಲಿಯೂ ತಮ್ಮ ಭಾಷಣದಲ್ಲಿ ರಾಜಕೀಯ ತರಲಿಲ್ಲ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರಿಂದಾದ ಪ್ರೇರಣೆ ಮತ್ತು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಮಾರ್ಗದರ್ಶನವನ್ನು ಮರೆಯಲಿಲ್ಲ.

ಸವಾಲುಗಳೂ ಇವೆ
ನಮ್ಮ  ಗುರಿ ದೊಡ್ಡದು. ಇದರೊಂದಿಗೆ ಸವಾಲುಗಳೂ ಇವೆ. ಆ  ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವೂ ನಮಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.  ಭವಿಷ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಾಗಿದೆ. ಪ್ರತಿ ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದ ಇಟ್ಟು ಜನರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ತಿಳಿಸಿದರು. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸಮಾಜದಲ್ಲಿ ಸ್ವಾಭಿಮಾನದ ಸ್ಥಾನ ಸಿಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಪಾಲು ಸಿಗಬೇಕೆನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸವನ್ನು ಮಾಡುವ ಭರವಸೆಯನ್ನು ಕನ್ನಡದ ಮಹಾಜನತೆಗೆ ಈಗಾಗಲೇ ನೀಡಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರಕಾರ ಎಂದು ಮುಖ್ಯಮಂತ್ರಿ  ಪುನರುಚ್ಚರಿಸಿದರು.

ಜನಪರ ಕೆಲಸ
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಪಕ್ಷದ ವರಿಷ್ಠರು, ಶಾಸಕರು, ಕರ್ನಾಟಕದ ಮಹಾಜನತೆಯ ಬಯಕೆಯಂತೆ ರಾಜ್ಯದ ಅಧಿಕಾರ ವಹಿಸಿಕೊಂಡು 6 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಹಲವಾರು ಜನಪರವಾದ ಕೆಲಸಗಳನ್ನು ಸರಕಾರ ಮಾಡಿದೆ. ಮುಂಬರುವ ದಿನಗಳಲ್ಲಿ  ಭವ್ಯ ಭವಿಷ್ಯ ಇರುವ ಕರ್ನಾಟಕವನ್ನು ಕಟ್ಟಲು ತೀರ್ಮಾನಿಸಿದ್ದೇವೆ. “ನವ ಭಾರತಕ್ಕಾಗಿ ನವ ಕರ್ನಾಟಕ’ ಎಂಬ ಧ್ಯೇಯವನ್ನಿಟ್ಟುಕೊಂಡು ಸರಕಾರ ಕೆಲಸ ಮಾಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಮೊದಲನೇ ಬಜೆಟ್‌ ಮಾರ್ಚ್‌ ಮೊದಲನೇ ವಾರದಲ್ಲಿ ಮಂಡನೆಯಾಗಲಿದೆ ಎಂದು ತಿಳಿಸಿದರು.

ಸರಕಾರ  ಆರು ತಿಂಗಳಲ್ಲಿ ಜಾರಿಗೊಳಿಸಿರುವ ಯೋಜನೆಗಳಿಂದ ಭವಿಷ್ಯದಲ್ಲಿ ಆಗುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಕುರಿತು ಇನ್‌ಸ್ಟಿಟ್ಯೂಟ್‌ ಆಫ್ ಸೋಶಿಯಲ್‌ ಆ್ಯಂಡ್‌ ಎಕನಾಮಿಕ್‌ ಚೇಂಜಸ್‌ ಸಂಸ್ಥೆ  ಸಮೀಕ್ಷೆ ನಡೆಸಿದ್ದು, ವರದಿಯನ್ನು ಈ ಸಂದರ್ಭದಲ್ಲಿ ಒಪ್ಪಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next