Advertisement

ಕುಮಾರಮಂಗಲ ನಿವೇಶನ: ಮೂಲ ದಾಖಲೆಗಳೇ ಇಲ್ಲ!

02:30 AM Jul 05, 2018 | Team Udayavani |

ಸವಣೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ಗ್ರಾ.ಪಂ. ಗುರುತಿಸಿದ ನಿವೇಶನದ ಗಡಿಗುರುತು ಮಾಡದೇ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿದ್ದು, ಗಡಿ ಗುರುತು ಮಾಡಲು ಸರ್ವೇ ಇಲಾಖೆ ಬಳಿ ಕುಮಾರಮಂಗಲ ನಿವೇಶನದ ದಾಖಲೆಗಳ ನಕಾಶೆಯೇ ಇಲ್ಲ ಎಂಬ ಮಾಹಿತಿ ಲಭಿಸಿದೆ. ಗಡಿ ಗುರುತು ಮಾಡದಿರುವ ಕಾರಣ ಫ‌ಲಾನುಭವಿಗಳಿಗೆ ಸಮಸ್ಯೆಯಾಗುತ್ತಿರುವ ಕುರಿತು ಸುದಿನ ಜೂ. 25ರಂದು ವರದಿ ಪ್ರಕಟಿಸಿ, ಇಲಾಖೆಯನ್ನು ಎಚ್ಚರಿಸಿತ್ತು.

Advertisement

ಈ ಸಂಬಂಧ ಗ್ರಾ.ಪಂ. ಕೂಡ ತಾ.ಪಂ., ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಹಾಗೂ ಸರ್ವೇ ಇಲಾಖೆಯನ್ನು ಸಂಪರ್ಕಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದೆ. ಹಳೆ ನಕಾಶೆ ಸಿಗದಿರುವುದರಿಂದ ಹೊಸದಾಗಿ ನಕಾಶೆ ತಯಾರಿಸುವ ಸಲುವಾಗಿ ತಾ.ಪಂ.ಗೆ ಮನವಿ ಮಾಡಲಾಗಿದೆ. ಕಡತವು ಅಲ್ಲಿಂದ ಕಡಬ ತಹಶೀಲ್ದಾರ್‌ ಕಚೇರಿಗೆ ರವಾನೆಯಾಗಲಿದ್ದು, ಆಮೇಲಷ್ಟೇ ಗಡಿಗುರುತು ನಡೆಯಬೇಕಿದೆ.

ಫಲಾನುಭವಿಗಳ ತೊಳಲಾಟ
ನಿವೇಶನ ನೀಡದೆ ಹಕ್ಕುಪತ್ರ ನೀಡಿದರೆ ಮನೆ ಕಟ್ಟುವುದಾದರೂ ಹೇಗೆ? ಹಲವು ವರ್ಷಗಳ ಬಳಿಕ ಹಕ್ಕುಪತ್ರ ಕೈಸೇರಿದೆ. ಗಡಿಗುರುತು ಮಾಡದೆ ತಮಗೆ ಯಾವ ನಿವೇಶನ ಎಂದು ತಿಳಿಯುತ್ತಿಲ್ಲ. ಸಮಸ್ಯೆ ಪರಿಹಾರವಾದರೆ 24 ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.

ಸೂಕ್ತ ದಾಖಲೆ
ನಿವೇಶನದ ಸೂಕ್ತ ದಾಖಲೆ ರಚನೆ ಮಾಡಿಕೊಡುವಂತೆ ಗ್ರಾ.ಪಂ.ಗೆ ತಿಳಿಸಲಾಗಿದ್ದು, ಕಡತ ವಿಲೇವಾರಿ ಕೆಲಸಗಳು ನಡೆಯುತ್ತಿವೆ. ದಾಖಲೆ ತಯಾರಾದ ಕೂಡಲೇ ಎಲ್ಲ ಫಲಾನುಭವಿಗಳಿಗೂ ಹಂಚಿಕೆಯಾದ ನಿವೇಶನದ ಗಡಿಗುರುತು ಮಾಡಲಾಗುವುದು ಎಂದು ಸರ್ವೇಯರ್‌ ಶಿವಣ್ಣ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next