Advertisement

Belapu ನಿಲ್ದಾಣದಲ್ಲಿ ನಿಲ್ಲುವುದು ಒಂದೇ ರೈಲು!

07:02 PM Aug 05, 2024 | Team Udayavani |

ಕಾಪು: ಬೆಳಪು ಗ್ರಾಮದಲ್ಲಿರುವ ಪಡುಬಿದ್ರಿ ರೈಲ್ವೆ ನಿಲ್ದಾಣ ಆಯಕಟ್ಟಿನ ಪ್ರದೇಶದಲ್ಲಿದೆ. ಇಲ್ಲಿ ಪ್ರಮುಖವಾಗಿ ಓಡುವುದು ಮುಂಬಯಿಯನ್ನು ಸಂಪರ್ಕಿಸುವ ರೈಲುಗಳು. ಈ ಭಾಗದಿಂದ ಸಾವಿರಾರು ಪ್ರಯಾಣಿಕರು ಮುಂಬಯಿಗೆ ಹೋಗುವುದು, ಬರುವುದು ಇದೆ. ಆದರೆ, ದುರಂತವೆಂದರೆ ಮುಂಬಯಿಯಿಂದ ಬರುವ, ಅಲ್ಲಿಗೆ ಹೋಗುವ ಯಾವ ರೈಲು ಕೂಡಾ ಇಲ್ಲಿ ನಿಲ್ಲುವುದಿಲ್ಲ. ಇಲ್ಲಿ ನಿಲ್ಲುವುದು ಕೇವಲ ಒಂದೇ ಒಂದು ರೈಲು: ಅದು ಮಂಗಳೂರು-ಮಡಗಾಂವ್‌ ಲೋಕಲ್‌ ಟ್ರೇನ್‌!

Advertisement

ಮೂವತ್ತೆರಡು ವರ್ಷಗಳ ಹಿಂದೆ ಕೊಂಕಣ ರೈಲು ಕರಾವಳಿಗೆ ಕಾಲಿಟ್ಟ ವರ್ಷದಲ್ಲೇ ಬೆಳಪುವಿನಲ್ಲಿ ಪಡುಬಿದ್ರಿ ರೈಲು ನಿಲ್ದಾಣವೂ ಆರಂಭಗೊಂಡಿತ್ತು. ಅಂದು ಪ್ರಥಮವಾಗಿ ನಿಂತದ್ದು ಮಂಗಳೂರು-ಮಡಗಾಂವ್‌ ಲೋಕಲ್‌ ರೈಲು. ಇವತ್ತಿಗೂ ಅದೊಂದು ಬಿಟ್ಟರೆ ಬೇರೆ ಯಾವ ರೈಲೂ ಇಲ್ಲಿ ನಿಲ್ಲುವುದಿಲ್ಲ.

ಅಕಸ್ಮಾತ್‌ ನಿಂತರೆ ಅದು ಪಾಸಿಂಗ್‌ಗಾಗಿ ಮಾತ್ರ! ರಾಷ್ಟ್ರೀಯ ಹೆದ್ದಾರಿ 66, ತಾಲೂಕು ಕೇಂದ್ರವಾದ ಕಾಪುವಿನಿಂದ ಕೂಗಳತೆಯ ದೂರದಲ್ಲಿದೆ ಈ ರೈಲು ನಿಲ್ದಾಣ. ಬೆಳಪು, ಮಜೂರು, ಮಲ್ಲಾರು, ಕಾಪು, ಉಳಿಯಾರ ಗೋಳಿ, ಕುತ್ಯಾರು, ಮುದರಂಗಡಿ, ಶಿರ್ವ, ಪಲಿಮಾರು, ಉಚ್ಚಿಲ ಬಡಾ, ಎರ್ಮಾಳು, ಪಡುಬಿದ್ರಿ, ಹೆಜಮಾಡಿ ಗ್ರಾ. ಪಂ.ಗಳ ಮಧ್ಯ ಭಾಗದಲ್ಲಿದೆ. ಆದರೆ, ನಿಲ್ದಾಣ ರಚನೆಯಾಗಿ ಮೂರು ದಶಕ ಕಳೆದರೂ ಈ ನಿಲ್ದಾಣ ಆರಕ್ಕೇರಲಿಲ್ಲ, ಮೂರಕ್ಕೆ ಇಳಿಯಲಿಲ್ಲ!

ಮುಂಬಯಿ ರೈಲುಗಳ ನಿಲುಗಡೆ ಬೇಡಿಕೆ

ಬೆಳಪು ನಿಲ್ದಾಣದಲ್ಲಿ ಮುಂಬಯಿ ಮತ್ತು ಬೆಂಗಳೂರಿಗೆ ಹೋಗುವ ರೈಲುಗಳನ್ನು ನಿಲ್ಲಿಸಬೇಕು ಎಂಬ ಹೋರಾಟ ಹಿಂದಿನಿಂದಲೂ ನಡೆಯುತ್ತಿದೆ. ಯಾಕೆಂದರೆ ದೊಡ್ಡ ಪ್ರಮಾಣದ ಪ್ರಯಾಣಿಕರು ಈ ಭಾಗದಲ್ಲಿದ್ದಾರೆ. ಅವರೀಗ ಒಂದೋ ಉಡುಪಿಗೆ, ಇಲ್ಲವೇ ಮೂಲ್ಕಿ ರೈಲು ನಿಲ್ದಾಣಕ್ಕೇ ಹೋಗಬೇಕು. ಒಂದು ಕಾಲದಲ್ಲಿ ವೇರಾವೆಲ್‌ – ಗುಜರಾತ್‌ ಎಕ್ಸ್‌ಪ್ರೆಸ್‌ ಮತ್ತು ಡೆಮು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಯಾಗುತ್ತಿದ್ದರೂ ಕೊರೊನಾ ಬಳಿಕ ಅದು ಕೂಡಾರದ್ಧಾಗಿದೆ.

Advertisement

ಮತ್ಸ್ಯಗಂಧ ಮತ್ತು ಬೆಂಗಳೂರು ರೈಲುಗಳನ್ನು ನಿಲ್ಲಿಸಬೇಕು ಎಂದು ವಿವಿಧ ರೂಪದಲ್ಲಿ ಹೋರಾಟ, ಆಗ್ರಹ, ನಿರ್ಣಯಗಳು ನಡೆದಿವೆ. ಎಲ್ಲ ರಾಜಕೀಯ ಮುಖಂಡರು ಬೇಡಿಕೆಗೆ ತಮ್ಮ ಬೆಂಬಲವಿದೆ ಎನ್ನುತ್ತಾರೆ. ಆದರೆ, ಯಾರ ಭರವಸೆಯೂ ಈಡೇರಿಲ್ಲ ಎನ್ನುವುದು ವಾಸ್ತವ.

ಮೂಲಸೌಕರ್ಯಗಳೂ ಇಲ್ಲ

ರೈಲುಗಳು ನಿಲ್ಲುವುದಿಲ್ಲ ಎಂಬ ಕಾರಣಕ್ಕೆ ಮೂಲ ಸೌಕರ್ಯಗಳ ಬಗ್ಗೆಯಾದರೂ ಕೊಂಕಣ ರೈಲ್ವೆ ನಿರ್ಲಕ್ಷ್ಯ ವಹಿಸಿದೆ.

ರಾ. ಹೆ. 66ರಿಂದ ಇಲ್ಲಿಗೆ ತಲುಪಲು ಮೂರು ರಸ್ತೆಗಳಿವೆ. ಆದರೆ ಈ ಮೂರೂ ರಸ್ತೆಗಳೂ ತೀರಾ ಹದಗೆಟ್ಟು ಹೋಗಿವೆ.

ಉಚ್ಚಿಲ-ಪಣಿಯೂರು ರಸ್ತೆಯಲ್ಲಿ ಬಂದು ಕುಂಜೂರು ರೈಲ್ವೇ ಬ್ರಿಡ್ಜ್ನಿಂದ ರೈಲು ನಿಲ್ದಾಣ ತಲುಪುವ ರಸ್ತೆಯ ಜಲ್ಲಿ ಮೇಲೆದ್ದು ಹೊಂಡ -ಗುಂಡಿ ಬಿದ್ದಿದೆ.

ಬೆಳಪು ಮೇಲ್ಸೇತುವೆಯಲ್ಲಿ ಕಬ್ಬಿಣದ ರಾಡ್‌ಗಳು ಮೇಲಕ್ಕೆದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಪಾಲಿಟೆಕ್ನಿಕ್‌ ಸಮೀಪದಿಂದ ರೈಲು ನಿಲ್ದಾಣದವರೆಗಿನ ರಸ್ತೆ ಡಾಮರು ಭಾಗ್ಯವನ್ನೇ ಕಂಡಿಲ್ಲ.

ರಸ್ತೆಗಳ ಅಭಿವೃದ್ಧಿ ಬಗ್ಗೆ ಸಾರ್ವಜನಿಕರು ಅದೆಷ್ಟೋ ಬಾರಿ ಸ್ಥಳೀಯ ಬೆಳಪು ಗ್ರಾ.ಪಂ.ಗೆ ಮನವಿ ನೀಡಿದ್ದಾರೆ. ಗ್ರಾ.ಪಂ. ನೇರವಾಗಿ ರೈಲ್ವೇ ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರಿಗೂ ಪತ್ರ ಬರೆದಿದೆ. ಜನಪ್ರತಿನಿಧಿಗಳೂ ಪತ್ರ ಬರೆದಿದ್ದಾರೆ. ಆದರೆ, ಸ್ಪಂದನೆ ಮಾತ್ರ ಇಲ್ಲವೇ ಇಲ್ಲ.

ಬೆಳಪು ಬೆಳೆದಿದೆ, ನಿಲ್ದಾಣ ಹಾಗೇ ಇದೆ

ಕಳೆದ 30 ವರ್ಷದಲ್ಲಿ ಬೆಳಪು ಬೆಳೆದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿದೆ. ಆದರೆ, ನಿಲ್ದಾಣದಲ್ಲಿ ಸಣ್ಣ ಬದಲಾವಣೆಯೂ ಇಲ್ಲ.

ಕಾಪುನಲ್ಲಿ ಪಾಲಿಟೆಕ್ನಿಕ್‌ ಆಗಿದೆ. 68 ಎಕರೆ ಪ್ರದೇಶದ ಸಣ್ಣ ಕೈಗಾರಿಕಾ ಪಾರ್ಕ್‌ನಲ್ಲಿ ಹಲವಾರು ಕಂಪೆ‌ನಿಗಳು ಉತ್ಪಾದನೆ ಆರಂಭಿಸಿವೆ.

25 ಎಕ್ರೆ ಜಮೀನಿನಲ್ಲಿ 141 ಕೋಟಿ ರೂಪಾಯಿ ವೆಚ್ಚದ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಪಿಜಿ ಸೆಂಟರ್‌ನ ನಿರ್ಮಾಣ ಹಂತದಲ್ಲಿದೆ.

ಮಜೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಐಎಸ್‌ಪಿಆರ್‌ಎಲ್‌ ಕಚ್ಚಾತೆ„ಲ ಸಂಗ್ರಹಣ ಘಟಕ, ಎಲ್ಲೂರಿನಲ್ಲಿ ಅದಾನಿ-ಯುಪಿಸಿಎಲ್‌, ಪಡುಬಿದ್ರಿಯಲ್ಲಿ ಎಸ್‌ಇಝಡ್‌ ಯೋಜನೆಗಳು ಅನುಷ್ಠಾನಗೊಂಡಿವೆ.

ಪ್ರಮುಖ ಬೇಡಿಕೆಗಳೇನು ?

1ಹೆಚ್ಚು ಬೇಡಿಕೆಯಿರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌, ಸಿಎಸ್‌ಟಿ ಎಕ್ಸ್‌ಪ್ರೆಸ್‌ ಮತ್ತು ಯಶವಂತಪುರ – ಕಾರವಾರ ರೈಲುಗಳ ನಿಲುಗಡೆ.

2ನಿಲ್ದಾಣದ ಪಶ್ಚಿಮ ದಿಕ್ಕಿನಲ್ಲಿರುವ ಹತ್ತಾರು ಮನೆಯವರಿಗೆ ನಡೆದಾಡಲು, ಜಾನುವಾರುಗಳ ಓಡಾಟಕ್ಕೆ ಅಂಡರ್‌ಪಾಸ್‌/ ಫ್ಲೈಓವರ್‌ ನಿರ್ಮಾಣ.

3ನಿಲ್ದಾಣಕ್ಕೆ ತೆರಳುವ ರಸ್ತೆಗಳ ದುರಸ್ತಿ, ಬೀದಿ ದೀಪ ವ್ಯವಸ್ಥೆ.

4ಬೆಳಪು (ಪಡುಬಿದ್ರಿ) ಬದಲಿಗೆ ಪಣಿಯೂರು / ಬೆಳಪು ರೈಲು ನಿಲ್ದಾಣ ಎಂದು ಪುನರ್‌ ನಾಮಕರಣ.

ಇನ್ನೂ ಸ್ಪಂದಿಸದಿದ್ದರೆ ರೈಲ್‌ ರೋಕೋ

ಹೆಸರು ಬದಲಾವಣೆ, ಮತ್ಸ್ಯಗಂಧ ಮತ್ತು ಬೆಂಗಳೂರು ರೈಲುಗಳ ನಿಲುಗಡೆ ಬೇಡಿಕೆ ಬಗ್ಗೆ ಎಲ್ಲ ಕಡೆ ಮನವಿ ಮಾಡಿದ್ದೇವೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ರೈಲ್ವೇ ಸಚಿವ ಡಿ.ವಿ. ಸದಾನಂದ ಗೌಡ ಅವರೂ ಇಲಾಖೆಗೆ ಪತ್ರ ಬರೆದು ಸೂಚನೆ ನೀಡಿದ್ದರು. ಬೆಳಪು ರೈಲು ನಿಲ್ದಾಣದ ನಿರ್ಲಕ್ಷ್ಯ ವಿರುದ್ಧ ಗ್ರಾಮ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿದೆ. ಇನ್ನೂ ಸ್ಪಂದಿಸದಿದ್ದಲ್ಲಿ ಎಲ್ಲರನ್ನೂ ಸೇರಿಸಿಕೊಂಡು ರೈಲ್‌ ರೋಕೋ ನಡೆಸಲಾಗುವುದು.

-ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ಅಧ್ಯಕ್ಷರು, ಬೆಳಪು ಗ್ರಾ.ಪಂ .

ನಮ್ಮೂರಲ್ಲಿ ರೈಲೇಕೆ ನಿಲ್ಲುವುದಿಲ್ಲ?

ಮಂಗಳೂರಿನಿಂದ 10 ಕಿ. ಮೀ ದೂರದ ಸುರತ್ಕಲ್‌, ಸುರತ್ಕಲ್‌ನಿಂದ 12 ಕಿ. ಮೀ. ದೂರದ ಮೂಲ್ಕಿಯಲ್ಲಿ ರೈಲು ನಿಲ್ಲುತ್ತದೆ. ಆದರೆ, ಬಳಿಕ ನಿಲ್ಲುವುದು 25 ಕಿ.ಮೀ. ದೂರದ ಉಡುಪಿಯಲ್ಲಿ. ಮಧ್ಯದಲ್ಲಿರುವ ಬೆಳಪು ನಿಲ್ದಾಣ ಊಟಕ್ಕೆಇಲ್ಲದ ಉಪ್ಪಿನಕಾಯಿ! ಇಲ್ಲಿ ರೈಲು ನಿಲುಗಡೆ ಕೋರಿ ಎಲ್ಲ ಹಂತದಲ್ಲೂ ಮನವಿ ಮಾಡಿದ್ದೇವೆ. ಯಾರೂ ಸ್ಪಂದಿಸಿಲ್ಲ.

-ಶಿವಕುಮಾರ್‌ ಮೆಂಡನ್‌, ಅಧ್ಯಕ್ಷರು, ಬಡಾ ಗ್ರಾ.ಪಂ.

ಕೇಂದ್ರ ಸಚಿವರಿಗೆ, ಸಂಸದರಿಗೆ ಪತ್ರ

ಕಾಪು ತಾಲೂಕಿನ ಎಲ್ಲ ಗ್ರಾಮಗಳ ಸಾವಿರಾರು ಮಂದಿ ಮುಂಬಯಿ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದು ಪ್ರಸ್ತುತ ದೂರದ ಉಡುಪಿ ಮತ್ತು ಮೂಲ್ಕಿ ಸ್ಟೇಷನ್‌ಗಳನ್ನು ಅವಲಂಬಿಸುವಂತಾಗಿದೆ. ಇಲ್ಲಿಗೆ ಹೋಗಿ ಬರಲು ವಾಹನ ಬಾಡಿಗೆ ದುಬಾರಿ ಇದೆ. ಮುಂಬಯಿ, ಬೆಂಗಳೂರು ರೈಲುಗಳ ನಿಲುಗಡೆಗೆ ಅವಕಾಶ ಮಾಡಿಕೊಡುವಂತೆ ಈಗಾಗಲೇ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪತ್ರ ಬರೆಯಲಾಗಿದೆ. ಮುಂದೆ ಸ್ವತಃ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು.

– ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next