Advertisement

World Cup ಒಂದೇ ಶೋಕ, ನೂರು ಭಾವ, ಆರ್ದ್ರವಾಗಿದ್ದ ಡ್ರೆಸ್ಸಿಂಗ್‌ ಕೊಠಡಿ

12:41 AM Nov 21, 2023 | Team Udayavani |

ಅಹ್ಮದಾಬಾದ್‌: ರವಿವಾರ ಭಾರತೀ ತಂಡದ ವಿಶ್ವಕಪ್‌ ಸೋಲು ಕೋಟ್ಯಂತರ ಅಭಿಮಾನಿಗಳ ಕಂಗಳನ್ನು ಒದ್ದೆಯಾಗಿಸಿದೆ. ಆಟಗಾರರ ಹೃದಯವನ್ನು ಹಿಂಡಿದೆ. ಹೇಳಿಕೊಳ್ಳಲಾಗದೆ, ಸುಮ್ಮನಿದ್ದು ಸಹಿಸಲೂ ಆಗದೆ ಆಟಗಾರರು ಡ್ರೆಸ್ಸಿಂಗ್‌ ಕೊಠಡಿಯೊಳಕ್ಕೆ ತಳಮಳಿಸಿದ್ದಾರೆ.

Advertisement

ಪಂದ್ಯ ಮುಗಿದ ಕೂಡಲೇ ತುಂಬಿಕೊಂಡಿದ್ದ ಕಣ್ಣುಗಳನ್ನು ಒರೆಸಲೂ ಹೋಗದೆ ನಾಯಕ ರೋಹಿತ್‌ ಶರ್ಮ ಹೊರಹೋದರು. ವಿರಾಟ್‌ ಕೊಹ್ಲಿ ಪತ್ರಿಕಾಗೋಷ್ಠಿಗೆ ಹೋಗಲಿಲ್ಲ. ತರಬೇತುದಾರ ರಾಹುಲ್‌ ದ್ರಾವಿಡ್‌ ಒಬ್ಬರೇ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಸ್ವತಃ ದ್ರಾವಿಡ್‌ ತಮ್ಮನ್ನು ತಾವು ಸಂತೈಸಿಕೊಳ್ಳುವುದೋ, ಎದುರಿದ್ದವರ ಕಣ್ಣೀರು ಒರೆಸುವುದೋ ಗೊತ್ತಾಗದೆ ಸಂದಿಗ್ಧದಲ್ಲಿದ್ದರು. 2021ರ ಕೊನೆಗೆ ಭಾರತ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಆಯ್ಕೆಯಾದ ರಾಹುಲ್‌ ದ್ರಾವಿಡ್‌ ಅವಧಿ ಈ ವಿಶ್ವಕಪ್‌ ಅಂತ್ಯಕ್ಕೆ ಮುಗಿದಿದೆ. ಅವರು ಮತ್ತೆ ತರಬೇತುದಾರರಾಗಿ ಮುಂದುವರಿಯುತ್ತಾರೋ, ಮುಂದುವರಿಯುವ ಆಸಕ್ತಿ ಅವರಿಗಿದೆಯೋ ಇಲ್ಲವೋ ಯಾರಿಗೂ ಗೊತ್ತಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್‌, ನಾನು ಈ ಆಟಗಾರರನ್ನು, ಅವರ ಪರಿಶ್ರಮ, ತ್ಯಾಗವನ್ನು ನೇರವಾಗಿ ನೋಡಿದ್ದೇನೆ. ಇಂತಹ ಪರಿಸ್ಥಿತಿಯನ್ನು ಎದುರಿಸುವುದು ಬಹಳ ಕಷ್ಟ. ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಭಾವನೆಗಳು ಮಡುಗಟ್ಟಿವೆ ಎಂದು ಹೇಳಿದರು.

ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಕೆಲವರು ಮೌನವಾಗಿದ್ದರು. ಕೆಲವರು ಅಳುತ್ತಿದ್ದರು. ಕೆಲವರು ಸಮಾಧಾನಿಸುತ್ತಿದ್ದರು. ನೂರಾರು ಭಾವಗಳು ಚದುರಿಹೋಗಿ, ಇಡೀ ಕೊಠಡಿ ತೋಯ್ದಿತ್ತು. ಸೋತು ಮೈದಾನದಿಂದ ಹೊರಬಂದ ವಿರಾಟ್‌ ಕೊಹ್ಲಿಯನ್ನು ಪತ್ನಿ ಅನುಷ್ಕಾ ಶರ್ಮ ತಬ್ಬಿಕೊಂಡು ಸಂತೈಸಿದರು.

Advertisement

ವೇಗಿ ಮೊಹಮ್ಮದ್‌ ಸಿರಾಜ್‌ ಮೈದಾನದಲ್ಲೇ ಅತ್ತರು. ಅದು ಸಹಜವೇ ಆಗಿತ್ತು. ವಿಶ್ವಕಪ್‌ ಗೆಲ್ಲುವುದು ಪ್ರತೀ ಆಟಗಾರನ ಕನಸು. ಅದಕ್ಕಾಗಿ ಸಾಧ್ಯವಾದ ಎಲ್ಲವನ್ನೂ ಮಾಡಿ ಕಡೆಗೆ ಅಸಹಾಯಕರಾದಾಗ ಕಣ್ಣೀರೇ…

ಪ್ರಧಾನಿ ಮೋದಿ ಸಾಂತ್ವನ
ಸೋತ ಭಾರತೀಯ ತಂಡದ ಪರಿಸ್ಥಿತಿ ಹೇಗಿರಬಹುದು ಎಂಬ ಅರಿವಿದ್ದೇ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್‌ ಕೊಠಡಿಯನ್ನು ಪ್ರವೇಶಿಸಿದರು. ಉದ್ವೇಗಕ್ಕೊಳಗಾಗಿದ್ದ ವೇಗಿ ಮೊಹಮ್ಮದ್‌ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಶಮಿ, ತಂಡದ ಬೆಂಬಲಕ್ಕೆ ನಿಂತಿರುವ ಎಲ್ಲ ಭಾರತೀಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸಿ ನಮಗೆ ಸಮಾಧಾನ ಹೇಳಿದ ಪ್ರಧಾನಿ ಮೋದಿ ಎಲ್ಲರ ಉತ್ಸಾಹವನ್ನು ಬಡಿದೆಬ್ಬಿಸಿದರು. ಅವರಿಗೂ ಧನ್ಯವಾದ, ನಾವು ಮತ್ತೆ ತಿರುಗಿ ಬೀಳುತ್ತೇವೆ ಎಂದಿದ್ದಾರೆ.
ಮೋದಿಗೆ ರವೀಂದ್ರ ಜಡೇಜ ಕೂಡ ಕೃತಜ್ಞತೆ ಅರ್ಪಿಸಿದ್ದಾರೆ. ನಮ್ಮೆಲ್ಲರ ಹೃದಯಗಳು ಒಡೆದುಹೋಗಿವೆ. ಆದರೆ ಜನರ ಬೆಂಬಲ ನಮ್ಮನ್ನು ಮುಂದಕ್ಕೆ ನಡೆಸುತ್ತಿದೆ. ಪ್ರಧಾನಿ ಮೋದಿ ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸಿದ್ದು ವಿಶೇಷವಾಗಿತ್ತು, ಸ್ಫೂರ್ತಿದಾಯಕವಾಗಿತ್ತು ಎಂದು ಜಡೇಜ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next