Advertisement

ಅಕ್ರಮ ಕಟ್ಟಡ ತೆರವಿಗೆ ತೆರಳಿದ ಅಧಿಕಾರಿಗಳಿಗೆ ಆತ್ಮಹತ್ಯೆ ಬೆದರಿಕೆ

12:34 PM Nov 14, 2018 | Team Udayavani |

ಮೈಸೂರು: ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡ ತೆರವುಗೊಳಿಸಲು ಮುಂದಾದ ನಗರ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳು ಕಟ್ಟಡ ಮಾಲಿಕನ ಆತ್ಮಹತ್ಯೆ ಬೆದರಿಕೆಗೆ ಹೆದರಿ ಬರಿಗೈಯಲ್ಲಿ ವಾಪಸಾದ ಘಟನೆ ನಡೆದಿದೆ. 

Advertisement

ಮೈಸೂರಿನ ರಾಜೀವ್‌ನಗರ 2ನೇ ಹಂತದ ದೇವನೂರು ಟ್ಯಾಂಕ್‌ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಶಾದಿ ಮಹಲ್‌ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳು ಉದಯಗಿರಿ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ಕಾರ್ಯಾಚರಣೆಗಾಗಿ 10 ಜೆಸಿಬಿ, 4 ಗ್ಯಾಸ್‌ ಕಟರ್‌ಗಳು, ಟಿಪ್ಪರ್‌ಗಳು, 30 ಗನ್‌ಮ್ಯಾನ್‌ಗಳ ತಂಡದ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ಅಧಿಕಾರಿಗಳು ಸ್ಥಳಕ್ಕಾಗಮಿಸಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕಟ್ಟಡ ಮಾಲಿಕ ಕಟ್ಟಡದ ಮೇಲೇರಿ ಕುಳಿತು, ಕಟ್ಟಡ ತೆರವುಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದರಿಂದ ಕಟ್ಟಡ ತೆರವುಗೊಳಿಸುವುದನ್ನು ಕೈಬಿಟ್ಟ ಅಧಿಕಾರಿಗಳು ಬರಗೈಯಲ್ಲಿ ಹಿಂದಿರುಗಿದರು. 

ಘಟನೆ ಹಿನ್ನೆಲೆ: ದೇವನೂರು ಗ್ರಾಮದ ಸಹೋದರರಾದ ಮುಶೀರ್‌ ಅಹಮದ್‌ ಹಾಗೂ ಮೊಹಮದ್‌ ಫಾಹಿದ್‌ ರಾಜೀವ್‌ನಗರದ 2ನೇ ಹಂತದದಲ್ಲಿರುವ ಸರ್ವೇ ನಂ50/1, 50/10/11/12ರಲ್ಲಿ 20 ಗುಂಟೆ ಜಾಗದಲ್ಲಿ ಶಾದಿ ಮಹಲ್‌ ನಿರ್ಮಿಸುತ್ತಿದ್ದರು. ಆದರೆ ಈ ಜಾಗ ಕೃಷಿ ಭೂಮಿಯಾಗಿದ್ದು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಂಡಿರಲಿಲ್ಲ.

ಅಲ್ಲದೆ ಇದಕ್ಕೆ ನಗರ ಯೋಜನೆ ಪ್ರಾಧಿಕಾರದಿಂದ ಅನುಮತಿ ಪಡೆಯದೆ, ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವಿಷಯ ತಿಳಿದ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ತೆರವುಗೊಳಿಸಲು ಮುಂದಾದರು. ಈ ವೇಳೆ ಸ್ಥಳಕ್ಕಾಗಮಿಸಿದ ಕಟ್ಟಡದ ಮಾಲಿಕರು ಕಟ್ಟಡವನ್ನು ತೆರವುಗೊಳಿಸದಂತೆ ಒತ್ತಾಯಿಸಿದರಲ್ಲದೆ, ಅಧಿಕಾರಿಗಳ ಜತೆಗೆ ಮಾತಿನ ಚಕಮಕಿ ನಡೆಸಿದರು.

Advertisement

ಈ ವೇಳೆ ಕಟ್ಟಡದ ಮೇಲೇರಿದ ಮುಶೀರ್‌ ಆಹಮದ್‌ ಶಾದಿ ಮಹಲ್‌ ಕೆಡವಲು ಮುಂದಾದರೆ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದರಿಂದ ಆತಂಕಕ್ಕೊಳಗಾದ ಅಧಿಕಾರಿಗಳು ಕೆಳಗಿಳಿಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅಲ್ಲದೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಮನಗಂಡ ಅಧಿಕಾರಿಗಳು ಕಟ್ಟಡ ತೆರವು ಮಾಡುವ ಕಾರ್ಯವನ್ನು ಕೈಬಿಟ್ಟು ಸ್ಥಳದಿಂದ ತೆರಳಿದರು. 

ಸ್ಥಳೀಯರ ಆಕ್ರೋಶ: ಅಧಿಕಾರಿಗಳ ಕಾರ್ಯಾಚರಣೆ ವಿಷಯ ತಿಳಿದು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಅಲ್ಲದೇ ಕಟ್ಟಡ ತೆರವುಗೊಳಿಸುವ ವೇಳೆ ಮಹಾನಗರ ಪಾಲಿಕೆ ಹಾಗೂ ಮುಡಾ ಆಯುಕ್ತರು, ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಯಾವುದೇ ಅನಾಹುತ ಸಂಭವಿಸಬಹುದಾದ ಈ ರೀತಿಯ ಸನ್ನಿವೇಶಗಳಲ್ಲಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಬೇಕು. ಆದರೆ ಯಾರೊಬ್ಬರು ಸ್ಥಳಕ್ಕೆ ಆಗಮಿಸಿಲ್ಲ ಎಂದು ಕಿಡಿಕಾರಿದರು. 

ಈ ವೇಳೆ ಕಟ್ಟಡದ ಮಾಲಿಕರು ಕಟ್ಟಡ ತೆರವುಗೊಳಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತರಲು ನಿರ್ಧರಿಸಿದ್ದಾರೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುಡಾ ಕಾರ್ಯದರ್ಶಿ ಎಂ.ಕೆ.ಸವಿತಾ, ಕಾರ್ಯಕಾರಿ ಅಭಿಯಂತರರಾದ ಪ್ರಭಾಕರ್‌, ಸುವರ್ಣ, ವಿಶೇಷ ಭೂ ಸ್ವಾಧೀನ ಅಧಿಕಾರಿ ಚಂದ್ರಮ್ಮ, ಮುಡಾ ಸಹಾಯಕ ಕಾರ್ಯಕಾರಿ ಅಭಿಯಂತರ ಮೋಹನ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next