Advertisement

Kannada: ನ. 2ರಿಂದ ಕನ್ನಡರಥ ಯಾತ್ರೆ: ಒಂದು ವರ್ಷ ರಾಜ್ಯಾದ್ಯಂತ ಸಂಚಾರ

09:40 PM Oct 27, 2023 | Team Udayavani |

ಬೆಂಗಳೂರು: ಕರುನಾಡಿಗೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವರ್ಷಪೂರ್ತಿ ಕನ್ನಡ ಕಾರ್ಯಕ್ರಮ ನಡೆಸಲಿದ್ದು, ನ. 2ರಿಂದ “ಕನ್ನಡ ರಥ’ ಯಾತ್ರೆ ಆರಂಭವಾಗಲಿದೆ. ಅಂದು ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಈ ರಥ ವರ್ಷಪೂರ್ತಿ ನಾಡಿನ ಉದ್ದಗಲ ಸಂಚರಿಸಲಿದೆ.

Advertisement

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ಕರ್ನಾಟಕ ಎಂದು ನಾಮಕರಣವಾದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರೂಪಿಸಿದ ಕಾರ್ಯಕ್ರಮ ಮಾದರಿಯಲ್ಲೇ ಯೋಜನೆ ರೂಪಿಸಿದ್ದೇವೆ. ಆಗ ನ. 2ರಂದು ಹಂಪಿಯಲ್ಲಿ, ನ. 3ರಂದು ಗದುಗಿನ ವೀರನಾರಾಯಣ ದೇಗುಲದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದೇ ಮಾದರಿಯಲ್ಲಿ ನಮ್ಮ ಸರಕಾರ ಯೋಜನೆ ರೂಪಿಸಿದೆ’ ಸಚಿವ ತಂಗಡಗಿ ವಿವರಿಸಿದರು.

ನ. 2ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಗಂಗಾಜಲ ಪೂಜೆಯೊಂದಿಗೆ ತಾಯಿ ಭುವನೇಶ್ವರಿಗೆ ಅರ್ಚನೆ ಸಲ್ಲಿಸುವರು. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ ಅವರು ಕನ್ನಡದ ಮಂತ್ರ ಪಠಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಕಾಲ್ನಡಿಗೆಯಲ್ಲಿ ಆಗಮನ

ವಿರೂಪಾಕ್ಷ ದೇಗುಲದ ಎದುರಿನ ಬಸವ ಮಂಟಪದ ವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಲ್ನಡಿಗೆಯಲ್ಲಿ ಬರಲಿದ್ದಾರೆ. ಆ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಿಂದ ಹೂಮಳೆ ಸುರಿಸಲಾಗುತ್ತದೆ. ಅಲ್ಲಿಯೇ ಕನ್ನಡದ ರಥಕ್ಕೆ ಚಾಲನೆ ಸಿಗಲಿದೆ. ಅದೇ ದಿನ ಕೊಪ್ಪಳ ಮಾರ್ಗವಾಗಿ ರಥ ಲಕ್ಕುಂಡಿಗೆ ಸಾಗಲಿದೆ. ನ. 3ರಂದು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿಯೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭಾಗವಹಿಸಲಿದ್ದು, ರಥಯಾತ್ರೆಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಲಾಗಿದೆ ಎಂದು ವಿವರಿಸಿದರು. ನ. 2ರಂದು ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ತಂಗಡಗಿ ಹೇಳಿದ್ದಾರೆ.

Advertisement

ಎಲ್ಲ ಜಿಲ್ಲೆಗಳಲ್ಲಿ ಯಾತ್ರೆ

ಕರ್ನಾಟಕ ಏಕೀಕಕರಣದ ವಿಷಯ, ಸಾಹಿತ್ಯ, ಸಾಧನೆಗಳ ಪಥ, ಐತಿಹಾಸಿಕ ನೆಲೆಗಳ ಮಾಹಿತಿ, ಕನ್ನಡ ಜ್ಯೋತಿ, ಭುವನೇಶ್ವರಿ ಪ್ರತಿಮೆ ಸಹಿತ ರಾಜ್ಯದ ಎಲ್ಲ 31 ಜಿಲ್ಲೆಗಳ ಪರಿಚಯ ಮಾಡಿಕೊಡುವ ವಿಶೇಷ ಕರ್ನಾಟಕ ಪಾರಂಪರಿಕ ರಥಯಾತ್ರೆ ಎಲ್ಲ 31 ಜಿÇÉೆಗಳ ಸಹಿತ ಎಲ್ಲ ತಾಲೂಕು ಕೇಂದ್ರ, ಹೋಬಳಿ ಕೇಂದ್ರ ಹಾಗೂ ಮತ್ತು ಎಲ್ಲ ಗ್ರಾಮಗಳಲ್ಲೂ ಸಂಚರಿಸಲಿದೆ ಎಂದರು.

ಈ ಹಿನ್ನೆಲೆಯಲ್ಲಿ ಎಲ್ಲ ಶಾಲಾ- ಕಾಲೇಜುಗಳಲ್ಲಿ ನನ್ನ ಭಾಷೆ, ನನ್ನ ಹಾಡು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಎಲ್ಲ ಜಿಲ್ಲೆಗಳ ಸ್ಥಳೀಯ ಕಲಾಪ್ರಕಾರ, ಸ್ಥಳೀಯ ಕಲಾವಿದರು ಹಾಗೂ ಕಲಾ ತಂಡಗಳನ್ನು ಬಳಸಿಕೊಳ್ಳಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಕಲಾ ಪ್ರಕಾರಗಳನ್ನು ಹಳೇ ಮೈಸೂರು ಭಾಗಕ್ಕೆ, ಇಲ್ಲಿನ ಕಲಾ ಪ್ರಕಾರಗಳನ್ನು ಆ ಭಾಗಕ್ಕೆ ಕೊಂಡೊಯ್ಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಹೊರನಾಡು ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರು ಪಾಲ್ಗೊಳ್ಳಬೇಕು. ಈ ಸಂಬಂಧ 50ಕ್ಕೂ ಹೆಚ್ಚು ದೇಶದಲ್ಲಿನ ಅನಿವಾಸಿ ಕನ್ನಡಿಗರ ಜತೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಂಬಂಧ ಶೀಘ್ರದಲ್ಲೇ ವರ್ಚುವಲ್‌ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಐಟಿ- ಬಿಟಿ ಕಂಪೆನಿಗಳ ಉದ್ಯೋಗಿಗಳು ಕರ್ನಾಟಕ ಸಂಭ್ರಮದ ಭಾಗವಾಗಲಿದ್ದು, ಅವರೊಂದಿಗೂ ಚರ್ಚೆ ನಡೆಸಲಾಗಿದೆ. ನ. 1ರಂದು ಮನೆಮನೆಗಳಲ್ಲಿ ಕನ್ನಡದ ಸಂಭ್ರಮಾಚರಣೆ ನಡೆಸಲಿದ್ದು, ರಂಗೋಲಿ ಸ್ಪರ್ಧೆ ನಡೆಯುತ್ತದೆ. ಸಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆಂಪು-ಹಳದಿ ಬಣ್ಣದ ಗಾಳಿಪಟ ಸ್ಪರ್ಧೆ ನಡೆಯಲಿದೆ ಎಂದರು.

ಕನ್ನಡ ಗೀತೆಗಳ ಗಾಯನ

ನ. 1ರಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಕವಿಗಳ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ ಸಲ್ಲಿಸುವರು. ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ವಿರಚಿತ “ಎಲ್ಲಾದರು ಇರು ಎಂತಾದರು ಇರು”, ದ.ರಾ. ಬೇಂದ್ರೆಯವರ “ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕರ “ಹೊತ್ತಿತೋ ಹೊತ್ತಿತು ಕನ್ನಡದ ದೀಪ’, ಚನ್ನವೀರ ಕಣವಿಯವರ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಹಾಡನ್ನು ರಾಜ್ಯಾದ್ಯಂದ ಹಾಡಲಾಗುತ್ತದೆ. ಈ ಸಂಬಂಧ ಸರಕಾರಿ ಆದೇಶ ಹೊರಡಿಸಲಾಗಿದೆ. ವಿಶೇಷ ಅಂಚೆ ಚೀಟಿ ಪ್ರಕಟನೆಗಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಂಗಡಗಿ ಹೇಳಿದರು.

ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ

ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಾಣ, ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪ್ರತಿಮೆ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಸ್ಥಳ ಘೋಷಣೆ ಮಾಡುವರು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ರಾಜ್ಯದ ಏಕೈಕ ಭುವನೇಶ್ವರಿ ಪ್ರತಿಮೆ ಜೀರ್ಣೋದ್ಧಾರಕ್ಕೆ ಚಿಂತನೆ ನಡೆಸಲಾಗಿದೆ. 50 ಸಾಧಕಿಯರಿಗೆ ಸಮ್ಮಾನ, ಕರ್ನಾಟಕ ಏಕೀಕರಣದಿಂದ ಇಲ್ಲಿಯವರೆಗಿನ ಸಮಗ್ರ ಸ್ಮರಣಸಂಚಿಕೆ ಹಾಗೂ 50 ಪುಸ್ತಕ ಬಿಡುಗಡೆ ಮಾಡಲಾಗುವುದು. ಮೈಸೂರು ಪಾಕ್‌ ಮಾದರಿಯಲ್ಲಿ ಕೆಎಂಎಫ್ ಸಹಯೋಗದೊಂದಿಗೆ ಕರ್ನಾಟಕ ಪಾಕ್‌ ಎಂಬ ಸಿಹಿ ತಿನಿಸು ರೂಪಿಸಲಾಗುವುದು. 31 ಜಿಲ್ಲೆಗಳಲ್ಲಿ ಹಲಿ¾ಡಿ ಶಾಸನದ ಪ್ರತಿಕೃತಿಗಳನ್ನು ಸ್ಥಾಪಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next