Advertisement

47 ಸಾವಿರ ಕುಟುಂಬಗಳಿಗೆ ಪೌಷ್ಟಿಕ ಆಹಾರ- 120 ಕೊಟಿ ರೂ.ಗಳಿಗೆ ಸಚಿವ ಸಂಪುಟ ಅನುಮೋದನೆ

11:37 PM Dec 21, 2023 | Team Udayavani |

ಬೆಂಗಳೂರು: ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸು ತ್ತಿರುವ 47,859 ಕುಟುಂಬಗಳಿಗೆ ವರ್ಷದ 12 ತಿಂಗಳೂ ಉಚಿತವಾಗಿ ಪೌಷ್ಟಿಕ ಆಹಾರ ಒದಗಿಸಲು 120 ಕೊಟಿ ರೂ.ಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

Advertisement

8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ ಸಹಿತ 11 ಬುಡಕಟ್ಟು ಪಂಗಡಗಳ ಕುಟುಂಬಗಳಿಗೆ ವರ್ಷದ 12 ತಿಂಗಳೂ ಪೌಷ್ಟಿಕ ಆಹಾರ ನೀಡಲಾಗುವುದು ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು. ಈ ಹಿಂದೆ ಅವರಿಗೆ 6 ತಿಂಗಳು ಮಾತ್ರ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು.

ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ ನೆರವಿನಡಿ ಮಂಗಳೂರು ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವ ನೀರು ಸರಬರಾಜು ಕಾಮಗಾರಿಯಲ್ಲಿ ಹೊಸದಾಗಿ 125 ಎಂಎಲ್‌ಡಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ 127.70 ಕೋಟಿ ರೂ.ಗಳನ್ನು ನೀಡಿದೆ. ಕೆಎಸ್‌ಆರ್‌ಟಿಸಿ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ನಿಗಮಗಳಿಂದ ಒಟ್ಟು 750 ಎಲೆಕ್ಟ್ರಿಕ್‌ ಬಸ್‌ಗಳನ್ನು ಜೆಸಿಸಿ ಆಧಾರದಲ್ಲಿ ಕಾರ್ಯಾಚರಣೆ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದ್ದು, ಬಿಎಂಟಿಸಿಯಿಂದ 20 ಎಲೆಕ್ಟ್ರಿಕ್‌ ಬಸ್‌ಗಳನ್ನು ಇದೇ ಮಾದರಿಯಲ್ಲಿ ಕಾರ್ಯಾಚರಣೆ ಮಾಡಲೂ ಅನುಮೋದಿಸಿದೆ ಎಂದು ಮಾಹಿತಿ ನೀಡಿದರು.

ಕೆಪಿಎಸ್‌ಸಿ, ಕೆಇಎ ಮೂಲಕ ನೇಮಕಾತಿ
ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಮತ್ತು ಪ್ರಾಂಶುಪಾಲರ ವೃಂದಕ್ಕೆ ಸಂಬಂಧಿಸಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿಗೆ ಅನುಕೂಲ ಆಗುವಂತೆ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮ-2023ಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದ ಜಂಟಿ ನಿರ್ದೇಶಕರ 5 ಹುದ್ದೆಗಳ ಮರುನಾಮೀಕರಣ, ಕೆಪಿಎಸ್‌ಸಿ ಅಥವಾ ಕೆಇಎ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅವಕಾಶ ಸಿಗಲಿದೆ. ಸರಕಾರದಿಂದ ವಹಿಸಬಹುದಾದ ಬೇರೆ ಯಾವುದಾದರೂ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕ ಮಾಡುವ ಪ್ರಸ್ತಾವನೆಯನ್ನು ಕೈಬಿಡಲಾಗಿದೆ.

ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ
ಕಾಲೇಜು ಶಿಕ್ಷಣ ಇಲಾಖೆ ಮತ್ತು 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯವಿರುವ 347 ಗ್ರೂಪ್‌ ಡಿ ನೌಕರರು ಮತ್ತು 102 ಡಾಟಾ ಎಂಟ್ರಿ ಆಪರೇಟರ್‌ ಸಹಿತ ಒಟ್ಟು 449 ಸಿಬಂದಿ ಸೇವೆಯನ್ನು 11.30 ಕೋಟಿ ರೂ. ವೆಚ್ಚದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಆಡಳಿತಾತ್ಮಕ ಅನುಮೋದನೆ. ಇಲಾಖೆಯ ಕಚೇರಿಗಳು ಸರಕಾರಿ ಪ್ರಥಮದರ್ಜೆ ಕಾಲೇಜುಗಳು ಗ್ರೂಪ್‌ ಡಿ ನೌಕರರ ತೀವ್ರ ಅಭಾವ ಎದುರಿಸುತ್ತಿದ್ದು, ದೈನಂದಿನ ಚಟುವಟಿಕೆ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಹೀಗಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಅನುಮೋದಿಸಿದ್ದು, ಈ ವೇಳೆ ಹೈದರಾಬಾದ್‌-ಕರ್ನಾಟಕ ಸೇರಿದಂತೆ ಸರ್ಕಾರಿ ಮೀಸಲಾತಿಯನ್ನು ಕಲ್ಪಿಸುವಂತೆ ತಿಳಿಸಿದೆ.

Advertisement

ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು
 ರಾಷ್ಟ್ರೀಯ ಉಚಿತ ರೋಗ ಪತ್ತೆ ಮತ್ತು ಉಚಿತ ಔಷಧ ಸೇವೆಗಳ ಕಾರ್ಯಕ್ರಮದಡಿ ಎಲ್ಲ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಫ‌ಲಾನುಭವಿಗಳಿಗೆ ರೋಗ ಪತ್ತೆ ಸೇವೆ ಒದಗಿಸಲು ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ ಪ್ರಯೋಗಾಲಯ ಉಪಕರಣ, ರಾಸಾಯನಿಕ ಹಾಗೂ ಕಂಪ್ಯೂಟರ್‌ ರೇಡಿಯೋಗ್ರಫಿ ವ್ಯವಸ್ಥೆಗಳಿಗೆ ಡ್ರೈ ಲೇಸರ್‌ ಎಕ್ಸ್‌ರೇ ಫಿಲ್ಮ್ಸ್ ಮತ್ತಿತರ ಪರಿಕರ ಒದಗಿಸಲು 50.15 ಕೋಟಿ ರೂ.
 ಕೈಗಾರಿಕೆಗಳಿಗೆ ಕಾಲುವೆ, ಕೆರೆ, ಜಲಾಶಯಗಳ ಮೂಲಕ ಒದಗಿಸುವ ಪ್ರತಿ ಎಂಎಫ್ಟಿ ನೀರಿಗೆ ವಿಧಿಸುತ್ತಿದ್ದ ರಾಜಧನವನ್ನು 50 ಸಾವಿರ ರೂ.ಗಳಿಂದ 3 ಲಕ್ಷ ರೂ.ಗೆ ಏರಿಕೆ
 ಫೆಬ್ರವರಿ ತಿಂಗಳಲ್ಲಿ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನ ನಡೆಸಲು ನಿರ್ಧರಿಸಿದ್ದು, ದಿನಾಂಕ ನಿಗದಿ ಅಧಿಕಾರ ಸಿಎಂಗೆ ವಹಿಸಲಾಗಿದೆ.
 ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 12 ಕೋಟಿ ರೂ.
 ಇಲಾಖಾ ಮುಖ್ಯಸ್ಥರಿಗೆ ಗೊತ್ತಿಲ್ಲದೆ ಇಲಾಖೆಯ ಹಣ ಇತರೆಡೆಗೆ ವರ್ಗಾವಣೆ ಆಗಿರುವ, ಕೋವಿಡ್‌ ನಿರ್ವಹಣೆಗೆ ಪ್ರತ್ಯೇಕ ಸಂಪುಟ ಉಪಸಮಿತಿ ರಚಿಸಲು ಸಿಎಂಗೆ ಅಧಿಕಾರ.

Advertisement

Udayavani is now on Telegram. Click here to join our channel and stay updated with the latest news.

Next