Advertisement

ರಾಜ್ಯದಲ್ಲಿ ಈಗ ಮೀಸಲಾತಿ ಸಮರ

07:58 AM Oct 09, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈಗ ಮೀಸಲಾತಿ ಸಮರ ಶುರುವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರವನ್ನೂ ಮುಂಬರುವ ಚುನಾವಣೆಗೆ ಹತ್ತರಲ್ಲೊಂದು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಮುಂದಾಗಿವೆ.  “”ಹಿಂದುಳಿದ ವರ್ಗಗಳ ಎಲ್ಲಾ ಜಾತಿಗಳಿಗೂ ಮೀಸಲಾತಿಯ ಲಾಭ ಸಿಗಬೇಕೆಂಬ ಉದ್ದೇಶದಿಂದ ಒಳಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತ್ಯೇಕ ಸಮಿತಿ ರಚಿಸಿದ್ದಾರೆ” ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು. 

Advertisement

ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಭಾನುವಾರ ಹಮ್ಮಿ ಕೊಂಡಿದ್ದ 9ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಹಿಂದುಳಿದ ವರ್ಗಗಳ 109 ಉಪಪಂಗಡಗಳಿದ್ದು, ಶೇ. 30ರಷ್ಟು ಮೀಸಲಾತಿ ಇದ್ದರೂ ಅದರ ಲಾಭ ಸಿಗುತ್ತಿಲ್ಲ. ಅದೇ ರೀತಿ ದೇಶದ ಇತರೆ ಭಾಗದಲ್ಲೂ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಕಲ್ಪಿಸಲು ಪ್ರಧಾನಿ ಮೋದಿ ಅವರು ಸಮಿತಿ ರಚಿಸಿದ್ದು, ಸಮಿತಿ ವರದಿ ಆಧರಿಸಿ ಎಲ್ಲಾ ವರ್ಗಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮತ್ತು ತೀರಾ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾಜದಲ್ಲಿ ಎಲ್ಲಾ ಜಾತಿ, ವರ್ಗಗಳಿಗೆ ಅವರ ಅಧಿಕಾರ, ಪ್ರೋತ್ಸಾಹ ಸಿಗಬೇಕು ಎಂಬ ಕಾರಣಕ್ಕೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಮೋದಿ ಅವರು ಮುಂದಾದರು. ಆದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಅದಕ್ಕೆ ಅಡ್ಡಿಪಡಿಸಿತು. ಹೀಗಿದ್ದರೂ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡುವ ಬಿಜೆಪಿಯ ಪ್ರಯತ್ನಕ್ಕೆ ವಿಶ್ವದ ಯಾವುದೇ ಶಕ್ತಿಯೂ
ಅಡ್ಡಿಪಡಿಸಲು ಸಾಧ್ಯವಿಲ್ಲ. ನವಭಾರತ ನಿರ್ಮಾಣ ಆಗಬೇಕಾದರೆ ಸಾಮಾಜಿಕ ನ್ಯಾಯ ಸಿಗಲೇ ಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಈಗಿನ ಸರ್ಕಾರ ವಿಶ್ವಕರ್ಮರಿಗೆ ಸಿಗಬೇಕಾದ ಹಕ್ಕು ಮತ್ತು ಅಧಿಕಾರಗಳನ್ನು ನೀಡಿಲ್ಲ ಎಂದು ಗೊತ್ತಾಗಿದೆ. ಆದರೆ, ಈ ಜನಸಮೂಹ ನೋಡಿದರೆ ಮತ್ತು ವೇದಿಕೆಯಲ್ಲಿರುವ ಸ್ವಾಮೀಜಿಗಳ ಆಶೀರ್ವಾದ ಇರುವಾಗ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಯಡಿಯೂರಪ್ಪಗೆ ಸಿಎಂ ಸವಾಲು
“ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರದಲ್ಲಿ ನಮ್ಮ ಬದ್ಧತೆಯನ್ನು ಪ್ರಶ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.
ಯಡಿಯೂರಪ್ಪ, ತಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇ. 70ಕ್ಕೆ ಹೆಚ್ಚಿಸುವುದಾಗಿ ಘೋಷಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು. ನಗರದ ಡಾ.ಪ್ರಭಾಕರ ಕೋರೆ ಕನ್ವೆನನ್‌ ಸೆಂಟರ್‌ನಲ್ಲಿ ಭಾನುವಾರ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಮೀಸಲಾತಿ ಪ್ರಮಾಣವನ್ನು ಶೇ. 50ರಿಂದ 70ರಷ್ಟು ಹೆಚ್ಚಿಸಲು ನಾವು ಬದ್ಧ. ಇದರಲ್ಲಿ ಸಂಶಯವೇ ಇಲ್ಲ. ಆದರೆ, ಈ ಭರವಸೆ ಪೊಳ್ಳು ಎನ್ನುತ್ತಿರುವ ಯಡಿಯೂರಪ್ಪ, ಮೀಸಲಾತಿ ಪ್ರಮಾಣ ಶೇ. 70ರಷ್ಟು ಹೆಚ್ಚಿಸಲು ತಾವು ಬದ್ಧ ಎಂದು ಘೋಷಿಸಲಿ. ಆ ಮೂಲಕ ಹಿಂದುಳಿದ ವರ್ಗಗಳ ಬಗ್ಗೆ ತಮ್ಮ ಬದ್ಧತೆ ಪ್ರದರ್ಶಿಸಲಿ ಎಂದರು.

Advertisement

“ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಕಲ್ಪಿಸಿದ ದೇಶದ ಏಕೈಕ ರಾಜ್ಯ
ಕರ್ನಾಟಕ. ಈ ವ್ಯವಸ್ಥೆ ಜಾರಿಗೊಳಿಸಿದ ಹೆಗ್ಗಳಿಕೆ ನಮ್ಮದು. ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡುವ ಕಾನೂನು
ಜಾರಿಗೊಳಿಸಿದ್ದೇವೆ. ಈಗ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಲು ಬದ್ಧವಾಗಿದ್ದೇವೆ. ಇದನ್ನು ಈ ಹಿಂದೆ ಐದು ವರ್ಷ
ಆಡಳಿತ ಮಾಡಿದ ಬಿಜೆಪಿಯಾಗಲಿ ಅಥವಾ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಾಗಲಿ ಯಾಕೆ ಮಾಡಲಿಲ್ಲ’ ಎಂದು ಕೇಳಿದ
ಮುಖ್ಯಮಂತ್ರಿ ಸಿದ್ದರಾಮಯ್ಯ, ಮೀಸಲಾತಿ ವಿರೋಧಿಗಳು ನಮಗೆ ಪಾಠ ಹೇಳಿಕೊಡುತ್ತಿದ್ದಾರೆ. ಆದರೆ, ವಾಸ್ತವ ಜನರಿಗೆ
ಗೊತ್ತಿದೆ ಎಂದು ತೀಕ್ಷ್ಣವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next