Advertisement

ದಿಟ್ಟ ಹೋರಾಟದ ಚಂಪಾ; ಇಂದಿರಾಗಾಂಧಿ ತುರ್ತು ಪರಿಸ್ಥಿತಿ ವಿರೋಧಿಸಿ ಅಂದು ಜೈಲು ಸೇರಿದ್ರು…

12:01 PM Jan 10, 2022 | Team Udayavani |

ಹೆಗಲಿಗೊಂದು ಕನ್ನಡದ ಶಾಲು, ಬಗಲಲ್ಲೊಂದು ಪುಟಾಟಿ ಬ್ಯಾಗು, ಉರೂಟು ಕನ್ನಡಕ, ಜವಾರಿ ಮಾತು ! ಇದರೊಟ್ಟಿಗೆ “ಕನ್ನಡ ಕನ್ನಡ ಬರ‍್ರಿ ನಮ್ಮ ಸಂಗಡ’’ ಎಂದು ಗೇಯವಾಗಿ ಹೇಳಿಕೆಯೊಂದು ಕೇಳಿ ಬಂದರೆ ಅಲ್ಲಿರುವುದು ಚಂದ್ರಶೇಖರ್ ಪಾಟೀಲರು ಅರ್ಥಾತ್ ಚಂಪಾ ಎಂದು ಯಾರಾದರೂ ಅರ್ಥೈಸಿಕೊಳ್ಳಬಹುದಿತ್ತು. ಅಷ್ಟರ ಮಟ್ಟಿಗೆ ಕನ್ನಡ ಹೋರಾಟದಲ್ಲೊಂದು ಅನನ್ಯತೆಯ ಛಾಪು ಓತ್ತಿದ್ದ ಚಂಪಾ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.

Advertisement

ಇದನ್ನೂ ಓದಿ:ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ನಿಧನ

ಚಂಪಾ ಎಂದರೆ ಹಾಗೆ. ಅಲ್ಲೊಂದು ಕಟು ಸತ್ಯವಿರುತ್ತದೆ. ಒಪ್ಪಿದರೆ ಒಪ್ಪಿ, ಇಲ್ಲವಾದರೆ ಇಲ್ಲ ಎಂಬ ಹಾರಿಕೆಯ ಹೋರಾಟ ಅವರದ್ದಲ್ಲ. ನಾವು ಚಳವಳಿ ನಡೆಸುವುದೇ ಕನ್ನಡಪರವಾದ ನಿಲುವನ್ನು ಒಪ್ಪಿಸುವುದಕ್ಕಾಗಿ ಎಂದು ಸ್ಪಷ್ಟತೆಯೊಂದಿಗೆ ಅಖಾಡಕ್ಕೆ ಇಳಿಯುತ್ತಿದ್ದರು. ಪಾಠ, ಸಾಹಿತ್ಯ ಕೃಷಿ ಹಾಗೂ ಹೋರಾಟದ ಮೂಲಕವಾಗಿಯೇ ಬೆಳೆದ ಚಂಪಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೂ ಬಂಡಾಯದ ಮೂಲಕವೇ. ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳಲ್ಲದವರಿಗೇ ಮಾನ್ಯತೆ ಜಾಸ್ತಿ ಎಂದು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿ ಅಲ್ಲಿನ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಬಂಡಾಯ ಸಾರಿ ಚುನಾವಣೆಯಲ್ಲಿ ಗೆದ್ದು ಬಂದ ಚಂಪಾ ಕನ್ನಡಪರ ಹೋರಾಟದ ಅನನ್ಯ ಧ್ವನಿಯಾಗಿದ್ದರು.

ಕನ್ನಡದ ಭಾವಜೀವಿಗಳೆಲ್ಲ ಸದಾ ಗುನುಗುವ “ಸದಾ ಗುಪ್ತಗಾಮಿನಿ ನನ್ನ ಶಾಲ್ಮಲ’’ ಎಂಬ ಗೀತೆಯಷ್ಟೇ ಅಲ್ಲದೇ ಸಂಕ್ರಾತಿ ಎಂಬ ಮಾಸ ಪತ್ರಿಕೆಯನ್ನು ಸುದೀರ್ಘ ವರ್ಷಗಳ ಕಾಲ ನಡೆಸುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಚಂಪಾ ಸದಾ ಪ್ರಸ್ತುತರಾಗಿದ್ದರು. ಕನ್ನಡದ ಕಾವ್ಯ ಜಗತ್ತು ಸೊರಗುತ್ತಿದೆಯೇ ಎಂಬ ಪ್ರಶ್ನೆ ಬಂದಾಗ “ಕನ್ನಡದ ಆದಿ ಕವಿ ಪಂಪ, ಅಂತ್ಯಕವಿ ಚಂಪಾ’’ ಎಂದು ಸ್ವಯಂ ಘೋಷಿಸಿಕೊಂಡಿದ್ದರು.

ಒಂದು ಕಾಲದಲ್ಲಿ ಚಂಪಾ ಹಾಗೂ ಪ್ರೊ.ಯು.ಆರ್.ಅನಂತಮೂರ್ತಿಯವರ ಜಗಳ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭಾರಿ ಸದ್ದು ಹಾಗೂ ಸುದ್ದಿ ಎರಡನ್ನೂ ಸೃಷ್ಟಿಸಿತ್ತು. ಲಂಕೇಶ್ ಅವರನ್ನು ಮೊದಲ್ಗೊಂಡು ಸಿದ್ದಲಿಂಗಯ್ಯನವರವರೆಗೂ ಚಂಪಾ ಕಾಲೆಳೆಯದೇ ಬಿಟ್ಟವರಲ್ಲ. ಎಡವೋ, ಬಲವೋ, ಮಧ್ಯವೋ ಯಾವುದೇ ವಾದವಾಗಿರಲಿ, ಅದಕ್ಕೊಂದು ಸ್ಪಷ್ಟತೆ ಬೇಕು. ನೀವು ಬಲಪಂಥೀಯವಾದವನ್ನು ಒಪ್ಪಿದರೆ ಅದಕ್ಕೆ ಬದ್ಧವಾಗಿರಿ, ಎಡಪಂಥವಾದರೆ ಅದನ್ನು ನಿಷ್ಠೆಯಿಂದ ಪಾಲಿಸಿ. ಅದನ್ನು ಬಿಟ್ಟು ಎಡಬಿಡಂಗಿಗಳಾಗಬೇಡಿ ಎಂದು ಎರಡು ವರ್ಷದ ಹಿಂದೆ ಚಂಪಾ ಹೇಳಿದ್ದ ಮಾತು ಈ ಕಾಲಕ್ಕೆ ತೀರಾ ಅನ್ವಯವಾಗುವ ಸಂಗತಿಯಾಗಿತ್ತು.

Advertisement

ಬಹುಶಃ ಕರ್ನಾಟಕದ ಸಮಕಾಲೀನ ವಿಚಾರಗಳ ಬಗ್ಗೆ ನಿರ್ಭಿಡೆಯಿಂದ ಸ್ಪಂದಿಸುವ, ಪ್ರತಿಕ್ರಿಯಿಸುವ ಸಾಹಿತಿಗಳ ಪೈಕಿ ಪ್ರೊ.ಯು.ಆರ್.ಅನಂತಮೂರ್ತಿ ಹಾಗೂ ಚಂಪಾ ಮೊದಲಿಗರಾಗಿದ್ದರು. ಆದರೆ ಇವರಿಬ್ಬರ ನಡುವೆಯೇ ಅಳಿಸಲಾಗದ ಕಂದರವಿತ್ತು. ಅನಂತಮೂರ್ತಿಯವರ ದ್ವಂದ್ವ ನಿಲುವುಗಳನ್ನು ಚಂಪಾ ಬಹುವಾಗಿ ಕಾಡುತ್ತಿದ್ದರು. “ಅನಂತಮೂರ್ತಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಲ್ಲ, ಹೊಡೆದುಕೊಂಡಿದ್ದು” ಎಂದೊಮ್ಮೆ ನೇರವಾಗಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅನಂತಮೂರ್ತಿ “ಚಂಪಾ ಚೇಳಿನಂತೆ ಆಗಾಗ ಕುಟುಕುತ್ತಾ ಇರುತ್ತಾರೆ’’ ಎಂದು ವಿವಾದ ತಿಳಿಗೊಳಿಸಲು ಯತ್ನಿಸಿದರೆ, “ನಾನು ಚೇಳಾದರೆ ಅನಂತಮೂರ್ತಿ ಘಟಸರ್ಪ’’ ಎಂದು ತಿರುಗೇಟು ನೀಡಿದ್ದರು.

ಚಂಪಾ ಅವರ ಈ ಹಠ ಕೇವಲ ಸಾಹಿತ್ಯ ವಲಯಕ್ಕೆ ಮಾತ್ರ ಸೀಮಿತವಾದುದ್ದಲ್ಲ. ಅಧಿಕಾರಸ್ಥರನ್ನೂ ಅವರು ಕಾಡದೇ ಬಿಟ್ಟಿಲ್ಲ. ಡಾ.ಎಂ.ಎಂ.ಕಲಬುರ್ಗಿ ಅವರ ಕೊಲೆ ಪ್ರಕರಣದ ತನಿಖೆ ವಿಳಂಬವಾದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ತರಾಟೆಗೆ ತೆಗೆದುಕೊಂಡಿದ್ದು ಚಂಪಾ. ಸಾಹಿತಿಗಳು ಎಂದ ಮಾತ್ರಕ್ಕೆ ಪದ ಬರ‍್ಕೋತಾ ಇರೋದಲ್ಲೋ, ಸಮಕಾಲೀನ ಸ್ಥಿತಿಗತಿಗೆ ಸ್ಪಂದಿಸಬೇಕು ಎನ್ನುತ್ತಿದ್ದ ಚಂಪಾ ಅವರ ಪರಮ ಜಗಳಗಂಟುತನವೇ ಅವರ ಟ್ರೇಡ್ ಮಾರ್ಕ್ ಹಾಗೂ ಬಲವಾಗಿತ್ತು.

ಚಂಪಾ ಅವರ ಹೋರಾಟ ಇನ್ನುಳಿದ ಬುದ್ಧಿಜೀವಿಗಳ ರೀತಿ ದಂತಗೋಪುರದ ಒಳಗೆ ಕುಳಿತು ನಡೆಸಿದ್ದಲ್ಲ. ಅವರದ್ದು ಏನಿದ್ದರೂ ಬೀದಿ ಹೋರಾಟ. ಲಂಡನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾಗ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದರ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಸೇರಿದ್ದರು. ಬಹುಶಃ ಸರಕಾರ ನೌಕರಿಯಲ್ಲಿದ್ದು ಸರಕಾರವನ್ನು ವಿರೋಧಿಸಿ ಜೈಲು ಸೇರಿದ ಸಾಹಿತಿಗಳ ಪೈಕಿ ಚಂಪಾ ಮೊದಲಿಗರಿರಬಹುದು. ಅದೇ ರೀತಿ ಗೋಕಾಕ್ ಚಳವಳಿಯ ಅಖಾಡಕ್ಕೆ ಡಾ.ರಾಜ್‌ಕುಮಾರ್ ಅವರನ್ನು ಕರೆತರುವಲ್ಲಿ ಚಂಪಾ ಪಾತ್ರ ಮಹತ್ವದ್ದಾಗಿತ್ತು. ಈ ಹೋರಾಟ ಯಶಸ್ವಿಯಾದಾಗ ರಾಜ್‌ಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂದು ಪ್ರತಿಪಾದಿಸಿದ್ದೂ ಚಂಪಾ. ಇದೇ ಕಾರಣಕ್ಕಾಗಿ ಅವರು ಲಂಕೇಶ್ ಜತೆ ಮುನಿಸಿಕೊಂಡು ಆ ಪತ್ರಿಕೆಗೆ ಲೇಖನ ಬರೆಯುವುದನ್ನೇ ನಿಲ್ಲಿಸಿದ್ದರು.

ಚಂಪಾ ತಮ್ಮ ಹೋರಾಟದ ನೆಲೆಯನ್ನು ಧಾರವಾಡದಿಂದ ಬೆಂಗಳೂರಿಗೆ ಬದಲಾಯಿಸದೇ ಇದಿದ್ದರೆ ಇನ್ನಷ್ಟು ಪ್ರಖರವಾಗಿ ಬೆಳೆಯಬಹುದಿತ್ತು, ಬೆಳಗಬಹುದಿತ್ತು ಎಂಬ ಮಾತು ಸಾಹಿತ್ಯಿಕ ವಲಯದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಬೇಂದ್ರೆ, ಗೋಕಾಕ್‌ರಂಥ ಕವಿಗಳ ಜತೆಗೆ ಆರ್ದ್ರವಾದ ಪ್ರೀತಿಯನ್ನಿಟ್ಟುಕೊಂಡೇ ಅವರನ್ನು ಟೀಕಿಸುತ್ತಿದ್ದ ಚಂಪಾ ಅವರಂಥ ವಸ್ತುನಿಷ್ಠ ವ್ಯಕ್ತಿಗಳಿಲ್ಲದೇ ಕನ್ನಡದ ಸಾರ್ವಜನಿಕ ಬದುಕು ಇನ್ನು ಕಳೆ ಕಳೆದುಕೊಳ್ಳುವುದು ಸುಳ್ಳಲ್ಲ. ಧಾರವಾಡದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಚಂಪಾ ಬರೆದಿದ್ದು ಕಡಿಮೆ. ಆದರೆ ಕನ್ನಡಕ್ಕಾಗಿ ಆಧಿಕಾರಸ್ಥರನ್ನು ಬಡಿಯುವುದು ಮಾತ್ರ ಜೀವನದ ಕೊನೆಯ ಕ್ಷಣದವರೆಗೂ ಮುಂದುವರಿಸಿದ್ದರು. ಉಸಿರು ನಿಲ್ಲುವವರೆಗೂ “ಕನ್ನಡ, ಕನ್ನಡ ಬರ‍್ರಿ ನಮ್ಮ ಸಂಗಡ” ಎನ್ನುತ್ತಿದ್ದರು ಚಂಪಾ. ಆ ಹೋರಾಟದ ಜೀವಿಗೊಂದು ಗೌರವಪೂರ್ವಕ ನಮನ.

*ರಾಘವೇಂದ್ರ ಭಟ್

Advertisement

Udayavani is now on Telegram. Click here to join our channel and stay updated with the latest news.

Next