Advertisement

ಬಾರದ ಮಳೆ; ನಿಲ್ಲದ ಬೆಳೆ ನಾಶ

02:47 PM Sep 16, 2018 | Team Udayavani |

ರಾಯಚೂರು: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆ ಒಣಗಿದರೆ, ಅಲ್ಪ ಸ್ವಲ್ಪ ಬೆಳೆದಿದ್ದ ಬೆಳೆಯನ್ನು ಸ್ವತಃ ರೈತರೇ ನಾಶಪಡಿಸುತ್ತಿರುವುದು ಇನ್ನೂ ನಿಂತಿಲ್ಲ. ಜಿಲ್ಲೆಯನ್ನು ರಾಜ್ಯ ಸರ್ಕಾರ ಬರ ಪೀಡಿತ ಎಂದು ಘೋಷಿಸಿರುವುದು ಸಮಾಧಾನದ ಸಂಗತಿಯಾದರೂ ಪರಿಹಾರವಾದರೂ ತ್ವರಿತಗತಿಯಲ್ಲಿ ನೀಡಲಿ ಎಂಬುದು ರೈತರ ನಿರೀಕ್ಷೆ.

Advertisement

ಜಿಲ್ಲೆಯಲ್ಲಿ ಒಂದೆಡೆ ಬರ, ಮತ್ತೂಂದೆಡೆ ನದಿ ಪಾತ್ರದಲ್ಲಿ ನೆರೆ ಬಂದು ಬೆಳೆ ಹಾನಿಯಾಗಿದೆ. ಈಗ ಸರ್ಕಾರ ಬರ ಪರಿಹಾರ ಕಾಮಗಾರಿ ಜತೆಗೆ ಪ್ರವಾಹದಿಂದ ಬೆಳೆ ನಷ್ಟವಾದ ರೈತರನ್ನು ಪರಿಗಣಿಸಬೇಕಿದೆ ಎಂಬ ಒತ್ತಾಯ ಕೇಳಿ ಬರುತ್ತಿದೆ. ಆದರೆ, ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸಿದರೂ ರೈತರು ಮಾತ್ರ ಬಾಡುತ್ತಿರುವ ಬೆಳೆ ನಾಶ ಮಾಡುವುದನ್ನು ನಿಲ್ಲಿಸುತ್ತಿಲ್ಲ. 

ತಾಲೂಕಿನ ಜೇಗರಕಲ್‌ ಗ್ರಾಮದಲ್ಲಿ ಶನಿವಾರ ರೈತನೊರ್ವ ತಾನು ಉಳುಮೆ ಮಾಡುತ್ತಿದ್ದ 18 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ನಾಶಪಡಿಸಿದ್ದಾನೆ. ಗಿಡ ಹೂ ಬಿಡುತ್ತಿದೆಯಾದರೂ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಹೀಗಾಗಿ ವಿಧಿ ಇಲ್ಲದೇ ಈ ಕೆಲಸ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸುತ್ತಾನೆ ರೈತ
ಶಂಕ್ರಪ್ಪ.

ತಾಲೂಕಿನಲ್ಲೇ ಜೇಗರಕಲ್‌ ಹೋಬಳಿ ಅತಿ ಹೆಚ್ಚು ಕೃಷಿ ಜಮೀನು ಹೊಂದಿದೆ. ಏಳು ಸಾವಿರಕ್ಕೂ ಅಧಿಕ ಎಕರೆ ಜಮೀನಿದೆ. ಅದರಲ್ಲಿ ಸುಮಾರು ಮೂರು ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದ ಬೆಳೆಯನ್ನು ರೈತರು ಕೈಯ್ನಾರೆ ನಾಶ ಮಾಡಿದ್ದಾರೆ.

ಪರಿಹಾರಕ್ಕೆ ಒತ್ತಾಯ: ಹಿಂಗಾರು ಬೆಳೆಗೆ ಸಿದ್ಧತೆ ಮಾಡಿಕೊಳ್ಳಲು ರೈತರಿಗೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಬೆಳೆ ಹಾನಿ ಪರಿಹಾರವನ್ನಾದರೂ ತ್ವರಿತಗತಿಯಲ್ಲಿ ವಿತರಿಸಲಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ಕೇಂದ್ರದ ಬರ ಅಧ್ಯಯನ ತಂಡ ಇಲ್ಲಿಗೆ ಭೇಟಿ ಅಧ್ಯಯನ ನಡೆಸುವವರೆಗೂ ಅನುದಾನ ಬಿಡುಗಡೆಯಾಗುವುದು ಕಷ್ಟಕರ. ಇದರಿಂದ ರೈತರಿಗೆ ಪರಿಹಾರ ವಿಳಂಬವಾದರೆ ತೊಂದರೆ ತಪ್ಪಿದ್ದಲ್ಲ. 

Advertisement

ಯಾವ ಬೆಳೆ ಎಷ್ಟು ಹಾನಿ: ಮುಂಗಾರು ಹಂಗಾಮಿನಲ್ಲಿ 3,50,551 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 85,090 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿಯಲ್ಲಿ 37,590 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. 26,293 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 1,37,550 ಹೆಕ್ಟೇರ್‌ ಭತ್ತದ ಗುರಿಯಲ್ಲಿ 85,168 ಹೆಕ್ಟೇರ್‌ ನಾಟಿ ಮಾಡಿದ್ದು. 8,292 ಹೆಕ್ಟೇರ್‌ ಹಾನಿಯಾಗಿದೆ. 

47,905 ಹೆಕ್ಟೇರ್‌ ತೊಗರಿ ಬಿತ್ತನೆ ಗುರಿಯಲ್ಲಿ 48,535 ಹೆಕ್ಟೇರ್‌ ಬಿತ್ತನೆಯಾಗಿದ್ದು, 43,119 ಹೆಕ್ಟೇರ್‌ ಹಾನಿಯಾಗಿದೆ. 45,295 ಹೆಕ್ಟೇರ್‌ ಸಜ್ಜೆ ಬಿತ್ತನೆ ಗುರಿಯಲ್ಲಿ 28,781 ಹೆಕ್ಟೇರ್‌ ಬಿತ್ತನೆಯಾಗಿದ್ದು, 23,647 ಹೆಕ್ಟೇರ್‌ ಹಾನಿಯಾಗಿದೆ. 17,865 ಹೆಕ್ಟೇರ್‌ ಸೂರ್ಯಕಾಂತಿ ಬಿತ್ತನೆ ಗುರಿಯಲ್ಲಿ 4,240 ಹೆಕ್ಟೇರ್‌ ಬಿತ್ತನೆಯಾಗಿದ್ದು, 3,308 ಹೆಕ್ಟೇರ್‌ ಹಾನಿಯಾಗಿದೆ.

500 ಹೆಕ್ಟೇರ್‌ ನವಣೆ ಬಿತ್ತನೆ ಗುರಿಯಲ್ಲಿ 413 ಹೆಕ್ಟೇರ್‌ ಬಿತ್ತನೆಯಾಗಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ 1,210 ಹೆಕ್ಟೇರ್‌ ಔಡಲ ಬಿತ್ತನೆ ಗುರಿಯಲ್ಲಿ 347 ಹೆಕ್ಟೇರ್‌ ಬಿತ್ತನೆ ಆಗಿದೆ. 5515 ಹೆಕ್ಟೇರ್‌ ಹೆಸರು ಬಿತ್ತನೆ ಗುರಿಯಲ್ಲಿ 201 ಹೆಕ್ಟೇರ್‌ ಬಿತ್ತನೆಯಾಗಿದೆ. 

5,237 ಹೆಕ್ಟೇರ್‌ ಶೇಂಗಾ ಬಿತ್ತನೆ ಗುರಿಯಲ್ಲಿ 802 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಟ್ಟು 1,05.805 ಹೆಕ್ಟೇರ್‌ ಪ್ರದೇಶ ಏಕದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳು ಮಳೆ ಕೊರತೆಯಿಂದ ಒಣಗಿದ್ದು. ಶೇ.50ಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಈ ಮಾಹಿತಿ ಆಧರಿಸಿ ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸಿದೆ.

ಸುರಿದ ಮಳೆ ಪ್ರಮಾಣ
ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಇಡೀ ಜಿಲ್ಲೆಯಲ್ಲಿ ಸರಾಸರಿ 338 ಮಿ.ಮೀ. ಮಳೆಯಾಗಿದ್ದು, ಶೇ.58ರಷ್ಟು ಮಳೆ ಕೊರತೆಯಾಗಿದೆ. ಅದರಲ್ಲೂ ಯಾವುದೇ ಭಾಗದಲ್ಲೂ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಜೂನ್‌ 1ರಿಂದ ಸೆ.11 ರವರೆಗೆ ದೇವದುರ್ಗ ತಾಲೂಕಿನಲ್ಲಿ 363 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 158, ಮಿ.ಮೀ.
ಮಳೆಯಾಗಿದೆ. ರಾಯಚೂರು ತಾಲೂಕಿನಲ್ಲಿ 407 ಮಿ.ಮೀ. ಮಳೆ ಪೈಕಿ 165 ಮಿ.ಮೀ. ಆಗಿದೆ. ಸಿಂಧನೂರು ತಾಲೂಕಿನಲ್ಲಿ 322 ಮಿ.ಮೀ. ಪೈಕಿ 130 ಮಿ.ಮೀ. ಮಳೆ ಸುರಿದಿದೆ. ಲಿಂಗಸುಗೂರು ತಾಲೂಕಿನಲ್ಲಿ 286 ಮಿ.ಮೀ.
ಪೈಕಿ 141 ಮಿ.ಮೀ. ಮಳೆಯಾಗಿದೆ. 

ಬಿತ್ತನೆ ಮಾಡಬೇಕಾದರೆ ಬಿತ್ತನೆ ಬೀಜ ಗೊಬ್ಬರಕ್ಕೆ ಸಾವಿರಾರು ರೂ. ಹಣ ಖರ್ಚಾಗಿದೆ. ಇನ್ನು ಈಗ ಅದನ್ನು ಕೆಡಿಸಲೂ ಕೂಡ ಸಾಕಷ್ಟು ಹಣ ಖರ್ಚಾಗುತ್ತಿದೆ. ಅದರ ಜತೆಗೆ ಹಿಂಗಾರಿಗೆ ಪುನಃ ಹಣ ಹೊಂದಿಸಿಕೊಳ್ಳಬೇಕು. ಜೀವನವೇ ಸಾಕಾಗಿ ಹೋಗಿದೆ.
 ಶಂಕ್ರಪ್ಪ, ಜೇಗರಕಲ್‌ ಗ್ರಾಮದ ರೈತ.

Advertisement

Udayavani is now on Telegram. Click here to join our channel and stay updated with the latest news.

Next