Advertisement

ಬಾರದ ಅಧಿಕಾರ, ಸಮಸ್ಯೆಗಳಿಗೆ ಸಿಗದ ಪರಿಹಾರ

07:28 AM Jun 08, 2019 | Team Udayavani |

ಹಾಸನ: ನಗರ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದ ಚುನಾವಣೆ ನಡೆದು ಇನ್ನೇನು ಒಂದು ವರ್ಷವಾಗುತ್ತಾ ಬಂದಿದೆ. ಆಗಸ್ಟ್‌ನಲ್ಲಿ ಸದಸ್ಯರು ಆಯ್ಕೆಯಾದರೂ ಅವರು ಈಗಲೂ ಅವರಿಗೆ ಪೌರಾಡಳಿತ ಸಂಸ್ಥೆಗಳಲ್ಲಿ ಸದಸ್ಯರಾಗಿ ಅಧಿಕೃತವಾಗಿ ಕೆಲಸ ಮಾಾಗ್ಯ ಒದಗಿ ಬಂದಿಲ್ಲ. ಸದಸ್ಯರು ತಮ್ಮ ವಾರ್ಡ್‌ಗಳ ಮೂಲ ಸೌಕರ್ಯದ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸಲಾಗದೆ ಅಧಿಕಾರಿಗಳು ಮತ್ತು ನೌಕರರಿಗೆ ಮನವಿ ಮಾಡಿಕೊಳ್ಳಬೇಕಾದ ದುಃಸ್ಥಿತಿ ಮುಂದುವರಿದಿದೆ.

Advertisement

ಹಾಸನ ನಗರಸಭೆಯೂ ಸೇರಿ ಜಿಲ್ಲೆಯ 5 ಪೌರಾಡಳಿತ ಸಂಸ್ಥೆಗಳಿಗೆ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿರಲಿಲ್ಲ. ಅಷ್ಟರಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚುನಾಯಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ಅಧಿಕಾರ ನಡೆಸಲು ಸಾಧ್ಯವಾಗಲೇ ಇಲ್ಲ.

ನೀತಿ ಸಂಹಿತೆ ಜಾರಿ: ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮೀಸಲಾತಿ ಪ್ರಶ್ನಿಸಿದ ಅರ್ಜಿ ಇತ್ಯರ್ಥವಾಯಿತು. ಇನ್ನೇನು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿ ಚುನಾಯಿತ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದು ತಮ್ಮ ವಾರ್ಡ್‌ಗಳ ಸಮಸ್ಯೆ ಪರಿಹರಿಸಬಹುದೆಂದು ಸದಸ್ಯರು ನಿರೀಕ್ಷಿಸಿದ್ದರು. ಆದರೆ ಅಷ್ಟರಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಲೇ ಇಲ್ಲ.

ಚುನಾವಣಾ ನೀತಿ ಸಂಹಿತೆ ಮುಗಿಯುವ ವೇಳೆಗೆ ಬಾಕಿ ಇದ್ದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವಧಿಯೂ ಮುಗಿದಿದ್ದರಿಂದ ಎರಡನೇ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ.29 ರಂದು ಚುನಾವಣೆ ನಡೆಯಿತು. ಆದರೆ ಇನ್ನೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ಮಾತ್ರ ನಿಗದಿಯಾಗಿಲ್ಲ. ವಾರ್ಡ್‌ಗಳ ಮೀಸಲಾತಿಯ ವಿವಾದ ಇದ್ದ ಸುಮಾರು 31 ನಗರ ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಚುನಾವಣೆ ಬಾಕಿ ಇದೆ.

ಕಾಡುತ್ತಿರುವ ಅನುಮಾನ: ರಾಜ್ಯ ಹೈ ಕೋರ್ಟ್‌ ವಿಭಾಗೀಯ ಪೀಠ ಹಿಂದೆ ಸರ್ಕಾರ ನಿಗದಿಪಡಿಸಿದ್ದ ವಾರ್ಡ್‌ಗಳ ಮೀಸಲಾತಿಯನ್ನು ಎತ್ತಿ ಹಿಡಿದು ಆ ಸಂಸ್ಥೆಗಳ ಚುನಾವಣೆಗೂ ಹಸಿರು ನಿಶಾನೆ ತೋರಿದೆ. ಇನ್ನಾದರೂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾದೀತೆ ಅಥವಾ ಇನ್ನುಳಿದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಸರ್ಕಾರ ಮುಂದೂಡಿಕೊಂಡು ಹೋಗುವುದೇ ಎಂದು ಅನುಮಾನವೂ ಚುನಾಯಿತ ಸದಸ್ಯರನ್ನು ಕಾಡುತ್ತಿದೆ.

Advertisement

ಸದಸ್ಯರ ಬೇಸರ: ಚುನಾಯಿತ ಸದಸ್ಯರ ಅಧಿಕಾರವಧಿ ಐದು ವರ್ಷ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ದಿನದಿಂದ ಚುನಾಯಿತ ಸದಸ್ಯರ ಅಧಿಕಾರಾವಧಿ ನಿಗದಿಯಾಗಲಿದೆ. ಹಾಗಾಗಿ ಚುನಾಯಿತರಾಗಿರುವ ಸದಸ್ಯರಿಗೆ ತಮ್ಮ ಅವಧಿ ಕಡಿಮೆಯಾಗುವ ಆತಂಕವೇನೂ ಇಲ್ಲ. ಆದರೆ ಈಗಾಗಲೇ ಚುನಾವಣೆ ನಡೆದು ಒಂದು ವರ್ಷವಾಗುತ್ತಿದ್ದರೂ ನಾವು ಜನರ ಕೆಲಸ ಮಾಡಿಸಲಾಗುತಿಲ್ಲ, ಅಧಿಕಾರ ಚಲಾಯಿಸಬೇಕಾದ ಅಧಿಕಾರಿಗಳು, ಸಿಬ್ಬಂದಿಯ ಬಳಿ ಮನವಿ ಮಾಡಿಕೊಂಡು ಕೆಲಸ ಮಾಡಿಸಬೇಕಾಗಿದೆಯಲ್ಲಾ ಎಂಬ ಬೇಸರ ಚುನಾಯಿತ ಸದಸ್ಯರದ್ದು.

ಕಳೆದ ಆಗಸ್ಟ್‌ನಲ್ಲಿ ಹಾಸನ ಜಿಲ್ಲೆಯ ಹಾಸನ ಮತ್ತು ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಪುರಸಭೆಗೆ ಚುನಾವಣೆ ನಡೆದಿತ್ತು. ಕಳೆದ ಮೇ.29 ರಂದು ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆದಿದೆ. ಇನ್ನು ಬೇಲೂರು ಪುರಸಭೆ ಚುನಾವಣೆ ನಡೆಯಬೇಕಾಗಿದೆ. ಈಗಾಗಲೇ ಜಿಲ್ಲೆಯ 7 ಪೌರಾಡಳತ ಸಂಸ್ಥೆಗಳಿಗೆ ಚುನಾವಣೆ ನಡೆದರೂ ಸದ್ಯಕ್ಕೆ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವ ಸೂಚನೆಗಳಂತೂ ಕಾಣುತ್ತಿಲ್ಲ.

ಎಂಪಿ, ಎಮ್ಮೆಲ್ಲೆಗಳು ಸುಮ್ಮನಿರುತ್ತಿದ್ದರಾ?: ದೇಶದ ಎಲ್ಲ ಚುನಾಯಿತ ಸದಸ್ಯರಿಗೂ ಒಂದೇ ರೀತಿಯ ಕಾನೂನು ಅನ್ವಯವಾಗಬೇಕು. ಲೋಕಸಭೆ, ವಿಧಾನಸಭೆ ಸದಸ್ಯರ ಆಯ್ಕೆಯ ಹೊಣೆಯನ್ನು ಕೇಂದ್ರ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ. ಹಾಗೆಯೇ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರ ಆಯ್ಕೆ ಹೊಣೆಯನ್ನು ರಾಜ್ಯ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ. ಚುನಾವಣೆ ಮುಗಿದ ಒಂದು ವಾರದೊಳಗೆ ಸಚಿವ ಸಂಪುಟ ಅಧಿಕಾರಕ್ಕೆ ಬರುತ್ತದೆ. ವಿಳಂಬವಾದರೆ ಲೋಕಸಭೆ, ವಿಧಾನಸಭಾ ಸದಸ್ಯರು ಸುಮ್ಮನಿರುತ್ತಿರಲಿಲ್ಲ.

ಆದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರು ಚುನಾಯಿತರಾಗಿ ಒಂದು ವರ್ಷವಾಗುತ್ತಾ ಬಂದಿದರೂ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಾರದಿರುವುದು ಬೇಸರದ ಸಂಗತಿ. ಜನರಿಗೆ ಭರವಸೆ ನೀಡಿ ಗೆದ್ದು ಬಂದ ನಾವು ಸ್ಥಳೀಯ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ. ಜನರಿಗೆ ಉತ್ತರ ಹೇಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈಗಲಾದರೂ ತಕ್ಷಣ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ ನಿಗದಿಪಡಿಸಿ ಪೌಡಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬರುವಂತೆ ನೋಡಿಕೊಳ್ಳಲಿ ಎನ್ನುತ್ತಾರೆ ಹಾಸನ ನಗರಸಭೆ 13 ನೇ ವಾರ್ಡ್‌ ಸದಸ್ಯ ಎಚ್‌.ಸಿ.ಮಂಜುನಾಥ್‌ ಅವರು.

* ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next