Advertisement

ಬೇರೆ ಯಾರಿಗೂ ಹಾರ ಹಾಕ್ಬೇಡ, ಪ್ಲೀಸ್‌…

12:30 AM Feb 19, 2019 | |

ನೀನು ಹೂ ಬುಟ್ಟಿ ಹಿಡಿದು ರಸ್ತೆ ದಾಟುವಾಗ ಕಾರೋ, ಬೈಕೋ ನಿನ್ನೆದುರಿಗೆ ಬರಬೇಕು. ಆಗ ನಾನು ಸಡನ್ನಾಗಿ ನಿನ್ನ ಕೈ ಹಿಡಿದು ಪಕ್ಕಕ್ಕೆಳೆದು ರಕ್ಷಿಸಬೇಕು. ಆ ಕ್ಷಣದಲ್ಲಿ ನಿನ್ನ ಕೈಯಲ್ಲಿದ್ದ ಹೂವಿನ ಬುಟ್ಟಿ ಆಕಾಶಕ್ಕೆ ಹಾರಿ, ಅಲ್ಲಿಂದ ಹೂವುಗಳು ಚೆಲ್ಲಾಡಿ ನಮ್ಮಿಬ್ಬರ ಮೇಲೆ ಮಳೆಯಂತೆ ಸುರಿಯಬೇಕು. ನೀನು ಗಾಬರಿ, ನಾಚಿಕೆ, ಕೃತಜ್ಞತಾ ಭಾವದಿಂದ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. 

Advertisement

ಹೂ ಮಾರುವ ಮುದ್ದು ಹುಡುಗಿಗೆ, 
  ಹಾಯ್‌, ನಿನ್ನ ಹೆಸರೇನು ಅಂತ ನನಗೆ ಗೊತ್ತಿಲ್ಲ. ಆದರೆ ಎಲ್ಲರೂ ನಿನ್ನನ್ನು “ಏ ಹೂವಿನ ಹುಡ್ಗಿ’ ಅಂತ ಕರೆಯುವಾಗ ಏನೋ ಹೇಳಲಾಗದ ಕಸಿವಿಸಿ. ಯಾರಪ್ಪಾ ಇವನು ಅಂತ ಯೋಚನೆಗೆ ಬೀಳಬೇಡ. ಕಳೆದ ಹದಿನೈದು ದಿನಗಳಿಂದ, ಪ್ರತಿದಿನ ಬೆಳಗ್ಗೆ  ಇಪ್ಪತ್ತು ರೂ. ಕೊಟ್ಟು ತಪ್ಪದೇ ಹೂ ಕೊಳ್ಳುತ್ತಿರುವವನೇ ನಾನು. ನಿನ್ನೆದುರು ನಿಂತು ಹೂವಿನ ವಿಚಾರ ಬಿಟ್ಟು, ಹೂ ಮನಸಿನ ವಿಚಾರ ಮಾತನಾಡಲಾಗದೆ ಈ ಪತ್ರ ಬರೆಯುತ್ತಿದ್ದೇನೆ. 

ಹುಡುಗಿ ನಿನಗ್ಗೊತ್ತಾ? ನಾನು ದೇವಸ್ಥಾನಗಳಿಗೆ ಮಾಮೂಲಿ ಬರುವವನೇ ಅಲ್ಲ. ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿ, ಕುಂದಾಪುರದಿಂದ ಇಲ್ಲಿಗೆ ಬಂದೆ. ನನ್ನ ಆಫೀಸು ಶುರುವಾಗುವುದೇ 11 ಗಂಟೆಗೆ. ನನಗಂತೂ ಬೆಳಗ್ಗೆ ಆರು ಗಂಟೆಗೆ ಎದ್ದು ಅಭ್ಯಾಸ. ಹಾಗಾಗಿ ಪಾರ್ಕ್‌ನಲ್ಲಿ ವ್ಯಾಯಾಮ ಮಾಡಿ, ಪೇಪರ್‌ ಓದಿ, ಹೋಟೆಲ್‌ನಲ್ಲಿ ತಿಂಡಿ ತಿಂದು ನನ್ನಷ್ಟಕ್ಕೆ ನಾನಿರುತ್ತಿದ್ದೆ. ಅದೊಂದು ದಿನ ರೂಂ ಹತ್ತಿರ ಇರುವ ಗಣೇಶನ ಗುಡಿಗೆ ಸುಮ್ಮನೆ ಬಂದಿದ್ದೆ. 

ಕೈಯಲ್ಲೊಂದು ಪುಟ್ಟ ಬುಟ್ಟಿ ಹಿಡಿದು, ಇನ್ನೊಂದು ಕೈಯಲ್ಲಿ ಮಲ್ಲಿಗೆ ಹೂವಿನ ದಂಡೆ ಹಿಡಿದು “ಹೂ ತಗೊಳ್ಳಿ ಅಣ್ಣ , ಅಕ್ಕ, ಅಮ್ಮ’ ಅಂತ ಅವರಿವರನ್ನು ಕೇಳುತ್ತಿದ್ದ ನೀನು ಕಾಣಿಸಿದ್ದೆ. ಆಗಷ್ಟೇ ಸ್ನಾನ ಮಾಡಿ ಬಂದ ಕುರುಹಾಗಿ ನಿನ್ನ ಕೂದಲಿನ ನೀರು ಹಳದಿ ಬಣ್ಣದ ಚೂಡಿಯ ಬೆನ್ನಿನ ಭಾಗವನ್ನು ಒದ್ದೆ ಮಾಡಿತ್ತು. ಕೆನ್ನೆಯ ಮೇಲಿನ ಅರಿಶಿಣದ ಗುರುತು, ಪುಟ್ಟ ಹಣೆ ಬೊಟ್ಟು, ಮುದ್ದು ಮುಖ ನೋಡಿ ಅದೊಂದು ತೆರನಾದ ಖುಷಿ ಹೃದಯದೊಳಗೆ ತುಂಬತೊಡಗಿತ್ತು.

ಅವತ್ತು ನನಗೆ ಹೂವು ಬೇಕಾಗಿರಲಿಲ್ಲ. ಆದರೂ ನಿನ್ನ ಬಳಿ ಬಂದು ಹೂವು ತೆಗೆದುಕೊಂಡೆ. ನೀನು, “ಅಣ್ಣ, ಇಪ್ಪತ್ತು ರೂಪಾಯಿದು ಹೂ ಕೊಡ್ಲಾ?’ ಅಂದಾಗ, “ಅಣ್ಣ  ಬೇಡ, ಸರ್‌ ಅಂದ್ರೆ ಸಾಕು’ ಅಂತ ಸರಕ್ಕನೆ ಹೇಳಿದಾಗ ನೀನು, “ಆಗ್ಲಿ ಸಾರ್‌’ ಅಂದೆ. ಆಮೇಲೆ, ಛೇ, ನಾನ್ಯಾಕೆ ಹಾಗೆ ಹೇಳಿದೆ ಅಂತ ತಲೆ ಕೆರೆದುಕೊಂಡೆ. ಅದೊಂದು ಪ್ರೀತಿ ಆಗಲೇ ಹುಟ್ಟಿತ್ತಾ? ನಂಗೊತ್ತಿಲ್ಲ… 

Advertisement

ಅಂದಿನಿಂದ ಇಂದಿನವರೆಗೆ ನಾನು ದಿನಾ ದೇವಸ್ಥಾನಕ್ಕೆ ಬರೋದು ನಿನಗಾಗಿಯೇ. ನಿನ್ನಷ್ಟಕ್ಕೆ ನೀನು ಮಲ್ಲಿಗೆಯ ಘಮದೊಂದಿಗೆ ನಡೆದುಬರುತ್ತಿದ್ದರೆ ನಾನು ನನ್ನೊಳಗೇ ಪುಳಕಗೊಳ್ಳುತ್ತೇನೆ. ನೀನು “ನಮಸ್ತೆ ಸರ್‌’ ಎಂದು ಒಂದಷ್ಟು ಹೂವು ಕೊಡ್ತೀಯ. ನಾನು ಇಪ್ಪತ್ತು ರೂಪಾಯಿ ಕೊಟ್ಟು ತೆಗೆದುಕೊಳ್ಳುತ್ತೇನೆ. ಇತ್ತೀಚೆಗೆ ನಮ್ಮ ನಡುವೆ “ಕಾಫಿ ಆಯ್ತಾ? ಏನು ತಿಂಡಿ? ಹೇಗಿದ್ದೀರಿ?’ ಎನ್ನುವ ಸಂಭಾಷಣೆಗಳು ಶುರುವಾಗಿರೋದು, ನನ್ನ ಕನಸುಗಳಿಗೆ ಮತ್ತಷ್ಟು ಬಣ್ಣ ತುಂಬಿವೆ.   

ಎಂಥಾ ಕನಸುಗಳು ಅಂತೀಯ? ನೀನು ಹೂ ಬುಟ್ಟಿ ಹಿಡಿದು ರಸ್ತೆ ದಾಟುವಾಗ ಕಾರೋ, ಬೈಕೋ ನಿನ್ನೆದುರಿಗೆ ಬರಬೇಕು. ಆಗ ನಾನು ಸಡನ್ನಾಗಿ ನಿನ್ನ ಕೈ ಹಿಡಿದು ಪಕ್ಕಕ್ಕೆಳೆದು ರಕ್ಷಿಸಬೇಕು. ಆ ಕ್ಷಣದಲ್ಲಿ ನಿನ್ನ ಕೈಯಲ್ಲಿದ್ದ ಹೂವಿನ ಬುಟ್ಟಿ ಆಕಾಶಕ್ಕೆ ಹಾರಿ, ಅಲ್ಲಿಂದ ಹೂವುಗಳು ಚೆಲ್ಲಾಡಿ ನಮ್ಮಿಬ್ಬರ ಮೇಲೆ ಮಳೆಯಂತೆ ಸುರಿಯಬೇಕು. ನೀನು ಗಾಬರಿ, ನಾಚಿಕೆ, ಕೃತಜ್ಞತಾ ಭಾವದಿಂದ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಅಲ್ಲಿಂದಲೇ ನಮ್ಮ ಪ್ರೀತಿ ಅಧಿಕೃತಗೊಳ್ಳಬೇಕು ಅಂತೆಲ್ಲಾ ಪಕ್ಕಾ ಫಿಲ್ಮೀ ಕನಸು ಕಾಣುತ್ತೇನೆ. ಅಷ್ಟರ ಮಟ್ಟಿಗೆ ಪ್ರೀತಿಯಲ್ಲಿ ಹುಚ್ಚನಾಗಿದ್ದೇನೆ. ಅದಕ್ಕಾಗಿಯೇ ದಿನವೂ ನಿನಗಿಂತ ಮೊದಲು ಗುಡಿಗೆ ಬರುತ್ತೇನೆ.

 “ನನಗೆ ಆ್ಯಕ್ಸಿಡೆಂಟ್‌ ಆಗಲಿ ಅಂತ ಕನಸು ಕಾಣಿಯಾ?’ ಅಂತ ಕೋಪಿಸಿಕೊಳ್ಳಬೇಡ. ಜನಜಂಗುಳಿಯ ಮಧ್ಯೆ, ರಸ್ತೆ ದಾಟುವಾಗ ನೀನೆಷ್ಟು ಎಚ್ಚರಿಕೆಯಿಂದ ಇರಿ¤àಯ ಅಂತ ಗಮನಿಸಿದ್ದೇನೆ. ನಿನಗೇನೂ ಆಗುವುದಿಲ್ಲ, ಆಗಬಾರದು ಕೂಡ. 

ಇಷ್ಟಾಗಿಯೂ ನಾನೇಕೆ ಪ್ರೀತಿಯನ್ನು ಹೇಳಿಕೊಂಡಿಲ್ಲ ಗೊತ್ತಾ? ನನಗೊಂದು ಗುರಿಯಿದೆ. ಜೀವನದಲ್ಲಿ ಮೊದಲು ಸೆಟಲ್‌ ಆಗುತ್ತೇನೆ.  ಆಮೇಲೆ ನಿನ್ನ ಬಳಿ ಬಂದು ನೇರವಾಗಿ ಹೇಳುತ್ತೇನೆ. ನೀನು ಒಪ್ಪಿಕೊಂಡರೆ ನಿನ್ನನ್ನು ಹೂವಿನಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ದಿ ಇಸ್‌ ಮೈ ಪ್ರಾಮಿಸ್‌.. ಪ್ಲೀಸ್‌, ಅಲ್ಲಿವರೆಗೆ ಬೇರೆ ಯಾರಿಗೂ ಹೂವಿನ ಹಾರ ಹಾಕದಿರು. ಬಂದೇ ಬರುತ್ತೇನೆ. 

ಇತೀ ನಿನ್ನ ಹೂ ಮನಸಿನ ಗ್ರಾಹಕ 

ನರೇಂದ್ರ ಎಸ್‌ ಗಂಗೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next