Advertisement

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

04:12 PM May 04, 2024 | Team Udayavani |

ಎಂದಿನಂತೆ ಬೆಳಗ್ಗೆ ಬೇಗನೆ ಎದ್ದು ರೆಡಿಯಾಗಿ, ಬಸ್‌ಸ್ಟಾಂಡ್‌ ವರೆಗೆ ಅಪ್ಪನಲ್ಲಿ ಬಿಡುವಂತೆ ಹೇಳಿ, ಬಸ್‌ನಲ್ಲಿ ನನ್ನ ಖಾಯಂ ಮೂರನೇ ಸೀಟನ್ನು ಕಾಯ್ದಿರಿಸಿಕೊಂಡೆ. ಕಿವಿಗೆ ಇಯರ್‌ ಫೋನ್‌ ಸಿಕ್ಕಿಸುವ ಅಭ್ಯಾಸವಿಲ್ಲದ ಕಾರಣ ಹೀಗೆ ಬಸ್‌ನ ಕಿಟಕಿಯಿಂದ ಹೊರಗೆ ದೃಷ್ಟಿ ಹಾಯಿಸುತ್ತಾ, ಅದಾಗಲೇ ನನ್ನ ಪಯಣ ಸುಬ್ರಹ್ಮಣ್ಯದಿಂದ ಪುತ್ತೂರಿನ ಕಡೆಗೆ ಆರಂಭವಾಗಿತ್ತು.

Advertisement

ಹೀಗೆ ಮಾರ್ಗದುದ್ದಕ್ಕೂ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಸುಮಾರು 7 ಕಿ.ಮೀ. ದೂರ ಸಾಗಿದಾಗ ಮನಸ್ಸು ಮನಸೂರೆಗೊಳ್ಳುವ ದೃಶ್ಯವೊಂದು ಕಣ್ಣಮುಂದೆ ಕಂಡುಬಂತು.

ಹೊಂಡಾ ಬೈಕ್‌ನಲ್ಲಿ ಚಿಕ್ಕ ಹುಡುಗನೊಬ್ಬ ಅಪ್ಪನನ್ನು ಗಟ್ಟಿಯಾಗಿ ಅಪ್ಪಿಕೊಂಡು ಹಿಂದಿನ ಸೀಟಿನಲ್ಲಿ ಕುಳಿತಿದ್ದ. ಇದನ್ನು ಕಂಡಾಕ್ಷಣ ನನಗರಿಯದೇ ನನ್ನಲ್ಲಿ ಸಂತಸದ ಮುಗುಳುನಗೆಯೊಂದು ಅರಳಿತ್ತು. ಅಪ್ಪನಿಗೆ ಮಗನ ಮೇಲಿರುವ ಪ್ರೀತಿ, ಕಾಳಜಿ. ಮಗನಿಗೆ ತಂದೆಯ ಮೇಲಿರುವ ಮಮತೆ, ಗೌರವ ಆ ಬೈಕ್‌ ಸವಾರಿಯಲ್ಲಿ ಎದ್ದು ಕಾಣುತ್ತಿತ್ತು. ನಾನು ಅವರನ್ನೇ ದಿಟ್ಟಿಸುತ್ತಿದ್ದರೂ ಬಸ್‌ ಅದಾಗಲೇ ಮುಂದೆ ಸಾಗಿ ಇನ್ನೊಂದು

ಸ್ಟಾಪ್‌ಗೆ ತಲುಪುವರಲ್ಲಿತ್ತು. ಆ ದೃಶ್ಯವನ್ನೇ ಯೋಚಿಸುತ್ತಾ ಮುಂದೆ ಸಾಗುತ್ತಿದ್ದಾಗ ನನ್ನಲ್ಲಿ ಮೂಡಿದ ಪ್ರಶ್ನೆಯೇ “ಈ ಮಗು ದೊಡ್ಡವನಾದ ಬಳಿಕ ಇಷ್ಟೇ ಪ್ರೀತಿಯಿಂದ ತಂದೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವನೆ?”ಆ ತಂದೆಯನ್ನು ಇದೇ ರೀತಿಯ ಕಾಳಜಿಯಿಂದ ನೋಡಿಕೊಳ್ಳುವನೆ?’ ಎಂದು. ಇದು ಕೇವಲ ನನ್ನ ಪ್ರಶೆಯಾಗಿರಲಿಲ್ಲ. ಇದುವೇ ವಾಸ್ತವ.

ಹೌದು, ಇಂದಿನ ತಂತ್ರಜ್ಞಾನದ ಯುಗದಲ್ಲಿ ಆಧುನಿಕತೆಯ ಪ್ರಭಾವದಿಂದ ಸಂಬಂಧದ ಬೆಲೆಯನ್ನೇ ನಾವು ಮರೆಯುತ್ತಿದ್ದೇವೆ. ಬಾಲ್ಯದಲ್ಲಿ ಪ್ರೀತಿ ಕೊಟ್ಟು ಸಲುಹಿದ ತಂದೆ, ತಾಯಿಯರನ್ನೇ ಕೊಂದುಹಾಕುವ ಮನಸ್ಥಿತಿಯ ಯುಗದಲ್ಲಿ ನಾವಿಂದು ಇದ್ದೇವೆ.

Advertisement

ನಾವು ಬೆಳೆಯುತ್ತಾ ಹೋದ ಹಾಗೆ ಚಿಕ್ಕವರಿದ್ದಾಗ ನಮ್ಮ ಪ್ರತೀ ತಪ್ಪು, ಸರಿಗಳನ್ನು ತಿದ್ದಿ ತೀಡಿದ ಹೆತ್ತವರೇ ನಮಗೇ ಬೇಡವಾಗಿ ಬಿಟ್ಟಿದ್ದಾರೆ. ಅವರು ತೋರಿದ ಪ್ರೀತಿ, ಕಾಳಜಿಯನ್ನು ಹಿಂತಿರುಗಿ ನೀಡದಷ್ಟೂ ಅಬಲರಾಗಿ ಹೋಗಿದ್ದೇವೆ. ಮಗ ಎಲ್ಲಿಯಾದರೂ ಜಾತ್ರೆ, ಮದುವೆಗೆ ಸ್ನೇಹಿತರ ಜತೆ ಹೋಗುತ್ತಿದ್ದರೆ ಅಪ್ಪ ನೀನು ಬರೋದ್‌ ಬೇಡ, ಫ್ರೆಂಡ್ಸ್‌ ಬರ್ತಾರೆ ನನ್‌ ಬೈಕ್‌ಲ್ಲಿ ಅಂತ ಹೇಳಿಯೇ ಬಿಡುತ್ತೇವೆ.

ಅದೇ, ಚಿಕ್ಕವರಿದ್ದಾಗ ಅಪ್ಪ ನಮ್ಮನ್ನು ಬೈಕ್‌ನಲ್ಲಿ ಊರಿಡೀ ಸುತ್ತಾಡಿಸಿದ್ದೂ? ಈಗ ಅಪ್ಪನಿಗೆ ವಯಸ್ಸಾಗಿದೆ, ಅಪ್ಪನ ಜತೆಗೆ ಹೊರಗೆ ಹೋದ್ರೆ ಫ್ರೆಂಡ್ಸ್‌ ಗೇಲಿ ಮಾಡಿ ನಗ್ತಾರೆ ಅಲ್ವಾ…? ಬಾಲ್ಯದಲ್ಲಿ ಅವರು ನೀಡಿದ ಮಮತೆಯನ್ನು ಹಿಂದಿರುಗಿಸಲು ಅಷ್ಟೂ ತಾತ್ಸಾರ ಯಾಕೆ? ಪೇಟೆಯಲ್ಲಿ ಅಪ್ಪನ ಕೈ ಹಿಡಿದು ನಡೆಯಲು ಅಷ್ಟು ಅಂಜಿಕೆ ಯಾಕೆ? ಒಮ್ಮೆ ಯೋಚಿಸಿ ನಮ್ಮ ಕಿಂಚಿತ್ತು ಪ್ರೀತಿ, ಕಾಳಜಿ, ಗೌರವ ಆ ಜೀವಗಳಿಗೆ ಎಷ್ಟು ಖುಷಿ ಕೊಡಬಹುದಲ್ವಾ.

ಹೀಗೆ ಬಸ್‌ ಕಿಟಕಿಗೆ ಒರಗಿ ಯೋಚಿಸ್ತಾ ಇದ್ದವಳಿಗೆ ರಾಶಿ ರಾಶಿ ಬ್ಯಾಗ್‌ಗಳು ಬಂದು ಮೈ ಮೇಲೆ ಬಿದ್ದಾಗಲೇ ತಿಳಿದದ್ದು ಅದಾಗಲೆ 27 ಕಿ.ಮೀ. ಕಳೆದು ಮುಂದೆ ಸಾಗುತ್ತಿದ್ದೇನೆಂದು. ಇಲ್ಲಿಂದ ಇನ್ನೂ ನನ್ನ ಪಯಣದ ಹಾದಿ ದೂರವೇ ಇರುವುದರಿಂದ ನಿಟ್ಟುಸಿರು ಬಿಟ್ಟು ಅಲ್ಲಿಂದ ನಿದ್ರಾಲೋಕಕ್ಕೆ ಜಾರಿದೆ.

-ಶೈನಿತಾ ಸುಬ್ರಹ್ಮಣ್ಯ

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next