Advertisement

ಅತ್ತು ಡ್ರಾಮಾ ಮಾಡಿದ್ರೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ

05:20 PM Aug 17, 2021 | Team Udayavani |

ರಾಮನಗರ: ನಗರಸಭೆ ವ್ಯಾಪ್ತಿಯ ಕೊತ್ತಿಪುರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆಗೆ ಆಗಮಿಸಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಅವರ ಸಮ್ಮುಖದಲ್ಲಿ ಭೂ ಮಾಲೀಕರು ಎನ್ನಲಾದ ಕುಟುಂಬದ ಸದಸ್ಯರು ತಮಗೆ ಅನ್ಯಾಯವಾಗಿದೆ, ಕ್ರಯದ ಹಣ ಕೊಡಿಸಿ ನಂತರ ಭೂಮಿ ಪೂಜೆ ಮಾಡಿ ಎಂದು ಬಾಯಿ ಬಡಿದುಕೊಂಡು ಗೋಳಾಡಿದ ಘಟನೆ ನಡೆಯಿತು.

Advertisement

ನಗರ ವ್ಯಾಪ್ತಿಯ ಕೊತ್ತಿಪುರ ಸರ್ವೆ ಸಂಖ್ಯೆ 96 ಮತ್ತು 97ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆ ನಿರ್ಮಾಣ ಕಾಮಗಾರಿ ಆರಂಭಕ್ಕೆ ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಚಾಲನೆ ನೀಡಲು ಬಂದಾಗ ಭೂಮಿ
ಮಾಲೀಕರು ಎನ್ನಲಾದ ಕುಟುಂಬ ಸದಸ್ಯರು ತಮಗಾಗಿರುವ ಅನ್ಯಾಯ ಸರಿಪಡಿಸಿ ಎಂದು ಗೋಳಾಡಿದರು.

ಎಚ್‌.ಡಿ.ಕೆ. ಗರಂ: ಕುಟುಂಬ ಸದಸ್ಯರ ಈ ವರ್ತನೆಗೆ ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಗರಂ
ಆದರು. ಬಾಯಿ ಬಡಿದುಕೊಂಡು, ಅತ್ತು ಡ್ರಾಮಾ ಮಾಡಿದರೆ ತಾವು ನ್ಯಾಯ ಕೊಡಿಸುವುದು ಸಾಧ್ಯವಿಲ್ಲ. ತಾವು ಅನ್ಯಾಯದ ಪರ ನಿಲ್ಲುವುದಿಲ್ಲ. ತಮ್ಮ ಬಗ್ಗೆ ಭರವಸೆ ಇಟ್ಟು ತಾಳ್ಮೆಯಿಂದ ಇರಿ ಎಂದು ಗದರಿದರು. ಮಾಜಿ ಮುಖ್ಯಮಂತ್ರಿಗಳ ಈ ಮಾತಿಗೆ ಕುಟುಂಬ ಸದಸ್ಯರು ಸುಮ್ಮನಾದರು.

ಇದನ್ನೂ ಓದಿ:ಅಸಮಾಧಾನ ಶಮನ : ಕೊನೆಗೂ ಆನಂದ್ ಸಿಂಗ್ ಕೊಠಡಿಗೆ ನಾಮಫಲಕ

ಭೂಮಿ ಮಾರಾಟದ ದುಡ್ಡು ನಮಗೆ ಬಂದಿಲ್ಲ: ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಇದೇ ವಿಚಾರವನ್ನು ಕುಮಾರಸ್ವಾಮಿಯವರು ಪ್ರಸ್ತಾಪಿಸಿದರು. ಭೂಮಿ ತಮ್ಮದು ಎಂದು ವಾದಿಸಿದ ಕುಟುಂಬದ ಪೈಕಿ ಪ್ರಮೀಳಾ ಎಂಬ ಮಹಿಳೆ ಮಾತನಾಡಿ, ನಗರ ಸಭೆ ತಮ್ಮ ಭೂಮಿ ಖರೀದಿ ಮಾಡಿದೆ. ಆದರೆ ತಮ್ಮ ಕುಟುಂಬಕ್ಕೆ ದುಡ್ಡು ಬಂದಿಲ್ಲ ಎಂದು ಮತ್ತೆ ಕಣ್ಣೀರಿಟ್ಟರು.

Advertisement

ತಮ್ಮ ತಂದೆ ಮುತ್ತುರಾಜು ಎಂಬುವರು ಸದರಿ ಭೂಮಿಯನ್ನು ಕೆಂಗೇರಿ ನಿವಾಸಿ ಭವಾನಿ ಬಾಯಿ ಎಂಬುವರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾಗಿ, ಆದರೆ ಭೂಮಿಯನ್ನು ಅವರ ವಶಕ್ಕೆ ಕೊಟ್ಟಿರಲಿಲ್ಲ. ಸ್ವಾಧೀನರಹಿತ ಕ್ರಯ ಕರಾರು ಪತ್ರವನ್ನು ರದ್ದುಪಡಿಸಿಕೊಂಡಿದ್ದಾಗಿ, ತದ ನಂತರ ತಮ್ಮ ಕುಟುಂಬವೇ ನೇರವಾಗಿ ನಗರಸಭೆಗೆ ಭೂಮಿ ಮಾರಾಟ ಮಾಡಿರುವುದಾಗಿ ತಿಳಿಸಿದರು. ಆದರೆ ತಮ್ಮ ತಂದೆಯವರಿಗೆ
ಕೇವಲ 5.30 ಲಕ್ಷ ರೂ. ಕೊಟ್ಟು ಕ್ರಯದ ಉಳಿದ ಬಾಕಿಯನ್ನು ನಗರಸಭೆ ನೀಡಲಿಲ್ಲ ಎಂದು ಗೋಳಾಡಿದರು. ಸದರಿ ಭೂಮಿ ಇನ್ನು ತಮ್ಮ ಸ್ವಾಧೀ ನಾನುಭವದಲ್ಲೇ ಇದೆ ಎಂದರು.

10 ವರ್ಷದ ನಂತರ ಏಕೆ ಬಂದಿದ್ದೀರಿ?:
ಪ್ರಮೀಳಾ ಎಂಬ ಮಹಿಳೆಯ ಮಾತುಗಳನ್ನು ಆಲಿಸಿದ ಕುಮಾರಸ್ವಾಮಿಯವರು 10 ವರ್ಷಗಳ ಹಿಂದೆ ಭೂಮಿ ಮಾರಾಟವಾಗಿದೆ. ಅದು ನಗರ ಸಭೆ ಸ್ವತ್ತಾಗಿದೆ. ಹಣ ಬಂದಿಲ್ಲ ಎಂದು ಈಗೇಕೆ ಗೋಳಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಭೂಮಿಯ ಮಾರಾಟಕ್ಕೆ ಕುಟುಂಬ ಸದಸ್ಯರೆಲ್ಲರೂ ಸಹಿ ಮಾಡಿದ್ದು, ಕಾನೂನು ಬದ್ಧವಾಗಿದೆ ಎಂದು ನಗರ ಸಭೆ ಅಧಿಕಾರಿಗಳು ತಿಳಿಸಿದ್ದಾರೆ. ನಿಮಗೆ ಅನ್ಯಾಯವಾಗಿದ್ದರೆ ಮಾನವೀಯತಾ ದೃಷ್ಟಿಯಿಂದ ತಾವು ಬೇರೆ ವ್ಯವಸ್ಥೆಯ ಮೂಲಕ ‌ ಅಲ್ಪಸ್ವಲ್ಪ ಸಹಕಾರ ನೀಡುವ ಭರವಸೆ ಕೊಟ್ಟರು.

ಬ್ಯಾಂಕ್‌ಖಾತೆ ತೆರೆದ ದಿನವೇ ಕ್ಲೋಸ್‌
2011ನೇ ಸಾಲಿನಲ್ಲೇ ಸರ್ವೆ ಸಂಖ್ಯೆ96,97ರ ಭೂಮಿಗೆ ಎಕರೆಗೆ 30 ಲಕ್ಷ ಪಾವತಿಯಾಗಿದೆ. ಹೀಗೆ ಮಾರಾಟದ ಹಣ ಪಡೆದುಕೊಂಡ ಚೆಕ್‌
ಬ್ಯಾಂಕ್‌ವೊಂದರಲ್ಲಿನ ಖಾತೆಗೆ ಜಮೆ ಆಗಿದೆ. ಸದರಿ ಖಾತೆ ತೆರೆದ ದಿನವೇ ಹಣ ಜಮೆ ಆಗಿದೆ. ಹಣವನ್ನು ಡ್ರಾ ಮಾಡಲಾಗಿದೆ. ಅದೇ ದಿನ
ಬ್ಯಾಂಕ್‌ ಖಾತೆಕ್ಲೋಸ್‌ ಆಗಿದೆ ಎಂದು ಸದರಿ ಭೂಮಿಯ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬರ್ಥದಲ್ಲಿ ಕುಮಾರಸ್ವಾಮಿ ಅವರು
ಆರೋಪಿಸಿದರು.

ಸದರಿ ಭೂಮಿ ಖರೀದಿ ಪ್ರಕರಣದಲ್ಲಿ ಕಾಂಗ್ರೆಸ್‌ನ ಸ್ಥಳೀಯ ಕೆಲವು ಮುಖಂಡರು ದಾರಿ ತಪ್ಪಿಸಿದ್ದಾರೆ ಎಂದು ದೂರಿದರು. ಕೆಲವು ಕಾಂಗ್ರೆಸ್‌ ಮುಖಂಡರು ಸರ್ಕಾರಿ ಭೂಮಿಯನ್ನುಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆ.ಈ ವಿಚಾರವನ್ನು ಕೆದಕಿದರೆ ಬಹಳಷ್ಟು ಮಂದಿ ಬೀದಿಗೆ ಬರ್ತಾರೆ.
– ಎಚ್‌.ಡಿ.ಕುಮಾರಸ್ವಾಮಿ,
ಮಾಜಿ ಸಿಎಂ ಹಾಗೂ ಶಾಸಕರು

ಕ್ಷೇತ್ರದ 13 ಸಾವಿರ ಮಂದಿಗೆ ಉದ್ಯೋಗ
ರಾಮನಗರ:1995ರಲ್ಲಿ ರಾಮನಗರದ ಬೀದಿಗಳಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಅಭಿವೃದ್ದಿಯಾ ಗಿದೆ, ಸಾಕಷ್ಟು ಬದಲಾವಣೆ ಆಗಿದೆ. ಭೂಮಿ ಬೆಲೆಯೂ ಹೆಚ್ಚಾಗಿದೆ ಎಂದು ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ
ಹೇಳಿದರು.

ನಗರಸಭೆ ವ್ಯಾಪ್ತಿಯ ಕೊತ್ತಿಪುರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 53.18ಕೋಟಿ ರೂ. ವೆಚ್ಚದಲ್ಲಿ 888 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾವು ರಾಮನಗರ ಕ್ಷೇತ್ರದ ಶಾಸಕರಾದ ನಂತರ ಕ್ಷೇತ್ರದ
ಸುಮಾರು 13 ಸಾವಿರ ಮಂದಿಗೆ ಉದ್ಯೋಗ ಕೊಡಿಸಿರುವುದಾಗಿ, ಶಾಸಕರ ಕಚೇರಿಯಲ್ಲಿ ಉಚಿತ ಟೈಲರಿಂಗ್‌ ತರಗತಿಗಳನ್ನು ನಡೆಸಿದ್ದಾಗಿ ತಿಳಿಸಿದರು.

ತಾವು ಬಡ ಜನರಲ್ಲಿ ದೇವರನ್ನು ಕಾಣುವುದಾಗಿ, ತಾವು ಬದುಕಿರುವವರೆಗೆ ತಮ್ಮಕುಟುಂಬದಿಂದ ಒಂದೇ ಒಂದು ಕುಟುಂಬಕ್ಕೆ ನೋವು ಅಥವಾ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಅಶ್ವತ್ಥ್, ಮುಖಂಡರಾದ ಉಮೇಶ್‌, ಸುಹೇಲ್‌ , ಅತಾವುಲ್ಲಾ ಮತ್ತಿತರರು ಹಾಜರಿದ್ದರು.

ಕಣ್ಣೀರಿಟ್ಟ ಶಾಸಕಿ ಅನಿತಾಕುಮಾರಸ್ವಾಮಿ
ರಾಮನಗರ: ಒಳ್ಳೆಯ ಕೆಲಸಕ್ಕೆ ಅನೇಕ ವಿಘ್ನ ಗಳು ಎದುರಾಗುತ್ತವೆ. ನಗರ ‌ ಪ್ರದೇಶದ ಮನೆ ಮತ್ತು ನಿವೇಶನ ರಹಿತ ಬಡವರಿಗಾಗಿ ಮನೆ ನಿರ್ಮಿಸಿಕೊಡುವ ‌ ಉದ್ದೇಶಕ್ಕೂ ಅನೇಕ ಸಮಸ್ಯೆಗಳು ಎದುರಾಗಿವೆ ಎಂದು ಶಾಸಕಿ ಅನಿತಾ ಕುಮಾರ ಸ್ವಾಮಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ನಗರಸಭೆ ವ್ಯಾಪ್ತಿಯ ಕೊತ್ತಿಪುರ ಪ್ರದೇಶದ ಸರ್ವೆ ನಂ.96 ಮತ್ತು 97ರಲ್ಲಿ 7ಎಕರೆ 35 ಗುಂಟೆ ಜಮೀನಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ
ಮಂಡಳಿ 53.18ಕೋಟಿ ರೂ.ವೆಚ್ಚದಲ್ಲಿ 888 ಮನೆ ನಿರ್ಮಾಣ ಕಾಮಗಾರಿಗೆ ಪತಿ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಭೆ ಯಲ್ಲಿ ಅವರು ಮಾತನಾಡಿದರು.

12 ವರ್ಷಗಳ ಹಿಂದೆ ಸಾಕಾರವಾಗ ಬೇಕಿದ್ದ ಯೋಜನೆಗೆ ಈಗ ಸಮಯ ಬಂದಿದೆ. ಒಳ್ಳೆಯ ಕೆಲಸಗಳಲ್ಲಿಯೂ ಕೆಲವರು ರಾಜಕಾರಣ ಮಾಡು
ತ್ತಾರೆ. ಕಷ್ಟಪಟ್ಟು ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರು ರಾಜಕಾರಣ ಮಾಡುತ್ತಿರುವುದನ್ನು ನೋಡಿದರೆ ಬಹಳ ಬೇಸರ ತರಿಸುತ್ತಿದೆ ಎಂದು ಗದ್ಗದಿತರಾದರು.

ಗ್ರಹಣ ಹಿಡಿದಿದ್ದ ಯೋಜನೆ: ಸ್ವಂತ ಮನೆ ಬೇಕೆಂಬುದು ಬಡ ಜನರ ಬಹು ದಿನಗಳ ಕನಸು.ಯೋಜನೆಗೆ ಗ್ರಹಣ ಹಿಡಿದಿತ್ತು. ಅನೇಕ ಸಮಸ್ಯೆ
ಗಳ ನಂತರ ಕನಸಿನ ಯೋಜನೆಗೆ ಚಾಲನೆನೀಡಿದ್ದೇವೆ. ಮಾಜಿ ಸಿಎಂ ಕುಮಾರ ಸ್ವಾಮಿ ‌ವರ ಶ್ರಮದಿಂದ ಯೋಜನೆಗೆ ಚಾಲನೆ ದೊರಕಿದೆ. ಬಡವರಿಗೆ ಮನೆ ಸಿಕ್ಕು ಪಡುವ ಸಂತೋಷವೇ ತಮ್ಮ ಸಂತೋಷ ಎಂದರು. ಎಚ್‌. ಡಿ.ಕುಮಾರ ಸ್ವಾಮಿಯವರು ಶಾಸಕರಾಗಿ ಎರಡು ಬಾರಿ ಮುಖ್ಯಮಂತ್ರಿಗಳಾಗಲು ರಾಮನಗರದ ಜನತೆಯೇ ಕಾರಣ. ಹೀಗಾಗಿ ಜನರ ಋಣ ತಮ್ಮ ಮೇಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next