Advertisement

ನಮ್ಮ ಜಡ್ಡು ಜಾಪತ್ರೆ ಮತ್ತು ಒಂಬತ್ತು ಗ್ರಹಗಳ ಜಾತ್ರೆ

11:57 AM Feb 11, 2017 | |

ನಮ್ಮ ಆರೋಗ್ಯದ ವಿಚಾರದಲ್ಲಿ ನಾವು ಹೆಚ್ಚು ಜಾಗರೂಕತೆಯಲ್ಲಿ ಇರಬೇಕು ಎಂಬುದು ಯಾವಾ ಗಲೂ ನಮಗೆಲ್ಲ ಸ್ವೀಕೃತವಾದ ಅಂಶ. ಸಾವು ಇದ್ದಿದ್ದೇ. ಆದರೆ ಬದುಕು ಆರೋಗ್ಯ, ಶಕ್ತಿ, ಲವಲವಿಕೆಗಳಿಂದ ತುಂಬಿರಲಿ ಎಂದು ನಾವೆಲ್ಲ ಬಯಸುತ್ತೇವೆ. ಆದರೂ ನಾವು ಬಳಲಿಕೆ ಪಡುತ್ತಿರುತ್ತೇವೆ. ಒಂದು ಸ್ವಯಂಕೃತ ಅಪರಾಧದಿಂದ. ಇನ್ನೊಂದು ನಮಗೇ ತಿಳಿಯದಂತೆ ಏನೋ ಒಂದು ನಮ್ಮನ್ನು ಬಳಲಿಕೆಗೆ ತಳ್ಳುತ್ತದೆ. ಹಾಗಾದರೆ ಸ್ವಯಂಕೃತ ಅಪರಾಧವಿರದೆಯೇ ಆರೋಗ್ಯವನ್ನು ಬಿಕ್ಕಟ್ಟಿಗೆ ತಳ್ಳುವ ಶಕ್ತಿ ಯಾವುದು? ಈ ಬಿಕ್ಕಟ್ಟುಗಳನ್ನು ಮುಖ್ಯವಾಗಿ ಗ್ರಹಗಳೇ ನಮಗೆ ಒದಗಿಸುತ್ತದೆ ಎಂಬುದೇ ಹೆಚ್ಚು ಸ್ಪಷ್ಟ.

Advertisement

ಜಾತಕದಲ್ಲಿ ಲಗ್ನ (ಆತ್ಮಭಾವ)ದ ಮನೆಗೆ, ಲಗ್ನಾಧಿಪತಿಗೆ, ರೋಗದ (6ನೇಯ ಹಾಗೂ 8ನೇ ಮನೆ) ಅಧಿಪತಿಗಳಿಗೆ, ಮನೆಗಳಿಗೆ ದೋಷವಿದ್ದರೆ, ಹನ್ನೆರಡನೇ ಮನೆಯ ದೋಷವು ಆರೋಗ್ಯದ ಸಂಬಂಧವಾಗಿ ಬಸವಳಿಸುವ ಲಕ್ಷಣಗಳನ್ನು ಪಡೆದಿದ್ದರೆ, ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತವೆ. ಭಾಗ್ಯ, ಸುಖ, ಪೂರ್ವ ಪುಣ್ಯ ವಿಚಾರಗಳು ಜಾತಕದಲ್ಲಿ ಗಟ್ಟಿಯಾಗಿದ್ದರೆ ಈ ದೋಷಗಳನ್ನು  ಸರಿಪಡಿಸಬಹುದು. 

ಸಾಮಾನ್ಯವಾಗಿ ಚಂದ್ರನ ವಿಧವಿಧ ದೋಷಗಳು, ಶನಿಗ್ರಹ, ರಾಹು ಗ್ರಹ, ಕೇತು ಗ್ರಹಗಳ ಜೊತೆ ಒಗ್ಗೂಡಿ ವಿಷಮಾವಸ್ಥೆಗೆ ಆರೋಗ್ಯವನ್ನು ತಳ್ಳುವ ಅಪಾಯ ಸದಾ ಇದ್ದಿದ್ದೇ. ಒಬ್ಬ ಅತಿಯಾಗಿ ಕುಡಿಯುತ್ತಾನೆ ಎಂದಾದರೆ ಅವನ ಜಾತಕದಲ್ಲಿ ಚಂದ್ರ, ರಾಗು, ಕೇತು, ಶನಿಗಳ ಪ್ರಭಾವವಿರದೇ ಇರಲು ಸಾಧ್ಯವೇ ಇಲ್ಲ. ರಾಹು ಹಾಗೂ ಕೇತುಗಳು ಯಾವುದೇ ಒಳ್ಳೆಯ ಗ್ರಹಗಳನ್ನು ಕಂಗೆಡಿಸಬಲ್ಲ ಗ್ರಹಗಳು. ಹೀಗಾಗಿ ಇವು ಫಿಟ್ಸ್‌, ವಾಮಾಚಾರ ಸಹಿತವಾದ ಕ್ಷುದ್ರ ದೋಷಗಳನ್ನು ಮನುಷ್ಯನ ಆರೋಗ್ಯದ ವಿಚಾರದಲ್ಲಿ ಹೇರಿ ಸಹಿಸಲಸದಳವಾದ ಉಪಠಳ ನೀಡಬಲ್ಲವು. ಆಧುನಿಕ ಕಾಲದಲ್ಲಿ ನಂಬಲು ಅಸಾಧ್ಯವೆನಿಸುವ ಭೂತ, ಪಿಶಾಚ ಬಾಧೆಗಳು ರಾಹು ಕೇತುಗಳಿಂದ ಸಾಮಾನ್ಯ.

ಮುಖ್ಯವಾಗಿ ಭೂತ, ಪಿಶಾಚಿಗಳ ಅಸ್ತಿತ್ವವನ್ನು ವಿಕೃತವಾದ ರೀತಿಯಲ್ಲಿ ಗ್ರಹಿಸಬೇಕಾಗಿಲ್ಲ. ಆದರೆ ಚಂದ್ರನ ಉಪಟಳಗಳು ಮಾನಸಿಕ ವಲಯದ ಮೇಲೆ ರಾಹು , ಕೇತುಗಳಿಂದ ಮನುಷ್ಯನ  ಮೇಲೆ ವಿಪರೀತಿ, ವಿಸ್ಮಯಕಾರಕ ಅಸಹನೀಯವೆನಿಸುವ ಚಡಪಡಿಕೆ ತರಬಲ್ಲವು. ಈ ಮಾನಸಿಕ ಪರಿಧಿಯಲ್ಲಿನ ತಾಪ ವಿಕೋಪಗಳೇ ಭೂತ, ಪಿಶಾಚ ಬಾಧೆಗಳು ಎಂದು ಹಿಂದೆ ಪರಿಗಣಿಸಲ್ಪಟ್ಟವು. ಹೀಗಾಗಿ ತಲ್ಲಣ, ತಾಪಗಳಿಗೆ ಬೇರೆ ಏನನ್ನು ಹೆಸರಿಸಿಕರೆಯಲು ಅಸಾಧ್ಯವಾದ್ದರಿಂದ, ಹಿಂದಿನವರು ಭೂತ, ಪ್ರೇತ, ಪಿಶಾಚಿ ಬಾಧೆ ಎಂದು ಕರೆದರು. 

ಶನೈಶ್ಚರ ಸ್ವಾಮಿಯ ಕಾಟವಿದ್ದಾಗಲಂತೂ ಚಂದ್ರನ ಪೀಡೆ ನಿತ್ಯ ನರಕ. ದಾರಿದ್ರÂದಿಂದ ಕೂಡಿದ ಹತಾಶ ಮನೋಸ್ಥಿತಿ, ಕಾರಣವಿರದೆಯೇ ಗೆಳೆಯರು ವೈರಿಗಳಾಗುವ ಪರಿವರ್ತನೆ, ನಂಬಿಸಿ ಕೈಕೊಡುವ ಮಂದಿ, ಸುರಕ್ಷಿತವಾದ ನೆಲವೇ ಅದುರುತ್ತ  ಬಿರುಗಾಳಿಯ ನಿರ್ಮಾಣ, ಅಪಘಾತ,  ಇದೇ ರೀತಿಯ ಭೀಕರವಾದ ಇತರ ( ಕ್ಯಾನ್ಸರ್‌ , ಎಡ್ಸ್‌ ಹೃದಯ ಸಂಬಂಧಿ ಕಾಯಿಲೆಗಳು, ಕೋಲೆಸ್ಟರಾಲ್‌, ಸಕ್ಕರೆ ಪ್ರಮಾಣದ ಉಲ್ಬಣತೆ, ಮೂತ್ರ ಪಿಂಡ, ಲವಿರ್‌, ಯಕೃತ್‌ ವೈಫ‌ಲ್ಯಗಳು) ಕಾಟಗಳು ಸಂಭವಿಸಬಹುದು. ಅಂಗಾಂಗಗಳ ಉರಿ,ಕೀಲು ನೋವು, ಥೈರಾಯ್ಡ ತೊಂದರೆಗಳನ್ನು ಶನೈಶ್ಚರ ಹುಟ್ಟು ಹಾಕಬಹುದು. ಎಷ್ಟೇ ಬುದ್ಧಿವಂತ ಕೂಡ, ತನ್ನ ಯಾವುದೇ ಯೋಜನೆಗಳಲ್ಲೂ ಯಶಸ್ಸು ಪಡೆಯದೇ ಹೋಗಬಹುದು. ಮುಖ್ಯವಾಗಿ ದೇಹಕ್ಕೆ ವಿರಾಮವಿರದೆ ಚಡಪಡಿಸಬಹುದು. 

Advertisement

ಶುಕ್ರನ ದೋಷಗಳು ಲೈಂಗಿಕ ವೈಪರಿತ್ಯಗಳನ್ನು, ಅಕ್ರಮ ಸಂಬಂಧಗಳನ್ನು, ಲೈಂಗಿಕತೆಯಿಂದ ಹತಾಶೆ, ಪಶ್ಚಾತಾಪ ಕೋಟಲೆಗಳನ್ನು, ಲೈಂಗಿಕ ಅತೃಪ್ತಿಗಳನ್ನು ಸಂಯೋಜಿಸಬಹುದು. ಬಾಳ ಸಂಗಾತಿಯ ಅಸ್ವಾಸ್ಥ್ಯತೆ ಯಿಂದ ಜೀವನದ ಸಮತೋಲನ ತಪ್ಪಬಹುದು. ಸಾಂಸಾರಿಕವಾದ ನೆಲೆಯಲ್ಲಿನ ಸಮಾಧಾನದ ಬೇರುಗಳು ಬುಡಮೇಲಾಗಬಹುದು. ಸದಾ ಅವ್ಯಕ್ತವಾದ ಭಯವು ಸಂತೃಪ್ತಿಯ ಆವರಣಗಳನ್ನೇ ಕತ್ತರಿಸಿ ಹಿಂಸಿಸಬಹುದು. ಸ್ತ್ರೀ ಶಾಪದಿಂದಾಗಿ ಓರ್ವನ ದೈನಂದಿಕ ಸುಭದ್ರತೆಯೊಂದು ಅವನತಿಯ ದಾರಿಯನ್ನು ತಲುಪಬಲ್ಲದು. 

ಬುಧನು ತಾಪಕಾರಿಯಾಗಿದ್ದಲ್ಲಿ ಅಯೋಮಯ ವಾದ ಅಲರ್ಜಿ, ಶ್ವಾಸಕೋಶ ಸಂಬಂಧೀ ಕಾಯಿಲೆ, ಚರ್ಮವ್ಯಾಧಿಗಳು ಉಲ್ಪಣಿಸಬಲ್ಲವು. ಕರುಳು ಹುಣ್ಣು, ಅಸಿಡಿಟಿ, ಹುಳಿ ತೇಗು, ವಾಯು ಪ್ರಕೋಪ, ಹಸಿವೆಯೇ ಆಗದಿರುವ ವಿಕ್ಷಿಪ್ತ ಸ್ಥಿತಿ, ಯಕೃತ್ತಿನ ಹುಣ್ಣು, ಕಲ್ಲು, ರಕ್ತ ಶುದ್ಧತೆಯಲ್ಲಿ ಕೊರತೆ ಬಾಧಿಸಬಲ್ಲವು ಕುಷ್ಟ , ತೊನ್ನು, ತುರಿಗಜ್ಜಿಗಳು ಬಾಧಿಸಬಲ್ಲವು. ಮಲ ಬದ್ಧತೆ, ಅತಿಸಾರ, ಹೊಟ್ಟೆ ನೋವು ಇತ್ಯಾದಿ ಬುಧನಿಂದಾಗುವ ಕುಯಕ್ತಿಗಳಾಗಿವೆ. 

ಸೂರ್ಯನಿಂದ ತೀವ್ರವಾದ ಉಷ್ಣ ಬಾಧೆ, ಟೈಫಾಯ್ಡ, ಮಿದುಳು ಜ್ವರ, ರಕ್ತದ ಶುದ್ಧತೆಯ, ಸಲೀಸಾದ ಕೆಲಸಕಾರ್ಯಗಳಿಗೆ ಧಕ್ಕೆ ಉಂಟಾಗಬಹುದು. ಕ್ಷಯ ರೋಗ ಕೂಡ ಸೂರ್ಯನೇ ನೀಡುವ ಬಾಧೆ. ರಾಜ ವಿರೋಧಿ ಚಟುವಟಿಕೆಗಳಿಗೆ, ಸಂವಿಧಾನ ಬಾಹಿರ ಚಟುವಟಿಕೆಗಳಿಗೆ ಪ್ರೇರೇಪಣೆ ನೀಡಿ, ಮಾನಸಿಕ ಸ್ವಾಸ್ಥ್ಯವನ್ನ ತುಂಡರಿಸಿ, ಜೈಲು, ಗಲ್ಲು  ಇತ್ಯಾದಿ ಸಂಕಷ್ಟಗಳಿಗೆ  ಸೂರ್ಯ ದಾರಿ ಮಾಡಬಹುದಾಗಿದೆ. ಜೀವ ದ್ರವ ಕುಸಿತ, ದೇಹಕ್ಕೆ ಬೇಕಾದ ಜಲ, ಲವಣ, ಉಪಯುಕ್ತ ಖನಿಜಗಳ ಕೊರತೆಗೆ ಸೂರ್ಯ ಅವಕಾಶ ಮಾಡಿಕೊಡಬಲ್ಲ. 

ಲೈಂಗಿಕ ವ್ಯಾಧಿ, ಮಾನಸಿಕ ಅಸ್ವಾಸ್ಥ್ಯ, ಗೀಳು, ಭಯ, ಸ್ಥೈರ್ಯದಿಂದ ಇರಲು ಸಾಧ್ಯವಾಗದ ದುರ್ಬಲ ಮನಸ್ಸು, ಸ್ತ್ರೀಯರಿಗೆ ಪುರುಷರಿಗೆ, ಪುರುಷರಿಂದ ಮಹಿಳೆಯರಿಗೆ ವಿಪತ್ತು ತಂದಿಡಬಲ್ಲ ದುಷ್ಟತನ ಚಂದ್ರನ ಕೈಚಳಗಳಾಗಿವೆ. ಲಿವರ್‌ ಮೇಲೆ ಬಹುದೊಡ್ಡ ಆಘಾತವನ್ನು, ಆತಂಕಗಳನ್ನು ಚಂದ್ರ ನಿರ್ಮಿಸಬಲ್ಲ ಕಫ‌, ವಾತಗಳು ಚಂದ್ರನಿಂದಲೇ ಉಲ್ಪಣಗೊಳ್ಳುತ್ತವೆ.
 
ಅಪಘಾತ, ರಕ್ತಪಾತ, ಶಸ್ತ್ರಚಿಕಿತ್ಸೆ, ರಕ್ತದೊತ್ತಡ, ಮಿದುಳು ಸ್ರಾವ, ವ್ರಣ, ಮಾಗದ ಗಾಯ, ಸಕ್ಕರೆ ಕಾಯಿಲೆ, ಅಪರಾಧಗಳನ್ನು ಎಸಗುವ ಪಾಪದ ಮನಸ್ಸು, ಯೋಜನೆಗಳನ್ನೆಲ್ಲ ಒದಗಿಸಿ ಅಂಗಾರಕ (ಕುಜ) ಜೀವನವನ್ನ ನರಳಿಸಬಲ್ಲ. ಗುರು ಗ್ರಹವು ಕಾರಣವಿರದೆ ಜನ ವಿರೋಧ, ಸೂಕ್ಷ್ಮ ಮತಿಗಳ ಅಸಹಕಾರಗಳನ್ನು ನಿರ್ಮಿಸಿ ಮನುಶ್ಯನನ್ನು ಏಕಾಂಗಿ ಯಾಗಿಸಬಲ್ಲದು. ಏಕಾಂಗಿತನ ಇನ್ನಿರದ ವೈಪರಿತ್ಯಗಳಿಗೆ ವೇದಿಕೆಯನ್ನೊದಗಿಸಿ ನರಳಿಸಬಹುದು. 

ಒಟ್ಟಿನಲ್ಲಿ ಗ್ರಹಗಳು ನಮ್ಮ ಜೀವನದಲ್ಲಿ ಸ್ವಾಸ್ಥ್ಯದಿಂದ, ಅಸ್ವಾಸ್ಥ್ಯಕ್ಕೆ ಸುಖದಿಂದ ನಿತ್ಯ ನರಕದ ಕೂಪಕ್ಕೆ, ಅಮೃತತ್ವದಿಂದ ವಿನಾಶಕ್ಕೆ ಸರ್‌ನೆ ತಳ್ಳಬಲ್ಲವು. ಕಾರಣವಿರದೇ ಹೆದರಿಸಿ, ಇಲ್ಲದ ರೋಗಗಳನ್ನೂ ಸೃಷ್ಟಿಸುವ ದುಷ್ಟ ಶಕ್ತಿಗಳ ನಡುವೆ, ವೈದ್ಯರು, ಜ್ಯೋತಿಷಿಗಳ ನಡುವೆ ತಂದು ನಿಲ್ಲಿಸಬಹುದು. ನಿಮ್ಮ ಮನಸ್ಸು ಹಿತಮಿತವಾದ ಸ್ಥೈರ್ಯದಲ್ಲಿ, ಹಿಡಿತದಲ್ಲಿ, ಸಮತೋಲನ ಹೊಂದಿದ ಆತ್ಮ ವಿಶ್ವಾಸದಲ್ಲಿ ಹತೋಟಿಯಲ್ಲಿರಲಿ. ನಂತರ ದೈವೇಚ್ಛೆ. 

ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next