Advertisement

ನೂತನ ಶಿಕ್ಷಣ ನೀತಿ: ಸಿಯುಕೆ ಮಾದರಿಯಾಗಲಿ

01:45 PM Oct 06, 2021 | Team Udayavani |

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ನೂತನ ಶಿಕ್ಷಣ ನೀತಿ ಅನುಷ್ಠಾನದಲ್ಲಿ ದೇಶದ ಇತರ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಬೇಕೆಂದು ಎಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನಾ ಸಮಿತಿ ಸದಸ್ಯರಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಸದಸ್ಯ ಪ್ರೊ| ಎಂ.ಕೆ. ಶ್ರೀಧರ್‌ ಆಶಯ ವ್ಯಕ್ತಪಡಿಸಿದರು.

Advertisement

ಆಳಂದ ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ಶಿಕ್ಷಣ ಮತ್ತು ಸಮಾಜ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಶಿಕ್ಷಣ ನೀತಿ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ವರ್ಚುವಲ್‌ ಮೂಲಕ ಅವರು ದಿಕ್ಸೂಚಿ ಭಾಷಣ ಮಾಡಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಾಗಿ  ಒಂದು ವರ್ಷ ಕಳೆದಿದ್ದು, ಈಗ ಅನುಷ್ಠಾನದ ಸುಸಂದರ್ಭ ಬಂದಿದೆ. ಜತೆಗೆ ಈ ನೀತಿ ಯಾಕೆ ಅಗತ್ಯವಾಗಿದೆ? ಇದರಲ್ಲಿ ಏನೇನಿರಲಿದೆ ಎನ್ನುವ ಕುತೂಹಲಕ್ಕೂ ತೆರೆ ಬಿದ್ದಿದೆ. ಇದೀಗ ಇದನ್ನು ಹೇಗೆ ಅನುಷ್ಠಾನ ಮಾಡಬೇಕು ಎನ್ನುವ ಬಗ್ಗೆ ಯೋಚನೆ ಮತ್ತು ಯೋಜನೆ ರೂಪಸಬೇಕಿದೆ ಎಂದರು.

ಕಲಬುರಗಿಯಲ್ಲಿರುವ ಕೇಂದ್ರೀಯ ವಿವಿ ರಾಜ್ಯದ ಏಕೈಕ ವಿಶ್ವವಿದ್ಯಾಲಯ ಮತ್ತು ನೇರವಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲೇ ಬರುವುದರಿಂದ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕೆಲ ಮಾದರಿಯನ್ನು ವಿಶ್ವವಿದ್ಯಾಲಯವೇ ತಯಾರಿಸಬೇಕು. ಬಹುಶಿಸ್ತೀಯ ಪಠ್ಯಕ್ರಮ ರೂಪಿಸಬೇಕು. ಹೊಸ ಶಿಕ್ಷಣ ನೀತಿಯಲ್ಲಿನ ಮಲ್ಪಿಪಲ್‌ ಎಂಟ್ರಿ ಮತ್ತು ಮಲ್ಪಿಪಲ್‌ ಎಕ್ಸಿಟ್‌ಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇತರ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉತ್ತಮ ಸಂಪನ್ಮೂಲವಿದೆ. ಅಗತ್ಯ ಬೋಧಕ ಸಿಬ್ಬಂದಿ ಇದ್ದು, ನಿರ್ದಿಷ್ಟ ಕೇಸ್‌ ಸ್ಟಡಿ ಮಾಡಬೇಕು. ಶಿಕ್ಷಣ ನೀತಿ ಅನುಷ್ಠಾನದಲ್ಲಿ ಈ ವಿಶ್ವವಿದ್ಯಾಲಯವನ್ನೇ ಇತರೆ ಸಂಸ್ಥೆಗಳು ಅನುಸರಿಸುವಂತೆ ಆಗಬೇಕು. ಕೇಂದ್ರ ಸಚಿವಾಲಯದ ಅಧಿಧೀನದಲ್ಲಿ ಬರುವುದರಿಂದ ತಕ್ಷಣಕ್ಕೆ ಅಗತ್ಯ ಮಾರ್ಪಾಡು ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಅತಿಥಿ ಮತ್ತು ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ| ಶಿವಪ್ರಸಾದ “ಹೊಸ ಶಿಕ್ಷಣ ನೀತಿ ಬಗ್ಗೆ ಭಯ ಬೇಡ. ಇದು ಪ್ರಗತಿಗೆ ದಾರಿಯಾಗಿದೆ. ಎಲ್ಲರೂ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡೋಣ’ ಎಂದು ಕವಿತೆ ಪ್ರಸ್ತುತಪಡಿಸಿದರು. ಕುಲಪತಿ ಪ್ರೊ| ಬಿ. ಸತ್ಯನಾರಾಯಣ ಮಾತನಾಡಿ, ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ವಿಶ್ವವಿದ್ಯಾಲಯದ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸ್ನೇಹಿ ನೀತಿಯಾಗಿದೆ. ಇದನ್ನು ಹೇಗೆ ಅನುಷ್ಠಾನ ಮಾಡಬೇಕೆಂಬ ಅಗ್ನಿ ಪರೀಕ್ಷೆ ಶಿಕ್ಷಕರಿಗಿದೆ ಎಂದು ಹೇಳಿದರು.

Advertisement

ಸದ್ಯ ಕಲಾ ವಿಷಯಗಳಲ್ಲಿ ಓದಿದ ಶೇ.20ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ಸಿಗುವಂತ ಮತ್ತು ಐಐಟಿ ಅಭ್ಯಾಸ ಮಾಡಿದ ಯುವಕರು ಆತ್ಮಹತ್ಯೆಗೆ ಶರಣವಾಗುವ ಪರಿಸ್ಥಿತಿ ಇದೆ. ಆದ್ದರಿಂದ ಹೊಸ ಶಿಕ್ಷಣ ನೀತಿ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಅಗತ್ಯವಾಗಿ ಆಗಬೇಕು. ರಾಜ್ಯದ ಬೇರೆ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಸರಾಸರಿ ವಯಸ್ಸು 50 ಇದ್ದರೆ, ನಮ್ಮ ಬೋಧಕ ಸಿಬ್ಬಂದಿಯ ವಯಸ್ಸು 35ರಿಂದ 40 ಇದೆ. ಯುವ ಬೋಧಕರೇ ಹೆಚ್ಚಿದ್ದು, ನಮ್ಮಲ್ಲಿ ಮೂಲ ಸೌಕರ್ಯಗಳು ಇರುವುದರಿಂದ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕುಲಸಚಿವ ಪ್ರೊ| ಬಸವರಾಜ ಡೋಣೂರ, ಬೆಂಗಳೂರಿನ ಶಿಕ್ಷಣ ಮತ್ತು ಸಮಾಜ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಗೌರೀಶ, ಪ್ರೊ| ಚನ್ನ ವೀರ ಆರ್‌.ಎಂ. ಮಾತನಾಡಿದರು. ಎನ್‌ಇಪಿ ಕಾರ್ಯಾಗಾರದ ಮುಖ್ಯಸ್ಥ ಪ್ರೊ| ಅಳಗವಾಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಗಾರದಲ್ಲಿ ಸಿಯುಕೆ ವಿವಿಧ ನಿಕಾಯಗಳ ಡೀನ್‌ಗಳು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.

ನೂತನ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಯುಜಿಸಿ ಅಗತ್ಯ ನೆರವು ನೀಡುವುದಾಗಿ ಹೇಳಿದೆ. ಜತೆಗೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ತಿಳಿಸಿದೆ. ಮುಂದಿನ ಕೆಲ ತಿಂಗಳಲ್ಲೇ ಹೊಸ ನೀತಿಯ ಅನ್ವಯ ಪಠ್ಯಕ್ರಮ ರಚಿಸಿ, ಬೋಧಿ ಸಲಾಗುವುದು.
ಪ್ರೊ| ಬಿ.ಸತ್ಯನಾರಾಯಣ,
ಕುಲಪತಿ, ಸಿಯುಕೆ

ನೂತನ ಶಿಕ್ಷಣ ನೀತಿ ಈಗಾಗಲೇ ಒಂದು ನೀಲಿನಕ್ಷೆ ಸಿದ್ಧಪಡಿಸಿದೆ. ಅದಕ್ಕೆ ಅಗತ್ಯವಾದ ಪೂರಕ ಅಂಶ ಮತ್ತು ಮಾದರಿಗಳನ್ನು ಸೇರಿಸುವ ಜವಾಬ್ದಾರಿ ಸಿಯುಕೆಗೆ ಇದೆ. ಕೆಲ ಮಾದರಿಗಳು ಆರಂಭದಲ್ಲಿ ಯಶಸ್ಸು ಆಗದೇ ಹೋದರೂ, ಅದರಿಂದ ಹೊಸ ಪಾಠ ಕಲಿಯಬಹುದು.
ಪ್ರೊ| ಎಂ.ಕೆ.ಶ್ರೀಧರ್‌,
ಸದಸ್ಯರು, ಯುಜಿ

Advertisement

Udayavani is now on Telegram. Click here to join our channel and stay updated with the latest news.

Next