Advertisement

ಟಿ20 ಸರಣಿ ಮೇಲೆ ಭಾರತದ ಕಣ್ಣು

10:38 PM Feb 17, 2022 | Team Udayavani |

ಕೋಲ್ಕತಾ: ಭಾರತಕ್ಕೆ ಪ್ರವಾಸ ಬಂದಂದಿನಿಂದ ಬರೀ ಸೋಲನ್ನೇ ಹೊತ್ತುಕೊಂಡಿರುವ ವೆಸ್ಟ್‌ ಇಂಡೀಸ್‌, ಶುಕ್ರವಾರ ಮತ್ತೂಂದು ಸರಣಿ ಸೋಲಿನ ಮುಖಭಂಗದಿಂದ ಪಾರಾಗಬೇಕಾದ ಚಿಂತೆಯಲ್ಲಿದೆ. ಟೀಮ್‌ ಇಂಡಿಯಾ ವಿರುದ್ಧದ ದ್ವಿತೀಯ ಟಿ20 ಮುಖಾಮುಖೀ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆಯಲಿದ್ದು, ಶತಪ್ರಯತ್ನ ಮಾಡಿಯಾದರೂ ಗೆಲ್ಲುವ ಯೋಜನೆ ಪೊಲಾರ್ಡ್‌ ಪಡೆಯದ್ದು. ಇನ್ನೊಂದೆಡೆ ರೋಹಿತ್‌ ಬಳಗ ಎರಡೇ ಪಂದ್ಯಗಳಲ್ಲಿ ಸರಣಿ ಜಯಭೇರಿ ಮೊಳಗಿಸಲು ತುದಿಗಾಲಲ್ಲಿ ನಿಂತಿದೆ.

Advertisement

ಇಂಗ್ಲೆಂಡ್‌ ಎದುರಿನ ತವರಿನ ಟಿ20 ಸರಣಿಯನ್ನು 3-2ರಿಂದ ಗೆದ್ದ ಸ್ಫೂರ್ತಿಯಲ್ಲಿದ್ದ, ಎರಡು ಬಾರಿಯ ಟಿ20 ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡೀತು ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಮೊದಲ ಮುಖಾಮುಖೀಯನ್ನು 6 ವಿಕೆಟ್‌ಗಳಿಂದ ಕಳೆದುಕೊಂಡಿತು. ಬಲಾಡ್ಯ ತಂಡವನ್ನು ಹೊಂದಿದ್ದೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಂಡೀಸ್‌ ಎಡವಿದೆ. ಪಂದ್ಯಗಳೆಲ್ಲವೂ ಏಕಪಕ್ಷೀಯವಾಗಿ ಸಾಗಿವೆ. ಹೀಗಾಗಿ ಭಾರತವೇ ಮತ್ತೆ ನೆಚ್ಚಿನ ತಂಡವೆಂಬುದರಲ್ಲಿ ಅನುಮಾನವಿಲ್ಲ. ಶುಕ್ರವಾರವೂ ಭಾರತ ಗೆದ್ದರೆ ರೋಹಿತ್‌ ಶರ್ಮ ನಾಯಕತ್ವದಲ್ಲಿ ಸತತ 3ನೇ ಸರಣಿ ಒಲಿದಂತಾಗುತ್ತದೆ.

6 ಮಂದಿ ಬೌಲರ್ :

ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಸೇರಿದಂತೆ 6 ಮಂದಿ ಬೌಲರ್‌ಗಳ ಕಾಂಬಿನೇಶನ್‌ನಿಂದಾಗಿ ಇನ್‌ಫಾರ್ಮ್ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಹೊರಗುಳಿಯುವಂತಾಗಿದೆ. ಭಾರತದ ಮಿಡ್ಲ್ ಆರ್ಡರ್‌ ಗಟ್ಟಿಗೊಳ್ಳಬೇಕಾದರೆ ಶ್ರೇಯಸ್‌ ಸೇರ್ಪಡೆ ಅಗತ್ಯವೆನಿಸುತ್ತದೆ.

ಪೇಸ್‌ ಬೌಲರ್‌ ದೀಪಕ್‌ ಚಹರ್‌ ಮೊದಲ ಪಂದ್ಯ ವೇಳೆ ಕೈಗೆ ಏಟು ಮಾಡಿಕೊಂಡಿದ್ದು, ಆಡು ವುದು ಖಾತ್ರಿಯಾಗಿಲ್ಲ. ಆಗ ಸಿರಾಜ್‌ ಅಥವಾ ಆವೇಶ್‌ ಖಾನ್‌ ಅವಕಾಶ ಪಡೆಯಬಹುದು. ಸ್ಪಿನ್‌ ವಿಭಾಗದಲ್ಲಿ ಚೊಚ್ಚಲ ಪಂದ್ಯವಾಡಿದ ರವಿ ಬಿಷ್ಣೋಯಿ ಉತ್ತಮ ನಿಯಂತ್ರಣ ಸಾಧಿಸಿದ್ದಾರೆ. ಚಹಲ್‌ ತುಸು ದುಬಾರಿಯಾಗಿದ್ದಾರೆ. ಮೂರನೇ ಆಯ್ಕೆಯಾಗಿರುವವರು ಕುಲದೀಪ್‌ ಯಾದವ್‌.

Advertisement

ಕೊಹ್ಲಿ ಬ್ಯಾಟಿಂಗ್‌ ಚಿಂತೆ :

ಸದ್ಯ ಭಾರತದ ದೊಡ್ಡ ಸಮಸ್ಯೆಯೆಂದರೆ ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಫಾರ್ಮ್. ವಿಂಡೀಸ್‌ ಎದುರಿನ 4 ಪಂದ್ಯಗಳಲ್ಲಿ ಅವರ ಗಳಿಕೆ 8, 18, 0 ಮತ್ತು 17 ರನ್‌ ಮಾತ್ರ. ಒಂದೆಡೆ ಕೊಹ್ಲಿ ಸತತ ವೈಫ‌ಲ್ಯ ಕಾಣುತ್ತ ಹೋಗುವುದು, ಇನ್ನೊಂದೆಡೆ ಉಜ್ವಲ

ಫಾರ್ಮ್ನಲ್ಲಿರುವ ಋತುರಾಜ್‌ ಗಾಯಕ್ವಾಡ್‌ ಅವರಂಥವರನ್ನು ಕಡೆಗಣಿಸುತ್ತಲೇ ಇರುವುದು ಅಭಿಮಾನಿಗಳಿಗೆ ಕಿರಿಕಿರಿ ಉಂಟುಮಾಡಿರುವುದು ಸುಳ್ಳಲ್ಲ.

ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮ ಜತೆ ಇನ್ನಿಂಗ್ಸ್‌ ಆರಂಭಿಸಿದ, ಐಪಿಎಲ್‌ನ 15.25 ಕೋಟಿ ರೂ.ಗಳ ಒಡೆಯ ಇಶಾನ್‌ ಕಿಶನ್‌ ತೀರಾ ಸಾಮಾನ್ಯ ಆಟಗಾರನಂತೆ ಕಂಡುಬಂದರು. ಭಾರತ ಪವರ್‌ ಪ್ಲೇ ಅವಧಿಯಲ್ಲಿ ಗಳಿಸಿದ 58 ರನ್ನುಗಳಲ್ಲಿ ರೋಹಿತ್‌ ಅವರದೇ ಸಿಂಹಪಾಲಾಗಿತ್ತು. ಶುಕ್ರವಾರ ಗಾಯಕ್ವಾಡ್‌ಗೆ ಒಂದು ಅವಕಾಶ ಕೊಟ್ಟು ನೋಡಬಾರದೇಕೆ ಎಂಬುದು ಎಲ್ಲರ ಪ್ರಶ್ನೆ. ಹಾಗೆಯೇ ಮಧ್ಯಮ ಕ್ರಮಾಂಕವನ್ನು ಸುಧಾರಿಸಿಕೊಳ್ಳಬೇಕಾದುದು ಭಾರತದ ಪಾಲಿನ ತುರ್ತು ಅಗತ್ಯ. ಇಲ್ಲಿ ಕೊಹ್ಲಿ ಸತತ ವೈಫ‌ಲ್ಯ ಅನುಭವಿಸುತ್ತಿರುವಾಗ ಮತ್ತೆ ಮತ್ತೆ ರಿಷಭ್‌ ಪಂತ್‌ಗೆ ಭಡ್ತಿ ಕೊಡುವ ಬಗ್ಗೆ ಆಕ್ಷೇಪಗಳಿವೆ. ಪಂತ್‌ ಕೂಡ ಅಗ್ಗಕ್ಕೆ ಔಟಾಗುವುದರಿಂದ ಮಿಡ್ಲ್ ಆರ್ಡರ್‌ನಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಮೊದಲ ಪಂದ್ಯದಲ್ಲೇನೋ ಸೂರ್ಯಕುಮಾರ್‌ ಯಾದವ್‌-ವೆಂಕಟೇಶ್‌ ಅಯ್ಯರ್‌ ಪರಿಸ್ಥಿತಿಯನ್ನು ನಿಭಾಯಿಸಿದರು.

ಹೋಲ್ಡರ್‌ ಕಣಕ್ಕೆ? :

ಮೊದಲ ಪಂದ್ಯದಲ್ಲಿ ವಿಂಡೀಸ್‌ ಬ್ಯಾಟಿಂಗ್‌ ಸರದಿಯಲ್ಲಿ ಸಿಡಿದು ನಿಂತದ್ದು ನಿಕೋಲಸ್‌ ಪೂರಣ್‌ ಮಾತ್ರ. ಇವರಂತೆ ಮತ್ತೋರ್ವ ಬ್ಯಾಟರ್‌ ಮುನ್ನುಗ್ಗಿ ಬಾರಿಸಿದ್ದರೆ ವಿಂಡೀಸ್‌ ಬೃಹತ್‌ ಮೊತ್ತ ಪೇರಿಸಬಹುದಿತ್ತು. ಆದರೂ ಪೂರಣ್‌-ಪೊಲಾರ್ಡ್‌ ಪರಾಕ್ರಮದಿಂದ ವಿಂಡೀಸ್‌ ಅಂತಿಮ 5 ಓವರ್‌ಗಳಲ್ಲಿ 61 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಭಾರತದ ಡೆತ್‌ ಓವರ್‌ ಬೌಲಿಂಗ್‌ಗೆ ಇದೊಂದು ಹಿನ್ನಡೆ. ದ್ವಿತೀಯ ಪಂದ್ಯದಲ್ಲಿ ಜೇಸನ್‌ ಹೋಲ್ಡರ್‌ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಆಗ ವೆಸ್ಟ್‌ ಇಂಡೀಸ್‌ ಹೆಚ್ಚು ಬಲಿಷ್ಠವಾಗಿ ಗೋಚರಿಸುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next