Advertisement

ನಿರೂಪಣೆ, ಮಾತೇ ಬಂಡವಾಳ

02:55 PM Aug 22, 2018 | |

ಮಾತನಾಡುವುದು ಒಂದು ಕಲೆ. ಎಲ್ಲರಿಗೂ ಇದು ಸಿದ್ಧಿಸುವುದಿಲ್ಲ. ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡವರೂ ಇದ್ದಾರೆ. ಇವರಲ್ಲಿ ಮುಖ್ಯವಾಗಿ ಮನೀಷ್‌ ಪೌಲ್‌, ಕಪಿಲ್‌ ಶರ್ಮಾ, ಜಯ ಬಾನು ಶಾಲಿ, ಮಂದಿರಾ ಬೇಡಿ, ಮಿನಿ ಮಾಥೂರ್‌, ಅನುಶ್ರೀ, ಸೃಜನ್‌ ಲೋಕೇಶ್‌, ಅಕುಲ್‌ ಬಾಲಾಜಿ ಮತ್ತಿತರರ ಹೆಸರು ಕೂಡಲೇ ನೆನಪಾಗುತ್ತದೆ. ಹೆಚ್ಚು ಮಾತನಾಡುವವರನ್ನು ಕೆಲವರು ವಾಚಾಳಿ ಎಂದರೂ ಈ ಅಭ್ಯಾಸವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಒಂದೊಳ್ಳೆ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಿದೆ.

Advertisement

ಮಾತು ಬಲ್ಲವರಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ಮಾತು ಎಲ್ಲವನ್ನೂ ನೀಡುತ್ತದೆ. ವಾಕ್ಚಾತುರ್ಯವನ್ನು ಬಂಡವಾಳ ಮಾಡಿಕೊಂಡು ಕಾರ್ಯಕ್ರಮಗಳ ನಿರೂಪಣೆ ಮಾಡುವುದನ್ನು ಕಲಿತರೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಬೇಡಿಕೆಯನ್ನು ಪಡೆಯಬಹುದು. ಒಂದು ಕಾರ್ಯಕ್ರಮದ ಜೀವಾಳವೇ ನಿರೂಪಣೆ. ಇಲ್ಲಿ ವ್ಯಕ್ತಿತ್ವದಷ್ಟೇ ಮುಖ್ಯವಾಗಿರುವುದು ಸ್ಪಷ್ಟ ಉಚ್ಛಾರ, ಎಲ್ಲರನ್ನೂ ಸೆಳೆಯಬಲ್ಲ ಕಂಠ, ನಿರೂಪಣೆ ಶೈಲಿ.

ನಿರೂಪಣೆಗೆ ಯಾವುದೇ ವಯಸ್ಸಿನ ಹಂಗಿಲ್ಲ. ಫ‌ುಲ್‌ ಟೈಮ್‌, ಪಾರ್ಟ್‌ಟೈಮ್‌ ಆಗಿ ಇದರಲ್ಲಿ ತೊಡಗಿಸಿಕೊಳ್ಳಬಹುದು. ಇದಕ್ಕೆ ಬೇಕಿರುವುದು ಆಸಕ್ತಿ ಹಾಗೂ ಚಾಕಚಕ್ಯತೆ. ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ತಯಾರಿಮಾಡಿಕೊಂಡು, ವ್ಯಾಪ್ತಿಗನುಗುಣವಾಗಿ ಜನರನ್ನು ಮಾತಿನ ಮೂಲಕ ರಂಜಿಸುವ ಕಲೆ ಇದ್ದರೆ ಸಾಕು ಎಲ್ಲರೂ ನಿಮ್ಮ ಮಾತಿಗೆ ಮೋಡಿಯಾಗುವರು.

ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮ ನಿರೂಪಕರಿಗೆ ಅವಕಾಶಗಳು ಹೆಚ್ಚಾಗಿವೆ. ಕಾರಣ ಟಿವಿ ಮಾಧ್ಯಮಗಳಲ್ಲಿ ಇಂದು ರಿಯಾಲಿಟಿ ಶೋಗಳು ಹೆಚ್ಚಿವೆ. ಹೀಗಾಗಿ ಉತ್ತಮ ಮಾತುಗಾರರಿಗೆ ಅವಕಾಶಗಳು ಎಲ್ಲೆಡೆಯೂ ತೆರೆದಿವೆ. ಆ್ಯಂಕರ್‌ ಆಗಬೇಕು, ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವಂಥ ಹಂಬಲ ಇರುವವರು ನಿರೂಪಣಾ ಶೈಲಿ ಮತ್ತು ಭಾಷೆಯನ್ನು ತಿಳಿದುಕೊಂಡಿರುವುದು ಅತೀ ಅಗತ್ಯ. ಶಾಲೆ, ಕಾಲೇಜುಗಳಲ್ಲಿ ಭಾಷಣ, ಸಂವಾದ, ಡಿಬೇಟ್‌ ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದರೆ ಮುಂದೆ ಇಂತಹ ಕ್ಷೇತ್ರದಲ್ಲೂ ಉದ್ಯೋಗ ಕಂಡುಕೊಳ್ಳಲು ಸಾಧ್ಯವಿದೆ.

ತರಬೇತಿಗಳು
ನಿರೂಪಣೆ ಶೈಲಿ, ಮಾತಿನ ಮೇಲೆ ನಿಯಂತ್ರಣ ಸಾಧಿಸಲು, ಸಮಯ ಮೀರದೆ ಮಾತನಾಡುವ ವಿಧಾನ ಕಲಿಯಬೇಕೆಂದರೆ ಹೆಚ್ಚಿನ ಖರ್ಚಿಲ್ಲ. ಕೆಲವು ಸಂಸ್ಥೆಗಳು ಇಂತಹ ತರಬೇತಿಯನ್ನು ನೀಡುತ್ತಿರುತ್ತವೆ. ಜತೆಗೆ ಟಿವಿ ರಿಯಾಲಿಟಿ ಶೋ, ಆ್ಯಂಕರ್‌ ಗಳಿಗೆ ಪ್ರತ್ಯೇಕ ತರಬೇತಿ, ಕೋರ್ಸ್‌ಗಳಿವೆ. ಈ ಕುರಿತು ಆನ್‌ ಲೈನ್‌, ಯುಟ್ಯೂಬ್‌ ಚಾನೆಲ್‌ ಮೂಲಕವೂ ಕಲಿತುಕೊಳ್ಳಬಹುದಾಗಿದೆ.

Advertisement

ಉತ್ತಮ ನಿರೂಪಕನ ಜವಾಬ್ದಾರಿಗಳು
ಆರಂಭದಲ್ಲಿ ಕೃತಜ್ಞತೆ ಸಲ್ಲಿಸುವುದು, ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸುವುದು, ನಿಮ್ಮ ಅತ್ಯುತ್ತಮ ಸಂಗತಿಯನ್ನು ಹಂಚಿಕೊಳ್ಳುವುದು, ಏನು ಮಾತನಾಡುತ್ತಿದ್ದೀರಿ ಎಂಬ ಅರಿವು, ಕೇಳುಗರ ಕುರಿತು ಅಧ್ಯಯನ, ಕೇಳಗರಿಗೆ ಗೌರವ ಕೊಡುವುದು, ಆಯಾಸ ತೋರ್ಪಡಿಸದಿರುವುದು, ವೇದಿಕೆ ಖಾಲಿಯಾಗದಂತೆ ನೋಡಿಕೊಳ್ಳುವುದು.

 ಭರತ್‌ ರಾಜ್‌ ಕರ್ತಡ್ಕ                     

Advertisement

Udayavani is now on Telegram. Click here to join our channel and stay updated with the latest news.

Next