Advertisement

ಮೋದಿ ವಿಕ್ರಮದ ಹಾದಿ…

08:34 PM May 24, 2019 | Lakshmi GovindaRaj |

ತೃಣಮೂಲ ಕಾಂಗ್ರೆಸ್‌(ಪಶ್ಚಿಮ ಬಂಗಾಳ) ಹಾಗೂ ಬಿಜು ಜನತಾ ದಳ(ಒಡಿಶಾ)ದ ಭದ್ರಕೋಟೆಯಲ್ಲಿ ಬಿಜೆಪಿ ಬಿರುಕು ಮೂಡಿಸಿರುವುದು ಈ ಫ‌ಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. 2019ರ ಚುನಾವಣೆಯಲ್ಲಿ ಈ ರಾಜ್ಯಗಳ ಬಿಜೆಪಿಯ ಎರಡು ಪ್ರಮುಖ ಗುರಿಗಳಾಗಿದ್ದವು. ಅದರಲ್ಲಿ ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದಿಂದ ಪಕ್ಷಕ್ಕೆ ಏಟು ಬೀಳಬಹುದು ಎಂದು ಯೋಚಿಸಿದ್ದ ಬಿಜೆಪಿ, ಉತ್ತರಪ್ರದೇಶದಲ್ಲಿ ತಾವು ಏನನ್ನು ಕಳೆದುಕೊಳ್ಳಲಿದ್ದೇವೆಯೋ, ಅದನ್ನು ಈ ಎರಡು ರಾಜ್ಯಗಳಲ್ಲಿ ಗಳಿಸಿಕೊಳ್ಳೋಣ ಎಂದು ಯೋಜನೆ ಹಾಕಿಕೊಂಡಿತ್ತು.

Advertisement

ಅದರಂತೆಯೇ, ರಾಜಕೀಯ ಚಾಣಕ್ಯ ಅಮಿತ್‌ ಶಾ ಕಟ್ಟಿಕೊಟ್ಟ ಜಬರ್ದಸ್ತ್ ಕಾರ್ಯತಂತ್ರವು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿಯ ಸೀಟು ಗಳಿಕೆ ಮಾತ್ರವಲ್ಲದೆ, ಮತ ಹಂಚಿಕೆಯಲ್ಲೂ ಗಣನೀಯ ಸಾಧನೆ ಮಾಡಲು ಸಹಾಯ ಮಾಡಿತು. ಅಷ್ಟೇ ಅಲ್ಲ, ಉತ್ತರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾ ಸ್ಟ್ರಾéಟಜಿ ಸೈ ಎನಿಸಿ, ಬಿಜೆಪಿಯ “ವಿಕ್ರಮದ ಹಾದಿ’ಗೆ ನೆರವಾಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಬಂಗಾಳ ಮತ್ತು ಒಡಿಶಾಗೆ ಲಗ್ಗೆ: 2014ರಲ್ಲಿ ಪ.ಬಂಗಾಳದಲ್ಲಿ ಕೇವಲ 2 ಸೀಟುಗಳನ್ನಷ್ಟೇ ಗೆದ್ದಿದ್ದ ಬಿಜೆಪಿ ಈ ಬಾರಿ 18 ಸೀಟುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇನ್ನು ಒಡಿಶಾದಲ್ಲಿ ಕೇವಲ ಒಂದೇ ಒಂದು ಸೀಟು ಹೊಂದಿದ್ದ ಬಿಜೆಪಿ ಈ ಸಲ ಬರೋಬ್ಬರಿ 12 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಎರಡೂ ರಾಜ್ಯಗಳಿಗೆ ಎಂಟ್ರಿ ಕೊಟ್ಟು ದೀದಿ ಮತ್ತು ಪಾಟ್ನಾಯಕ್‌ಗೆ ಗರ್ವಭಂಗ ಮಾಡಲು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮೊದಲೇ ಯೋಜನೆ ರೂಪಿಸಿಕೊಂಡಿದ್ದರು. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಕಳೆದುಕೊಳ್ಳುವಂಥದ್ದೇನೂ ಇರಲಿಲ್ಲ, ಆದರೆ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಬಿಜೆಪಿ ತನ್ನ ಕೆಲಸವನ್ನು ಮುಂದುವರಿಸುತ್ತಾ ಸಾಗಿತು.

ಕೆಲವೇ ತಿಂಗಳ ಹಿಂದೆ ಒಡಿಶಾ ಮತ್ತು ಪ.ಬಂಗಾಳದಲ್ಲಿ 12ಕ್ಕೂ ಹೆಚ್ಚು ನಾಯಕರು ಕೇಸರಿ ಪಡೆಯತ್ತ ವಾಲಿದ್ದರು. ಆಗಲೇ ಬಿಜೆಪಿಯ “ಈಸ್ಟ್‌ ಇಂಡಿಯಾ ಮಿಷನ್‌’ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲದೆ, ಸ್ಥಳೀಯವಾಗಿ ಬಲಿಷ್ಠವಾಗಿರುವ ನಾಯಕರು ಪಕ್ಷ ಸೇರುತ್ತಿದ್ದಂತೆಯೇ ಬಿಜೆಪಿಗೆ ಉತ್ತಮ ಪ್ರದರ್ಶನದ ಭರವಸೆಯೂ ಮೂಡಿತು. ಪ.ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನೊಳಗೇ ನಾಯಕರಲ್ಲಿದ್ದಂಥ ಭಿನ್ನಾಭಿಪ್ರಾಯಗಳು ಕೂಡ ಬಿಜೆಪಿಗೆ ಲಾಭವಾಗಿ ಪರಿಣಮಿಸಿತು. ಚುನಾವಣೆ ಸಮೀಪಿಸಿದಾಗ ಟಿಎಂಸಿ ಭಾತು³ರ ಶಾಸಕ ಅರ್ಜುನ್‌ ಸಿಂಗ್‌ ಬಿಜೆಪಿಗೆ ಸೇರ್ಪಡೆಯಾದರು. ಅವರ ಮನವೊಲಿಸಲು ಮಮತಾ ಮಾಡಿದ ಪ್ರಯತ್ನವೂ ವಿಫ‌ಲವಾಯಿತು. ಸಿಂಗ್‌ ಸ್ಥಳೀಯವಾಗಿ ಪ್ರಬಲ ನಾಯಕರಾಗಿದ್ದು, ನಾರ್ತ್‌ 24 ಪರಗಣ ಜಿಲ್ಲೆಯಲ್ಲಿ ಒಂದಕ್ಕಿಂತಲೂ ಹೆಚ್ಚು ಅಸೆಂಬ್ಲಿ ಕ್ಷೇತ್ರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡವರು.

“ಪೂರ್ವದತ್ತ ನೋಟ’ಕ್ಕೆ ಸಂದ ಜಯ: ಬಿಜೆಪಿಯ “ಲುಕ್‌ ಈಸ್ಟ್‌'(ಪೂರ್ವದತ್ತ ನೋಟ) ಕಾರ್ಯತಂತ್ರವು ಸುಮಾರು 2 ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರಿಗೆ ಆಪ್ತರಾಗಿದ್ದ ಮುಕುಲ್‌ ರಾಯ್‌ ಯಾವಾಗ ಬಿಜೆಪಿಗೆ ಸೇರ್ಪಡೆಯಾದರೋ, ಕೇಸರಿ ಪಕ್ಷಕ್ಕೆ ಆನೆ ಬಲ ಬಂದಂತಾಯಿತು. ಅವರು ಪ್ರಾದೇಶಿಕ ನಾಯಕರನ್ನು ಕೇಸರಿ ಪಕ್ಷದತ್ತ ಸೆಳೆಯಲು ದೊಡ್ಡ ಯೋಜನೆಯನ್ನು ರೂಪಿಸಿದರು. 42 ಲೋಕಸಭಾ ಕ್ಷೇತ್ರಗಳ ಪೈಕಿ 22 ಅನ್ನು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾದರು.

Advertisement

ಇನ್ನು, ಒಡಿಶಾದಲ್ಲಿ ಅಮಿತ್‌ ಶಾ ಅವರು ವಿಧಾನಸಭಾ ಚುನಾವಣೆಯಲ್ಲಿ 147ರ ಪೈಕಿ 120 ಹಾಗೂ ಲೋಕಸಭೆಯಲ್ಲಿ 21ರ ಪೈಕಿ 12 ಸೀಟುಗಳಲ್ಲಿ ಜಯ ಸಾಧಿಸಬೇಕೆಂಬ ಗುರಿ ಹಾಕಿಕೊಂಡರು. ಇದಕ್ಕೆ ಅವರು ಮೊದಲು ಕಣ್ಣಿಟ್ಟಿದ್ದೇ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌ರೊಂದಿಗೆ ಮುನಿಸಿಕೊಂಡಿದ್ದ ಬಿಜೆಡಿ ನಾಯಕ ಬೈಜಯಂತ್‌ ಪಾಂಡಾ ಮೇಲೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ಕೊಟ್ಟೇ ಬಿಟ್ಟರು. ಅದಾದ ಬೆನ್ನಲ್ಲೇ 6ಕ್ಕೂ ಹೆಚ್ಚು ಬಿಜೆಡಿ ನಾಯಕರು ಬಿಜೆಪಿಯತ್ತ ವಾಲಿದರು. ನಂತರ, ಎರಡೂ ರಾಜ್ಯಗಳಲ್ಲಿ ಪಕ್ಷ ಸಂಘಟನೆಯತ್ತ ಗಮನ ನೀಡತೊಡಗಿದರು ಶಾ.

ಎಡರಂಗದ ವೋಟು ಬಿಜೆಪಿ ಬುಟ್ಟಿಗೆ: ಉತ್ತರ ಬಂಗಾಳವು ಎಡಪಕ್ಷದ ಭದ್ರಕೋಟೆಯಾಗಿದ್ದು, ಅದನ್ನು ಬಿಜೆಪಿ ಟಾರ್ಗೆಟ್‌ ಮಾಡಿತು. ಈ ಪ್ರದೇಶದಲ್ಲಿ ಫಾರ್ವರ್ಡ್‌ ಬ್ಲಾಕ್‌, ಆರ್‌ಎಸ್‌ಪಿ, ಸಿಪಿಎಂನಂಥ ಎಡರಂಗದ ಪಕ್ಷಗಳಿಗೆ ಮತದಾರರ ಒಲವು ಹೆಚ್ಚಿತ್ತು. 2011ರಲ್ಲಿ ಮಮತಾ ಬ್ಯಾನರ್ಜಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಾಗಲೂ ಈ ಪ್ರದೇಶ ಮಾತ್ರ ಎಡರಂಗವನ್ನು ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ, ಇಲ್ಲಿ ಎಡಪಕ್ಷಗಳ ಮತ ಹಂಚಿಕೆ ಪ್ರಮಾಣವೇ ಶೇ.30ರಷ್ಟಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಡಪಕ್ಷಗಳು ತಮ್ಮ ಮತದಾರರನ್ನು ಕಳೆದುಕೊಳ್ಳುತ್ತಿರುವುದನ್ನು ಅರಿತ ಬಿಜೆಪಿ, ಅದೇ ಮತಗಳತ್ತ ಗಮನ ಹರಿಸಿತು.

ಬಂಗಾಳ ರಾಜ್ಯದ ಮತದಾರರ ಪೈಕಿ ಶೇ.30ರಷ್ಟು ಮುಸ್ಲಿಮರಿದ್ದರೆ, ಶೇ.24 ರಷ್ಟು ದಲಿತರಿದ್ದಾರೆ. ಈ ಪೈಕಿ ಮುಸ್ಲಿಮರ ಮತಗಳು ಟಿಎಂಸಿಯತ್ತ ತಿರುಗಿದರೆ, ದಲಿತರ ಮತಗಳನ್ನು ತನ್ನತ್ತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಬಂಗಾಳದ ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗದ ಹಿಂದೂಗಳು ಮತ್ತು ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತಗಳನ್ನು ಬಿಜೆಪಿ ಕ್ರೋಡೀಕರಿಸಿತು. ಪ್ರತಿಪಕ್ಷವು ದುರ್ಬಲವಾಗಿದೆ ಎಂಬುದರತ್ತಲೇ ಜನರ ಗಮನ ಹೋಗುವಂತೆ ಮಾಡಿ, ದೇಶದಲ್ಲಿನ ನಿರುದ್ಯೋಗ, ಕೃಷಿ ಸಮಸ್ಯೆ ಸೇರಿದಂತೆ ಮತದಾರರಲ್ಲಿ ಕೇಂದ್ರ ಸರ್ಕಾರದ ಮೇಲೆ ಮೂಡಿದ್ದ ಅಸಮಾಧಾನವನ್ನು ಹಾಗೆಯೇ ತಿಳಿಗೊಳಿಸುವ ಕಾರ್ಯವನ್ನು ಅಮಿತ್‌ ಶಾ ನಾಜೂಕಾಗಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next