Advertisement

ಆಪರೇಷನ್‌ ಕಮಲಕ್ಕೆ ಮೋದಿ, ಶಾ ಕುಮ್ಮಕ್ಕು:ದಿನೇಶ್‌ ಗುಂಡೂರಾವ್‌

06:30 AM Sep 23, 2018 | Team Udayavani |

ಬೆಂಗಳೂರು: ಬಿಜೆಪಿಯವರು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್‌ ಶಾಸಕರ ಖರೀದಿಗೆ ಮುಂದಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಕುಮ್ಮಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಇಷ್ಟು ದಿನ ಯಡಿಯೂರಪ್ಪ  ಬೇರೆ ಶಾಸಕರ ಮೂಲಕ ಆಮಿಷ ಒಡ್ಡುತ್ತಿದ್ದರು. ಆದರೆ, ಈಗ ಅವರೇ ನೇರವಾಗಿ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ಇನ್ನೆರೆಡು ದಿನದಲ್ಲಿ 18 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಹೇಳಿದ್ದಾರೆ. ಬಿಲ್ಡರ್‌ಗಳು, ರಿಯಲ್‌ ಎಸ್ಟೇಟ್‌ ಏಜೆಂಟರ್‌ಗಳ ಮೂಲಕ  ಹಣ ಸಂಗ್ರಹಿಸಿ ಶಾಸಕರ ಖರೀದಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ಎಲ್ಲ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ ಯಾರೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಆದರೂ ಬಿಜೆಪಿಯವರು ಗೊಂದಲ ಸೃಷ್ಠಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸುಧಾಕರ್‌ ಹಾಗೂ ಎಂ.ಟಿ.ಬಿ. ನಾಗರಾಜ್‌ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುತ್ತಿದ್ದಾರೆ. ಬಿ.ಸಿ. ಪಾಟೀಲ್‌ ಕೂಡ ದೇವಸ್ಥಾನಕ್ಕೆ ತೆರಳಿ ವಾಪಸ್‌ ಬಂದಿದ್ದಾರೆ.

ಸೆಪ್ಟಂಬರ್‌ 25 ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಕಾಂಗ್ರೆಸ್‌ನ ಎಲ್ಲ ಶಾಸಕರು ಹಾಜರಾಗಲಿದ್ದು, ಅಕ್ಟೋಬರ್‌ 4 ರಂದು ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಮೂವರು ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next