Advertisement

ನಗರಗಳಿಗೆ ನಮ್ಮ ಕ್ಲಿನಿಕ್‌: ಸಿಎಂ ನೇತೃತ್ವದ ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನ

12:03 AM Jul 02, 2022 | Team Udayavani |

ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿ ಯಿಂದ ದಿಲ್ಲಿ ಮಾದರಿಯಲ್ಲಿ 438 “ನಮ್ಮ ಕ್ಲಿನಿಕ್‌’ ಗಳನ್ನು ತೆರೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಗರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಈ “ನಮ್ಮ ಕ್ಲಿನಿಕ್‌’ ಆರಂಭಿಸಲು ನಿರ್ಧರಿಸಲಾಗಿದೆ.
ಆರಂಭದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರು, ನರ್ಸ್‌ಗಳು, ಕಚೇರಿ ಸಿಬಂದಿಯನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

Advertisement

ಹಠಾತ್ತಾಗಿ ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ರೋಗಗಳನ್ನು ತಡೆಗಟ್ಟಲು ನಮ್ಮ ಕ್ಲಿನಿಕ್‌ಗಳ ಮೂಲಕ ಪ್ರಯತ್ನಿಸಲಾಗುವುದು. ಇದರಿಂದ ದೊಡ್ಡ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಶುಕ್ರವಾರ ಸಂಪುಟ ಸಭೆಯ ಅನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಕ್ಲಿನಿಕ್‌ ತೆರೆಯಲು 36 ಲಕ್ಷ ರೂ. ವೆಚ್ಚವಾಗಲಿದ್ದು, ರಾಜ್ಯದ ಇತರ ಭಾಗಗಳ ನಗರ ಪ್ರದೇಶಗಳಲ್ಲಿ ತಲಾ 34 ಲಕ್ಷ ರೂ. ವೆಚ್ಚವಾಗಲಿದೆ. “ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲು 103 ಕೋಟಿ ರೂ. ಮಂಜೂರು ಮಾಡಲು ಸಂಪುಟ ಅನುಮತಿ ನೀಡಿದೆ ಎಂದು ಹೇಳಿದರು.

ಪೌರ ಕಾರ್ಮಿಕರಿಗೆ 2 ಸಾವಿರ ರೂ. ಭತ್ತೆ
ನಗರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರಿಗೆ ಪ್ರತೀ ತಿಂಗಳು ಸಂಕಷ್ಟ ಭತ್ತೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಕಾರ್ಮಿಕರಿಗೆ ಪ್ರತೀ ತಿಂಗಳು 2 ಸಾವಿರ ರೂ.ಗಳನ್ನು ಸಂಕಷ್ಟ ಭತ್ತೆಯಾಗಿ ನೀಡಲು ನಿರ್ಧರಿಸಲಾಗಿದೆ. ಬಿಬಿಎಂಪಿ ಸಹಿತ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದು ಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಸಚಿವ ಸಂಪುಟದ ಇತರ ನಿರ್ಣಯಗಳು
-ದ.ಕ. ಜಿಲ್ಲೆಯ ಸೋಮೇಶ್ವರ ಪುರಸಭೆಗೆ 298.04. ಕೋಟಿ ರೂ. ಅನುದಾನ.
-ಚಿಕ್ಕಮಗಳೂರು – ಜಾವಗಲ್‌ ರಸ್ತೆ ನಿರ್ಮಾಣಕ್ಕೆ 22.20 ಕೋಟಿ ರೂ.
-ಶಿರಸಿ ತಾಲೂಕಿನ ಖಾನಾಪುರ ತಾಳಗುಪ್ಪ ರಸ್ತೆಯ ರಾಜ್ಯ ಹೆದ್ದಾರಿ 93ರ ಐದು ರಸ್ತೆಗಳ ವೃತ್ತ ಸುಧಾರಣೆಗೆ 14.72 ಕೋಟಿ ರೂ.
-ಹಟ್ಟಿ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ನಡೆಸಲು 307 ಕೋ.ರೂ. ಮಂಜೂರಿಗೆ ಒಪ್ಪಿಗೆ.
-ಪಾಂಡವಪುರ ಸಕ್ಕರೆ ಕಾರ್ಖಾನೆಯ 24 ಕೋಟಿ ರೂ. ಸ್ಟಾಂಪ್‌ ಡ್ನೂಟಿಯನ್ನು ಸರಕಾರವೇ ಭರಿಸಿ ನಿರಾಣಿ ಶುಗರ್ಸ್‌ನಿಂದ 10 ವರ್ಷಗಳಲ್ಲಿ ವಾಪಸ್‌ ಪಡೆಯಲು ನಿರ್ಧಾರ.
-ವೇದಾವತಿ ನದಿಗೆ ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಮಾಡಲು 19.90 ಕೋಟಿ ರೂ.
-ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರಾಷ್ಟ್ರೋತ್ಥಾನ ಪರಿಷತ್‌ಗೆ ಶೇ. 25 ರಿಯಾಯಿತಿ ದರದಲ್ಲಿ ಜಮೀನು ಮಂಜೂರು.
-ಅಮೃತ್‌ ನಗರೋತ್ಥಾನ ಯೋಜನೆಯಡಿ ಹಣ ಮಂಜೂರು ಮಾಡುವ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲು ಒಪ್ಪಿಗೆ.
-ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಹೊತ್ತು ವಿಮಾನ ಲ್ಯಾಂಡಿಂಗ್‌ಗಾಗಿ ರನ್‌ವೇ ನಿರ್ಮಾಣಕ್ಕೆ ಹೆಚ್ಚುವರಿ 65.05. ಕೋಟಿ ರೂ.
-ಚಿತ್ರದುರ್ಗದ ಮುರುಘಾ ಮಠದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು.
-ಆಗಸ್ಟ್‌ ತಿಂಗಳಲ್ಲಿ ಮಳೆಗಾಲದ ಅಧಿವೇಶನ ಕರೆಯಲು ತೀರ್ಮಾನ.

Advertisement

ನಮ್ಮ ಕ್ಲಿನಿಕ್‌ ಹೇಗಿರಲಿದೆ?
ದಿಲ್ಲಿಯ ಮೊಹಲ್ಲಾ ಕ್ಲಿನಿಕ್‌ ಮಾದರಿಯಲ್ಲೇ “ನಮ್ಮ ಕ್ಲಿನಿಕ್‌’ ಇರಲಿದ್ದು, ತಲಾ ಒಬ್ಬ ವೈದ್ಯ, ನರ್ಸ್‌ ಮತ್ತು ಸಹಾಯಕ ಸಿಬಂದಿ ಇರು ತ್ತಾರೆ. ಸಾಮಾನ್ಯ ಕಾಯಿಲೆ ಮತ್ತು ಇತರ ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಪರಿಕರಗಳು ಇರಲಿವೆ. ಔಷಧಗಳನ್ನು ಸರಕಾರವೇ ಪೂರೈಸಲಿದೆ. ಇಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ, ಅಗತ್ಯವಾದರೆ ಜಿಲ್ಲಾಸ್ಪತ್ರೆ ಅಥವಾ ಹೆಚ್ಚುವರಿ ಸೌಲಭ್ಯವುಳ್ಳ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗುವುದು. ಒಂದು ವರ್ಷ ಪ್ರಾಯೋಗಿಕವಾಗಿ ನಡೆಸಿ ಲಭಿಸುವ ಸ್ಪಂದನೆ ಆಧಾರದಲ್ಲಿ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next