Advertisement

ಕಲಾಸಂಸ್ಕೃತಿಯಲ್ಲಿ ನಾಗ

07:59 AM Jul 28, 2017 | |

ಆದಿಮ ಸಂಸ್ಕೃತಿಯಿಂದ ತೊಡಗಿ ಇಂದಿನವರೆಗಿನ ಕಲಾಸಂಸ್ಕೃತಿಯನ್ನು ಮೆಲುಕು ಹಾಕುವಾಗ ನಾಗಾರಾಧನೆಯು ಎಲ್ಲ ಹಂತಗಳಲ್ಲಿಯೂ ಕಂಡುಬರುತ್ತದೆ. ಜನಪದೀಯ ಮೂಲದ ನಾಗಾರಾಧನೆಯನ್ನು ಮೂಢನಂಬಿಕೆಯೆಂದು ಆಧುನಿಕ ವಿಚಾರವಾದಿಗಳು ಗೊಣಗಬಹುದಾದರೂ ನಾಗರಾಜ ಪ್ರಪಂಚದ ಬಹುತೇಕ ಸಂಸ್ಕೃತಿಗಳಲ್ಲಿ ಪೂಜಾರ್ಹನಾಗಿದ್ದಾನೆ. ನಾಗರಾಜನು ಮಂದಿರದ ಶಿಲ್ಪಗಳಲ್ಲಿ ಆರಾಧನಾ ಮೂರ್ತಿಯಾಗಿಯೂ ವಾಸ್ತುಶಿಲ್ಪಗಳಲ್ಲಿ ಮಂಗಳಕಾರಕ ವಿನ್ಯಾಸವಾಗಿಯೂ ರಾಜಮುದ್ರೆ-ಕಿರೀಟಗಳಲ್ಲಿ ಅಧಿಕಾರ ಸೂಚಕವಾಗಿಯೂ ಕುಲಪಂಗಡಗಳ ಲಾಂಛನವಾಗಿಯೂ ಮಳೆ-ಬೆಳೆ, ಫ‌ಲವತ್ತತೆ, ಸಂತಾನಾಭಿವೃದ್ಧಿ, ರೋಗಶಮನ, ಸಂಪದಭಿವೃದ್ಧಿ ಮುಂತಾದ ಭಾಗ್ಯಗಳ ಅಧಿದೇವತೆಯಾಗಿಯೂ ಮನುಕುಲದ ರಕ್ಷಕ ಎಂಬ ಕೀರ್ತಿಗೆ ಪಾತ್ರವಾಗಿದ್ದಾನೆ. ಕಲಾವಿದರಿಗೆ ನಾಗರೂಪ ಅಚ್ಚುಮೆಚ್ಚಿನದಾಗಿದ್ದು ಆಧುನಿಕ ಕಲಾ ಸಂಸ್ಕೃತಿಯಲ್ಲಿ ನಡೆಯುವ ನಾಗಮಂಡಲದಂತಹ ಆಚರಣೆಗಳು ವಿವಿಧ ವರ್ಗದ ಕಲಾವಿದರಿಗೆ ಪೋಷಣೆ ನೀಡುತ್ತಿದೆ.  

Advertisement

ಆದಿಮಾನವನು ದೈವತ್ವವನ್ನು ಕಲ್ಪನೆ ಮಾಡಿದ ಅತಿಪ್ರಾಚೀನ ಪ್ರಾಣಿಚಿಹ್ನೆ ಸರ್ಪ (ಟೋಟಂ) ಎನ್ನಲಾಗಿದೆ. ಯಾಕೆಂದರೆ ಮಾನವ ಆರಂಭದಲ್ಲಿ ಪ್ರಕೃತಿಯನ್ನು ಪೂಜಿಸಿದ. ನಾಗ ಪ್ರಕೃತಿ ಸ್ವರೂಪ. ನಾಗನ ದೇಹ ಬಳ್ಳಿಗಳ ತೆರನಾಗಿದೆ.  ನಾಗ ವಾಸಿಸುವ ಜಾಗವೂ ವನವಾಗಿದೆ. ಹಾಗಾಗಿ ಜೀವಂತ ರೂಪಗಳಲ್ಲಿ ಪೂಜಿಸಲ್ಪಡುವ ಪ್ರಾಣಿಗಳಲ್ಲಿ ನಾಗರಹಾವು ಅಗ್ರಗಣ್ಯವಾಗಿದೆ. ಸರ್ಪದ ಆಕರ್ಷಕ ಭಂಗಿಗೆ ಮರುಳಾಗದವರುಂಟೇ? 

ಮಗು ರೂಪಿಸುವ ಮೊದಲ ಅಕ್ಷರವೇ ಸೊನ್ನೆ. ಸಂಖ್ಯಾಶಾಸ್ತ್ರದಲ್ಲಿ ಈ ಸೊನ್ನೆಗಿರುವ ಬೆಲೆ ವಿಶೇಷವಾದುದು. ನಾಗ ಸುರುಳಿಯಾಗಿ ಸುತ್ತಿ ನಿರ್ಮಿಸುವ ರೂಪದಿಂದ‌ ಪೂಜನೀಯವಾಗಿದ್ದಾನೆ. ಈ ಭೂಮಂಡಲದ ಸಂಕೇತವಾಗಿ ದ್ದಾನೆ. ಅದನ್ನು ತಾನು ಎತ್ತಿ ಹಿಡಿದಿದ್ದೇನೆ ಎಂಬ ಜನಪದರ ನಂಬಿಕೆಗೆ ಇಂಬುಕೊಡುತ್ತಿದ್ದಾನೆ. ನಮ್ಮ ದೇಹ ರಕ್ತನಾಳ, ನರಗಳಿಂದ ಕೂಡಿದ್ದು ನಾಗರ ಹಾವಿನ ದೇಹದ ಬಳುಕುವ ಭಂಗಿಗೆ ಸಂವಾದಿಯಾಗಿದೆ. ನರದ ಕಾಯಿಲೆ ಬಂದಾಗ ನಾಗಪೂಜೆಯನ್ನು ಜನಪದರು ನಡೆಸುತ್ತಾರೆ. 

ನಾಗನ ವಿಶೇಷ ಹಬ್ಬ ನಾಗರಪಂಚಮಿ. ಆಷಾಢದ ಮೌಡ್ಯ ಕಳೆದು ಬರುವ ಶ್ರಾವಣಮಾಸದಲ್ಲಿ, ಮಳೆಗಾಲದ ಮೇಘಗಳ ನೀರುಣಿಸುವಿಕೆಯಿಂದ ಹಚ್ಚಹಸುರಾಗಿ ಅರಳಿರುವ ಪೃಕೃತಿಯ ಮೋಹಕರೂಪದೆದುರು ಈ ಹಳದಿಯ ಹಬ್ಬ ಮೊದಲ ಪೂಜೆಯಾಗಿ ಬರುತ್ತದೆ. ಊರಿಗೆ ಊರೇ ಸೇರಿ ನಾಗರಪಂಚಮಿಯನ್ನು ಸಡಗರದಿಂದ ಆಚರಿಸುತ್ತಾರೆ. ಅಂದು ನಾಗನ ಶಿಲೆಗಳಿಗೆ ಪಂಚಾಮೃತಗೈದು ಅರಶಿಣದಿಂದ, ಹೂವಿನಿಂದ ಅಲಂಕಾರ ಮಾಡಿ ಪಂಚಾರತಿ ಬೆಳಗುತ್ತಾರೆ. ಇದರಿಂದ ಮಳೆ-ಬೆಳೆ-ನೆಮ್ಮದಿ ಊರಿಗೆ ಸಿಗುತ್ತದೆ ಎಂದು ಜನರು ನಂಬಿದ್ದಾರೆ. ಇಲ್ಲಿಂದ ಆರಂಭವಾಗಿ ನಾಗನ ವಿವಿಧ ಪ್ರಕಾರದ ಪೂಜೆಗಳನ್ನು ವರ್ಷವಿಡೀ ಗೈಯ್ಯುತ್ತಾರೆ. ನಾಗನ ಪೂಜೆಯು ಜನಪದ ಕಲೆಯ ವಿಶಿಷ್ಟ ಅಂಗ ವಾಗಿದ್ದು ಬಹಳ ಕಲಾತ್ಮಕವಾಗಿ ನಡೆಯುತ್ತದೆ. ಅವುಗಳಲ್ಲಿ ಆಶ್ಲೇಷಾ ಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ನಾಗಸಂದರ್ಶನ ಹಾಗೂ ವಿಶೇಷ ವಾಗಿ ತನುತರ್ಪಣ ಮಂಡಲ, ನಾಗಮಂಡಲ- ಬ್ರಹ್ಮಮಂಡಲ- ಡಕ್ಕೆಬಲಿ ಸೇವೆಗಳು ನಡೆಯತ್ತವೆ. ಇವೆಲ್ಲದರ ಹಿಂದೆ ವರ್ಣಾಲಂಕಾರ ಮತ್ತು ಕಲಾತ್ಮಕತೆ ತುಂಬಾ ಇದೆ. ನಾಗಪೂಜೆಯೆಂಬುದು ದೊಡ್ಡ ಕಲಾರಾಧನೆ.

ನಾಗನ ಮೈಬಣ್ಣವಾದ ಹಳದಿ ಶ್ರೀಮಂತ ವರ್ಣ. ಆತನ ಪೂಜೆಯಲ್ಲೂ ಹಳದಿ ಬಣ್ಣದ ಅರಶಿಣದ ಬಳಕೆ ಅಧಿಕ. ಆತನಿಗೆ ಪ್ರಿಯವಾದ ಹೂವುಗಳಾದ ಕೇದಿಗೆ-ಸಂಪಿಗೆಗಳೂ ಹಳದಿ ವರ್ಣದವೇ. ನಾಗನನ್ನು ತಮ್ಮ ಜತೆಗೆ ಸೇರಿಸದ ದೇವತೆಗಳಿಲ್ಲ. ಅವರ ಕಿರೀಟದಲ್ಲಿ, ಆಭರಣಗಳಲ್ಲಿ, ಆಯುಧಗಳ ರೂಪದಲ್ಲಿ ನಾಗ ಸೇರಿಕೊಂಡಿದ್ದಾನೆ. ಕಲಾವಿದರಿಗಂತೂ ನಾಗನ ಬಳುಕು ದೇಹ ವಿನ್ಯಾಸಕ್ಕೆ ಬೇಕೇ ಬೇಕು. ಅದು ಗುಹಾಲಯವಾಗಲೀ ರಥವಾಗಲೀ ದೇವಾಲಯವಾಗಲೀ ಶಿಲ್ಪವೈಭವದ ಗುಡಿಯಾಗಲೀ ಅಥವಾ ವಾಸ್ತುವೈಭವದ ಕಟ್ಟಡವಾಗಲೀ ಅಲ್ಲಿರುವ ಮರ-ಕಲ್ಲು-ಕಬ್ಬಿಣ- ಗಾರೆ ಎಲ್ಲೆಂದರಲ್ಲಿ ಕಲಾವಿದರು ನಾಗನ ರೂಪವನ್ನು ಸೇರಿಸಿಕೊಂಡು ವಿಶೇಷ ಸೌಂದರ್ಯ ಮೂಡಿಸುತ್ತಾರೆ. ಹಾಗಾಗಿ ವಿಶ್ವಕಲೆಯಲ್ಲಿ ನಾಗನರೂಪ ಎಲ್ಲೆಡೆ ಕಾಣಸಿಗುತ್ತದೆ. 

Advertisement

ಒಟ್ಟಿನಲ್ಲಿ ನಾಗಪೂಜೆ ವರ್ಣರಂಜಿತವಾಗಿ ಲಲಿತಕಲೆಗಳ ಸಂಗಮವಾಗಿರುತ್ತದೆ. ಇದರ ಹಿಂದೆ ಪ್ರಕೃತಿಯೆಂಬ ಕಲಾರಾಧನೆಯೂ ಇದೆ. ಪ್ರಕೃತಿಯನ್ನು ರಕ್ಷಿಸದೆ ಹೋದರೆ ನಾಗನೂ ಇಲ್ಲ; ಕಲಾರಾಧನೆಯೂ ಇಲ್ಲ ಎಂದಾಗಬಹುದು. ಹಾಗಾಗದಂತೆ ರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.    

ಉಪಾಧ್ಯಾಯ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next