Advertisement

ಚಾಮುಂಡಿ ಬೆಟ್ಟಕ್ಕೆ ಏಲಿಯನ್ಸ್‌ …

05:40 PM Jul 05, 2018 | Team Udayavani |

ಕೆಲವು ತಿಂಗಳುಗಳ ಹಿಂದೆ ಸಂಯುಕ್ತಾ ಹೊರನಾಡು, “ನಮ್ಮ ಯುಎಫ್ಓ’ ಎಂಬ ಹೊಸ ಸೈನ್ಸ್‌ ಫಿಕ್ಷನ್‌ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದರು. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪೊಲೀಸ್‌ ಯೂನಿಫಾರ್ಮ್ನಲ್ಲಿ ಕಾಣಿಸಿಕೊಳ್ಳುತ್ತಿರುವುದರ ಜೊತೆಗೆ, ಈ ಚಿತ್ರದಲ್ಲಿ ಚಿತ್ರದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಏಲಿಯನ್ಸ್‌ ಕಾಣಿಸಿಕೊಳ್ಳುತ್ತವೆ ಎಂದು ಹಿಂಟ್‌ ಕೊಟ್ಟಿದ್ದರು. ಈಗ ಆ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ, ಚಿತ್ರಕ್ಕೆ “ಮೈಸೂರು ಮಸಾಲ’ ಎಂದು ನಾಮಕರಣ ಮಾಡಲಾಗಿದೆ.

Advertisement

ಹೌದು, “ನಮ್ಮ ಯುಎಫ್ಓ’ ಚಿತ್ರಕ್ಕೆ “ಮೈಸೂರು ಮಸಾಲ’ ಎಂಬ ಹೊಸ ಹೆ ಹೆಸರು ಸಿಕ್ಕಿದೆ. ಮುಂಚೆ ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಜೊತೆಗೆ ಅನಂತ್‌ ನಾಗ್‌ ಅಭಿನಯಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ತಾರಾಗಣಕ್ಕೆ ಶರ್ಮಿಳಾ ಮಾಂಡ್ರೆ, ಕಿರಣ್‌ ಶ್ರೀನಿವಾಸ್‌, ಪ್ರಕಾಶ್‌ ಬೆಳವಾಡಿ ಮುಂತಾದವರು ಸೇರಿಕೊಂಡಿದ್ದಾರೆ.

 ಕಳೆದ ವರ್ಷ “ಲೀಡರ್‌’ ಮತ್ತು “ಆಕೆ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಶರ್ಮಿಳಾ ಮಾಂಡ್ರೆ, ಆ ನಂತರ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಈಗ “ಮೈಸೂರು ಮಸಾಲ’ ಚಿತ್ರದ ಮೂಲಕ ವಾಪಸ್ಸಾಗುತ್ತಿರುವುದಷ್ಟೇ ಅಲ್ಲ, ಒಂದು ವಿಭಿನ್ನ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕಿರಣ್‌ ಶ್ರೀನಿವಾಸ್‌ “ಒಂಥರಾ ಬಣ್ಣಗಳು’ ಎಂಬ ಚಿತ್ರದಲ್ಲಿ ನಟಿಸಿದ್ದು, ಸದ್ಯದಲ್ಲೇ ಆ ಚಿತ್ರ ಬಿಡುಗಡೆಯಾಗಲಿದೆ.

ಅಜಯ್‌ ಸಪೇಶ್‌ಕರ್‌ ಎಂಬುವವರು ಈ ಚಿತ್ರದ ನಿದೇಶಕರು. ಮೂಲತಃ ಟೆಕ್ಕಿಯಾಗಿದ್ದರೂ ಸಿನಿಮಾದ ಆಸಕ್ತಿ ಹೊಂದಿದ್ದ ಅಜಯ್‌, ಹಲವು ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಬರೀ ಕನ್ನಡದಲ್ಲಷ್ಟೇ ಅಲ್ಲ ಇಡೀ ಭಾರತದಲ್ಲಿ ಹಲವು ಅತ್ಯುತ್ತಮ ಚಿತ್ರಗಳು ಬರುತ್ತಿತ್ತಾದರೂ ನೈಜ ವಿಜ್ಞಾನ ಆಧಾರಿತ ಸೈ-ಫೈ ಮತ್ತು ಸಾಹಸ ಚಿತ್ರಗಳ ಸಂಖ್ಯೆ ಕಡಿಮೆ ಇದೆ ಎಂದು ಅವರನ್ನು ಗಮನಿಸಿದ್ದರಂತೆ. ಹಾಗಾಗಿ ಯಾರೂ ಪ್ರಯತ್ನಿಸದ ವಿಷಯಗಳ ಮೇಲೆ ಚಿತ್ರ ಮಾಡಬೇಕು ಎಂದು ಅವರು “ಮೈಸೂರು ಮಸಾಲ’ ಕೈಗೆತ್ತಿಕೊಂಡಿದ್ದಾರೆ. “ಮೈಸೂರು ಮಸಾಲ’ ಚಿತ್ರವು ವಿಜ್ಞಾನ ಮತ್ತು ಊಹಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲಲಿದೆಯಂತೆ. ಈ ಚಿತ್ರವನ್ನು ಎ.ಎಸ್‌.ಎಕ್ಸ್‌ ಫಿಲ್ಮ್ಸ್ ಸಂಸ್ಥೆಯು ನಿರ್ಮಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next