Advertisement

ಗುರಾಯಿಸಿದ್ದಕ್ಕೆ ಕೊಲೆ

12:16 PM Feb 04, 2018 | Team Udayavani |

ಬೆಂಗಳೂರು: ದುರುಗುಟ್ಟಿ ನೋಡಿದ ಎಂಬ ಕಾರಣಕ್ಕೆ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದ ಘಟನೆ ಮಲ್ಲತ್ತಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮಲ್ಲತ್ತಹಳ್ಳಿ ನಿವಾಸಿ ಅರುಣ್‌ (25) ಕೊಲೆಯಾದ ಯುವಕ. ಈ ಸಂದರ್ಭದಲ್ಲಿ ಅರುಣ್‌ ಮೇಲಿನ ಹಲ್ಲೆ ತಡೆಯಲು ಹೋದ ಈತನ ಸ್ನೇಹಿತ ಸೋಮಯ್ಯನಿಗೂ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Advertisement

ಅರುಣ್‌ ಮತ್ತು ಸೋಮಯ್ಯ ಶುಕ್ರವಾರ ರಾತ್ರಿ ಆರ್‌ಟಿಓ ರಸ್ತೆಯಲ್ಲಿರುವ ಬಾರ್‌ಗೆ ಮದ್ಯ ಸೇವಿಸಲು ಹೋಗಿದ್ದರು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ನಾಲ್ಕೈದು ಮಂದಿ ಯುವಕರನ್ನು 3-4 ಬಾರಿ ಅರುಣ್‌ ದುರುಗುಟ್ಟಿ ನೋಡಿದ್ದಾನೆ. ಇದೇ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಕೊನೆಗೆ ಬಾರ್‌ ಸಿಬ್ಬಂದಿ ಎರಡು ಕಡೆಯವರನ್ನು ಸಮಾಧಾನ ಪಡಿಸಿ ಹೊರಕಳುಹಿಸಿದ್ದಾರೆ.

ಬಳಿಕ ದುಷ್ಕರ್ಮಿಗಳು ಹೊರಬಂದು ಅರುಣ್‌ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಸೋಮಯ್ಯನಿಗೂ ಇರಿದಿದ್ದಾರೆ. ತೀವ್ರರಕ್ತಸ್ರಾವದಿಂದ ಕೆಳಗೆ ಬಿದ್ದ ಅರುಣ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಂಭೀರ ಗಾಯಗೊಂಡಿರುವ ಸೋಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೀಡಾದ ಅರುಣ್‌ ಪಿಯುಸಿ ವ್ಯಾಸಂಗ ಮುಗಿಸಿದ್ದ. ಇತ್ತೀಚೆಗೆ ಮದ್ಯದ ಚಟ ಅಂಟಿಸಿಕೊಂಡಿದ್ದ ಅರುಣ್‌ ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಇನ್ನು ಸೋಮಯ್ಯ ಕೊಡಗಿನವನಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆ: ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿ ಪೊಲೀಸರು ಬಾರ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಆದರೆ, ದೃಶ್ಯಾವಳಿಯಲ್ಲಿ ಆರೋಪಿಗಳ ಚಹರೆ ಸ್ಪಷ್ಟವಾಗಿಲ್ಲ. ಬಾರ್‌ ಸಿಬ್ಬಂದಿ ಹಾಗೂ ಸ್ಥಳೀಯರ ಮಾಹಿತಿಯನ್ನಾಧರಿಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next