Advertisement

ಕನ್ನಡಿಗರು ಮುಕ್ತ ಮನಸ್ಸಿನಿಂದ ಕಟ್ಟಡ ನಿರ್ಮಾಣಕ್ಕೆ  ಕೈಜೋಡಿಸಿ: ಕೋರಿ

12:27 PM Jun 29, 2018 | Team Udayavani |

ಮುಂಬಯಿ: ಕರ್ನಾಟಕ ಸಂಘದ ಕಳೆದ ಎರಡು ವರ್ಷಗಳ ನಿರಂತರ ಪ್ರಯತ್ನದಿಂದ ಮುಂಬಯಿ ಮಹಾನಗರ ಪಾಲಿಕೆಯು ನಮ್ಮೆಲ್ಲರ ಪ್ರೀತಿಯ ಕರ್ನಾಟಕ ಸಂಘದ ನೂತನ ಸಾಂಸ್ಕೃತಿಕ ಸಮುಚ್ಚಯ ಯೋಜನೆಗೆ ಮಂಜೂರಾತಿಯನ್ನು ನೀಡಿ, ಈ ಕುರಿತ ಪರವಾನಿಗೆಗಳು ಲಭ್ಯವಾಗಿವೆ. ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣದ ಕೆಲಸ ಆರಂಭಿಸಲಾಗುವುದು. ಸದಸ್ಯರು, ಕನ್ನಡಿಗರು ತಮ್ಮ ಕೈಲಾದಷ್ಟು ಧನಸಹಾಯ ನೀಡುತ್ತಿದ್ದಾರೆ. ಈ ಮಹಾನಗರದಲ್ಲಿ ಕನ್ನಡತನವೇ ಕನ್ನಡಿಗರ ಸಂಸ್ಕೃತಿಯಾಗಿದೆ. ಕನ್ನಡಿಗರೆಲ್ಲರೂ ಮುಕ್ತ ಮನಸ್ಸಿನಿಂದ ಈ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು. ಮುಂಬಯಿ ಮಹಾನಗರದಲ್ಲಿ ಸಂಘವು ಎರಡು ದಶಕಗಳಿಂದ ಕನ್ನಡದ ಜೊತೆಗೆ ಸೇವೆಗೈಯುತ್ತಾ ಬಂದಿದೆ. ಕನ್ನಡಿಗರ ಕ್ರಿಯಾಶೀಲತೆಗೆ ಸ್ಪಂದಿಸುತ್ತಿದೆ ಎಂದು ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ ಎಂ. ಕೋರಿ ಅವರು ನುಡಿದರು.

Advertisement

ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ನಡೆದ ಕರ್ನಾಟಕ ಸಂಘ ಮುಂಬಯಿ ಇದರ 84 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ನಾಡು-ನುಡಿ ಸೇವೆಗೆ, ನೂತನ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಎಲ್ಲರು ಒಮ್ಮತ, ಒಗ್ಗಟ್ಟಿನಿಂದ  ಸಹಕರಿಸಬೇಕು ಎಂದರು.

ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಅವರು ಆಯವ್ಯಯ ಪಟ್ಟಿ ಮತ್ತು ವಾರ್ಷಿಕ ವರದಿಯನ್ನು ಮಂಡಿಸಿದರು. ಸಭೆಯು ಅದನ್ನು ಸರ್ವಾನುಮತದಿಂದ ಅಂಗೀಕರಿಸಿತು. 2018-2019ನೇ ಸಾಲಿಗೆ ಲೆಕ್ಕ ಪರಿಶೋಧಕರ ನ್ನಾಗಿ ಮೆ| ಅಶ್ವಜಿತ್‌ ಅಸೋಸಿಯೇಟ್ಸ್‌ ಅವರನ್ನು ನೇಮಿಸಲಾ ಯಿತು. ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ಮೆ| ರಾಜೇಶ್‌ ಶೇs… ಆ್ಯಂಡ್‌ ಕಂಪೆನಿಯನ್ನು ಆಯ್ಕೆ ಮಾಡಲಾಯಿತು. 2018-2019 ನೇ ಸಾಲಿಗೆ ಚುನಾವಣಾ ಅಧಿಕಾರಿಗಳಾಗಿ ಎಸ್‌. ಬಿ. ರಾಮಣ್ಣ, ಸದಾನಂದ ಅಮೀನ್‌, ಸುಧಾಕರ ಮೈಂದನ್‌ ಇವರನ್ನು ನೇಮಿಸಲಾಯಿತು. ಗೌರವ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಅಮಿತಾ ಭಾಗÌತ್‌ ಅವರನ್ನು ಆಯ್ಕೆಮಾಡಲಾಯಿತು. 2018-2019 ನೇ ಸಾಲಿನ ವಾರ್ಷಿಕ ಬಜೆಟ್‌ನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಸಂಘದ ಬಗ್ಗೆ ಅಪಪ್ರಚಾರ ಸಲ್ಲದು: ಡಾ| ಭರತ್‌ ಕುಮಾರ್‌ 
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಗೌರವ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಅವರು, ಸಂಘದಲ್ಲಿ ಕಟ್ಟಡ ನಿರ್ಮಾಣಕ್ಕೆ 5.25 ಕೋ. ರೂ. ಗಳು ಲಭ್ಯವಿವೆೆ. ಸಂಬಂಧಪಟ್ಟ ಎಲ್ಲ ಪರವಾನಿಗೆಗಳನ್ನು ಪಡೆಯಲಾಗಿದೆ. ಕೆನರಾ ಬ್ಯಾಂಕಿನವರು ಈ ತಿಂಗಳ ಅಂತ್ಯದಲ್ಲಿ ಮಾಟುಂಗಾ ಶಾಖೆಯನ್ನು ಮಾಹಿಮ್‌ ಶಾಖೆಯೊಂದಿಗೆ ವಿಲೀನಗೊಳಿಸುತ್ತಿದ್ದಾರೆ. ಸಭಾಗೃಹವು ಯಾವುದೇ ಕಾರ್ಯಕ್ರಮಗಳನ್ನು ಮಾಡುವ ಸ್ಥಿತಿಯಲ್ಲಿ ಇರದ ಕಾರಣ  ಸಮಸ್ಯೆ ಆಗಬಾರದೆಂದು ಮುಚ್ಚಲಾಗಿದೆ. ಸಂಘದ ಸದಸ್ಯತನವನ್ನು ನಿಯಮಾವಳಿಯ ಪ್ರಕಾರ ನೀಡಲಾಗುತ್ತಿದೆ. ಸದಸ್ಯರಾಗುವ ಕನ್ನಡಿಗರಿಗೆ ಸದಾ ಸ್ವಾಗತವಿದ್ದು, ಸಂಘದ ಚುನಾವಣೆಯು ಪ್ರಜಾಸತ್ತಾತ್ಮಕ ನೆಲೆಯಲ್ಲಿಯೆ ನಡೆಯುತ್ತಿದೆ. ಕಟ್ಟಡ ನಿಧಿಗೆ ಧನಸಹಾಯಕ್ಕಾಗಿ ಉದ್ಯಮಿಗಳನ್ನು, ದಾನಿಗಳನ್ನು ಸಂಪರ್ಕಿಸಲಾಗುತ್ತಿದೆ. ಕರ್ನಾಟಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವುದು. ಸಂಘದ ಸದಸ್ಯರು ಮುತುವರ್ಜಿಯಿಂದ ಸಂಘಕ್ಕೆ ಬಂದು ದೇಣಿಗೆಯನ್ನು ನೀಡುತ್ತಿದ್ದಾರೆ. ಇವೆಲ್ಲವನ್ನು ತಿಳಿಯದೆ ಸಂಘದ ಬಗ್ಗೆ ಅಪಪ್ರಚಾರ ಸಲ್ಲದು  ಎಂದು ತಿಳಿಸಿದರು.

ಕನ್ನಡಿಗ ಕಲಾವಿದರ ಪರಿಷತ್ತಿನ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರು, ನಿಧಿ ಸಂಗ್ರಹದ ಕುರಿತು ತಾನು ಕೂಡಾ ಸಲಹೆ ಸೂಚನೆ ನೀಡಿ, ತನ್ನಿಂದಾದಷ್ಟು ಸಹಕಾರ ನೀಡುತ್ತೇನೆ ಎಂದರು. ಶ್ರೀನಿವಾಸ ಸಾಫಲ್ಯ ಮಾತನಾಡಿ, ಸಂಘದ ನಿರ್ಮಾಣ ಕಾರ್ಯದಲ್ಲಿ ತಾನು ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಕಟ್ಟಡ ನಿರ್ಮಾಣ ಕಾರ್ಯವು ಸುಗಮವಾಗಿ ನೆರವೇರಲಿ ಎಂದು ನುಡಿದರು.

Advertisement

ಡೊಂಬಿವಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಕಲಕೋಟಿ ಅವರು ಮಾತನಾಡಿ, ಇಂತಹ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಅಡೆತಡೆಗಳು ಬರುವುದು ನಿರೀಕ್ಷಿತ. ಅದನ್ನು ಮೀರಿ ಧೈರ್ಯದಿಂದ ಕಾರ್ಯಕಾರಿ ಸಮಿತಿಯು ಈ ಕೆಲಸವನ್ನು ಮುಂದುವರಿಸಬೇಕು. ನಾವೆಲ್ಲರೂ ಸಮಿತಿಯೊಂದಿಗೆ ಇದ್ದೇವೆ ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರಾದ ಜಿ. ಟಿ. ಆಚಾರ್ಯ, ಎಚ್‌. ಬಿ. ಎಲ್‌. ರಾವ್‌. ಸಾ. ದಯಾ, ಶೇಖರ್‌ ಅಮೀನ್‌, ನಾರಾಯಣ ರಾವ್‌, ಜಿ. ಎಸ್‌. ನಾಯಕ್‌, ಸತೀಶ್‌ ಬಂಗೇರ, ಜಯಶೀಲ ಸುವರ್ಣ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ-ಸೂಚನೆ ನೀಡಿದರು.

ಟೀಕೆ-ಟಿಪ್ಪಣಿ  ಬಲ ವೃದ್ಧಿಸುತ್ತದೆ:  ಓಂದಾಸ್‌ ಕಣ್ಣಂಗಾರ್‌
ಸಂಘದ ಮಾಜಿ ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌ ಅವರು ಮಾತನಾಡಿ, ಕರ್ನಾಟಕ ಸಂಘವು ಹಿಂದಿನಿಂದಲೂ ಯಕ್ಷಗಾನ, ನಾಟಕ, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಗರಿಷ್ಟ ರಿಯಾಯಿತಿ ನೀಡಿ ಪ್ರೋತ್ಸಾಹಿಸಿದೆ. ಸಾಹಿತ್ಯ ಕಾರ್ಯಕ್ರಮಗಳಿಗೆ ಬಹುತೇಕ ಉಚಿತವಾಗಿ ನೀಡಿದೆ.  ನೂತನ ಕಟ್ಟಡ ನಿರ್ಮಾಣ ನಮ್ಮ ಕನಸು. ಟೀಕೆ-ಟಿಪ್ಪಣಿಗಳು ಸಂಘಟನೆಯ ಬಲವನ್ನು ವೃದ್ಧಿಗೊಳಿಸುತ್ತದೆ. ಸಂಘವನ್ನು  ಮಹಾರಾಷ್ಟ್ರ ಸರಕಾರದ ಸಂಸ್ಕೃತಿ ಇಲಾಖೆ ಗೌರವಿಸಿದೆ. ಗ್ರಂಥಾಲಯಕ್ಕೆ ಎ ಗ್ರೇಡ್‌ ಮಾನ್ಯತೆ ಲಭಿಸಿದೆ. ಆಂಗ್ಲ ಪತ್ರಿಕೆಗಳು ಕೂಡಾ ಸಂಘದ ಸಾಧನೆಗಳನ್ನು ಗುರುತಿಸಿ ಲೇಖನಗಳನ್ನು ಪ್ರಕಟಿಸಿವೆ. ಮುಂದಿನ ದಿನಗಳಲ್ಲೂ ಕನ್ನಡಿಗರು ಈ ಹಿಂದಿನಂತೆ ಕೈಹಿಡಿದು ಮುನ್ನಡೆಸಬೇಕು ಎಂದರು.

ಸಂಘದ ಉಪಾಧ್ಯಕ್ಷ  ಡಾ| ಈಶ್ವರ ಅಲೆವೂರು, ಗೌರವ ಪ್ರಧಾನ ಕೋಶಾಧಿಕಾರಿ ನ್ಯಾಯವಾದಿ ಎಂ. ಡಿ. ರಾವ್‌, ಜತೆ ಕಾರ್ಯದರ್ಶಿ ಅಮರೇಶ್‌ ಸಿ. ಪಾಟೀಲ್‌, ಗೌರವ ಜತೆ ಕೋಶಾಧಿಕಾರಿ ದಿನೇಶ್‌ ಎ. ಕಾಮತ್‌, ಕಲಾಭಾರತಿ ಸಂಚಾಲಕ ಡಾ| ಎಸ್‌. ಕೆ. ಭವಾನಿ, ಸಂಬಂಧ ಮಾಸಿಕದ ಸಂಪಾದಕ ಶ್ರೀನಿವಾಸ ಜೋಕಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಿ. ಜಿ. ನಾಯಕ್‌, ಡಾ| ಜಿ. ಪಿ. ಕುಸುಮಾ, ಎನ್‌. ಎಂ. ಗುಡಿ, ಲಲಿತಾ ಪಿ. ಅಂಗಡಿ, ಸುಧಾಕರ ಪಾಲನ್‌, ಡಾ| ಮಮತಾ ಟಿ. ರಾವ್‌, ದುರ್ಗಪ್ಪ ಕೋಟಿಯವರ್‌, ಸುಶೀಲಾ ಎಸ್‌. ದೇವಾಡಿಗ ಉಪಸ್ಥಿತರಿದ್ದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಸ್ವಾಗತಿಸಿ ವಂದಿಸಿದರು. 

ಕರ್ನಾಟಕ ಸಂಘವು ಉತ್ತರ ಕರ್ನಾಟಕದವರಿಂದ ಸ್ಥಾಪನೆಗೊಂಡು ಆನಂತರ ಎಲ್ಲಾ ಕನ್ನಡಿಗರನ್ನು ಒಳಗೊಂಡು ಹೆಮ್ಮರವಾಗಿ ಬೆಳೆದಿದೆ. ಜಾತೀಯತೆ, ಪ್ರಾದೇಶಿಕತೆಯನ್ನು ಮೀರಿ ನಿಂತು ಜಾತ್ಯತೀತ ನೆಲೆಯಲ್ಲಿ ರೂಪುಗೊಂಡಿದೆ. ನಾವೆಲ್ಲ ಒಮ್ಮತದಿಂದ ಈ ಉತ್ತಮ ಕಾರ್ಯಕ್ಕೆ ಕೈಜೋಡಿಸಬೇಕು. ಈ ಬೃಹತ್‌ ಯೋಜನೆಗೆ ನಾನು ಒಂದು ಲಕ್ಷ ರೂ. ಗಳ ದೇಣಿಗೆಯನ್ನು ನೀಡುತ್ತೇನೆ 
– ಕೆ. ಮಂಜುನಾಥಯ್ಯ 
(ಟ್ರಸ್ಟಿ : ಮೈಸೂರು ಅಸೋಸಿಯೇಶನ್‌ ಮುಂಬಯಿ)

ಸಂಘದ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸದಸ್ಯರೆಲ್ಲರ ಜವಾಬ್ದಾರಿಯಿದೆ. ಕರ್ನಾಟಕ ಸಂಘದ ಕನ್ನಡತನದ ಪರಿಕಲ್ಪನೆ ವಿಶ್ವವ್ಯಾಪಿಯಾಗಬೇಕು. ಸಂಘದ ಯೋಜನೆಗೆ ಪ್ರಾರಂಭದಿಂದಲೂ ಮುಕ್ತ ಮನಸ್ಸಿನಿಂದ ಸಹಕಾರ ನೀಡುತ್ತಿದ್ದೇವೆ. ಮುಂದೆಯೂ ನಮ್ಮ ಬೆಂಬಲವಿದೆ. ತನ್ನ ವತಿಯಿಂದ ಒಂದು ಲಕ್ಷ ರೂ. ಗಳನ್ನು ಸಂತೋಷದಿಂದ ನೀಡುತ್ತಿದ್ದೇನೆ 
– ಡಾ| ಮಂಜುನಾಥ್‌ 
(ಟ್ರಸ್ಟಿ  ಮೈಸೂರು ಅಸೋಸಿಯೇಶನ್‌ ಮುಂಬಯಿ)

ನಾನು ಕಟ್ಟಡ ನಿರ್ಮಾಣದ ಯೋಜನೆ ಮಂಜೂರಾತಿ ಮಾಡಿದ ವಿಶೇಷ ಮಹಾಸಭೆಯಲ್ಲಿ ಪ್ರೋತ್ಸಾಹಕ ನಿಧಿಯಾಗಿ ಒಂದು ಲಕ್ಷ ರೂ.   ನೀಡಿರುವುದು ಹೆಮ್ಮೆಯಾಗುತ್ತಿದೆ. ನಾವು ಸಂಘದ ಸಮಿತಿಯ ಸದಸ್ಯರನ್ನು ಪ್ರೋತ್ಸಾಹಿಸಬೇಕು. ಅವರಿಗೆ ಆಪಾದನೆ ಮಾಡುವುದಲ್ಲ. ಬಹಿರಂಗವಾಗಿ ಟೀಕಿಸದೆ, ಪದಾಧಿಕಾರಿಗಳನ್ನು ವಿಚಾರಿಸದೆ ಹೇಳಿಕೆಗಳನ್ನು ನೀಡುವುದು ಉಚಿತವಲ್ಲ. ಅವರೆಲ್ಲ ನಮ್ಮವರೆ. ನಾವು ಕರ್ನಾಟಕದಾದ್ಯಂತ ಈ ಕುರಿತು ರಂಗಯಾತ್ರೆ ಕೈಗೊಂಡು ಕನ್ನಡಿಗರನ್ನು ಸಂಪರ್ಕಿಸಿದಾಗ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಕರ್ನಾಟಕ ಸಂಘದ ಬಗ್ಗೆ ಕರ್ನಾಟಕದಲ್ಲೂ ಬಹಳ ಒಳ್ಳೆಯ ಅಭಿಪ್ರಾಯವಿದೆ. ಭವಿಷ್ಯದಲ್ಲಿ ನಾವೆಲ್ಲರೂ ಮುಕ್ತ ಮನಸ್ಸಿನಿಂದ, ಒಂದೇ ಧ್ವನಿಯಲ್ಲಿ ಈ ಬೃಹತ್‌ ಯೋಜನೆಗೆ ಸಹಕರಿಸಬೇಕು 
– ಮೋಹನ್‌ ಮಾರ್ನಾಡ್‌ 
(ಹಿರಿಯ ರಂಗಕರ್ಮಿ)

ಚಿತ್ರ:ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next