Advertisement

ಮುಲುಂಡ್‌ ಬಂಟ್ಸ್‌:ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ

03:59 PM Aug 22, 2017 | |

 ಮುಂಬಯಿ: ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲರಾಗಿ ತಮ್ಮ ವಿದ್ಯೆಯನ್ನು ಕರಗತಗೊಳಿಸಿಕೊಳ್ಳಬೇಕು. ಮಕ್ಕಳಿಗೆ ಹದಿನಾರರಿಂದ ಇಪ್ಪತ್ತೆರಡು ವರ್ಷ ಬಹಳ ಮಹತ್ವವಾದುದು. ಈ ಸಮಯದಲ್ಲಿ ಅವರ ಜೀವನದ ಗುರಿಯನ್ನು ನಿರ್ಣಯಿಸಲು ಸಾಧ್ಯವಾಗುವ ಸಮಯವಾಗಿರುತ್ತದೆ. ಜೀವನದ ಯಶಸ್ಸಿಗಾಗಿ ಈ ವಯಸ್ಸಿನಲ್ಲಿ ಪರಿಶ್ರಮ, ಶ್ರದ್ಧೆ, ಏಕಾಗ್ರತೆಯಿಂದ ಅಭ್ಯಾಸದಲ್ಲಿ ತೊಡಗಿ ಆದರ್ಶ ಪ್ರಜೆಗಳಾಗಿ ಬಾಳಲು ಮುಂದಾಗಬೇಕು. ಹೆತ್ತವರು ಮಕ್ಕಳಿಗೆ ಉತ್ತಮ ಮಾರ್ಗದರ್ಶನವನ್ನಿತ್ತು, ಅವರನ್ನು ಸರಿದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಬೇಕು. ಮಕ್ಕಳ ಯೋಜನೆ ಮತ್ತು ಯೋಚನೆಗಳಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಂದೆ-ತಾಯಿ, ಗುರುಹಿರಿಯರಿಗೆ ಗೌರವ ನೀಡುವ ಗುಣವನ್ನು ಎಳವೆಯಿಂದಲೇ ಬೆಳೆಸಿಕೊಳ್ಳಬೇಕು ಎಂದು ಬಂಟರ ಸಂಘ ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಕುಲದ ಪ್ರಾಂಶುಪಾಲ ಡಾ| ಶ್ರೀಧರ್‌ ಶೆಟ್ಟಿ ಅವರು ಅಭಿಪ್ರಾಯಿಸಿದರು. 

Advertisement

ಆ. 20ರಂದು ಮುಲುಂಡ್‌ ಪೂರ್ವದ ಮಹಾತ್ಮಫುಲೆ ರೋಡ್‌ನ‌, ಸಿಂಪಾಯಿನಿ ಪ್ರೈಡ್‌ ಸಭಾಗೃಹದಲ್ಲಿ ನಡೆದ ಮುಲುಂಡ್‌ ಬಂಟ್ಸ್‌ನ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತ ನಾಡಿದ ಅವರು, ಮಕ್ಕಳಿಗೆ ಕೇವಲ ಶಿಕ್ಷಣವನ್ನು ನೀಡಿದರೆ ಸಾಲದು, ಅವರು ಪಠ್ಯೇತರ ಚಟುವಟಿಕೆಗಳಲ್ಲೂ ಮುಂದುವರಿಯುವಲ್ಲಿ ನಾವು ಮುತುವರ್ಜಿ ವಹಿಸಬೇಕು. ಶೈಕ್ಷಣಿಕ ಅಂಕಗಳು ಮಕ್ಕಳನ್ನು ರೂಪಿಸುವುದಿಲ್ಲ. ಮಕ್ಕಳು ಕೇವಲ ಅಂಕಗಳಿಗೆ ಹೊಂದಿಕೊಂಡು ಶಿಕ್ಷಣದಲ್ಲಿ ತೊಡಗಬಾರದು. ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರಗಳು ಮಕ್ಕಳಲ್ಲಿ ಬೆಳೆದಾಗ ಮಾತ್ರ ಅವರು ಸಮಾಜದಲ್ಲಿ ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯ. ವಿದ್ಯಾರ್ಥಿಗಳು ಶಾಲಾ-ಕಾಲೇಜು ದಿನಗಳಲ್ಲಿ ಪ್ರತಿಯೊಂದು ಕ್ಷಣವೂ ಮಹತ್ವದ್ದಾಗಿದೆ. ಪ್ರತಿಯೊಂದು ಸಣ್ಣ ವಿಷಯಗಳು ನಮ್ಮ ಜೀವನದ ಗುರಿಯನ್ನು ಸಾಧಿಸುವಲ್ಲಿ ಮಹತ್ವ ನೀಡುತ್ತದೆ. ಮುಲುಂಡ್‌ ಬಂಟ್ಸ್‌ ಶಿಕ್ಷಣಕ್ಕಾಗಿ ನೀಡುತ್ತಿರುವ ಕೊಡುಗೆ ಅಭಿನಂದನೀಯ. ಇಲ್ಲಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ಶೈಕ್ಷಣಿಕ ಸಹಾಯ ನೀಡಬೇಕು ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. 

ಇನ್ನೋರ್ವ ಅತಿಥಿ  ವಿ. ಕೆ. ಗ್ರೂಪ್‌ ಮುಂಬಯಿ ಇದರ ಸಿಎಂಡಿ ಕೆ. ಎಂ. ಶೆಟ್ಟಿ ಅವರು ಮಾತನಾಡಿ, ಜೀನದಲ್ಲಿ ಕಠಿನ ಪರಿಶ್ರಮವೇ ಯಶಸ್ಸಿಗೆ ಕಾರಣ ವಾಗುತ್ತದೆ. ಬಾಲ್ಯದಲ್ಲಿ ನಾವು ಉತ್ತಮ ಚಿಂತನೆ ಮತ್ತು ಉತ್ತಮ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಯಶಸ್ವಿಗೊಳಿಸುವ ಕಡೆಗೆ ಗಮನ ಹರಿಸಿ ದಾಗ ನಮ್ಮ ಕನಸು ನನಸಾಗುವುದು. ನಿರಂತರ ಪರಿಶ್ರಮವೇ ಜೀವನದ ಯಶಸ್ಸು. ಇದಕ್ಕೆ ನನ್ನ ಜೀವನವೇ ಒಂದು ನಿದರ್ಶನ  ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಲುಂಡ್‌ ಬಂಟ್ಸ್‌ನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಪರಿಸರದ ಸಮಾಜದ ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದ ಶಿಕ್ಷಣವನ್ನು ಮೊಟಕು ಗೊಳಿಸಬಾರದು ಎಂಬುವುದು ಮುಲುಂಡ್‌ ಬಂಟ್ಸ್‌ನ ಉದ್ಧೇಶವಾಗಿದೆ. ಈ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರ ಶೈಕ್ಷಣಿಕ ನೆರವು ನೀಡುತ್ತಾ ಬಂದಿದ್ದೇವೆ. ಶೈಕ್ಷಣಿಕ ನೆರವು ಮಾತ್ರವಲ್ಲದೆ, ಬಡ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಿದ್ದೇವೆ. ಸಂಸ್ಥೆಯ ಸದಸ್ಯರುಗಳೇ ನಿಧಿಯನ್ನು ಸಂಗ್ರಹಿಸಿ ಇಂತಹ ನೆರವು ನೀಡಲಾಗುತ್ತದೆ  ಎಂದು ಹೇಳಿ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ವೈ. ಶೆಟ್ಟಿ ಅವರು ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವವನ್ನು ನೀಡಬೇಕು. ಉತ್ತಮವಾಗಿ ಕಲಿತರೆ ಜೀವನವು ಯಶಸ್ವಿಯಾಗುತ್ತದೆ. ಶಿಕ್ಷಣದೊಂದಿಗೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು, ಹೆತ್ತವರನ್ನು ಗೌರವಿಸುವ, ಋಣ ತೀರಿಸುವ  ಗುಣವನ್ನು ಎಳವೆ ಯಿಂದಲೇ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

Advertisement

ಸಮಾರಂಭದಲ್ಲಿ ಥಾಣೆ ಶ್ರೀ ಆದಿಶಕ್ತಿ ಕನ್ನಡ ಶಾಲೆಗೆ ಪ್ರತಿವರ್ಷದಂತೆ 50 ಸಾವಿರ ರೂ. ಗಳ ನಿಧಿಯನ್ನು ಮುಲುಂಡ್‌ ಬಂಟ್ಸ್‌ ವತಿಯಿಂದ ನೀಡಲಾಯಿತು. ಪರಿಸರದ ಸಮಾಜದ ವಿದ್ಯಾರ್ಥಿಗಳಿಗೆ ಗಣ್ಯರು ಶೈಕ್ಷಣಿಕ ನೆರವು ವಿತರಿಸಿದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಜಯ ಸೂಡ ಅವರು ಕಾರ್ಯಕ್ರಮ ನಿರ್ವಹಿಸಿದರು. ಜತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ ಅವರು ವಂದಿಸಿದರು. 

ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಉದಯ ಎನ್‌. ಶೆಟ್ಟಿ, ಕೋಶಾಧಿಕಾರಿ ಎ. ಹರ್ಷವರ್ಧನ್‌ ಶೆಟ್ಟಿ, ಜತೆ ಕೋಶಾಧಿಕಾರಿಗಳಾದ ಸುಧಾಕರ ಆರ್‌. ಶೆಟ್ಟಿ, ಎನ್‌. ಹರಿಪ್ರಸಾದ್‌ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮೋಹಿತ್‌ ಎಂ. ಶೆಟ್ಟಿ, ವಿಶ್ವಸ್ಥರು, ಮಾಜಿ ಅಧ್ಯಕ್ಷರಾದ ನಗ್ರಿಗುತ್ತು ವಿವೇಕ್‌ ಶೆಟ್ಟಿ, ಡಾ| ಸತ್ಯಪ್ರಕಾಶ್‌ ಶೆಟ್ಟಿ, ಬಾಕೂìರು ಸುರೇಶ್‌ ಬಿ. ಶೆಟ್ಟಿ  ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next