ಬೆಂಗಳೂರು: ಬಹುತ್ವತೆಯ ಬಹುರೂಪವು ಪರೋಕ್ಷವಾಗಿ ಭಾಷೆಗೆ ಪೆಟ್ಟು ಕೊಡುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ನಗರದ ದಿಣ್ಣೆಪಾಳ್ಯದಲ್ಲಿರುವ ಪೀಪಲ್ ಟ್ರೀ ಫೈರ್ಫ್ಲೈಸ್ ಇಂಟರ್ಕಲ್ಚರ್ ಸೆಂಟರ್ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಭಾರತೀಯ ನಾಗರಿಕತೆಯ ಬಹುತ್ವತೆ ಮತ್ತು ಮಾನವೀಯ ಮೌಲ್ಯಗಳು’ ಕುರಿತ ಸಂವಾದದಲ್ಲಿ ಮಾತನಾಡಿದರು.
ಬಹುತ್ವದಡಿ ಎಲ್ಲ ಭಾಷಿಕರೂ ಒಗ್ಗೂಡುತ್ತಾರೆ. ಇದು ವೈವಿಧ್ಯತೆ ಸಂಕೇತ. ಆದರೆ, ಮತ್ತೂಂದೆಡೆ ಪರೋಕ್ಷವಾಗಿ ಭಾಷೆಗೆ ಪೆಟ್ಟುಕೊಡುತ್ತಿದೆ. ಉದಾಹರಣೆಗೆ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಇಂಗ್ಲಿಷ್, ಹಿಂದಿ ಭಾಷಿಕರೇ ತುಂಬಿಕೊಳ್ಳುತ್ತಾರೆ. ಆಗ ಕನ್ನಡಿಗರಿಗೆ ಅನ್ಯಾಯ ಆಗುತ್ತದೆ. ಈ ನಿಟ್ಟಿನಲ್ಲೂ ವಿಶ್ಲೇಷಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಪಿ.ವಿ. ಕೃಷ್ಣಭಟ್ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತ ವಿಶಿಷ್ಟವಾದ ವೈಚಾರಿಕ ಮತ್ತು ಸೈದ್ಧಾಂತಿಕ ತತ್ವಗಳ ಬಗ್ಗೆ ಚರ್ಚೆ ನಡೆಸುತ್ತಾ ಬಂದಿದೆ. ಶೈವ, ವೈಷ್ಣವ, ಬೌದ್ಧ ಮುಂತಾದ ಮತ-ಪಂಥಗಳಲ್ಲಿನ ವೈವಿಧ್ಯತೆಯು ನಮಗೆ ಸಾಂಸ್ಕೃತಿಕ ಪರಂಪರೆಯನ್ನು ತಂದುಕೊಟ್ಟಿವೆ. ಭಾರತೀಯ ಪರಂಪರೆಯ ಆಧ್ಯಾತ್ಮಿಕತೆಯನ್ನು ಈಗಿನ ಜನಾಂಗ ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಲೇಖಕಿ ಬಿ.ಟಿ. ಲಲಿತಾ ನಾಯಕ್, ಬುಡಕಟ್ಟು ಜನಾಂಗಗಳಲ್ಲಿ ದೇಶದ ಬಹುತ್ವತೆಯನ್ನು ಕಾಣಬಹುದು ಎಂದರು. ಮಾಜಿ ಶಾಸಕ ಬಿ.ಆರ್. ಪಾಟೀಲ, ಕವಿ ಡಾ.ಸಿದ್ದಲಿಂಗಯ್ಯ, ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರು ಶೆಟ್ಟಿ, ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ಇತರರಿದ್ದರು.