Advertisement

ಜಗತ್ತಿಗೆ ಸಾಂಸ್ಕೃತಿಕ ಪರಂಪರೆ ಪರಿಚಯಿಸಲು ಮೂಡುಬಿದಿರೆ ಸಿದ್ಧ; ಏನೇನು ವಿಶೇಷತೆಗಳಿವೆ…

01:05 PM Dec 21, 2022 | Team Udayavani |

ಮೂಡುಬಿದಿರೆ: ವರ್ಷ ವರ್ಷವೂ ನುಡಿಸಿರಿ, ವಿರಾಸತ್‌ಗೆ ಕಳೆಗಟ್ಟುವ ಮೂಡುವೇಣುಪುರ ಈ ಬಾರಿ ಅಂತಾರಾಷ್ಟ್ರೀಯ ಸ್ಕೌಟ್‌ ಜಾಂಬೂರಿಯಿಂದಾಗಿ ಹೊಸ ಸ್ವರೂಪದೊಂದಿಗೆ ಜಗತ್ತಿಗೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದಕ್ಕೆ ಸಿದ್ಧಗೊಂಡಿದೆ.

Advertisement

ವಿವಿಧ ದೇಶ, ರಾಜ್ಯಗಳಿಂದ ಈಗಾಗಲೇ 20 ಸಾವಿರಗಳಷ್ಟು ಸ್ಕೌಟ್‌ ಗೈಡ್‌ಗಳು, ರೋವರ್ ರೇಂಜರ್ಗಳು, ಮೂಡುಬಿದಿರೆಗೆ ಬಂದಿಳಿದಿದ್ದಾರೆ. ಇಡೀ ವಿದ್ಯಾಗಿರಿ ದೇಶವಿದೇಶಗಳ ವಿದ್ಯಾರ್ಥಿಗಳಿಂದ ತುಂಬಿತುಳುಕುತ್ತಿದೆ. ಈಗಾಗಲೇ ಮಲೇಶ್ಯದ 24, ದಕ್ಷಿಣ ಕೊರಿಯದ 7 ಮಂದಿ ಸಹಿತ ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಬೃಹತ್‌ ನೋಂದಣಿಯ ಬಳಿಕ ವಿದ್ಯಾರ್ಥಿಗಳನ್ನು ಜಿಲ್ಲೆ ಹಾಗೂ ತಾಲೂಕುಗಳಿಗೆ ಅನುಗುಣವಾಗಿ ವಿಂಗಡಿಸಿ, ವಿವಿಧ ಬ್ಲಾಕ್‌ಗಳಲ್ಲಿ ವಸತಿ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಪ್ರತಿ ಬ್ಲಾಕ್‌ಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿರ್ವಾಹಕರನ್ನು ನೇಮಿಸಲಾಗಿದೆ. ಆಳ್ವಾಸ್‌ ವಿಶಾಲ ಕ್ಯಾಂಪಸ್‌ನ 21 ವಿವಿಧ ವಸತಿ ನಿಲಯಗಳಲ್ಲಿ 44,500 ಸಾವಿರ ಮಕ್ಕಳಿಗೆ ವ್ಯವಸ್ಥೆ ಮಾಡಲಾಗಿದೆ. 10 ಸಾವಿರ ಸ್ಕೌಟ್‌ ಶಿಕ್ಷಕರಿಗೆ 3,500 ಘಟಕ ನಾಯಕರು, 7 ಸಾವಿರ ಸ್ವಯಂಸೇವಕರು ಆಗಮಿಸುತ್ತಿದ್ದಾರೆ.

ಕಿಟ್‌ ವ್ಯವಸ್ಥೆ
ಜಾಂಬೂರಿಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ 7 ದಿನಗಳಿಗೆ ಅಗತ್ಯವಿರುವ ಅಗತ್ಯ ಕಿಟ್‌ನ್ನು ಒದಗಿಸಲಾಗುವುದು. ಈ ಕಿಟ್‌ ಬ್ಯಾಗ್‌, ನೀರಿನ ಬಾಟಲಿ, ಬರೆಯುವ ಪುಸ್ತಕ, ಪೆನ್‌ ಸೇರಿದಂತೆ 15 ಸಾಮಗ್ರಿಗಳನ್ನು ಒಳಗೊಂಡಿದೆ.

ಹಬ್ಬದಡುಗೆಯ ಘಮ!
ಹಸಿದ ಹೊಟ್ಟೆಯನ್ನು ತಣಿಸಲು ಮೊದಲ ದಿನದಿಂದಲೇ ಮುಂಜಾನೆ 4 ಗಂಟೆಗೆ ರುಚಿಯಾದ ಉಪಹಾರ ಹಾಗೂ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ನುರಿತ ಬಾಣಸಿಗರ ತಂಡ ಸಮಯಕ್ಕೆ ಸರಿಯಾಗಿ ಊಟೋಪಚಾರದ ನಿರ್ವಹಣೆ ಮಾಡಲಿದ್ದಾರೆ. ಆಯಾಯ ವಸತಿ ನಿಲಯಗಳಲ್ಲೇ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಪಾಕಶಾಲೆಯಲ್ಲಿ ಸುಮಾರು 3,000 ಜನರಿಗೆ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಜಿಎಸ್‌ಬಿ, ಜೈನ್‌, ಬ್ರಾಹ್ಮಣ ಶೈಲಿಯ ಕರಾವಳಿ ರುಚಿಯ ಖಾದ್ಯಗಳು ಇರಲಿವೆ.

Advertisement

ಮಕ್ಕಳಿಗೆ ಕಾಂತಾರ ಶೋ
ಜಾಂಬೂರಿಗೆ ಆಗಮಿಸಿರುವ ಮಕ್ಕಳಿಗೆ ಸಿನೆಮಾ ವೀಕ್ಷಣೆಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಆಳ್ವಾಸ್‌ ಕಾಲೇಜಿನಲ್ಲೇ ಇರುವ “ಕುವೆಂಪು’, “ಶಿವರಾಮ ಕಾರಂತ’ ಎಂಬ ಎರಡು ಟಾಕೀಸ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ ನಾಲ್ಕು ಶೋಗಳಿರುತ್ತವೆ. ಇತ್ತೀಚೆಗಿನ ಹಿಟ್‌ ಸಿನೆಮಾಗಳಾದ “ಕಾಂತಾರ’, “ಚಾರ್ಲಿ 777′, “ಭಜರಂಗಿ ಭಾಯಿ ಜಾನ್‌’, ಮಕ್ಕಳ ಆಂಗ್ಲ ಭಾಷಾ ಸಿನೆಮಾ “ಅಪ್‌’ ಪ್ರದರ್ಶನಗೊಳ್ಳಲಿವೆ.

ಅಲ್ಲಲ್ಲಿ ಆಕರ್ಷಕ ಪ್ರತಿಮೆಗಳು
ವಿದ್ಯಾಗಿರಿಯಲ್ಲಿ ಜಾಂಬೂರಿಗಾಗಿ ವಿಶೇಷ ಕೃಷಿಮೇಳವನ್ನು ರೂಪಿಸಲಾಗಿದೆ. ಅದರ ಸುತ್ತಲೂ ಆಕರ್ಷಕ ಹಾಗೂ ಸಮಕಾಲೀನ ಸಾರ ಹೊಂದಿದ ಪ್ರತಿಮೆಗಳು ಗಮನಸೆಳೆಯಲಿವೆ. ಹೂಗಿಡಗಳ ಸಿಂಗಾರದೊಂದಿಗೆ ಯೋಗಿನಿ, ಶ್ರೀಕೃಷ್ಣ, ತಾಯಿ -ಮಗು ಇತ್ಯಾದಿ ಪ್ರತಿಮೆಗಳು ಆಕರ್ಷಿಸುತ್ತಿವೆ.

ಮೊಬೈಲಲ್ಲೂ ವೀಕ್ಷಿಸಿ
ಜಾಂಬೂರಿಗೆ ಸಹಸ್ರಾರು ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತ ವರು ಸಹಿತ ಸಾರ್ವಜನಿಕರೂ ಆಗಮಿಸಲಿದ್ದು, ಇವರೆಲ್ಲರ ಅನುಕೂಲಕ್ಕಾಗಿ 5 ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ, ಮನೋರಂಜನ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಚಟುವಟಿಕೆ ಗಳನ್ನು ನೇರಪ್ರಸಾರದ ಮೂಲಕ “ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌’ ಯೂಟ್ಯೂಬ್‌ ಚಾನೆಲ್‌ ನಲ್ಲಿ ಪ್ರಸಾರ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ಕ್ಯೂಆರ್‌ ಕೋಡ್‌ನ್ನು ಕ್ಯಾಂಪಸ್‌ನ ವಿವಿಧೆಡೆ ಬಿತ್ತರಿಸಲಾಗಿದೆ.

ಹೂಗಳ ಶೃಂಗಾರ
ಇಡೀ ವಿದ್ಯಾಗಿರಿ ಕ್ಯಾಂಪಸ್‌ಗಳಲ್ಲಿ ಆಗಮಿಸುವವರ ಕಣ್ಮನ ಸೆಳೆಯುವುದಕ್ಕಾಗಿ ಪುಷ್ಪಸಹಿತ ಗಿಡಗಳನ್ನು ಜೋಡಿಸಲಾಗಿದೆ. ಕ್ಯಾಂಪಸ್‌ನ ಆಯ್ದ ಇಳಿಜಾರು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳಲ್ಲಿ ಚೆಂಡು ಹೂ, ವರ್ಣರಂಜಿತ ಕ್ರೋಟನ್‌, ಪುಟಾಣಿ ಸಸ್ಯಗಳು, ಲಿಲ್ಲಿ, ಜೀನಿಯಾ, ಗುಲಾಬಿ ಇತ್ಯಾದಿಗಳನ್ನು ಜೋಡಿಸಲಾಗಿದ್ದು ಗಮನ ಸೆಳೆಯುತ್ತಿವೆ. ಅಮೆರಿಕ, ಹಾಲಂಡ್‌, ಜಪಾನ್‌, ಥಾಯ್‌ಲ್ಯಾಂಡ್‌, ತೈವಾನ್‌ ದೇಶಗಳಿಂಧ ಬೀಜಗಳನ್ನು ತಂದು ಬೆಳಗಾವಿ, ಪುಣೆಯಲ್ಲಿ ಸಸ್ಯಾಭಿವೃದ್ಧಿ ಪಡಿಸಿ ಅಲ್ಲಿಂದ ಆಳ್ವಾಸ್‌ ಕ್ಯಾಂಪಸ್‌ ಗೆ ತರಲಾಗಿದೆ. ಒಟ್ಟು ಸುಮಾರು 2 ಲಕ್ಷ ಗಿಡಗಳನ್ನು ಇಲ್ಲಿ ಜೋಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next