Advertisement

Mudhol ಮಕ್ಕಳ ಸುರಕ್ಷತೆ ಮರೆತ ಶಿಕ್ಷಣ ಸಂಸ್ಥೆಗಳು; ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ

06:29 PM Jul 10, 2024 | Team Udayavani |

ಮುಧೋಳ: ಶಿಕ್ಷಣಕ್ಕಾಗಿ ಮಕ್ಕಳ ಪಾಲಕರಿಂದ ಸಾವಿರಾರು ರೂ. ಹಣವನ್ನು ಕಟ್ಟಿಸಿಕೊಳ್ಳುವ ಸಂಸ್ಥೆಗಳು ತಾವು ನಿರ್ವಹಿಸುವ ಕಾರ್ಯದಲ್ಲಿ ಬೇಜವಾಬ್ದಾರಿ ಮೆರೆಯುತ್ತಿರುವುದರಿಂದ ಮಕ್ಕಳ ಸೂಕ್ತ ರಕ್ಷಣೆಯಿಲ್ಲದಂತಾಗಿದೆ.

Advertisement

ಪ್ರತಿನಿತ್ಯ ಬೆಳಗ್ಗೆ ಮಕ್ಕಳನ್ನು ಶಾಲೆಗಳಿಗೆ ಕರೆತರಲು ಶಾಲಾ ವಾಹನ ಉಪಯೋಗಿಸುವ ತಾಲೂಕಿನ ಬಹುತೇಕ ಶಿಕ್ಷಣ ಸಂಸ್ಥೆಗಳು ವಾಹನಗಳ ಬೇಕಾಬಿಟ್ಟಿ ಬಳಕೆಯಿಂದಾಗಿ ಮಕ್ಕಳ ಪ್ರಾಣಕ್ಕೆ ಗ್ಯಾರಂಟಿಯಿಲ್ಲದಂತಾಗಿದೆ. ಪ್ರತಿನಿತ್ಯ ಮನೆಯಿಂದ ಶಾಲೆಗೆ ಹೊರಡುವ ಮಕ್ಕಳನ್ನು ಕರೆದ್ಯೊಯಲು ಆಗಮಿಸುವ ಹಲವಾರು ವಾಹನಗಳು ಸುಸಜ್ಜಿತವಾಗಿಲ್ಲ ಹಳೆಯ ಗುಜರಿಗೆ ಹಾಕುವಂತಹ ವಾಹನಗಳನ್ನು ಶಿಕ್ಷಣ ಸಂಸ್ಥೆಯವರು ಕಳುಹಿಸುತ್ತಿರುವುದರಿಂದ ಮಕ್ಕಳು ಅನಿವಾರ್ಯವಾಗಿ ಅವುಗಳಲ್ಲಿ ತೆರಳುವಂತಾಗಿದೆ.

ಮಕ್ಕಳ ಸಾರಿಗೆ ವೆಚ್ಚವೆಂದು ಪಾಲಕರಿಂದ ಪ್ರತ್ಯೇಕವಾಗಿ ಹಣಪೀಕುವ ಶಿಕ್ಷಣ ಸಂಸ್ಥೆಗಳು ಸಾರಿಗೆಗಾಗಿ ಬಳಸುತ್ತಿರುವುದು ಮಾತ್ರ ಹಳೆಯ ವಾಹನಗಳನ್ನೆ.

ಟಂಟಂ, ಕ್ರೂಸರ್, ಮ್ಯಾಕ್ಸಿ ಕ್ಯಾಬ್ ಬಳಕೆ: ತಾಲೂಕಿನ‌ ಬಹುತೇಕ ಶಿಕ್ಷಣ ಸಂಸ್ಥೆಗಳು ಮನೆಗಳಿಂದ ಮಕ್ಕಳನ್ನು ಕರೆತರಲು ಟಂಟಂ, ಕ್ರೂಸರ್ ಹಾಗೂ ಮ್ಯಾಕ್ಸಿ ಕ್ಯಾಬ್ ಗಳನ್ನು ಬಳಕೆ ಮಾಡುತ್ತಿವೆ. ಹಣ ಉಳಿಸುವ ಖಯಾಲಿಗೆ ಬಿದ್ದಿರುವ ಬಹುತೇಕ ಸಂಸ್ಥೆಗಳು ಕಡಿಮೆ ಬೆಲೆಗೆ ವಾಹನಗಳನ್ನು ಪಡೆದು ಅವುಗಳಲ್ಲಿಯೇ ಮಕ್ಕಳನ್ನು ಕರೆತರುತ್ತಿವೆ. ಹಳೆಯ ಹಾಗೂ ಸವಾರಿಗೆ ಯೋಗ್ಯವಲ್ಲದ ವಾಹನಗಳು ಬೆಳಗ್ಗೆ ನಗರ ಸೇರಿದಂತೆ ತಾಲೂಕಿನ ಬಹುತೇಕ ಕಡೆಯಲ್ಲಿ ಸಂಚರಿಸುವುದರಿಂದ ಯಾವಾಗ ಏನಾಗುತ್ತೋ ಎಂಬ ಆತಂಕ ಮಕ್ಕಳು ಹಾಗೂ ಪಾಲಕರು ಕಾಡುತ್ತಿದೆ.

ಸರ್ಕಾರಿ ಆದೇಶಕ್ಕೆ‌ ಕಿಮ್ಮತ್ತಿಲ್ಲ : ಶಾಲಾ‌ ವಾಹನಕ್ಕಾಗಿ ಶಿಕ್ಷಣ ಇಲಾಖೆ ಪ್ರತ್ಯೇಕವಾದ ಮಾರ್ಗಸೂಚಿ ಹೊರಡಿಸಿದೆ. ಪ್ರತಿಯೊಂದು ವಾಹನವೂ ಸುರಕ್ಷತೆ ಹಾಗೂ ಗುಣಮಟ್ಟದಿಂದ ಕೂಡಿರಬೇಕು ಎಂಬುದು ಮೊದಲ ಆದ್ಯತೆಯಾಗಿದ್ದರೂ ಇಂದು ಹಲವಾರು ಸಂಸ್ಥೆಗಳು ಅಂತಹ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಮನಸೋ ಇಚ್ಚೆ ವಾಹನ ಬಳಕೆ‌ ಮಾಡಿಕೊಳ್ಳುತ್ತಿವುದು ಕಂಡು ಬರುತ್ತಿದೆ.

Advertisement

ಟಂಟಂ, ಕ್ರೂಸರ್ ಗಳಲ್ಲಿ ಚಾಲಕರೊಬ್ಬರೆ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಮಕ್ಕಳು ವಾಹನ ಹತ್ತುವಾಗ ಹಾಗೂ ಇಳಿಯುವಾಗ ಹಲವಾರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಹಲವಾರು ವರ್ಷಗಳ ಹಳೆಯದಾದ ಟಂಟಂಗಳನ್ನು ಬಳಸುತ್ತಿರುವುದರಿಂದ ಮಕ್ಕಳಿಗೆ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಮ್ಯಾಕ್ಸಿ ಕ್ಯಾಬ್ ಗಳಲ್ಲಿ‌ ಕುರಿ ಹಿಂಡಿನಂತೆ ಮಕ್ಕಳನ್ನು ಕರೆದ್ಯೊಯಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ವೈಟ್ ಬೋರ್ಡ್ ವಾಹನ ಬಳಕೆ: ಶಿಕ್ಷಣ ಸಂಸ್ಥೆಗಳು ವೈಟ್ ಬೋರ್ಡ್ ವಾಹನ ಬಳಕೆಗೆ ಅವಕಾಶವಿರದಿದ್ದರು ಬಹುತೇಕ ಸಂಸ್ಥೆಗಳು ವೈಟ್ ಬೋರ್ಡ್ ಗಳನ್ನೆ ಬಳಕೆ ಮಾಡಿಕೊಳ್ಳುತ್ತಿವೆ. ಶಿಕ್ಷಣ ಸಂಸ್ಥೆಗಳು ಆಡುತ್ತಿರುವ ಅವಾಂತರವನ್ನು ಕಂಡೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿರುವುದರಿಂದ ಸಂಸ್ಥೆಗಳ ಆಟಾಟೋಪಕ್ಕೆ ಬ್ರೇಕ್ ಬೀಳದಾಗಿದೆ.

ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ : ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ವಾಹನ ಬಳಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇಂತಹ ವಾಹನಗಳನ್ನು ಬಳಕೆ‌ ಮಾಡಿ ಮಕ್ಕಳ ಜೀವದ ಜತೆ ಆಟವಾಡುವ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂಬುದು ಪ್ರಜ್ಞಾವಂತರ ಕೂಗಾಗಿದೆ.

ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈ ಹಿಂದೆ ವಿವಿಧ ಇಲಾಖೆಗಳ‌ ಸಂಯೋಜನೆಯಲ್ಲಿ ಶಾಲಾ ವಾಹನ ಮಾರ್ಗದರ್ಶಿ ಕುರಿತು ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿತ್ತು. ಇದೀಗ ಮತ್ತೊಮ್ಮೆ ಎಲ್ಲ ಶಾಲೆಗಳಿಗೆ ಮನವರಿಕೆ‌ ಮಾಡಿಕೊಡಲಾಗುವುದು ಮುಂದಿನ ದಿನಗಳಲ್ಲಿ ಸರ್ಕಾರಿ‌ ಆದೇಶದಂತೆ ವಾಹನ ನಿರ್ವಹಣೆ ಮಾಡದ ಶಾಲಾ ಆಡಳಿತ ಮಂಡಳಿ ವಿರುದ್ದ ಕ್ರಮ‌ಕೈಗೊಳ್ಳಲಾಗುವುದು.
-ಎಸ್.ಎಂ. ಮುಲ್ಲಾ ಕ್ಷೇತ್ರಶಿಕ್ಷಾಧಿಕಾರಿ‌ ಮುಧೋಳ

ಮಕ್ಕಳ ಶಿಕ್ಷಣಕ್ಕೆ ಸ್ಪರ್ಧಾತ್ಮಕ ರೀತಿಯಲ್ಲಿ‌ಒತ್ತು ನೀಡುವ ಶಿಕ್ಷಣ ಸಂಸ್ಥೆಗಳು ಅದೇ ರೀತಿಯಾಗಿ ಅವರ ಸುರಕ್ಷತೆಗೂ ಮನ್ನಣೆ ನೀಡಬೇಕು. ಹಳೆಯ ವಾಹನ‌ ಕಳುಹಿಸುವುದರಿಂದ ಪುಟ್ಟ ಪುಟ್ಟ ಮಕ್ಕಳನ್ನು ಕರೆತರಲು ಹೆಚ್ಚಿನ ತೊಂದರೆಯಾಗುತ್ತದೆ. ಅನಾಹುತಗಳು ಸಂಭವಿಸುವ ಮುನ್ನ ಶಿಕ್ಷಣ ಸಂಸ್ಥೆಯವರು ಎಚ್ಚೆತ್ತು ಸರ್ಕಾರದ ಹೊರಡಿಸಿರುವ ಮಾರ್ಗಸೂಚಿಯಂತೆ ವಾಹನ ಬಳಕೆಗೆ ಮುಂದಾಗಬೇಕು.
-ಸುನೀಲ ಕಂಬೋಗಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಕರ್ನಾಟಕ ಸಂಸ್ಥಾಪಕರು ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next