Advertisement

ಸಾಲ ಮನ್ನಾಕ್ಕಾಗಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ

12:26 PM Jan 20, 2017 | |

ದಾವಣಗೆರೆ: ಸತತ ಎರಡು ವರ್ಷದ ಬರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತರ ಎಲ್ಲಾ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ರಾಜ್ಯ  ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸಂಸದ ಜಿ.ಎಂ. ಸಿದ್ದೇಶ್ವರ್‌ ಜನಸಂಪರ್ಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

Advertisement

ಜಿಲ್ಲೆಯಾದ್ಯಂತ ಕಳೆದ ಎರಡು ವರ್ಷದಿಂದ ಸತತ ಬರ ಎದುರಾಗಿದೆ. ರೈತರು ಅತೀವ ಸಂಕಷ್ಟದಲ್ಲಿದ್ದಾರೆ. ಬೆಳೆ ಹಾನಿಯಿಂದಾಗಿ ಆರ್ಥಿಕ ನಷ್ಟದಲ್ಲಿದ್ದಾರೆ. ಖುದ್ದು ಸಂಸದ ಜಿ.ಎಂ. ಸಿದ್ದೇಶ್ವರ್‌ರವರೇ  ಎಲ್ಲಾ ಕಡೆ ಭೇಟಿ ನೀಡಿ, ಬರದ ಸ್ಥಿತಿ ನೋಡಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ರೈತರ ಸಾಲ ಮನ್ನಾಕ್ಕೆ ಮುಂದಾಗಬೇಕು.

ಸಂಸದರು ಈ ಬಗ್ಗೆ ಕೇಂದ್ರದ ಗಮನ  ಸೆಳೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಭೀಕರ ಬರದ ಹಿನ್ನೆಲೆಯಲ್ಲಿ ಎಲ್ಲಾ ಕಡೆ  ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸರ್ಕಾರಗಳು ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

ಬರದಿಂದಾಗಿ ಕೆಲಸ ಅರಸುತ್ತಾ ಗುಳೇ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಜಾರಿಯಲ್ಲಿರುವ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ ಸರಿಯಾಗಿ ಕೆಲಸ ಕೊಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. 

ಸಂಘದ ಮುಖಂಡರಾದ ಕಾರ್ಯದರ್ಶಿ ಅರುಣ್‌ಕುಮಾರ್‌ ಕುರುಡಿ, ಮರಡಿ ನಾಗಪ್ಪ,ಎಸ್‌. ಹಾಲಪ್ಪ, ರೇವಣಸಿದ್ದಪ್ಪ ಚಿಕ್ಕನಹಳ್ಳಿ, ಎಂ.ಬಿ. ಪಾಟೀಲ್‌, ಕರಿಬಸಪ್ಪ, ಶೇಖರಪ್ಪ, ಜಿ.ಬಿ. ಈಶ್ವರಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next